ಶಿವಮೊಗ್ಗ : ಸಾಗರ ತಾಲ್ಲೂಕು, ಆವಿನಹಳ್ಳಿ ಹೋಬಳಿ, ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಕೈಬಿಡುವಂತೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿದರು.
ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕು ಆವಿನಹಳ್ಳಿ ಹೋಬಳಿ, ಬೇಸೂರು ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಯೋಜನೆಯ ಅನುಷ್ಠಾನಕ್ಕಾಗಿ ಸ್ಥಳ ಗುರುತಿಸುವಂತೆ ಸರ್ಕಾರದಿಂದ ಪ್ರಸ್ತಾಪಿಸಲಾಗುತ್ತಿದ್ದು ಬೇಸೂರು ಮತ್ತು ಸಮೀಪದ ಗ್ರಾಮಗಳಲ್ಲಿ ಈ ಹಿಂದೆ ಹಿರೇಭಾಸ್ಕರ ಮತ್ತು ಶರಾವತಿ ಜಲವಿದ್ಯುತ್ ಯೋಜನೆಗಳಲ್ಲಿ ಸಂತ್ರಸ್ಥರಾದ ಸ್ಥಳೀಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದು, ಪುನಃ ಇಂತಹ ಯೋಜನೆಗಳಿಂದ ಸದರಿ ಸಂತ್ರಸ್ತ ಕುಟುಂಬಗಳ ಜೀವನ ಮತ್ತೊಮ್ಮೆ ನೆಲೆ ಕಳೆದುಕೊಳ್ಳುವ ಅಪಾಯವಿರುತ್ತದೆ.
ಮುಂದುವರೆದು ಈ ಯೋಜನೆಗೆ ಸ್ಥಳೀಯ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಹಲವಾರು ಯೋಜನೆಗಳಿಗೆ ಭೂಮಿ ನೀಡಿರುವ ಸಾಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಅಣುಸ್ಥಾವರ ಸ್ಥಾಪನೆಗೆ ಮುಂದಾದಲ್ಲಿ ಪಶ್ಚಿಮ ಘಟ್ಟದ ಜೀವವೈವಿದ್ಯ, ಅರಣ್ಯ ಮತ್ತು ನೈಸರ್ಗಿಕ ಸಂಪತ್ತು ಹಾಗೂ ಸ್ಥಳೀಯರ ಜೀವನದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ಆದ್ದರಿಂದ ಮಲೆನಾಡಿನ ಪಶ್ಚಿಮಘಟ್ಟದ ಶ್ರೇಣಿಗೆ ಮಾರಕವಾಗಿರುವ ಯೋಜನೆಯನ್ನು ಯಾವುದೇ ಕಾರಣಕ್ಕೂ ನಮ್ಮ ಪ್ರದೇಶದಲ್ಲಿ ಆರಂಭಿಸಬಾರದು ಹಾಗೂ ಸಾರ್ವಜನಿಕ ಮತ್ತು ನೈಸರ್ಗಿಕ ಹಿತದೃಷ್ಟಿಯಿಂದ ಪ್ರಸ್ತಾಪಿತ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಯೋಜನೆಯು ಕೈಬಿಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು .

