ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಗುರುವಾರ ಚೆನ್ನೈನ ರಾಜಭವನಕ್ಕೆ ಆಗಮಿಸಿ, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಟಿವಿಕೆ ನಾಯಕರು ಸಭೆಯ ಸಮಯದಲ್ಲಿ ವಿಜಯ್ ಅವರೊಂದಿಗೆ ಇದ್ದರು.
ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಿಂದ ಗೆದ್ದಿರುವ ವಿಜಯ್, ಐದು ಕಾಂಗ್ರೆಸ್ ಶಾಸಕರು ಸೇರಿದಂತೆ 113 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ರಾಜ್ಯಪಾಲರು 118 ಬೆಂಬಲಿಗರ ಪತ್ರದೊಂದಿಗೆ ಆಗಮಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಟಿವಿಕೆಗೆ ಚುನಾವಣೋತ್ತರ ಬೆಂಬಲ ನೀಡುವ ಕಾಂಗ್ರೆಸ್ ನಿರ್ಧಾರದ ನಂತರ ವಿಜಯ್, ರಾಜ್ಯಪಾಲ ಅರ್ಲೇಕರ್ ಅವರನ್ನು ನಿನ್ನೆ ಭೇಟಿಯಾದರು. ಆದರೆ, ರಾಜ್ಯಪಾಲರಿಂದ ಯಾವುದೇ ಸಕಾರಾತ್ಮಕ ಆಹ್ವಾನ ಬರದ ಹಿನ್ನೆಲೆ ಇಂದು ಮತ್ತೆ ಎರಡನೇ ಬಾರಿಗೆ ಲೋಕಭವನಕ್ಕೆ ತೆರಳಿದ್ದಾರೆ. ಅರ್ಧಗಂಟೆಗೂ ಹೆಚ್ಚು ಕಾಲ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿದ್ದಾರೆ.
ಆದಾಗ್ಯೂ, 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 118 ಶಾಸಕರ ಸಂಖ್ಯೆಗಿಂತ ಕಡಿಮೆಯಾಗಿದೆ ಎಂದು ರಾಜ್ಯಪಾಲರು ಅವರಿಗೆ ಮಾಹಿತಿ ನೀಡಿದ್ದಾರೆ ಮತ್ತು ಪೂರ್ಣ ಬೆಂಬಲದೊಂದಿಗೆ ಬರುವಂತೆ ರಾಜ್ಯಪಾಲರು ಸೂಚಿಸಿದ್ದಾರೆ ಎನ್ನಲಾಗಿದೆ.
ಗುರುವಾರದಂದು, ಸರ್ಕಾರ ರಚನೆಯ ಕುರಿತು ಚರ್ಚಿಸಲು ವಿಜಯ್ ಅವರು ಚೆನ್ನೈನಲ್ಲಿ ಪಕ್ಷದ ಚುನಾಯಿತ ಶಾಸಕರ ಪ್ರಮುಖ ಸಭೆಯನ್ನು ಕರೆದಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ, ಟಿವಿಕೆ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

