Sunday, September 8, 2024

ಸಾಂಸ್ಕೃತಿಕ ನಾಯಕ ಬಸವಣ್ಣ – ಘೋಷಣೆಯ ಹಿಂದಿನ ವಿವಿಧ ಮುಖಗಳು…

Most read

ಕಾರಣ ಏನೇ ಇರಲಿ ಇಂದಿನ ದಿನಗಳಲ್ಲಿ ನಿಜಕ್ಕೂ ಅನಿವಾರ್ಯವಾಗಿದ್ದ ನಿರ್ಧಾರ. ಅದನ್ನು ಕಾರ್ಯಗತಗೊಳಿಸಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ  ಅಭಿನಂದನೆಗಳು.

ಸಾಂಸ್ಕೃತಿಕ ನಾಯಕ ಅಥವಾ ವಕ್ತಾರ ಅಥವಾ ರಾಯಭಾರಿ ಎಂದರೆ ಏನು ಎಂಬ ಬಗ್ಗೆ ಸಾಮಾನ್ಯರ ಮನಸ್ಸು ಕೇಳಬಹುದು.

ಒಂದು ಪ್ರದೇಶದ ಅಂದರೆ ಈ‌ ಸಂದರ್ಭದಲ್ಲಿ ಕರ್ನಾಟಕದ ಒಟ್ಟು ಪ್ರಾಕೃತಿಕ ವಾತಾವರಣ, ಇದು ಬೆಳೆದು ಬಂದ ಇತಿಹಾಸ, ಇಲ್ಲಿನ ಆಚಾರ ವಿಚಾರ ಸಂಪ್ರದಾಯ ನಂಬಿಕೆ ಆಡಳಿತ ಎಲ್ಲವನ್ನೂ ಒಳಗೊಂಡ ಜೀವನಶೈಲಿ, ಈ ನೆಲ ಈ ಜಲ ಪ್ರತಿಪಾದಿಸುವ ಎಲ್ಲಾ ‌ಮೌಲ್ಯಯುತ ಸೈದ್ಧಾಂತಿಕ ನಿಲುವುಗಳು, ಇಲ್ಲಿನ ಸಂವಿಧಾನ ಮತ್ತು ಧಾರ್ಮಿಕ ಆಚರಣೆಗಳು ಮತ್ತು ಒಟ್ಟಾರೆ  ಇಡೀ ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವ ಪ್ರತಿಬಿಂಬಿಸುವ ಮತ್ತು ಪ್ರತಿನಿಧಿಸುವ ಆದರ್ಶ ವ್ಯಕ್ತಿಯನ್ನು ‌ಸಾಮಾನ್ಯವಾಗಿ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತದೆ. ಇದಕ್ಕೆ ಇನ್ನಷ್ಟು ಅರ್ಥ – ಆಯಾಮಗಳು ಇರಬಹುದು.

ಇದೇ ಅರ್ಥದಲ್ಲಿ ಭಾರತದ ‌ಸಾಂಸ್ಕೃತಿಕ ರಾಯಭಾರಿ ಎಂದು ಸ್ವಾಮಿ ವಿವೇಕಾನಂದರನ್ನು ಪರಿಗಣಿಸಲಾಗುತ್ತದೆ‌ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾ ಕರ್ನಾಟಕದ ಇತಿಹಾಸ – ವರ್ತಮಾನದಲ್ಲಿ ಬಸವಣ್ಣನವರನ್ನು ಹೊರತುಪಡಿಸಿ ಬೇರೆ ಯಾರಾದರೂ ಈ ಸ್ಥಾನಕ್ಕೆ ಅರ್ಹರು ಇರಬಹುದೇ ಅಥವಾ ಇದ್ದಾರೆಯೇ ಎಂದು ನಮ್ಮಲ್ಲೇ ಪ್ರಶ್ನಿಸಿಕೊಂಡಾಗ ನನ್ನ ವೈಯಕ್ತಿಕ ಜ಼್ಞಾನದ ಮಿತಿಯಲ್ಲಿ ಸಮಗ್ರ ಚಿಂತನೆಯ ನಂತರ ಆ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಬಸವಣ್ಣನವರು ಮಾತ್ರ. ಬಹುಶಃ ಅವರಿಗೆ ಸ್ಪರ್ಧೆ ನೀಡುವ ಅಥವಾ ಅವರ ಹತ್ತಿರಕ್ಕೆ ಬರುವ ಯಾವ ವ್ಯಕ್ತಿಯು ಸಿಗುವುದಿಲ್ಲ. ಹಾಗೆಂದು ಕರ್ನಾಟಕದಲ್ಲಿ ಇತರೆ ಸಾಧಕರು ಇಲ್ಲವೆಂದಲ್ಲ. ವಿವಿಧ ಕ್ಷೇತ್ರಗಳ ಅತ್ಯದ್ಭುತ ಸಾಧಕರು ಇದ್ದಾರೆ. ಆದರೆ ಜೀವಪರ ನಿಲುವುಗಳು, ಸಮ ಸಮಾಜದ ಹೋರಾಟಗಳು, ಅನುಭವದ ಅನುಭಾವ ಚಿಂತನೆಗಳು ಬಸವಣ್ಣ ಕರ್ನಾಟಕಕ್ಕೆ ಮಾತ್ರವಲ್ಲ ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು.

