ಅಮೆರಿಕ, ಇಸ್ರೇಲ್ ಮುಂತಾದ ದೇಶಗಳು ದಾದಾಗಿರಿ, ಬೆದರಿಕೆ ಮುಂತಾದವುಗಳ ಮೂಲಕ ಇತರೆ ರಾಷ್ಟ್ರಗಳನ್ನು ದೋಚಿ ಕುಳಿತು ತಿನ್ನುವ ಕಂತ್ರಿ ಬುದ್ಧಿಯವರು. ಹಾಲಿ ಇಂತಹ ಕಪಟ ರಾಷ್ಟ್ರಗಳ ವಿರುದ್ಧ ಆಫ್ರೀಕಾದ ಅಧ್ಯಕ್ಷ ಇಬ್ರಾಹೀಂ ತೊಡೆ ತಟ್ಟಿದ್ದಾರೆ. ಹಾಗೆ ನಾನೇ ಸೈ ಎಂದು ಬೀಗುತ್ತಿದ್ದ ಇಸ್ರೇಲ್, ಅಮೆರಿಕಾ ಇರಾನ್ ಕೊಟ್ಟ ಹೊಡೆತಕ್ಕೆ ತಕ್ಷಣದಿಂದ ಯುದ್ಧ ವಿರಾಮ ಘೋಷಿಸಿದೆ – ಚಾರ್ವಾಕ ರಾಘು, ಸಾಗರ.
ಕಳೆದ ವಾರದಿಂದ ಇಡೀ ಜಗತ್ತು ಮೂರನೆ ವಿಶ್ವ ಯುದ್ಧ ಆಗುತ್ತದೋ ಎನ್ನುವ ಭೀತಿಯಲ್ಲಿದೆ. ಕಳೆದ ಎರಡು ವರ್ಷಗಳಿಂದ ಇಸ್ರೇಲ್ ಪೆಲೆಸ್ತೀನಿಯರ ಮೇಲೆ ಬಾಂಬುಗಳ ಮಳೆಗಳನ್ನು ಸುರಿಸಿ ಹಸುಗೂಸುಗಳನ್ನು, ಮಹಿಳೆಯರನ್ನು ಸೇರಿದಂತೆ ಸಾವಿರಾರು ಜನರನ್ನು ಕೊಂದು ಹಾಕಿದೆ. ಉಳಿದವರಿಗೆ ಕುಡಿಯಲು ನೀರು, ಉಣ್ಣಲು ಆಹಾರ ಕೊಡದೆ ಕ್ರೂರವಾಗಿ ನಡೆಸಿಕೊಂಡು ಬಂದಿದೆ. ಹಾಲಿ ಇಸ್ರೇಲ್ ದಿಢೀರ್ ಎಂದು ಇರಾನ್ ಮೇಲೆ ದಾಳಿ ನಡೆಸಿ ಕೆಲವು ವಿಜ್ಞಾನಿಗಳ ಮೇಲೆ ಗುಂಡಿನ ಮಳೆ ಸುರಿಸಿ ದಾದಾಗಿರಿ ಮಾಡಿತು. ಇರಾನನ್ನು ಬಹಳ ಹಗುರವಾಗಿ ಪರಿಗಣಿಸಿದ್ದ ಇಸ್ರೇಲ್ ಇರಾನಿನ ಮರು ದಾಳಿಗೆ ತತ್ತರಿಸಿ ಹೋಗಿದೆ. ಇರಾನ್ ಬಳಿ ಇಷ್ಟು ಶಕ್ತಿಶಾಲಿ ಮಿಸೈಲ್ಗಳು ಇವೆ ಎನ್ನುವುದು ಇಸ್ರೇಲಿಗೆ ಮಾತ್ರವಲ್ಲದೆ ಜಗತ್ತಿನ ಎಲ್ಲ ದೇಶಗಳಿಗೂ ಕೂಡ ಅಚ್ಚರಿ ಮೂಡಿಸಿದೆ. ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾದ ಪೆಲೆಸ್ತೀನಿಯರ ಮೇಲೆ ಬಾಂಬುಗಳ ಮಳೆ ಸುರಿಸಿ ಹತ್ಯಾಕಾಂಡ ಮಾಡುತ್ತಾ ಇರುವುದನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದ ಇಸ್ರೇಲಿನ ಜನರು ಇರಾನ್ ನೀಡಿದ ಹೊಡೆತಕ್ಕೆ ಗಾಬರಿ ಬಿದ್ದು ಯುದ್ಧ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ತಮ್ಮ ಮೇಲೆ ಆಗುವ ಪರಿಣಾಮವನ್ನು ಊಹಿಸಿ ಬೀದಿಗೆ ಬಂದು ʼಇರಾನ್ ವಿ ಆರ್ ಸಾರಿ, ಸ್ಟಾಪ್ ದಿ ವಾರ್ʼ ಎಂದು ಗೋಗರೆಯುತ್ತಿದ್ದಾರೆ. ಇನ್ನೊಂದೆಡೆ ಕೆಲವು ಇಸ್ರೇಲಿಗರು ಗಂಟು ಮೂಟೆ ಕಟ್ಟಿಕೊಂಡು ದೇಶ ತೊರೆಯುತ್ತಿದ್ದಾರೆ. ಇನ್ನು ಕೆಲವರು ಸೈರನ್ ಶಬ್ದ ಕೇಳುತ್ತಿದ್ದಂತೆ ಜೀವವಿದ್ದರೆ ಬೆಲ್ಲ ಬೇಡಿಕೊಂಡು ತಿನ್ನುವೆ ಎನ್ನುವ ಗಾದೆಯ ಹಾಗೆ ಬಂಕರ್ ಕಡೆಗೆ ಓಡಿ ಹೋಗುತ್ತಿದ್ದಾರೆ. ಒಂದು ವಾರದಲ್ಲಿ ಇಸ್ರೇಲಿಗೆ ಬಿದ್ದಿರುವ ಪೆಟ್ಟು ಹೇಗೆ ಇದೆ ಎಂದರೆ ಊರ ಗೌಡನ ಕೆನ್ನೆಗೆ ಶ್ರೀಸಾಮಾನ್ಯನೊಬ್ಬ ನಡು ಬೀದಿಯಲ್ಲಿ ನಿಲ್ಲಿಸಿ ಹೊಡೆದ ಹಾಗೆ ಆಗಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುತ್ತಿರುವ ನ್ಯಾತು ಅಮೆರಿಕಾವನ್ನು ಮುಂದೆ ಮಾಡಿ ಇರಾನನ್ನು ಬೆದರಿಸಲು ಮುಂದಾಗಿದ್ದಾನೆ. ಅಂಡೆ ಪಿರ್ಕಿ ಟ್ರಂಪ್ ಇರಾನಿನ ಅಣು ಸ್ಥಾವರದ ಮೇಲೆ ಬಾಂಬುಗಳನ್ನು ಸುರಿಸಿ ನಷ್ಟ ಮಾಡಿರುವುದು ಇರಾನನ್ನು ಇನ್ನಷ್ಟು ಕೆರಳಿಸಿದೆ.
