ನವದೆಹಲಿ: ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರು ಸಾವಿರಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರಯತ್ನಿಸಿದ ಆರೋಪಿಗಳನ್ನು ಚುನಾವಣಾ ಆಯೋಗ ಕಳೆದ 18 ತಿಂಗಳಿನಿಂದ ‘ಕಲ್ಲಿನ ಗೋಡೆ‘ಯಂತೆ ನಿಂತು ರಕ್ಷಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಲು ಯತ್ನಿಸಿದ ಪ್ರಕರಣವನ್ನು ಕರ್ನಾಟಕ ಸರ್ಕಾರದ ಸಿಐಡಿ ತನಿಖೆ ನಡೆಸುತ್ತಿದೆ. ಇದಕ್ಕೆ ಪೂರಕವಾದ ಮಾಹಿತಿಯನ್ನೂ ಆಯೋಗ ನೀಡುತ್ತಿಲ್ಲ. ಮತಕಳ್ಳತನದ ಮೂಲಕ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವಾಗ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಆಳಂದದಲ್ಲಿ ಮತ ಕಳ್ಳತನಕ್ಕೆ ಯತ್ನಿಸಿರುವುದರ ಕುರಿತು ರಾಹುಲ್ ಗಾಂಧಿಯವರು ಸಾಕ್ಷಿಗಳ ಸಹಿತ ಋಜುವಾತುಪಡಿಸಿದ್ದಾರೆ. ರಾಹುಲ್ ಗಾಂಧಿ ಎತ್ತಿರುವ ಮೂರು ಪ್ರಶ್ನೆಗಳಿಗೆ ಚುನಾವಣಾ ಯೋಗ ಉತ್ತರ ನೀಡಬೇಕು. ಚುನಾವಣಾ ಆಯೋಗ ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ? ಪ್ರಜಾಪ್ರಭುತ್ವವನ್ನು ರಕ್ಷಿಸಲು ನೇಮಕಗೊಂಡಿರುವ ಸಂಸ್ಥೆಗಳನ್ನೇ ಬಿಜೆಪಿ ನಾಶಪಡಿಸುತ್ತಿದೆಯೇ? ‘ಮತ ಕಳ್ಳತನದ ಫ್ಯಾಕ್ಟರಿ‘ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವಾಗ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ಭಾರತೀಯರು, ವಿಶೇಷವಾಗಿ ಯುವ ಜನಾಂಗ ಈ ಪ್ರಶ್ನೆಗಳನ್ನು ಬಲವಾಗಿ ಕೇಳಿ ಉತ್ತರ ಪಡೆಯಬೇಕು ಎಂದೂ ಅವರು ಖರ್ಗೆ ತಿಳಿಸಿದ್ದಾರೆ.
ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಕಳ್ಳತನ ಮಾಡುತ್ತಿರುವವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6000ಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಸಲಾಗತ್ತು ಎಂದೂ ಹೇಳಿದ್ದರು.