ಬೆಂಗಳೂರು : ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಬೆಂಗಳೂರಿಗೂ ತಾಗಿದೆ. ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ಹರಿಹರದ ಬಿಜೆಪಿ ಶಾಸಕ ಬಿಪಿ ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗೆ ತಿರುಗೇಟು ನೀಡಲು ಬಿಜೆಪಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಯಿತು. ಶಾಸಕರ ಮೊಬೈಲಿಗೆ ಪ್ರತಿಭಟನೆ ಸ್ಥಳದ ಲೋಕೇಶನ್ ಕಳುಹಿಸಲಾಗಿತ್ತು. ಈ ಲೋಕೇಶನ್ ಆಧಾರದ ಮೇಲೆ ಬಿಪಿ ಹರೀಶ್ ಚಾಲಕ ಕ್ವೀನ್ಸ್ ರೋಡ್ ಬಳಿ ಹರೀಶ್ ಅವರನ್ನು ಬಿಟ್ಟಿದ್ದಾನೆ. ಹರೀಶ್ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಮೊಟ್ಟೆ ಎಸೆದಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಬಿಪಿ ಹರೀಶ್ ಅವರನ್ನು ರಕ್ಷಿಸಿದ್ದಾರೆ.
ಶಾಸಕ ಬಿ.ಪಿ.ಹರೀಶ್ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಆರ್. ಅಶೋಕ ಮಾತನಾಡಿ, ಕಾಂಗ್ರೆಸ್ ಕಚೇರಿ ಗೂಂಡಾಗಳ ಕಚೇರಿ, ಕಾಂಗ್ರೆಸ್ ಹಲವು ಬಾರಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಆದರೆ, ನಾವು ಈ ರೀತಿ ನಡೆದುಕೊಂಡಿಲ್ಲ. ಕಾಂಗ್ರೆಸ್ನವರು ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

