ನವದೆಹಲಿ ಸೆ. 5: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್ ಎಂಬಾತನ ವಿರುದ್ಧ ಇದೀಗ POCSO ಕಾಯ್ದೆಯಡಿ ಹೊಸ FIR ದಾಖಲಾಗಿದೆ. ಅಪ್ರಾಪ್ತ ವಯಸ್ಕಳಿಗೆ ಸಂಬಂಧಿಸಿದ ದೂರು ಬಂದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆದಿದ್ದೇನು?
2026ರ ಜೂನ್ 23ರಂದು ಜಂತರ್ ಮಂತರ್ನಲ್ಲಿ CJP ಆಯೋಜಿಸಿದ್ದ ವಿದ್ಯಾರ್ಥಿ ಪ್ರತಿಭಟನೆ ವೇಳೆ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಗಾಯಗೊಂಡಿದ್ದರು. ಪ್ರತಿಭಟನೆ ವೇಳೆ ಅವರ ತಲೆಗೆ ಹೊಡೆತ ಬಿದ್ದಿದ್ದು, ಈ ಸಂಬಂಧ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯಲ್ಲಿ ಸ್ವತಂತ್ರ ಭಾರದ್ವಾಜ್ ಮತ್ತು ಸೂರಜ್ ಕುಮಾರ್ ಎಂಬ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿ, ಕಾನೂನು ಪ್ರಕಾರ ನೋಟಿಸ್ ನೀಡಿದ್ದರು. ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸುವುದಾಗಿ ದೆಹಲಿ ಪೊಲೀಸರು ಈ ಹಿಂದೆ ಹೇಳಿದ್ದರು.
ವೈರಲ್ ವಿಡಿಯೋದಿಂದ ಪ್ರಕರಣ ಮತ್ತೆ ಮುನ್ನೆಲೆಗೆ
ಇತ್ತೀಚೆಗೆ ಸ್ವತಂತ್ರ ಭಾರದ್ವಾಜ್ ಮಾತನಾಡಿರುವ ಪಾಡ್ಕಾಸ್ಟ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ಜಂತರ್ ಮಂತರ್ ಘಟನೆಯ ಕುರಿತು ಆತ ಹೆಮ್ಮೆಯಿಂದ ಮಾತನಾಡಿರುವ ರೀತಿಯ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು.
ಸಂಜಯ್ ಕುಮಾರ್ ಅವರ ತಲೆಗೆ ಹೊಡೆದಿರುವುದಾಗಿ ಆತ ಹೇಳಿಕೊಂಡಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ರಾಜಕೀಯ ಸಂಪರ್ಕಗಳ ಕಾರಣದಿಂದ ತನ್ನ ವಿರುದ್ಧ ತಕ್ಷಣ ಜೈಲು ಕ್ರಮವಾಗಲಿಲ್ಲ ಎಂಬ ಅರ್ಥ ಬರುವ ಹೇಳಿಕೆಗಳೂ ವಿಡಿಯೋದಲ್ಲಿದ್ದವು.
ಆದರೆ ಬಳಿಕ ಭಾರದ್ವಾಜ್ ಈ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದು, ತಾನು ನಡೆಸಿದ್ದು ಹಲ್ಲೆಯಲ್ಲ, ಆತ್ಮರಕ್ಷಣೆಯ ಕ್ರಮ ಎಂದು ಹೇಳಿದ್ದಾನೆ. 10–15 ಮಂದಿ ತನ್ನನ್ನು ಸುತ್ತುವರಿದಿದ್ದರು ಮತ್ತು ಆತ್ಮರಕ್ಷಣೆ ವೇಳೆ ಸಂಜಯ್ ಕುಮಾರ್ ಅವರ ತಲೆಗೆ ಗಾಯವಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ವೈರಲ್ ಪಾಡ್ಕಾಸ್ಟ್ ಕ್ಲಿಪ್ ಅನ್ನು ತಿರುಚಲಾಗಿದೆ/ನಕಲಿ ಎಂದು ಕೂಡ ಆತ ಆರೋಪಿಸಿದ್ದಾನೆ.
ದಿಲ್ಲಿ ಪೊಲೀಸ್ ಹೇಳುವುದೇನು?
ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಈ ಹಿಂದೆ ನೀಡಿದ್ದ ವಿವರಣೆಯ ಪ್ರಕಾರ, ಸಂಜಯ್ ಕುಮಾರ್ ಅವರಿಗೆ ಲೋಹದ ಕಡಾ (bracelet)ನಿಂದ ತಲೆಗೆ ಗಾಯವಾಗಿತ್ತು. RML ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಗಾಯಗಳು ಸಾಮಾನ್ಯ ಸ್ವರೂಪದ್ದಾಗಿದ್ದವು ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಲೆಬುರುಡೆ ಬಿರುಕು ಬಿಟ್ಟಿದೆ ಎಂಬ ಆರೋಪಕ್ಕೆ ವೈದ್ಯಕೀಯ ವರದಿಯಲ್ಲಿ ಆಧಾರವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣವನ್ನು ಕಾನೂನು ಪ್ರಕ್ರಿಯೆಯಂತೆ ತನಿಖೆ ಮಾಡಲಾಗುತ್ತಿದೆ ಮತ್ತು ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ.
POCSO ಪ್ರಕರಣ ಯಾಕೆ?
ಇದೀಗ ಪ್ರಕರಣಕ್ಕೆ ಅಪ್ರಾಪ್ತ ವಯಸ್ಕಳಿಗೆ ಸಂಬಂಧಿಸಿದ ದೂರು ಹಿನ್ನೆಲೆಯಲ್ಲಿ ಹೊಸ ಆಯಾಮ ಬಂದಿದೆ.
ನಿಶು ಆಜಾದ್ ಅಪ್ರಾಪ್ತೆಯಾಗಿದ್ದ ವೇಳೆ ನಡೆದ ಪ್ರತಿಭಟನೆ ಮತ್ತು ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವಿರುದ್ಧ ನಡೆದಿರುವ ಎನ್ನಲಾದ ಬೆದರಿಕೆ, ನಿಂದನೆ ಹಾಗೂ ಅತ್ಯಾಚಾರದ ಬೆದರಿಕೆಗಳ ಹಿನ್ನೆಲೆಯಲ್ಲಿ ಹೊಸ ದೂರು ನೀಡಲಾಗಿದೆ ಎಂದು ವರದಿಯಾಗಿದೆ. ಇದೇ ದೂರಿನ ಆಧಾರದ ಮೇಲೆ POCSO ಕಾಯ್ದೆಯಡಿ ಪ್ರತ್ಯೇಕ FIR ದಾಖಲಿಸಲಾಗಿದೆ.
SC/ST ಕಾಯ್ದೆಯೂ ಸೇರ್ಪಡೆ
ಇದರ ಜೊತೆಗೆ ಸಂಜಯ್ ಕುಮಾರ್ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವ ಹಿನ್ನೆಲೆಯಲ್ಲಿ, ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ SC/ST (Prevention of Atrocities) Actನ ಸಂಬಂಧಿತ ಸೆಕ್ಷನ್ಗಳನ್ನೂ ಸೇರಿಸಲಾಗಿದೆ.
ಶುಕ್ರವಾರ CJP ಮುಖಂಡರು ಹಾಗೂ ಬೆಂಬಲಿಗರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಸ್ವತಂತ್ರ ಭಾರದ್ವಾಜ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು. ಪ್ರತಿಭಟನೆಗೆ ಆಜಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ್ ಆಜಾದ್, ಸ್ವತಂತ್ರ ಸಂಸದ ಪಪ್ಪು ಯಾದವ್ ಸೇರಿದಂತೆ ರಾಜಕೀಯ ಮುಖಂಡರೂ ಬೆಂಬಲ ನೀಡಿದ್ದರು. ಹಲವು ಗಂಟೆಗಳ ಮಾತುಕತೆಯ ಬಳಿಕ SC/ST ಕಾಯ್ದೆಯ ಸೆಕ್ಷನ್ಗಳನ್ನು FIRಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಉತ್ತರ ಪ್ರದೇಶದಲ್ಲಿ ವಶಕ್ಕೆ?
ಪ್ರತಿಭಟನೆ ನಡೆದ ಕೆಲವೇ ಗಂಟೆಗಳ ಬಳಿಕ ಭಾರದ್ವಾಜ್ ನನ್ನು ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. ಆತ ಬುಲಂದ್ಶಹರ್ಗೆ ತೆರಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂಬ ಮಾಹಿತಿಯೂ ವರದಿಯಾಗಿದೆ. ದೆಹಲಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಅವರನ್ನು ಅಲ್ಲಿಂದ ಕರೆದೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

