ನೇಪಾಳ : ಬುಧವಾರ ನೇಪಾಳ-ಚೀನಾ ಗಡಿಯ ಪರ್ವತಮಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಕನಿಷ್ಠ 616 ಮಂದಿ ಮೃತಪಟ್ಟಿದ್ದು, 2,478 ಮಂದಿ ನಾಪತ್ತೆಯಾಗಿದ್ದಾರೆ.
ನೇಪಾಳದ ರಸುವಾ ಜಿಲ್ಲೆಯಲ್ಲಿರುವ ಭೋಟೆ ಕೋಶಿ ನದಿಯ ಉಗಮಸ್ಥಾನದ ಬಳಿ ಹೊಸದಾಗಿ ಸರೋವರವೊಂದು (ಅಣೆಕಟ್ಟಿನಂತಹ ತಡೆಗೋಡೆಯಿಂದ ರೂಪುಗೊಂಡ ಸರೋವರ) ನಿರ್ಮಾಣಗೊಂಡಿದ್ದು, ಅದು ಒಡೆದುಹೋಗುವ ಸಾಧ್ಯತೆಯಿದೆ ಎಂದು ಚೀನಾ ಅಧಿಕಾರಿಗಳು ಎಚ್ಚರಿಕೆ ನೀಡಿರುವುದರಿಂದ ನದಿಯ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹದ ಹೊಸ ಭೀತಿ ಎದುರಾಗಿದೆ.
ಹಿಮಾಲಯದ ಪ್ರದೇಶದಲ್ಲಿ ಸುನಾಮಿಯಂತಹ ಭಾರಿ ನೀರಿನ ಅಲೆ ಮತ್ತು ಅವಶೇಷಗಳು ಹರಿದುಬಂದು ಹಳ್ಳಿಗಳನ್ನು ಮುಳುಗಿಸಿದ ನಂತರ ನಾಪತ್ತೆಯಾದ ಸಾವಿರಾರು ಜನರನ್ನು ಪತ್ತೆಹಚ್ಚಲು ನೇಪಾಳ ಮತ್ತು ಚೀನಾದ ರಕ್ಷಣಾ ಸಿಬ್ಬಂದಿ ಶನಿವಾರವೂ ಹರಸಾಹಸ ಪಡುತ್ತಿದ್ದಾರೆ..
ಬುಧವಾರ ಸಂಭವಿಸಿದ ಭೂಕುಸಿತದಿಂದಾಗಿ ರೂಪುಗೊಂಡ ಸರೋವರವು ಒಡೆದುಹೋಗುವ ಹೆಚ್ಚಿನ ಅಪಾಯವಿದ್ದು, ಇದರಿಂದಾಗಿ ಕೆಳಭಾಗಕ್ಕೆ ಪ್ರವಾಹದ ನೀರು ನುಗ್ಗುವ ಸಾಧ್ಯತೆಯಿದೆ; ಹೀಗಾಗಿ ದ್ವಿತೀಯ ಹಂತದ ಹಠಾತ್ ಪ್ರವಾಹದ ಬಗ್ಗೆ ನೇಪಾಳದ ಐಸಿಐಎಂಒಡಿ ಸಂಸ್ಥೆಯ ಹಿಮಗೋಳ ತಜ್ಞರು ಹಾಗೂ ಚೀನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನೇಪಾಳದ ತ್ರಿಶೂಲಿ-I ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 63 ಭಾರತೀಯ ಪ್ರಜೆಗಳ ಹೆಸರುಗಳನ್ನು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ. ಗುರುವಾರ X ಪೋಸ್ಟ್ ಮಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ನೇಪಾಳದಲ್ಲಿ ರಕ್ಷಿಸಲ್ಪಟ್ಟ ಭಾರತೀಯ ಪ್ರಜೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 84 ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