ಬಸವಣ್ಣನವರ ನಾಗರಿಕ ಸಮಾನತೆ ಎಲ್ಲಾ ಎಲ್ಲೆಗಳನ್ನು ಮೀರಿದ್ದು. ಜೊತೆಗೆ ಅದು ಚಿಂತನೆಯ ರೂಪದಲ್ಲಿ ಮಾತ್ರವಲ್ಲದೆ ಪ್ರಾಯೋಗಿಕವಾಗಿ ಸಹ ಆಚರಣೆಯ ಮಹತ್ವ ಪಡೆದಿದೆ. ಈ ನೆಲದ ಮಣ್ಣಿನ ಗುಣವನ್ನು ಹೊಂದಿದೆ. ಕಾಯಕ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಬಸವಣ್ಣನವರ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆ ಮಾಹಿತಿಗಳು ಎಲ್ಲರಿಗೂ ಲಭ್ಯವಿದೆ. ಅದನ್ನು ಇನ್ನೊಮ್ಮೆ ಓದಿ ಮನನ ಮಾಡಿಕೊಳ್ಳಬಹುದು.

ಬಸವೇಶ್ವರರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹದಿನಾಲ್ಕು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎಲ್ಲವೂ ಸಾಕಷ್ಟು ದಾಖಲಾಗಿವೆ. ಇವುಗಳಲ್ಲಿ ಬಸವಣ್ಣ ದೇವರಾಗಿಯೂ, ಧರ್ಮವಾಗಿಯೂ ಸಮ ಸಮಾಜದ ಕ್ರಾಂತಿಕಾರಿಯಾಗಿಯೂ, ಓಟುಗಳಾಗಿಯೂ ಪರಿವರ್ತನೆಯನ್ನು ಹೊಂದಿದ್ದಾರೆ. 

ಅವರ ವಚನ ಸಾಹಿತ್ಯವು  ಭಾಷಣಗಳಿಗೆ, ಪ್ರವಚನಗಳಿಗೆ, ವಿಚಾರ ಸಂಕಿರಣಗಳಿಗೆ, ಲೇಖನಗಳಿಗೆ, ಡಾಕ್ಟರೇಟ್ ಗಳಿಗೆ, ಬಹಳ ಒಳ್ಳೆಯ ಆಹಾರ ಒದಗಿಸುತ್ತದೆ. ರಸ್ತೆಗಳು, ಭವನಗಳು, ಮೂರ್ತಿಗಳು, ವಿಶ್ವವಿದ್ಯಾಲಯಗಳು, ಧಾರ್ಮಿಕ ಕೇಂದ್ರಗಳು, ಸಂಘಟನೆಗಳು, ಪ್ರಶಸ್ತಿಗಳು ಅವರ ಹೆಸರಿನಲ್ಲಿ ಆಗಿದೆ. ಆದರೆ ನಿಜವಾಗಿ ಆಗಬೇಕಾಗಿರುವುದು ಮಾತ್ರ ಇನ್ನೂ ಗಗನ ಕುಸುಮವಾಗಿದೆ…

