ಬೆಂಗಳೂರು : ವಾಯ್ಸ್ ಆಫ್ ಸದಾಶಿವನಗರ ಸಾಮಾಜಿಕ ಸೇವಾ ಸಂಘಟನೆ ವತಿಯಿಂದ ಬೆಂಗಳೂರಿನ ಹೆಮ್ಮೆಯ ಸ್ಯಾಂಕಿ ಟ್ಯಾಂಕ್ ಕೆರೆ ಇಂದು ಗಂಭೀರ ಪರಿಸರ ಸಂಕಷ್ಟವನ್ನು ಎದುರಿಸುತ್ತಿದ್ದು, ಕೆರೆಯ ಅಸ್ತಿತ್ವವೇ ಅಪಾಯದಲ್ಲಿದೆ ಎಂದು ಸದಾಶಿವನಗರದ ನಾಗರಿಕರು, ಪರಿಸರ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಈ ಹಿನ್ನೆಲೆಯಲ್ಲಿ “ಸ್ಯಾಂಕಿ ಟ್ಯಾಂಕ್ ಉಳಿಸಿ ” ಅಭಿಯಾನದಡಿ ಜಾಗೃತಿ ಕಾರ್ಯಕ್ರಮ ಮತ್ತು ಪ್ರತಿಭಟನೆ ನಡೆಯಿತು. ವಾಯ್ಸ್ ಆಫ್ ಸದಾಶಿವನಗರ ಸಂಸ್ಥೆಯ ಶಿಲ್ಪ ಜತ್ತಿ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಡಾ.ಮನುರವರು ಮತ್ತು ಸದಾಶಿವನಗರದ ಸ್ಥಳೀಯ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಶಿಲ್ಪ ಜತ್ತಿ ಮಾತನಾಡಿ, ಸ್ಯಾಂಕಿ ಟ್ಯಾಂಕ್ನಲ್ಲಿ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿರುವುದು, ಕೆರೆಗೆ ಸೇರುವ ಒಳಚರಂಡಿ ನೀರು, ಹಸಿರು ವಲಯದ ನಾಶ, ಕೆರೆಯೊಳಗಿನ ಕಾಂಕ್ರೀಟೀಕರಣ, ಕೆರೆಯ ವಿಸ್ತೀರ್ಣ ಕುಗ್ಗುತ್ತಿರುವುದು ಹಾಗೂ ಕೆರೆಯ ಪರಿಸರ ಸಮತೋಲನ ಹದಗೆಡುತ್ತಿರುವುದು ಪ್ರಮುಖ ಸಮಸ್ಯೆಗಳಾಗಿ ಪರಿಣಮಿಸಿವೆ ಎಂದರು.
ಕೆರೆಯ ಸುತ್ತಮುತ್ತ ದಶಕಗಳಷ್ಟು ಹಳೆಯ ಮರಗಳನ್ನು ಕಡಿದು ಹಾಕಿರುವುದರಿಂದ ಜೀವ ವೈವಿಧ್ಯತೆಗೆ ದೊಡ್ಡ ಹೊಡೆತ ಬಿದ್ದಿದೆ. ಯಾವುದೇ ಸಮರ್ಪಕ ಪರಿಸರ ಅಧ್ಯಯನವಿಲ್ಲದೆ ನಡೆಯುತ್ತಿರುವ ಕಾಮಗಾರಿಗಳು ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿವೆ.
ಕೆರೆಯೊಳಗೆ ಹಾಗೂ ಸುತ್ತಮುತ್ತ ನಿರ್ಮಾಣ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಇದರಿಂದ ಕೆರೆಯ ನೀರು ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದ್ದು, ಮಣ್ಣಿನ ಸಿಲ್ಟೇಶನ್ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ ಕೆರೆಯ ಬಂಡ್ ಎತ್ತರ ಹೆಚ್ಚಿಸಿರುವ ಪರಿಣಾಮವಾಗಿ ನೀರಿನ ಹರಿವಿನ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ.
ಈ ಎಲ್ಲಾ ಬೆಳವಣಿಗೆಗಳು ಬೆಂಗಳೂರು ನಗರದ ಭೂಗರ್ಭ ಜಲಮಟ್ಟ, ಪರಿಸರ ಸಮತೋಲನ ಹಾಗೂ ಸಾರ್ವಜನಿಕ ಆಸ್ತಿಯ ಭವಿಷ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತಿವೆ ಎಂದು ಸಂಘಟನೆಗಳು ಎಚ್ಚರಿಸಿವೆ. ಸ್ಯಾಂಕಿ ಟ್ಯಾಂಕ್ ಕೇವಲ ಒಂದು ಕೆರೆಯಲ್ಲ, ಅದು ಬೆಂಗಳೂರಿನ ಜೀವನಾಡಿ ಹಾಗೂ ಪರಿಸರ ಪರಂಪರೆ..
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕೆರೆಯೊಳಗಿನ ಎಲ್ಲಾ ಕಾಂಕ್ರೀಟೀಕರಣ ಮತ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು, ಸ್ವತಂತ್ರ ಪರಿಸರ ಮತ್ತು ನೀರಿನ ಗುಣಮಟ್ಟ ಪರಿಶೀಲನೆ ನಡೆಸಬೇಕು, ಒಳಚರಂಡಿ ನೀರು ಕೆರೆಗೆ ಸೇರುವುದನ್ನು ತಡೆಯಬೇಕು ಹಾಗೂ ಪರಿಸರ ಸ್ನೇಹಿ ಪುನರುಜ್ಜೀವನ ಯೋಜನೆ ರೂಪಿಸಬೇಕು.
ನಗರದ ನಾಗರಿಕರು, ಯುವಕರು, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಸ್ಯಾಂಕಿ ಟ್ಯಾಂಕ್ ಉಳಿಸುವ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಲಾಗಿದೆ.

