ನವದೆಹಲಿ/ತಿರುವನಂತಪುರಂ: ಬಿಜೆಪಿ ಐಟಿ ಸೆಲ್ನ ಮಾಜಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಹಾಗೂ ಆರ್ಎಸ್ಎಸ್ ವಿಚಾರಧಾರೆಗೆ ಸಂಬಂಧಿಸಿದ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್ದಾಸ್ ಎಂಬಾತನ ಹೇಳಿಕೆಗಳು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಕುರಿತು ಅವರು ನೀಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸುವ ಬಗ್ಗೆ ಹಾಗೂ ಮಹಿಳಾ ಪ್ರತಿಭಟನಾಕಾರರ ಕುರಿತು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಜುಲೈ 20ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಮಾತನಾಡಿರುವ ಟಿ.ಜಿ. ಮೋಹನ್ದಾಸ್, “ನನಗೆ ಅಧಿಕಾರ ಇದ್ದಿದ್ದರೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆದೇಶಿಸುತ್ತಿದ್ದೆ” ಎಂಬ ಅರ್ಥದ ಹೇಳಿಕೆ ನೀಡಿದ್ದಾನೆ . ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಹಾಗೂ ಹಲವು ನಾಗರಿಕ ಸಂಘಟನೆಗಳು ಇದನ್ನು ಖಂಡಿಸಿವೆ.
ಇಷ್ಟೇ ಅಲ್ಲದೆ ಜಂತರ ಮಂತರ್ನಿಂದ ಪೊಲೀಸರನ್ನು ಹಿಂತೆಗೆದರೆ ಅಲ್ಲಿ ಸಾಮೂಹಿಕ ಅತ್ಯಾಚಾರಗಳು ಮತ್ತು ಕೊಲೆಗಳು ನಡೆಯುತ್ತವೆ ಎಂದು ಆತ ಹೇಳಿದ್ದಾನೆ. ಇದಾದ ಬಳಿಕ, “ಆದರೆ ಅದರ ಬಗ್ಗೆ ಯಾವುದೇ ಅತ್ಯಾಚಾರ ದೂರುಗಳು ಬರುವುದಿಲ್ಲ. ಏಕೆಂದರೆ ಅಲ್ಲಿ ಇರುವವರಲ್ಲಿ, ವಿಶೇಷವಾಗಿ ಎಡಪಂಥೀಯ, ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಬಹುಜನ ಚಿಂತನೆ ಹೊಂದಿರುವ ಮಹಿಳೆಯರಲ್ಲಿ ‘ಅತ್ಯಾಚಾರವನ್ನು ಇಷ್ಟಪಡುವವರು ಇದ್ದಾರೆ” ಎಂದು ಹೇಳಿಕೊಂಡಿದ್ದಾನೆ.
ಈ ಹೇಳಿಕೆಗಳು ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ, ಮಹಿಳೆಯರ ವಿರುದ್ಧದ ದ್ವೇಷಪೂರಿತ ಭಾಷಣವಾಗಿವೆ ಮತ್ತು ಹಿಂಸೆಯನ್ನು ಪರೋಕ್ಷವಾಗಿ ಸಮರ್ಥಿಸುವಂತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆಗಳು ಹಿಂಸೆಯನ್ನು ಪ್ರಚೋದಿಸುವ ಸಾಧ್ಯತೆಯಿದ್ದು, ಮಹಿಳೆಯರನ್ನು ಅವಮಾನಿಸುವಂತಿವೆ ಎಂದು ಆರೋಪಿಸಿರುವ ಅವರು, ಟಿ.ಜಿ. ಮೋಹನ್ದಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇರಳದಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳೂ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ವರದಿಯಾಗಿದೆ. ಮಹಿಳಾ ಸಂಘಟನೆಗಳು ಕೂಡ ಈ ಹೇಳಿಕೆಗಳನ್ನು ಖಂಡಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಅನೇಕರು ಇದು ದ್ವೇಷ ಭಾಷಣ ಎಂದು ಆರೋಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ವಿಡಿಯೋವನ್ನು ಸಂಪೂರ್ಣ ಸಂದರ್ಭದೊಂದಿಗೆ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಟಿ.ಜಿ. ಮೋಹನ್ದಾಸ್ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾನೆ. ವೈರಲ್ ಆಗಿರುವ ವಿಡಿಯೋವನ್ನು ಆಯ್ದ ಭಾಗಗಳನ್ನು ಮಾತ್ರ ಕತ್ತರಿಸಿ ಪ್ರಸಾರ ಮಾಡಲಾಗಿದೆ ಎಂದು ತಿಪ್ಪೆ ಸಾರಿಸುವ ಯತ್ನ ನಡೆಸಿದ್ದಾನೆ.
ತನ್ನ ಹೇಳಿಕೆಗಳು ವ್ಯಂಗ್ಯಾತ್ಮಕ ಮತ್ತು ಕಾಲ್ಪನಿಕ ನೆಲೆಯಲ್ಲಿ ಮಾಡಲಾಗಿದ್ದವು. ಅವುಗಳನ್ನು ಸಂದರ್ಭದಿಂದ ಬೇರ್ಪಡಿಸಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆತ ಸಮರ್ಥಿಸಿಕೊಂಡಿದ್ದಾನೆ.
ಈ ವಿವಾದ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಉಂಟಾಗಿದೆ. ಪ್ರತಿಭಟನೆ ವೇಳೆ ಪೊಲೀಸ್ ಕ್ರಮ, ಪ್ರತಿಭಟನಾಕಾರರ ಹಕ್ಕುಗಳು ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆ ಕುರಿತು ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಟಿ.ಜಿ. ಮೋಹನ್ದಾಸ್ ನ ಈ ಹೇಳಿಕೆಗಳು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿವೆ.
ವಿವಾದಾತ್ಮಕ ಹೇಳಿಕೆಗಳ ಸಂಬಂಧ ಕೇರಳದಲ್ಲಿ ಪೊಲೀಸ್ ದೂರುಗಳು ದಾಖಲಾಗಿರುವುದಾಗಿ ವರದಿಯಾಗಿದೆ. ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿದ್ದು, ಅಧಿಕಾರಿಗಳ ಮುಂದಿನ ಕ್ರಮದತ್ತ ಗಮನ ಹರಿದಿದೆ.

