ಬೆಂಗಳೂರು ಆ.19: ಚಾಮರಾಜನಗರ ಶೂಟ್ಔಟ್ ಪ್ರಕರಣವನ್ನು ಇಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಮಿಳುನಾಡಿನ ಕೆಲವು ರಾಜಕಾರಣಿಗಳು ಕನ್ನಡಿಗರು ಮತ್ತು ತಮಿಳರ ನಡುವೆ ಬೆಂಕಿ ಹಚ್ಚುವ ಯತ್ನ ನಡೆಸುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಶೂಟ್ಔಟ್ ಪ್ರಕರಣಕ್ಕೆ ಭಾಷಾ ಆಯಾಮವನ್ನು ನೀಡಿದ್ದೇ ದೊಡ್ಡ ತಪ್ಪು. ಮೃತಪಟ್ಟವರು ತಮಿಳರು ಎಂಬ ಕಾರಣಕ್ಕೆ ಅಲ್ಲಿ ಶೂಟ್ಔಟ್ ನಡೆದಿಲ್ಲ. ಕಳ್ಳಬೇಟೆಯ ಹಿನ್ನೆಲೆಯಲ್ಲಿ ನಡೆದಿರುವ ಘಟನೆಗೆ ತನಿಖೆಯ ಅಗತ್ಯವಿದೆ. ಆದರೆ ಇದಕ್ಕೆ ಭಾಷೆಯ ಬಣ್ಣ ಬಳಿದು, ಕರ್ನಾಟಕದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬಂತೆ ಬಿಂಬಿಸುವ ಹತಾಶ ಯತ್ನವನ್ನು ತಮಿಳುನಾಡಿನ ರಾಜಕಾರಣಿಗಳು ನಡೆಸುತ್ತಿರುವುದು ಖಂಡನೀಯ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.
ಈ ಪ್ರಕರಣದ ಸತ್ಯಾಸತ್ಯತೆ ಇನ್ನೂ ತನಿಖೆಯ ಹಂತದಲ್ಲಿದೆ. ರಾಜ್ಯ ಸರ್ಕಾರ ಈಗಾಗಲೇ ಮ್ಯಾಜಿಸ್ಟರಿಯಲ್ ತನಿಖೆಗೆ ಆದೇಶಿಸಿದೆ. ತನಿಖೆಯಿಂದ ಹೊರಬರುವ ಅಂಶಗಳು ಏನೆಂಬುದು ಸಾರ್ವಜನಿಕವಾಗಲಿದೆ. ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದ್ದರೆ ಕಾನೂನು ತನ್ನ ಕೆಲಸ ಮಾಡಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಅದನ್ನು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಯಾರೂ ಸಮರ್ಥಿಸುವುದಿಲ್ಲ.
ಈ ವಿಚಾರದಲ್ಲಿ ಕರ್ನಾಟಕದ ವಿರೋಧಪಕ್ಷಗಳು ಈಗಾಗಲೇ ಧ್ವನಿ ಎತ್ತಿವೆ. ಆಡಳಿತ ಪಕ್ಷದವರೂ ಘಟನೆಗೆ ಸಂಬಂಧಿಸಿದಂತೆ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವೂ ತನಿಖೆಗೆ ಆದೇಶಿಸಿದೆ. ಹೀಗಿರುವಾಗ ಕರ್ನಾಟಕದ ಆಂತರಿಕ ವಿದ್ಯಮಾನಕ್ಕೆ ತಮಿಳುನಾಡಿನ ರಾಜಕಾರಣಿಗಳು ಏಕೆ ಮೂಗು ತೂರಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ತನಿಖೆ ಪೂರ್ಣಗೊಳ್ಳುವ ಮೊದಲೇ ಒಂದು ರಾಜ್ಯದ ರಾಜಕಾರಣಿಗಳು ಮತ್ತೊಂದು ರಾಜ್ಯದ ವಿರುದ್ಧ ಆರೋಪಗಳನ್ನು ಮಾಡುವುದು ಸರಿಯಲ್ಲ. ಅದು ತನಿಖೆಯ ದಿಕ್ಕಿನ ಬಗ್ಗೆ ಸಾರ್ವಜನಿಕರಲ್ಲಿ ಅನಗತ್ಯ ಅನುಮಾನ ಮೂಡಿಸುವ ಕೆಲಸವಾಗುತ್ತದೆ. ಕಾನೂನು ತನ್ನ ಕೆಲಸ ಮಾಡಲು ಅವಕಾಶ ನೀಡಬೇಕು. ರಾಜಕೀಯ ಲಾಭಕ್ಕಾಗಿ ತನಿಖೆಯನ್ನೇ ರಾಜಕೀಯ ವೇದಿಕೆಯನ್ನಾಗಿ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ತಮಿಳುನಾಡು ಸರ್ಕಾರ ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದೆ. ಇಷ್ಟೊಂದು ಕಾಳಜಿ ತೋರುವ ತಮಿಳುನಾಡು ಸರ್ಕಾರ ಕರ್ನಾಟಕದಲ್ಲಿ ಇರುವ ತಮಿಳರಿಗೆ ಏನು ಮಾಡಿದೆ? ಅವರಿಗೆ ಸರ್ಕಾರಿ ಸವಲತ್ತುಗಳನ್ನು ಕೊಡುತ್ತಿರುವ ಕರ್ನಾಟಕ ಸರ್ಕಾರ. ಅಲ್ಲಿನ ಜನರಿಗೆ ತಮ್ಮ ಭಾಷಿಕ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಕರ್ನಾಟಕದಲ್ಲಿ ವಾಸವಾಗಿರುವ ಲಕ್ಷಾಂತರ ತಮಿಳರನ್ನು ತಮಿಳುನಾಡಿಗೆ ಕರೆಯಿಸಿಕೊಂಡು ಅಲ್ಲೇ ಅವರಿಗೆ ಪುನರ್ವಸತಿ ಕಲ್ಪಿಸುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ, ಲಕ್ಷಾಂತರ ತಮಿಳರು ಹಲವು ದಶಕಗಳಿಂದ ವಾಸಿಸುತ್ತಿದ್ದಾರೆ. ಅವರು ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ವ್ಯಾಪಾರ ಮಾಡುತ್ತಿದ್ದಾರೆ, ಬದುಕು ಕಟ್ಟಿಕೊಂಡಿದ್ದಾರೆ. ಕನ್ನಡಿಗರೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಕರ್ನಾಟಕ ಸರ್ಕಾರವೂ ಅವರಿಗೆ ರಾಜ್ಯದ ಇತರ ನಾಗರಿಕರಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಕಾವೇರಿ ವಿವಾದ ತೀವ್ರಗೊಂಡಾಗ ಕರ್ನಾಟಕದಲ್ಲಿರುವ ಈ ತಮಿಳರ ಸುರಕ್ಷತೆ ಮತ್ತು ಬದುಕಿನ ಬಗ್ಗೆ ತಮಿಳುನಾಡಿನ ರಾಜಕಾರಣಿಗಳಿಗೆ ಇದೇ ರೀತಿಯ ಕಾಳಜಿ ಏಕೆ ಕಾಣಿಸುವುದಿಲ್ಲ?
ಕರ್ನಾಟಕದಲ್ಲಿರುವ ತಮಿಳರು ಕಾವೇರಿ ನೀರು ಕುಡಿಯುವುದಿಲ್ಲವೇ? ಅವರು ಕರ್ನಾಟಕದ ಜನರೊಂದಿಗೆ ಬದುಕುವುದಿಲ್ಲವೇ? ಕಾವೇರಿ ವಿವಾದದ ಸಂದರ್ಭದಲ್ಲಿ ಭಾಷಾ ಭಾವನೆಗಳನ್ನು ಕೆರಳಿಸುವ ರಾಜಕಾರಣ ಮಾಡುವವರಿಗೆ, ಕರ್ನಾಟಕದಲ್ಲಿರುವ ತಮ್ಮದೇ ಭಾಷಿಕ ಜನರ ಹಿತಾಸಕ್ತಿ ನೆನಪಾಗುವುದಿಲ್ಲ. ಆದರೆ ಒಂದು ಶೂಟ್ಔಟ್ ಘಟನೆ ನಡೆದ ತಕ್ಷಣ ಭಾಷೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವುದರ ಹಿಂದಿನ ರಾಜಕೀಯ ಉದ್ದೇಶವೇನು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಸಮಸ್ಯೆಗಳನ್ನು ನಾವೇ ನೋಡಿಕೊಳ್ಳುತ್ತೇವೆ. ನಮ್ಮ ರಾಜ್ಯದಲ್ಲಿ ನಡೆದಿರುವ ಘಟನೆ ಕುರಿತು ತನಿಖೆ ನಡೆಸಲು ನಮ್ಮ ಸರ್ಕಾರ, ನಮ್ಮ ಕಾನೂನು ವ್ಯವಸ್ಥೆ ಮತ್ತು ನಮ್ಮ ಸಂಸ್ಥೆಗಳಿವೆ. ಅದಕ್ಕೆ ಹೊರಗಿನ ರಾಜ್ಯಗಳ ಪಂಡಿತರ ಸಲಹೆ ನಮಗೆ ಬೇಕಿಲ್ಲ. ತಮಿಳುನಾಡಿನ ರಾಜಕಾರಣಿಗಳು ಮೊದಲು ತಮ್ಮ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನಹರಿಸಲಿ. ಕರ್ನಾಟಕಕ್ಕೆ ಬಿಟ್ಟಿ ಉಪದೇಶ ಮಾಡುವ ಅಗತ್ಯವಿಲ್ಲ.
ಶೂಟ್ಔಟ್ ಪ್ರಕರಣದ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಈ ಪ್ರಕರಣಕ್ಕೆ ಭಾಷೆಯ ಬಣ್ಣ ಕಟ್ಟುವ, ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷ ಬಿತ್ತುವ ರಾಜಕೀಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