ಅಮೆರಿಕಾದ ಇಂತಹ ಕೃತ್ಯಕ್ಕೆ ಎದುರಾಗಿ ಇರಾನ್ ಅಮೆರಿಕಾಕ್ಕೆ ಹಲವು ಎಚ್ಚರಿಕೆಗಳನ್ನು ಕೊಟ್ಟಿದೆ. ಅದರಲ್ಲಿ ಎರಡು ಎಚ್ಚರಿಕೆಗಳು ಬಹಳ ಅಪಾಯಕಾರಿ. ಒಂದು ಮಧ್ಯ ಪ್ರಾಚ್ಯದಲ್ಲಿರುವ ಅಮೆರಿಕ ವಾಯು ನೆಲೆಗಳ ಮೇಲೆ ದಾಳಿ ನಡೆಸಲಾಗುವುದು ಎನ್ನುವುದು. ಮತ್ತೊಂದು ತನ್ನ ಗಡಿ ವ್ಯಾಪ್ತಿಯಲ್ಲಿ ಬರುವ ಸಮುದ್ರದ ಹಾರ್ಮುಜ್ ಜಲಸಂಧಿ ಮಾರ್ಗವನ್ನು ಬ್ಲಾಕ್ ಮಾಡುವುದು. ಅಮೆರಿಕಾದ ವಾಯು ನೆಲೆಯ ಮೇಲೆ ದಾಳಿ ನಡೆದರೆ ಸಾವಿರಾರು ಅಮೆರಿಕಾ ಸೈನಿಕರು ಜೀವ ತೆರ ಬೇಕಾಗುತ್ತದೆ. ಜಲ ಮಾರ್ಗವನ್ನು ಬಂದ್ ಮಾಡಿದರೆ ವಿಶ್ವ ಬಹು ದೊಡ್ಡ ಆರ್ಥಿಕ ಹಿನ್ನಡೆಯನ್ನು ಎದುರಿಸ ಬೇಕಾಗುತ್ತದೆ.
ಇನ್ನು ಕಳೆದ 46 ವರ್ಷಗಳ ಹಿಂದೆ ಇಸ್ಲಾಂ ಮೂಲಭೂತವಾದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದ ಅಯತೊಲ್ಲ ಖಮೇನಿ ನೇತೃತ್ವದ ಇರಾನ್ ವೈಜ್ಞಾನಿಕವಾಗಿ ಈ ಪರಿ ಮುಂದುವರೆದದ್ದು ನಿಜಕ್ಕೂ ಅಚ್ಚರಿಪಡುವಂತದ್ದು. ಮೂಲಭೂತವಾದಿ ಪ್ರಭುತ್ವ ಭೂತಮುಖಿ ಆಲೋಚನೆಗೆ ಹೆಚ್ಚು ಒತ್ತು ಕೊಡುತ್ತದೆ. ಅದಕ್ಕೆ ವಿಜ್ಞಾನ ನೆಲೆಯ ಭವಿಷ್ಯಮುಖಿ ಆಲೋಚನೆ ಎಂದರೆ ಆಗುವುದಿಲ್ಲ. ಉರಿದು ಬೀಳುತ್ತದೆ. ಇರಾನಿನಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆಯಿಲ್ಲ, ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಈ ಹಿನ್ನಲೆಯಲ್ಲಿ ಇರಾನಿನ ನಾಗರೀಕರು ಹಲವಾರು ಬಾರಿ ಇರಾನಿನ ಮೂಲಭೂತವಾದಿ ಆಡಳಿತದ ವಿರುದ್ಧ ಬಂಡೆದ್ದು ಪ್ರತಿಭಟಿಸಿದ್ದಾರೆ. ಇವರ ಪ್ರತಿಭಟನೆಯನ್ನು ಖಮೇನಿ ಆಡಳಿತ ಬಹಳ ಕ್ರೂರವಾಗಿ ಹತ್ತಿಕ್ಕಿದ್ದಲ್ಲದೆ, ನೂರಾರು ಜನರನ್ನು ಕೊಂದಿದೆ ಮತ್ತು ಜೈಲಿನಲ್ಲಿಟ್ಟಿದೆ. ಆದರೆ ಈ ಹೊತ್ತಿನ ಬಿಕ್ಕಟ್ಟಿಗೆ ಇರಾನಿನ ಜನ ಖಮೇನಿ ಆಡಳಿತದ ಪರವಾಗಿ ನಿಂತಿದೆ.