ಕೂಡಲಸಂಗಮ

ಕನ್ನಡ ನಾಡಿನ ಬಹುದೊಡ್ಡ ಕೊಡುಗೆ ಬಸವಣ್ಣನವರು. ಹನ್ನೆರಡನೆಯ ಶತಮಾನದಲ್ಲಿಯೇ ಸಮ ಸಮಾಜದ ಕನಸು ಕಂಡವರು. ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ-12 ನೆಯ ಶತಮಾನದಲ್ಲಿಯೇ  ವೇಶ್ಯೆ ಅಥವಾ ಸೂಳೆ ಎಂದು ಕರೆಯಲಾಗುತ್ತಿದ್ದ ಒಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಅನುಭವ ಮಂಟಪದ ಸದಸ್ಯೆಯನ್ನಾಗಿಸಿ ಆಕೆಯ ಒಡಲಾಳದ ನೋವಿಗೆ ವಚನ ಸಾಹಿತ್ಯದ ಮೂಲಕ ಧ್ವನಿಯಾಗಲು ಅವಕಾಶ ನೀಡಿದ ಬಸವಣ್ಣನವರನ್ನು ಏನೆಂದು ಕರೆಯುವುದು. 2024 ರ ಈ ಸಂದರ್ಭದಲ್ಲೂ ವೇಶ್ಯೆ ಎಂಬ ನಮ್ಮದೇ ಹೆಣ್ಣುಮಗಳು ಎಷ್ಟೊಂದು ತಿರಸ್ಕಾರಕ್ಕೆ ಒಳಗಾಗಿರುವಾಗ 12 ನೇ ಶತಮಾನದ ಬಸವೇಶ್ವರರ ಸಮಾನತೆಯ ಚಿಂತನೆ ಎಷ್ಟು ಗಾಢವಾಗಿರಬಹುದು. 

ಅಷ್ಟೇ ಏಕೆ ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಶೆಟ್ಟರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ ಚಮ್ಮಾರ ಹೊಲೆಯ ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ ಎಂಟು ಶತಮಾನಗಳ ಹಿಂದೆಯೇ  ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದರು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವೇ?. ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು  ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು? ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು – ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ?. ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಈಗ ಜನಪ್ರಿಯವಾಗಿರುವಾಗ ಆಗಿನ ಅವರ ಹೋರಾಟ ಹೇಗಿದ್ದಿರಬಹುದು?.

ಒಕ್ಕಲಿಗರು, ವೀರಶೈವರು ಒಂದೊಂದು ಪಕ್ಷದ ಬಾಲಗಳಿಗೆ ಜೋತು ಬಿದ್ದಿರುವಾಗ, ಲಿಂಗಾಯಿತರು, ವೀರಶೈವರು ಪರಸ್ಪರ ಕಚ್ಚಾಡುತ್ತಿರುವಾಗ, ದಲಿತರು, ಬ್ರಾಹ್ಮಣರು ಪರಸ್ಪರ ದ್ವೇಷಿಸುತ್ತಿರುವಾಗ, ಮುಸ್ಲಿಮರು ಕ್ರಿಶ್ಚಿಯನ್ನರು ದೂರವಾಗಿರುವಾಗ, ಹಿಂದೂಗಳು ಮುಸ್ಲಿಮರು ವಿರೋಧಿಗಳಾಗಿರುವಾಗ, ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ, ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ, (ಕೆಲವು ಅಪರೂಪದ ಉದಾಹರಣೆ ಹೊರತುಪಡಿಸಿ) ಇಂತಹ ವಾತಾವರಣದಲ್ಲಿ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ ಗೆಳೆಯರೆ..

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ. ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ… ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ?.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ. ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. 

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಹೆಮ್ಮೆಯೋ? ನಾಚಿಕೆಯೋ?

ತಾಂತ್ರಿಕವಾಗಿ ಮತ್ತು ನೈತಿಕವಾಗಿ ಅತ್ಯಂತ ಹೆಮ್ಮೆಯ ವಿಷಯ. ಆದರೆ ವಾಸ್ತವಿಕವಾಗಿ ತುಂಬಾ ನಾಚಿಕೆ ಮತ್ತು ಅವಮಾನಕರ ವಿಷಯ. ಇದಕ್ಕೆ ಹೆಜ್ಜೆ ಹೆಜ್ಜೆಗೂ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು.

