ಬೆಂಗಳೂರು : ಇಲ್ಲಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಖಾಲಿ ಮಾಡುವ ಮುನ್ನವೇ, ಹಾಲಿ ಸಚಿವ ಭೈರತಿ ಸುರೇಶ್ ಆ ಮನೆಯ ನವೀಕರಣ ಕಾರ್ಯ ಆರಂಭಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯದಲ್ಲಿರುವಾಗಲೇ ಮನೆಗೆ ಪೇಂಟಿಂಗ್ ಮಾಡಿಸುವುದು ಹಾಗೂ ಸಾರ್ವಜನಿಕರ ಭೇಟಿಗಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ಒಡೆಸಿ ಹಾಕಿರುವುದು ಕಾಂಗ್ರೆಸ್ ನಲ್ಲೇ ಪರ-ವಿರೋಧದ ಮಾತುಗಳು ಕೇಳಿ ಬಂದಿವೆ. .
ಸೌಜನ್ಯವು ಸಮಾಜದ ಸತ್ವವನ್ನು ಗಟ್ಟಿಗೊಳಿಸುತ್ತದೆ : ಹೆಚ್. ಸಿ. ಮಹದೇವಪ್ಪ
ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್.ಸಿ.ಮಹದೇವಪ್ಪ, ಸಾರ್ವಜನಿಕ ಜೀವನದಲ್ಲಿ ಸೌಜನ್ಯ ಎಂಬುದು ಬಹಳ ಮುಖ್ಯ ಎಂಬುದನ್ನು ನಾನು ಕಲಿತಿದ್ದೇನೆ ಮತ್ತು ಅದನ್ನು ಬದುಕಿನ ಉದ್ದಕ್ಕೂ ಅಳವಡಿಸಿಕೊಂಡಿದ್ದೇನೆ.
ಇದು ನನ್ನನ್ನು ಬಲ್ಲ ಎಲ್ಲರಿಗೂ ಗೊತ್ತು ಮತ್ತು ಈ ದಿನ ನಿಯಮಾವಳಿಗಳ ವಿರುದ್ಧವಾಗಿ ವರ್ತಿಸುತ್ತಿರುವ ಸಂಪುಟ ಸಹಯೋಗಿ ಮಿತ್ರ ಭೈರತಿ ಸುರೇಶ್ ಅವರಿಗೂ ಗೊತ್ತು. ಸರ್ಕಾರ 90 ದಿನಗಳ ಒಳಗಾಗಿ ಮನೆ ಖಾಲಿ ಮಾಡಬೇಕೆಂಬ ಗಡುವು ನೀಡಿದ್ದು, ಮನೆಯನ್ನೂ ಸಹ ಹುಡುಕಲಾಗುತ್ತಿದೆ.
ಹೀಗಿದ್ದರೂ ಕೂಡಾ ನಿಯಮಾವಳಿ ಹೋಗಲಿ ಕನಿಷ್ಠ ಸೌಜನ್ಯ ಇಲ್ಲದೇ ಮನೆಯ ಒಳಗೆ ಇರುವಾಗಲೇ ಮೀಟಿಂಗ್ ಹಾಲ್ ಅನ್ನು ಕೆಡವಿ ಹಾಕುವುದು, ಮನೆಯ ಸದಸ್ಯರಿಗೆ ತಮ್ಮ ಸಿಬ್ಬಂದಿಗಳಿಂದ ಸೂಚನೆ ಕೊಡಿಸುವುದು, ಮನೆ ದುರಸ್ತಿಗೆ ಯತ್ನಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಬರುತ್ತದೆ, ಹೋಗುತ್ತದೆ ಆದರೆ ಸಾರ್ವಜನಿಕ ಜೀವನದ ನಡವಳಿಕೆಗಳು ಮತ್ತು ನಾವು ತೋರುವ ಸೌಜನ್ಯವು ಸಮಾಜದ ಸತ್ವವನ್ನು ಗಟ್ಟಿಗೊಳಿಸುತ್ತದೆ. ಹೀಗಾಗಿ ತಾಳ್ಮೆ ಇರಲಿ. ಧನ್ಯವಾದ ಎಂದು ಮಹದೇವಪ್ಪ ಮನವಿ ಮಾಡಿದ್ದಾರೆ.

