ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು ಉತ್ತರ ಭಾಗದ ಕೊಂಕಣ ಪ್ರದೇಶ ಹಾಗೂ ದಕ್ಷಿಣ ಭಾಗದ ಕೊಡಗಿನಲ್ಲಿ ಭಾರೀ ಮಳೆಯಾದ ಪರಿಣಾಮ ನದಿಗಳು ತುಂಬಿ ಹರಿಯುತ್ತಿವೆ.
ಘಟಪ್ರಭಾ ನದಿ ಮೈದುಂಬಿಕೊಂಡು ಹರಿಯುತ್ತಿರುವ ಕಾರಣ, ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ಒಂದೇ ದಿನದಲ್ಲಿ ಐದೂವರೆ ಅಡಿ ಏರಿಕೆಯಾಗಿದೆ. ಕೆಆರ್ಎಸ್ನಲ್ಲೂ ಒಂದೇ ದಿನದಲ್ಲಿ ಎರಡು ಅಡಿ ನೀರು ಹೆಚ್ಚಿದೆ. ಅದೇ ರೀತಿ ನವಿಲು ತೀರ್ಥ ಜಲಾಶಯದಲ್ಲೂ ನೀರಿನ ಏರಿಕೆಯಾಗಿದೆ.
ಭಾಗಮಂಡಲ ಸಮೀಪ ಇರುವ ಬಿರುನಾಣಿಯಲ್ಲಿ ಕಳೆದ 24 ತಾಸಿನಲ್ಲಿ 17.85 ಸೆಂಟಿ ಮೀಟರ್ ಮಳೆ ಸುರಿದಿದೆ. ಇದು ಇಡೀ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪ್ಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ವ್ಯಾಪ್ತಿಯ ಶಾಲೆ ಹಾಗೂ ಕಾಲೇಜು ಗಳಿಗೆ ಕೊಡಗು ಜಿಲ್ಲೆಯ ಪ್ರೌಢಶಾಲೆಯವರೆಗೆ ಹಾಗೂ ಬೆಳಗಾವಿ ಜಿಲ್ಲೆಯ ಬೆಳಗಾವಿ, ನಿಪ್ಪಾಣಿ ಮತ್ತು ಖಾನಾಪುರ ಹಾಗೂ ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದ ಉತ್ತರಕ ನ್ನಡ, ಶಿವಮೊಗ್ಗ ಬೆಳಗಾವಿ ಜಿಲ್ಲೆಗಳಲ್ಲು ಅಧಿಕ ಮಳೆ ಸುರಿದಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸುತ್ತಿದ್ದ ವೇಳೆ ಮೂರು ದಿನಗಳಿಂದ ಮುಂಗಾರು ತೀವ್ರಗೊಂಡಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸೋವಿನ್ ಕೊಪ್ಪದಲ್ಲಿ 17.7 ಸೆಂಟಿ ಮೀಟರ್ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಂದಿಕದಲ್ಲಿ 17.5 ಸೆಂ. ಮೀ. ಮಳೆಯಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಲಾಶಯ ಒಳ ಹರಿವಿನ ನೀರು ಹೆಚ್ಚಳ:
ಕಾವೇರಿ ಕೊಳ್ಳದಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