ಬೇರೆ ಸಮುದಾಯಗಳನ್ನು ಬಿಡಿ, ಬಸವಣ್ಣನವರ ತತ್ವಗಳ ಆಧಾರದ ಮೇಲೆ ಪರಿವರ್ತನೆ ಹೊಂದಿ ಸ್ವತಃ ವೀರಶೈವ ಅಥವಾ ಲಿಂಗಾಯತ ಸಮುದಾಯವಾಗಿರುವ ಜನರಲ್ಲಿಯೇ ಜಾತಿಯ ಬೇರುಗಳು 2024ರ ಪ್ರಾರಂಭದ ಈ ದಿನಗಳಲ್ಲಿಯೂ ಅತ್ಯಂತ ಆಳವಾಗಿ ಬೇರೂರಿದೆ. ಜಾತಿಯ ಮೇಲು ಕೀಳು ಮೀರಿ ಅಸ್ಪೃಶ್ಯತೆ ಸಹ ಇನ್ನೂ ಜೀವಂತವಾಗಿದೆ. ಮರ್ಯಾದಾ ಹತ್ಯೆಗಳು ಸಹ ಆಗಾಗ ನಡೆಯುತ್ತಿವೆ. ಕಾರಣವೇನೇ ಇರಲಿ, ಜಾತಿಗೊಂದು ಮಠಗಳ ಮೀರಿ ಒಳ ಪಂಗಡಗಳು ಮತ್ತು ಒಂದೇ ಪಂಗಡದ ಬೇರೆ ಬೇರೆ ಪಕ್ಷಗಳ ಬೆಂಬಲಿತ ಮಠಗಳು ಕಾರ್ಯನಿರ್ವಹಿಸುತ್ತಿವೆ…

ಚುನಾವಣಾ ಸಂದರ್ಭದ ಜಾತಿ ರಾಜಕೀಯ ಬಸವ ತತ್ವದ ಸಂಪೂರ್ಣ ವಿರುದ್ಧ ನಡೆಗಳನ್ನು ಹೊಂದಿದೆ. ಮತದಾರರು ಭ್ರಷ್ಟರಾಗಿದ್ದಾರೆ. ಅನೇಕ ಮಠ ಮಾನ್ಯಗಳು ನೇರವಾಗಿ ರಾಜಕೀಯ ಪಕ್ಷಗಳ ಹಿಂಬಾಲಕರಾಗಿದ್ದಾರೆ. ಬಹುತೇಕ ಮಠಗಳು ವಾಣಿಜ್ಯೀಕರಣಗೊಂಡಿವೆ.‌ ಕೆಲವು ಲೈಂಗಿಕ ಹಗರಣಗಳಲ್ಲಿ ಸಿಕ್ಕಿ ಬಿದ್ದಿವೆ. ಹಲವು ಶಿಕ್ಷಣ – ಭೂ ಮಾಫಿಯಾ ವ್ಯವಹಾರ ಮಾಡುತ್ತಿವೆ….

ಅನೇಕ ಸಂಘ ಸಂಸ್ಥೆಗಳು ಅಪಾತ್ರರ ಕೈಗೆ ಸಿಲುಕಿ ಬಸವ ತತ್ವ ತನ್ನ ಗೌರವ ಕಳೆದುಕೊಳ್ಳುತ್ತಿದೆ. ಅನೇಕ ಜನರು ಈಗಲೂ ಅತ್ಯಂತ ಮೌಢ್ಯದ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಇವೆಲ್ಲವೂ ಅವರ ವಿಚಾರಗಳಿಗೆ ವಿರುದ್ಧ. ಆದ್ದರಿಂದ ವಾಸ್ತವ ನೆಲೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಆ ರಾಜ್ಯ ಹೇಗಿರಬಹುದು ಎಂದು ಯಾರಾದರೂ ಅಧ್ಯಯನ ಮಾಡಿದರೆ ನಾಚಿಕೆಯಾಗುವುದು ಸಹಜ…..

ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಲ್ಲಿಯವರೆಗೆ ಅನಧಿಕೃತವಾಗಿದ್ದ ವಿಷಯ ಈಗ ಅಧಿಕೃತವಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳು.

ಮುಂದೆ……

ಇಂದಿನಿಂದಲೇ ನಿಜವಾದ ಬಸವ ಅನುಯಾಯಿಗಳ ಜವಾಬ್ದಾರಿ ಹೆಚ್ಚಾಗುತ್ತದೆ. ಇಡೀ ಕರ್ನಾಟಕವನ್ನು ಒಳಗೊಂಡ ಸಮ ಸಮಾಜದ ಕನಸಿಗೆ ಕಾರ್ಯಯೋಜನೆ ರೂಪಿಸಬೇಕಿದೆ. ಜಾತಿ ಪದ್ಧತಿಯ ನಿರ್ಮೂಲನೆ ಮಾಡಿ ಅಂತರ್ಜಾತೀಯ ವಿವಾಹಗಳಿಗೆ ವೈಯಕ್ತಿಕ ಮಟ್ಟದಲ್ಲಿ ಆದರ್ಶವಾಗಬೇಕಿದೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಬಸವ ತತ್ವದ ಪ್ರಾಮುಖ್ಯತೆ ಮನವರಿಕೆ ಮಾಡಿಕೊಡಬೇಕಾಗಿದೆ..