ಇನ್ನೊಂದೆಡೆ ಆಫ್ರೀಕಾದ ಬರ್ಕಿನಿಯಾ ಫಾಸೋದ ಅಧ್ಯಕ್ಷ ಇಬ್ರಾಹಿಂ ಟ್ರೊರೆ ಬಲಾಢ್ಯ ದೇಶಗಳ ಲೂಟಿಯಿಂದ ಬೆಂದು ಹೋಗಿದ್ದ ತನ್ನ ದೇಶವನ್ನು ಮರು ಕಟ್ಟಲು ಮುಂದಾಗಿದ್ದಾನೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ತರುತ್ತಿದ್ದಾನೆ. ಬಲಾಢ್ಯ ದೇಶಗಳ ಲೂಟಿ ತಪ್ಪಿಸಲು ಹಲವು ತರಹದ ಯೋಜನೆಗಳನ್ನು ಹಾಕಿ ಕೊಂಡಿದ್ದಾನೆ. ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ.
ಇನ್ನು, ಐವತ್ತು ವರ್ಷಗಳ ಹಿಂದೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬಂತು. ಅದರ ಸಂಸ್ಥಾಪಕ ಅಧ್ಯಕ್ಷರು ಗೀರಿಯಪ್ಪ, ಕಾರ್ಯದರ್ಶಿ ಪ್ರೋ.ಬಿ.ಕೃಷ್ಣಪ್ಪನವರು. ಕರ್ನಾಟಕದ ಭೂ ಮಾಲೀಕರು, ಬಂಡವಾಳಶಾಹಿಗಳ ವಿರುದ್ಧ, ಜಾತಿ, ವರ್ಗ ಅಸಮಾನತೆಯ ವಿರುದ್ಧ, ಅಪಮಾನದ ವಿರುದ್ಧ, ಲಿಂಗ ಅಸಮಾನತೆಯ ವಿರುದ್ಧ ಹೋರಾಡಲು, ದಮನಿತರು ಭೂಮಿ, ಬಂಡವಾಳ ಮತ್ತು ಅಧಿಕಾರ ಪಡೆಯಬೇಕು ಎನ್ನುವ ಉದ್ದೇಶದಿಂದ ದಲಿತ ಸಮಿತಿಯ ಮೂಲಕ ಸಂಘರ್ಷಕ್ಕೆ ಮುಂದಾದರು. ಇವರ ಜೊತೆಗೆ ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಕೆ.ಬಿ. ಸಿದ್ದಯ್ಯ, ಕೋಟಗಾನಹಳ್ಳಿ ರಾಮಯ್ಯ ಮುಂತಾದವರು ಜೊತೆಯಾದರು. ಹೋರಾಟವು ತೀವ್ರಗೊಳ್ಳುತ್ತಾ ಹಳ್ಳಿ ಹಳ್ಳಿಗೆ ತಲುಪಿತು. ದಮನಿತರು ಎಚ್ಚೆತ್ತು ಸಂಘರ್ಷ ಸಮಿತಿ ಎತ್ತುವ ಬಹು ಮುಖ್ಯ ಪ್ರಶ್ನೆಗಳಿಗೆ ದನಿಗೂಡಿಸಿದರು. ಹಳ್ಳಿಯಿಂದ ಪಂಚಾಯ್ತಿಗೆ, ಪಂಚಾಯ್ತಿಯಿಂದ ಎಸಿ, ಡಿಸಿ ಕಚೇರಿಗೆ, ನಂತರ ವಿಧಾನಸಭೆಗೆ ಮೆರವಣಿಗೆ ಹೊರಟರು. ಕವಿ ಸಿದ್ದಲಿಂಗಯ್ಯ ದಲಿತರು ಬಂದರು ದಾರಿ ಬಿಡಿ, ದಲಿತರ ಕೈಯಲಿ ರಾಜ್ಯ ಕೊಡಿ, ಕೋಟಿ ಕೋಟಿ ಕನಸುಗಳೊಂದಿಗೆ, ಹೊತ್ತಿ ಉರಿಯುವ ಮನಸ್ಸುಗಳೊಂದಿಗೆ, ಬಂತೋ ದಲಿತರ ಮೆರವಣಿಗೆ , ನೆಲಕೆ ಕಾಲುಗಳ ಬರವಣಿಗೆ ಎನ್ನುವ ಹಾಡು ಬರೆದರು. ಇವರ ಹಾಗೆ ನೂರಾರು ಜನ ಕವಿಗಳು ಹೋರಾಟದಿಂದ ಸ್ಪೂರ್ತಿಗೊಂಡು ಹಲವಾರು ಹಾಡುಗಳನ್ನು ಬರೆದರು. ಚಳವಳಿ ಉತ್ಕರ್ಷಕ್ಕೆ ತಲುಪಿತು. ಪ್ರಭುತ್ವ ತಿರುಗಿ ನೋಡುವಂತೆ ಆಯಿತು, ಭೂ ಮಾಲೀಕರು, ಜಾತಿವಾದಿಗಳು ಮುಂತಾದ ಶೋಷಕರು ನವ ರಂದ್ರಗಳನ್ನು ಮುಚ್ಚಿಕೊಂಡಿರುವ ಸ್ಥಿತಿ ನಿರ್ಮಾಣವಾಯಿತು. ಹಲವಾರು ಸಾಮಾಜಿಕ ಬದಲಾವಣೆಗಳಾದವು. ದಮನಿತರ ಪರವಾಗಿ ಆಳುವ ಸರ್ಕಾರ ಹಲವಾರು ಕಾಯಿದೆಗಳನ್ನು ಜಾರಿ ಮಾಡುವುದು ಅನಿವಾರ್ಯವಾಯಿತು.
ದಲಿತ ಸಂಘರ್ಷ ಸಮಿತಿಯೆಂದರೆ, ಕಾರ್ಯಕರ್ತರೆಂದರೆ ಬಲಾಢ್ಯರು, ಜಾತಿವಾದಿಗಳು, ಕೋಮುವಾದಿಗಳು ಬೆದರಿ ಬಿಲ ಸೇರಿಕೊಂಡರು. ಇದು ಒಂದು ಹಂತಕ್ಕೆ ಕ್ರಾಂತಿಯ ಬಿರುಗಾಳಿಯನ್ನು ಎಬ್ಬಿಸಿತು. ಹೋರಾಟಕ್ಕೆ ಇಂತಹ ಕಿಚ್ಚು ಬರಲು ಕಾರಣ ಅಂದು ನಮ್ಮ ಜನ ಕವಿಗಳು ಬರೆದ ಹಾಡುಗಳು ಮತ್ತು ಅದಕ್ಕೆ ರಾಗ ಸಂಗೀತ ಸಂಯೋಜನೆ ಮಾಡಿದ ಹಾಡುಗಾರರು ಮತ್ತು ಸಂಗೀತಗಾರರು. ಇಂತಹ ಐಕ್ಯ ದಲಿತ ಹೋರಾಟದ ಸಮಯದಲ್ಲಿ ಮೂಡಿ ಬಂದ ಹೋರಾಟದ ಹಾಡುಗಳ ಸಮಗ್ರವಾದ ಸಂಕಲನವನ್ನು ಹಂಪಿ ವಿ.ವಿಯ ಪ್ರಾಧ್ಯಾಪಕ, ಕವಿ, ಹಾಡುಗಾರ ಡಾ. ಬಿ.ಎಂ.ಪುಟ್ಟಯ್ಯನವರು ವಿಶೇಷ ಶ್ರಮ ವಹಿಸಿ ಸಂಗ್ರಹಿಸಿ ಕೊಟ್ಟಿದ್ದಾರೆ. ಹೋರಾಟದ ಹಾಡುಗಳು ಎಂದರೆ ಸಿದ್ದಲಿಂಗಯ್ಯ, ಕೋ.ರಾಮಯ್ಯ, ಕೆ.ಬಿ.