ಚಾಮರಾಜನಗರ ಸೆ. 9: ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.
ಆ.15ರಂದು ಹನೂರು ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಿಬ್ಬಂದಿ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾಗಿ ಅರಣ್ಯ ಇಲಾಖೆ ವಾದಿಸಿದೆ. ಮತ್ತೊಂದೆಡೆ, ಮೃತರು ಬೇಟೆಗೆ ತೆರಳಿರಲಿಲ್ಲ, ಕಳೆದುಹೋದ ಜಾನುವಾರುಗಳನ್ನು ಹುಡುಕಲು ಕಾಡಿಗೆ ತೆರಳಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಶೂಟೌಟ್ ಪ್ರಕರಣದ ತನಿಖೆಯನ್ನು ಇದೀಗ ಸಿಐಡಿಗೆ ವರ್ಗಾಯಿಸಲಾಗಿದೆ. ಶೂಟೌಟ್ ಮಾತ್ರವಲ್ಲದೆ, ಘಟನೆ ಬಳಿಕ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ನಡೆದ ದಾಳಿ, ಜಿಲೆಟಿನ್ ಸ್ಫೋಟ ಸೇರಿದಂತೆ ಸಂಬಂಧಿತ ಪ್ರಕರಣಗಳ ತನಿಖೆಯನ್ನೂ ಸಿಐಡಿಗೆ ವಹಿಸಲಾಗಿದೆ.
ಘಟನೆಯಲ್ಲಿ ಗುಂಡು ಹಾರಿಸಿದರೆಂದು ಉಲ್ಲೇಖವಾಗಿರುವ ಅರಣ್ಯ ಸಿಬ್ಬಂದಿ ಶಿವರಾಜ್ ಸಾಸಲವಾಡೆ, ಶಿವಲಿಂಗ ನಾಯ್ಕ್ ಹಾಗೂ ಗಿರೀಶ್ ಅವರಿಗೆ ಕೊಳ್ಳೇಗಾಲ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಪ್ರಕರಣದ ಮುಂದಿನ ತನಿಖೆ ಸಿಐಡಿ ಕೈಯಲ್ಲಿರುವುದರಿಂದ, ಶೂಟೌಟ್ ನಡೆದ ಸಂದರ್ಭ, ಅರಣ್ಯ ಸಿಬ್ಬಂದಿಯ ಕ್ರಮ ಮತ್ತು ಮೃತರು ನಿಜವಾಗಿಯೂ ಬೇಟೆಗೆ ತೆರಳಿದ್ದರೇ ಎಂಬುದು ಸೇರಿದಂತೆ ಹಲವು ಅಂಶಗಳು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ.