ಯಾರು ಈ ಸಾಂಸ್ಕೃತಿಕ ನಾಯಕ ಎಂದು ಹೆಸರಾಗಲು ಪ್ರಯತ್ನಿಸಿದರೋ ಅವರು ಅಧಿಕಾರ, ಪ್ರಶಸ್ತಿ ಮೀರಿ ಒಂದಷ್ಟು ತ್ಯಾಗಕ್ಕೆ ಸಿದ್ದರಾಗಬೇಕಿದೆ. ಕೇವಲ ಯಾವುದೋ ಕಟ್ಟಡಗಳಿಗೆ, ನಿಲ್ದಾಣಗಳಿಗೆ, ಪ್ರದೇಶಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಪ್ರಶಸ್ತಿಗಳಿಗೆ ಬಸವಣ್ಣನವರ ಹೆಸರು ಘೋಷಿಸುವುದೇ ಒಂದು ಸಾಧನೆಯಾಗಬಾರದು.

ಇನ್ನು ಹತ್ತು ವರ್ಷಗಳಲ್ಲಿ ಚುನಾವಣೆಯಲ್ಲಿ ಜಾತಿ ಮೀರಿದ ಅರ್ಹ ವ್ಯಕ್ತಿ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಪರಿಸ್ಥಿತಿ ಕರ್ನಾಟಕದ ರಾಜಕೀಯದಲ್ಲಿ ನಿರ್ಮಾಣವಾಗಬೇಕು.

ಮದುವೆಗಳು ಮನುಷ್ಯ ಸಂಬಂಧಗಳ ನಡುವೆ ಆಗಬೇಕೆ ಹೊರತು ಜಾತಿಗಳ ನಡುವೆಯಲ್ಲ…

ಯಾವುದೇ ಮಠ ಮಾನ್ಯಗಳ ಪೀಠಾಧೀಶರಾಗಿ ಯಾವುದೇ ಅರ್ಹ ವ್ಯಕ್ತಿ ಮುಖ್ಯಸ್ಥರಾಗ ಬೇಕೆ ಹೊರತು ಆ ಜಾತಿಯವರೇ ಮಾತ್ರವಲ್ಲ.

ಯಾವುದೇ ಜಾತಿ ಪಂಗಡಗಳು ಆ ಹೆಸರಿನಲ್ಲಿ ಮೀಸಲಾತಿ ಹೋರಾಟ ಮಾಡಬಾರದು. ಎಲ್ಲರೂ ನಮ್ಮವರೇ ಎಂದು ಭಾವಿಸಬೇಕು. ಜಾತಿಯೇ ಇಲ್ಲದಿದ್ದರೆ ಜಾತಿಯ ಮೀಸಲಾತಿ ಪ್ರಶ್ನೆಯೇ ಬರುವುದಿಲ್ಲ. ಮೊದಲು ಹೋರಾಟ ಮಾಡಬೇಕಾಗಿರುವುದು ಜಾತಿ ನಿರ್ಮೂಲನೆಗಾಗಿಯೇ ಹೊರತು ಮೀಸಲಾತಿ ವಿರುದ್ಧವಲ್ಲ..

ಹೀಗೆ, ಇನ್ನೂ ಅನೇಕ ಸಾಧ್ಯತೆಗಳು ಇವೆ. ‌ಅದನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಕ್ಕೆ ಅರ್ಥವಿರುತ್ತದೆ. ಇಲ್ಲದಿದ್ದರೆ ಔಪಚಾರಿಕತೆಯಿಂದ ನಮ್ಮಂತ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ.

ನುಡಿದಂತೆ ನಡೆ ಇರಲಿ ಎಂದು ಮನವಿ ಮಾಡಿಕೊಳ್ಳುತ್ತಾ ಶರಣು ಶರಣಾರ್ಥಿಗಳು…..

ವಿವೇಕಾನಂದ ಎಚ್ ಕೆ

ಬರಹಗಾರರು ಹಾಗೂ ಪತ್ರಕರ್ತರು

More articles

Latest article