ಸಿದ್ದಯ್ಯ, ಮಾನಸಯ್ಯ ಎಂದುಕೊಂಡ ಹೊತ್ತಿನಲ್ಲಿ ಹಲವಾರು ಎಲೆಮರೆಯ ಕಾಯಿಯಂತಿರುವ ಕವಿಗಳನ್ನು ಈ ಕೃತಿಯ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ. ಕನ್ನಡ ನಾಡಿನ ಹೋರಾಟದ ಸಂಗಾತಿಗಳಿಗೆ ಬೆಂಕಿಯ ಮಳೆ ಸಮಗ್ರ ಹೋರಾಟದ ಹಾಡುಗಳ ಪುಸ್ತಕ ಬಹಳ ಉಪಯೋಗಕ್ಕೆ ಬರುತ್ತದೆ. ಪುಸ್ತಕವನ್ನು ಕೊಪ್ಪದ ಅನುಭವ ಪ್ರಕಾಶನದಿಂದ ಪ್ರಕಟಿಸಲಾಗಿದೆ. (ಪ್ರತಿಗಳಿಗೆ ಇವರನ್ನು ಸಂಪರ್ಕಿಸಿ-7892779957೦)
ಮೇಲೆ ಹೇಳಿದ ಮೂರು ಸಂಘರ್ಷಗಳು ಕುಳಿತು ತಿನ್ನುವ ಮತ್ತು ದುಡಿದು ಉಣ್ಣುವ ಜನರ ನಡುವಿನ ಸಂಘರ್ಷ. ಅಮೆರಿಕ, ಇಸ್ರೇಲ್ ಮುಂತಾದ ದೇಶಗಳು ದಾದಾಗಿರಿ, ಬೆದರಿಕೆ ಮುಂತಾದವುಗಳ ಮೂಲಕ ಇತರೆ ರಾಷ್ಟ್ರಗಳನ್ನು ದೋಚಿ ಕುಳಿತು ತಿನ್ನುವ ಕಂತ್ರಿ ಬುದ್ಧಿಯವರು, ಹಾಲಿ ಇಂತಹ ಕಪಟ ರಾಷ್ಟ್ರಗಳ ವಿರುದ್ಧ ಆಫ್ರೀಕಾದ ಅಧ್ಯಕ್ಷ ಇಬ್ರಾಹೀಂ ತೊಡೆ ತಟ್ಟಿದ್ದಾರೆ. ಹಾಗೆ ನಾನೇ ಸೈ ಎಂದು ಬೀಗುತ್ತಿದ್ದ ಇಸ್ರೇಲ್, ಅಮೆರಿಕಾ ಇರಾನ್ ಕೊಟ್ಟ ಹೊಡೆತಕ್ಕೆ ತಕ್ಷಣದಿಂದ ಯುದ್ಧ ವಿರಾಮ ಘೋಷಿಸಿದೆ. ಇದೇ ರೀತಿ ಇಸ್ರೇಲ್ ಪೆಲೆಸ್ತೀನಿಯರ ಮೇಲೆ ನಡೆಸುತ್ತಿರುವ ಅಕ್ರಮ ಯುದ್ಧ ನಿಂತು ನ್ಯಾಯ ಸಿಗಲಿ, ಇರಾನಿನಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆ ಆಗಲಿ. ಹಾಗೆ ಕರ್ನಾಟಕಲ್ಲಿ ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿಯು ನೂರಾರು ಹಾಡುಗಳ ಈ ಪುಸ್ತಕದ ಹಾಡುಗಳನ್ನು ಐಕ್ಯವಾಗಿ ಹಾಡಿ ಮತ್ತೆ ದಮನಿತರ ದನಿಯಾಗಲಿ.
ಪತ್ರಕರ್ತರು, ವಕೀಲರು
ಮೊ : 9448106607
ಇದನ್ನೂ ಓದಿ –http://ಕೊನೆಗೂ ಕದನ ವಿರಾಮ ಒಪ್ಪಿಕೊಂಡ ಇಸ್ರೇಲ್ ಮತ್ತು ಇರಾನ್; 12 ದಿನಗಳ ಯುದ್ಧಕ್ಕೆ ವಿರಾಮ https://kannadaplanet.com/ceasefire-between-iran-isreal-today-war-ends-after-12-days-donald-trump-america-whitehouse-netanyahu/