ಹನುಮಗಿರಿಯಲ್ಲಿ ‘ಗಾಳಿಗುಡ್ಡ’ ಮುಹೂರ್ತ

Most read

ಸಿನಿಮಾ ಎಂಬ ಸುಂದರ ಲೋಕ ಎಂಥವರನ್ನು ಸೆಳೆದು ಬಿಡುತ್ತದೆ. ಎಷ್ಟೋ ಜನ ತಮಗಿರುವ ಪ್ಯಾಷನ್ ಗೋಸ್ಕರ ಇಂಡಸ್ಟ್ರಿಗೆ ಬಂದರೆ ಇನ್ನು ಎಷ್ಟೋ ಜನ ತಮ್ಮ ಪ್ರತಿಭೆಯ ಅನಾವರಣಕ್ಕೋಸ್ಕರ ಕಾಲಿಡುತ್ತಾರೆ. ಇಲ್ಲಿ ನಿರ್ದೇಶಕರಿಗೆ ಪ್ರತಿಭೆ ಇರಬೇಕು, ನಿರ್ಮಾಪಕರಿಗೆ ಸಿನಿಮಾ ಮೇಲೆ ಪ್ಯಾಷನ್ ಇರಬೇಕು. ಆಗ ಮಾತ್ರ ಅದ್ಬುತವಾದೊಂದು ಸಿನಿಮಾ ಸೆಟ್ಟೇರುವುದಕ್ಕೆ ಸಾಧ್ಯ. ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ‘ಗಾಳಿಗುಡ್ಡ’ ಸಿನಿಮಾ.

ಇತ್ತಿಚೆಗಷ್ಟೇ ‘ಗಾಳಿಗುಡ್ಡ’ ಸಿನಿಮಾ ಮುಹೂರ್ತ ಕಂಡಿದೆ. ನಾಗರಭಾವಿ ಹನುಮಗಿರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದೆ. ಈ ಸಿನಿಮಾಕ್ಕೆ ರಘು ಅಥರ್ವ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನಕ್ಕೆ ಹೊಸಬರೇ ಆದರೂ ಪ್ರತಿಭೆ ಉಳ್ಳವರು. ನಿರ್ದೇಶನದ ಕನಸು ಹೊತ್ತ ರಘು ಅಥರ್ವ ಅದಕ್ಕೆಂದೆ ಒಂದಷ್ಟು ತಯಾರಿ, ತರಬೇತಿಗಳನ್ನು ಮಾಡಿಕೊಂಡು ಒಂದೊಳ್ಳೆ ಸಿನಿಮಾಗೆ ಆಕ್ಷನ್ ಕಟ್ ಹೇಳಲು, ಕ್ಯಾಪ್ ತೊಟ್ಟು ಬಂದಿದ್ದಾರೆ.

ಇನ್ನು ಈ‌ ಸಿನಿಮಾಗೆ Matured ಕಿಡ್ಸ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ರಘು ಪವನ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಮೇಲಿನ ಆಸಕ್ತಿ ಇಂದು ನಿರ್ಮಾಣಕ್ಕೆ ಕರೆದು ನಿಲ್ಲಿಸಿದೆ. ರಘು ಪವನ್ ಒಬ್ಬ ಪ್ಯಾಷನೇಟ್ ನಿರ್ಮಾಪಕ ಎಂಬುದೇ ಇಡೀ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸಿನಿಮಾ ಮೇಲೆ ಪ್ಯಾಷನ್ ನಿರ್ಮಾಪಕನಿಗಿದ್ದರೆ ಆ ಸಿನಿಮಾದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ತಂತ್ರಜ್ಞರು, ಕಲಾವಿದರು ಖುಷಿ ಖುಷಿಯಾಗಿ ಸಿನಿಮಾ ಮುಗಿಸುತ್ತಾರೆ. ರಘು ಪವನ್ ಕೂಡ ಅದೇ ರೀತಿ ಇರುವವರು.

ಮುಹೂರ್ತ ಮುಗಿಸಿಕೊಂಡಿರುವ ‘ಗಾಳಿಗುಡ್ಡ’ ಸಿನಿಮಾ ಕಳಸ, ಕುದ್ರೆಮುಖ, ಚಿಕ್ಕಮಗಳೂರು ಮುಂತಾದ ಜಾಗಗಳಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆದರೆ 2025 ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಮಲೆಯಾಳಂ ಸಂಗೀತ ನಿರ್ದೇಶಕ ರಾಹುಲ್ ಸುಬ್ರಮಣ್ಯನ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಾಖಾಹಾರಿ ಖ್ಯಾತಿಯ ವಿಶ್ವಜಿತ್ ರಾವ್ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ. ಉಳಿದಂತೆ ಯಶ್ವಂತ್ ಬೆಟ್ಟಸ್ವಾಮಿ, ದರ್ಶಕ್, ಅರ್ಚನ ಕೊಟ್ಟಿಗೆ, ಮಂಜುನಾಥ್ ಹೆಗ್ಡೆ, ದೀಪಕ್ ರೈ, ಶ್ರೀ ವತ್ಸ, ಸಂದ್ಯಾ, ರೇಖಾ ಕೂಡ್ಲಿಗೆ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

More articles

Latest article