ಉಡುಪಿ : ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುತ್ತೇವೆ, ಪ್ರಕಾಶ್ ರಾಜ್ ಅವರನ್ನು ಅರಬ್ಬೀ ಸಮುದ್ರಕ್ಕೆ ಹಾಕಿ ಮೀನಿಗೆ ಆಹಾರವಾಗುವ ಪರಿಸ್ಥಿತಿ ಬರಬಹುದು ಎಂದು ಹೇಳಿಕೆ ನೀಡಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭಯೋತ್ಪಾದಕ ಕೃತ್ಯದಂತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಕಿಡಿಕಾರಿದ್ದಾರೆ.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಒಬ್ಬ ಜನಪ್ರತಿನಿಧಿಯಾಗಿ ಪುಡಿ ರೌಡಿಯ ಗೂಂಡಾ ವರ್ತನೆ ತೋರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಧಿಗೆ ತಕ್ಕುದಾದ ಲಕ್ಷಣವಲ್ಲ. ರಾಹುಲ್ ಗಾಂಧಿಯವರ ವಂಶವನ್ನು ಧ್ವಂಸ ಮಾಡುವಂತಾ ಕೆಲಸ ಮಾಡ್ತೇವೆ, ಪ್ರಕಾಶ್ ರಾಜ್ ಅವರನ್ನು ಅರಬ್ಬೀ ಸಮುದ್ರಕ್ಕೆ ಹಾಕಿ ಮೀನಿಗೆ ಆಹಾರವಾಗುವ ಪರಿಸ್ಥಿತಿ ಬರಬಹುದು ಎನ್ನುವ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಉಡುಪಿಯನ್ನು ಇನ್ನೊಂದು ಬಿಹಾರ ಅಥವಾ ಉತ್ತರಪ್ರದೇಶ ಮಾಡಲು ಹೊರಟಿದ್ದಾರೆ. ಉಡುಪಿಯ ವಿದ್ಯಾರ್ಥಿಗಳು ಆನಕ್ಷರಸ್ಥರಲ್ಲಾ ಎಲವನ್ನೂ ತಿಳಿದುಕೊಳ್ಳುವ ಶಕ್ತಿ ಅವರಿಗಿದೆ. ಈ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳೇ ತಾವು ಇವನ ಮಾತನ್ನು ಸಂಪೂರ್ಣ ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ಆತನಿಗೆ ತಕ್ಕ ಪಾಠಕಲಿಸುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದಂತಹ ಯಶ್ಪಾಲ್ ಗೆ ಸರಿಯಾದ ಉತ್ತರ ಕೊಡುವ ಕಾರ್ಯವನ್ನು ಈ ದೇಶದ ಭವಿಷ್ಯದ ಆಡಳಿತಗಾರರಾದ ತಾವು ಮಾಡಬೇಕೆಂದು ಸುಂದರ ಮಾಸ್ಟರ್ ಮನವಿ ಮಾಡಿದ್ದಾರೆ.
ಅಲ್ಲದೇ,ಕೂಡಲೇ ಯಶ್ಪಾಲ್ ಸುವರ್ಣನನ್ನು ಬಂಧಿಸಿ ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಡುಪಿಯ ಸ್ವಾಸ್ತ್ಯ ಕೆಡಿಸುವ ಕೆಲಸ ಮಾಡಿದರೆ ಸಂವಿಧಾನ ಪರ ಸಂಘಟನೆಗಳು ಅನಿರ್ಧಿಷ್ಟಾವದಿ ಚಳುವಳಿ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ದ. ಸಂ. ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.

