ಕಲಬುರಗಿ, ಆ.15: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಟೀಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ತಿರುಗೇಟು ನೀಡಿದ್ದಾರೆ. ಬಿ.ಎಲ್. ಸಂತೋಷ್ ಅವರಿಗೆ ಇತಿಹಾಸದ ಅರಿವಿಲ್ಲ ಎಂದು ಆರೋಪಿಸಿರುವ ಅವರು, ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.
“ಬಿ.ಎಲ್. ಸಂತೋಷ್ ಅವರಿಗೆ ಇತಿಹಾಸ ಗೊತ್ತಿಲ್ಲ. ಖರ್ಗೆ ಕುಟುಂಬ ಬೀದರ್ನಿಂದ ಬಂದಾಗ ಆರ್ಎಸ್ಎಸ್ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ನಮ್ಮ ಕುಟುಂಬ ರಕ್ಷಿಸಿದ್ದು ಸೈನಿಕರು, ಆರ್ ಎಸ್ ಎಸ್ ಕಾರ್ಯಕರ್ತರಲ್ಲ. ನಮ್ಮ ಕುಟುಂಬದ ವಿಚಾರ ಬಿಡಿ. ಇವರು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು? ಕನಿಷ್ಠ ಐದು ಜನ ಆರ್ಎಸ್ಎಸ್ ನಾಯಕರ ಹೆಸರು ಹೇಳಲಿ” ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ತಮ್ಮ ವಿರುದ್ಧ ಅಥವಾ ತಮ್ಮ ಕುಟುಂಬದ ವಿರುದ್ಧ ಬಿಜೆಪಿ ನಾಯಕರು ಪದೇಪದೆ ಟೀಕೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಸಚಿವರು, ತಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
“ನಾನ್ಯಾಕೆ ಅವರಿಗೆ ಹೆದರಬೇಕು?” ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ, “ನನಗೆ ಆರ್ಎಸ್ಎಸ್ ಭಯ ಇಲ್ಲ. ಅವರಿಗೆ ಪ್ರಿಯಾಂಕ್ ಫೋಬಿಯಾ ಇರಬೇಕು. ನಾನ್ಯಾಕೆ ಅವರಿಗೆ ಹೆದರಬೇಕು? ಹೆದರೋಕೆ ಅವರು ಯಾರು?” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ವೀರ ಸಾವರ್ಕರ್ ವಿಚಾರವನ್ನೂ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಸಾವರ್ಕರ್ಗೆ ‘ವೀರ್’ ಎಂಬ ಬಿರುದು ನೀಡಿದವರು ಯಾರು ಎಂಬ ಪ್ರಶ್ನೆಗೆ ಬಿಜೆಪಿ ನಾಯಕರು ಸಂಸತ್ನಲ್ಲಿ ಉತ್ತರಿಸಿಲ್ಲ ಎಂದು ಆರೋಪಿಸಿದರು. ಈ ಮೂಲಕ ಬಿಜೆಪಿ ನಾಯಕರಿಗೆ ಇತಿಹಾಸದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಮತ್ತು ಬಿ.ಎಲ್. ಸಂತೋಷ್ ನಡುವೆ ಇತ್ತೀಚಿನ ದಿನಗಳಲ್ಲಿ ಆರ್ಎಸ್ಎಸ್ ನೋಂದಣಿ ಸೇರಿದಂತೆ ಹಲವು ವಿಚಾರಗಳಲ್ಲಿ ವಾಕ್ಸಮರ ತೀವ್ರಗೊಂಡಿದೆ. ಆರ್ಎಸ್ಎಸ್ ನೋಂದಣಿ ಕುರಿತು ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದ್ದರೆ, ಬಿ.ಎಲ್. ಸಂತೋಷ್ ಆರ್ಎಸ್ಎಸ್ ಈಗಲೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.

