ಈಗ ಹಿಂದಿ ಭಾಷಾ ಪರೀಕ್ಷಾ ಹೇರಿಕೆಗೆ ತಾತ್ಕಾಲಿಕ ತಡೆ ಬಿದ್ದಿರಬಹುದು. ಆದರೆ ದ್ವಿಭಾಷಾ ನೀತಿ ಅಧಿಕೃತವಾಗಿ ಜಾರಿಯಾಗುವವರೆಗೂ ಕನ್ನಡಿಗರು ಹೋರಾಟದಿಂದ ವಿಮುಖರಾಗಕೂಡದು. ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ಮುಂದುವರೆಯಬೇಕಿದೆ, ದ್ವಿಭಾಷಾ ಶಿಕ್ಷಣ ನೀತಿ ಜಾರಿಯಾಗಲೇ ಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ, ಹೇ ತ್ರಿಣೇತ್ರ
ಚೂರು ತಿಂಡಿಗೆ ಸಿಕ್ಕಿಸಿಹರೊ ಈ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣ ಶೂಲ.”
ಇದು ತ್ರಿಭಾಷಾ ಸೂತ್ರದ ಕುರಿತು ಕುವೆಂಪುರವರು ತಮ್ಮ ಕವಿತೆಯಲ್ಲಿ ತೋರಿದ ಆಕ್ರೋಶ.
ಕೊನೆಗೂ ಕರ್ನಾಟಕ ಸರಕಾರ ಹಿಂದಿ ಭಾಷಾ ಹೊರೆಯಿಂದ ಕನ್ನಡಿಗರ ಮಕ್ಕಳನ್ನು ಕಾಪಾಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಗೆ ಅಂಕ ನೀಡುವ ಪದ್ಧತಿಯನ್ನೇ ಕೈಬಿಡುವ ಐತಿಹಾಸಿಕ ನಿರ್ಧಾರವನ್ನು ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡಿದೆ. ಹಾಗಂತ ಹಿಂದಿ ಭಾಷೆ ಓದನ್ನೇನೂ ಕೈಬಿಟ್ಟಿಲ್ಲ. ಆ ಭಾಷೆಯನ್ನೂ ಕಲಿಯಬೇಕು, ಆ ಭಾಷೆಯ ಪರೀಕ್ಷೆಯನ್ನೂ ಬರೀಬೇಕು, ಆದರೆ ಹಿಂದಿಗೆ ಮಾರ್ಕ್ಸ್ ಬದಲಾಗಿ ಎಬಿಸಿಡಿ ಅಂತಾ ಗ್ರೇಡ್ ಕೊಡಲಾಗುವುದು. ಆರು ವಿಷಯಗಳ 625 ಅಂಕಗಳ ಬದಲಾಗಿ ಈಗ ಹಿಂದಿ ಹೊರತುಪಡಿಸಿ ಐದು ವಿಷಯಗಳ 525 ಅಂಕಗಳನ್ನು ಮಾತ್ರ ಪರಿಗಣಿಸಿ ಪಾಸ್ ಫೇಲ್ ಇಲ್ಲವೇ ಶೇಕಡಾವಾರು ಲೆಕ್ಕ ಹಾಕಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಘೋಷಿಸಿದ್ದಾರೆ.

ಶಿಕ್ಷಣ ಕ್ಷೇತ್ರದ ಪರೀಕ್ಷೆಯಲ್ಲಾದ ಈ ಬದಲಾವಣೆಯನ್ನು ಎಲ್ಲಾ ಕನ್ನಡಪರ ಸಂಘಟನೆಗಳು ಸ್ವಾಗತಿಸಿವೆ. ವಿದ್ಯಾರ್ಥಿಗಳಂತೂ ನಿರಾಳತೆಯ ನಿಟ್ಟುಸಿರು ಬಿಟ್ಟು ಸಂಭ್ರಮಿಸಿದ್ದಾರೆ. ಯಾಕೆಂದರೆ ಈ ಹಿಂದಿ ಭಾಷೆ ಎಂಬುದು ಮೊದಲಿನಿಂದಲೂ ಕನ್ನಡಿಗರ ಮೇಲೆ ಹೇರಿಕೆಯಾಗಿತ್ತು, ನುಂಗಲಾಗದ ತುತ್ತಾಗಿತ್ತು. ಕಡ್ಡಾಯವಾಗಿ ಕಲಿಯಲೇಬೇಕಾಗಿದ್ದರಿಂದ ಇದು ವಿದ್ಯಾರ್ಥಿಗಳ ಬೆನ್ನೇರಿದ ಭೂತವಾಗಿತ್ತು. 2023-24 ರಲ್ಲಿ 10 ನೇ ತರಗತಿಯಲ್ಲಿದ್ದ 90 ಸಾವಿರ ಮಕ್ಕಳು ಹಾಗೂ 2024-25 ರಲ್ಲಿ 1.48 ಲಕ್ಷ ವಿದ್ಯಾರ್ಥಿಗಳು ಈ ಹಿಂದಿ ಭಾಷಾ ಪರೀಕ್ಷೆಯಲ್ಲಿ ನಾಪಾಸಾಗಿ ನರಳಿದ್ದರು. ಅವರ ಒಂದು ವರ್ಷದ ಭವಿಷ್ಯಕ್ಕೆ ಹಿನ್ನಡೆಯಾಗಿತ್ತು. ಈಸಲದಿಂದ ಆ ಆಪತ್ತು ಇಲ್ಲವಾಗಿದೆ. ತೃತೀಯ ಭಾಷೆ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲವಾಗಿದೆ.
ಆದರೆ ರಾಜ್ಯ ಸರಕಾರದ ನಿರ್ಧಾರದಿಂದ ಕೆಲವು ಹಿಂದಿ ಭಾಷಾ ಪರವಾಗಿರುವ ರಾಷ್ಟ್ರೀಯವಾದಿಗಳು, ಸಂಘ ಪರಿವಾರಿಗಳು ಬೆಚ್ಚಿ ಬಿದ್ದಿದ್ದಾರೆ. ಎಲ್ಲಿ ದಕ್ಷಿಣ ಭಾರತದಲ್ಲಿ ಹಿಂದಿ ಪ್ರಾಬಲ್ಯ ದುರ್ಬಲವಾಗುತ್ತದೆಯೋ, ಎಲ್ಲಿ ಒಂದು ದೇಶ ಒಂದು ಭಾಷೆ ಎನ್ನುವ ಪರಿಕಲ್ಪನೆ ಕುಸಿದು ಬೀಳುತ್ತದೆಯೋ ಎನ್ನುವ ಒಳಬೇಗುದಿ ಸುಡತೊಡಗಿದೆ. ಹೀಗಾಗಿ ರಾಜ್ಯ ಸರಕಾರದ ನಿಲುವನ್ನು ವಿರೋಧಿಸುತ್ತಿವೆ. ಹಿಂದಿ ರಾಷ್ಟ್ರ ಭಾಷೆಯಾಗಿರುವುದರಿಂದ ಅದನ್ನು ಕಲಿಯುವುದು ಕಡ್ಡಾಯ ಎನ್ನುವ ಸಂಕಥನವನ್ನು ಪುಂಗುತ್ತಿವೆ.
ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರರವರು ‘ಹಿಂದಿಗೆ ಗ್ರೇಡಿಂಗ್ ನೀಡುವ ಹೇಳಿಕೆ ಆತ್ಮಘಾತುಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತಿದೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಈಗ ಇದೇ ಬಿಜೆಪಿ ಸರಕಾರ ಇರುವಾಗ ತ್ರಿಭಾಷಾ ನೀತಿಯನ್ನು ಬದಲಾಯಿಸಿ, ಹಿಂದಿ ಭಾಷೆಯನ್ನು ಹಿಂದಕ್ಕೆ ಸರಿಸಿ ಶಿಕ್ಷಣದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತಂದಾಗ ಈ ಕನ್ನಡ ದ್ರೋಹಿ ಸಂಘಿ ರಾಜಕಾರಣಿಗಳು ಯಾಕೆ ಮೌನವಾಗಿದ್ದರು?. ಈಗ ಕರ್ನಾಟಕದಲ್ಲಿ ತ್ರಿಭಾಷಾ ಕಲಿಕೆಗೆ ಯಾವುದೇ ಚ್ಯುತಿ ಬರದೇ ಕೇವಲ ಹಿಂದಿ ಭಾಷೆಗೆ ಗ್ರೇಡಿಂಗ್ ಕೊಡುವ ನಿರ್ಧಾರ ಕೇಳಿಯೇ ತಮ್ಮ ಬುಡಕ್ಕೆ ಬೆಂಕಿ ಬಿದ್ದವರಂತೆ ಒದ್ದಾಡುತ್ತಿದ್ದಾರೆ. ಇನ್ನು ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸಿ ಕೇವಲ ದ್ವಿಭಾಷಾ ನೀತಿ ಜಾರಿಗೆ ತಂದಿದ್ದರೆ ಬೀದಿಗಿಳಿದು ಬಾಯಿಬಡಿದುಕೊಳ್ಳುತ್ತಿದ್ದರು.
ಕನ್ನಡಿಗರ ಮತಗಳಿಂದಲೇ ಸಂಸದರಾಗಿ ಆಯ್ಕೆಯಾಗಿ ಈಗ ಸಚಿವೆ ಕೂಡಾ ಆಗಿರುವ ಶೋಭಾ ಕರಂದ್ಲಾಜೆಯವರು ಹಿಂದಿ ಗ್ರೇಡಿಂಗ್ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ಭಾಷೆ ಕಲಿಯುವುದು ಹೇರಿಕೆಯಲ್ಲ” ಎಂದಿದ್ದಾರೆ. ಹೌದು ಐಚ್ಛಿಕವಾಗಿ ಯಾವುದೇ ಭಾಷೆ ಕಲಿಯುವುದು ಹೇರಿಕೆಯಲ್ಲ, ಕಡ್ಡಾಯವಾಗಿ ಕಲಿಯಲೇಬೇಕೆಂದರೆ ಅದು ಹೇರಿಕೆ ಎಂದು ಈ ಸಚಿವೆಗೆ ಹೇಳಬೇಕಿದೆ. “ಮಕ್ಕಳು ಹಿಂದಿ ಬೇಡಾ ಅಂದಿದ್ರಾ” ಎಂದು ಪ್ರಶ್ನಿಸುವ ಶೋಭಕ್ಕನಿಗೆ “ಮಕ್ಕಳು ಹಿಂದಿ ಬೇಕು ಅಂತಾ ಕೇಳಿದ್ರಾ?” ಎಂದು ಕಿವಿಹಿಡಿದು ಕೇಳಬೇಕಿದೆ. ‘ಯಾರ ಮಾತು ಕೇಳಿ ಹಿಂದಿ ತೆಗೆದಿರಿ” ಎನ್ನುವ ಶೋಭಮ್ಮಾ ಯಾರನ್ನ ಕೇಳಬೇಕಿತ್ತು ಹೇಳಮ್ಮಾ. “ಶಿಕ್ಷಣ ಸಚಿವರಿಗೆ ಶಿಕ್ಷಣವೇ ಇಲ್ಲಾ” ಎಂದು ಆರೋಪಿಸುವ ಶೋಭಾ ಆಂಟಿ ಈ ಹಿಂದೆ ಕೇಂದ್ರ ಸರಕಾರದಲ್ಲಿ ಶಿಕ್ಷಣ ಸಚಿವೆಯಾಗಿದ್ದ ಸ್ಮೃತಿ ಇರಾನಿಯವರಿಗೆ ಯಾವ ಡಿಗ್ರಿ ಇತ್ತಮ್ಮಾ, ಹೋಗಲಿ ಅನಕ್ಷರ ಪ್ರಧಾನಿ ಎಂಬ ಆರೋಪ ಹೊತ್ತಿರುವ ಪ್ರಧಾನ ಮಂತ್ರಿಗಳಾದ ಮೋದಿಯವರ ಶೈಕ್ಷಣಿಕ ದಾಖಲೆಗಳಾದರೂ ಇದ್ದಾವೇನಮ್ಮಾ. ನಿಮ್ಮಲ್ಲೇ ಅನರ್ಹರಿರುವಾಗ ಬೇರೆಯವರ ಅರ್ಹತೆಯ ಬಗ್ಗೆ ಪ್ರಶ್ನಿಸುವ ಯೋಗ್ಯತೆ ನಿನಗಿದೆ ಏನಮ್ಮಾ. “ನಮ್ಮ ಮಕ್ಕಳು ಎಲ್ಲಾ ಭಾಷೆಗಳನ್ನೂ ಕಲಿಯಬೇಕು, ಹಿಂದಿ ಕಲಿತರೆ ನಷ್ಟವೇನು?” ಎಂದು ಕೇಳುವ ಕನ್ನಡ ದ್ರೋಹಿ ಶೋಭವ್ವಾ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಅಧಿಕೃತ ಭಾಷೆಗಳಿಗೂ ಸಮಾನವಾದ ಮಾನ್ಯತೆ ಇರುವಾಗ ಹಿಂದಿಯನ್ನೇ ಯಾಕೆ ಕಲಿಯಬೇಕು ಹೇಳವ್ವಾ. ಮೊದಲು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿ ಅದರ ಪರಿಣಾಮ ನೋಡಲು ನಿಮ್ಮ ಕೇಂದ್ರ ಸರಕಾರಕ್ಕೆ ಹೇಳವ್ವಾ.
ಇನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯನೆಂಬ ಅವಿವೇಕಿ “ಈ ಹಿಂದಿ ವಿರೋಧಿ ನಡೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಕರ” ಎಂದು ಹೇಳಿದ್ದು ಪ್ರಶ್ನಾರ್ಹವಾಗಿದೆ. ಹಿಂದಿ ಭಾಷೆಯನ್ನು ಅಂಕಗಳಿಂದ ಹೊರಗೆ ಇಟ್ಟಿದ್ದರಿಂದ ಪ್ರತಿ ವರ್ಷ ಆ ಭಾಷೆಯಲ್ಲಿ ಫೇಲಾಗಿ ತಮ್ಮ ಒಂದು ವರ್ಷದ ಕಲಿಕೆಯ ಭವಿಷ್ಯದಿಂದ ವಂಚಿತರಾಗುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವರದಾನವಾಗಿದೆ. “ರಾಷ್ಟ್ರೀಯ ಭಾಷೆಯನ್ನು ಕಲಿಯುವ ಅವಕಾಶವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳುತ್ತಾರೆ” ಎನ್ನುವ ಬಾಲಿಷ ಹೇಳಿಕೆ ನೀಡುವ ಅಮವಾಸ್ಯೆ ಸೂರ್ಯರೇ “ಮೊದಲನೆಯದಾಗಿ ಹಿಂದಿ ಅಧಿಕೃತವಾಗಿ ಹಿಂದಿ ಭಾಷೆಯಲ್ಲ. ಅದನ್ನು ಕಲಿಯಬಾರದು ಎಂದೇನೂ ನಿಷೇಧಿಸಿಲ್ಲ. ಅಂಕಗಳ ಬದಲಿಗೆ ಗ್ರೇಡಿಂಗ್ ಕೊಟ್ಟು ಹಿಂದಿ ಭಾಷೆಯಲ್ಲಿ ಫೇಲಾಗುವ ಲಕ್ಷಾಂತರ ವಿದ್ಯಾರ್ಥಿಗಳನ್ನು ಪಾರುಮಾಡಲಾಗಿದೆ. “ಹಿಂದಿ ಕಲಿತರೆ ದೇಶಾದ್ಯಂತ ಸಂವಹನ ಮಾಡಬಹುದು ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ” ಎನ್ನುವ ಸೂರ್ಯರೇ ಖಂಡಿತಾ ಹಾಗಾಗುವುದಿಲ್ಲ. ಯಾಕೆಂದರೆ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯಲು ಈಗಲೂ ಅಡ್ಡಿ ಏನಿಲ್ಲ. ನಿಮ್ಮ ಹಿಂದಿ ಭಾಷಾ ಪ್ರದೇಶಗಳಿಂದ ಕರ್ನಾಟಕಕ್ಕೆ ಉದ್ಯೋಗ ಹುಡುಕಿಕೊಂಡು ಬರುವವರೇ ಹೆಚ್ಚಿರುವಾಗ ಕನ್ನಡಿಗರು ಆ ಬಿಮಾರು (BIMARU) ಹಿಂದಿ ರಾಜ್ಯಗಳಿಂದ ನೌಕರಿ ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ. ಹೇಗೂ ಜಗತ್ತಿನಾದ್ಯಂತ ಸಂವಹನಕ್ಕೆ ಇಂಗ್ಲೀಷ್ ಭಾಷೆ ಇದೆಯಲ್ಲಾ. ಆದ್ದರಿಂದ ಕನ್ನಡಿಗರಿಗೆ ಹಿಂದಿ ಬೇಕಿಲ್ಲ. ” ಹಿಂದಿ ನಿರ್ಲಕ್ಷ್ಯ ವಿದ್ಯಾರ್ಥಿಗಳ ಹಿತಕ್ಕೆ ಮಾರಕ’ ಎನ್ನುವ ಸಂಸದ ಸೂರ್ಯಾ “ಖಂಡಿತವಾಗಿಯೂ ಮಾರಕ ಆದರೆ ವಿದ್ಯಾರ್ಥಿಗಳಿಗಲ್ಲಾ, ನಿಮ್ಮಂತಾ ರಾಷ್ಟ್ರೀಯವಾದಿಗಳಿಗೆ ಹಾಗೂ ಭಾಷಾ ಹೇರಿಕೆ ಮಾಡಿ ಹಿಂದಿಮಯ ದೇಶ ಸ್ಥಾಪಿಸುವ ಗುರಿ ಇರುವಂತವರಿಗೆ. “ಹಿಂದಿ ವಿರೋಧವು ಪ್ರಾದೇಶಿಕತೆಯನ್ನು ಪ್ರೋತ್ಸಾಹಿಸುತ್ತದೆ” ಎಂದಿರುವುದು ಮಾತ್ರ ಸತ್ಯವಾದ ಮಾತು. ಯಾಕೆಂದರೆ ನಮಗೆ ಪ್ರಾದೇಶಿಕತೆ ಮುಖ್ಯ, ನಮ್ಮ ಭಾಷೆ ಸಂಸ್ಕೃತಿ ನಮ್ಮ ಹೆಮ್ಮೆ. ಅನೇಕ ಪ್ರಾದೇಶಿಕತೆಗಳ ಒಕ್ಕೂಟವೇ ನಮ್ಮ ಭಾರತ. ಈಗಲೂ ಪ್ರಾದೇಶಿಕ ಪಕ್ಷಗಳ ಹಂಗಿನಲ್ಲಿಯೇ ನಿಮ್ಮ ಮೋದಿ ಸರಕಾರ ನಿಂತಿರೋದು. ಅವರು ಕೈಬಿಟ್ಟರೆ ನಿಮ್ಮ ಸರಕಾರವೇ ಪತನವಾಗುವುದು.

ಈ ರೀತಿಯಾಗಿ ಹಿಂದಿ ಭಾಷೆಯ ಪರವಾಗಿ ಸಮರ್ಥನೆ ಮಾಡಿಕೊಳ್ಳುವವರಿಗೆ ಕನ್ನಡಿಗರು ಖಡಕ್ಕಾಗಿ ಉತ್ತರಿಸಬೇಕಿದೆ. ಹಿಂದಿ ಭಾಷಾ ಹೇರಿಕೆಯಿಂದ ಕನ್ನಡದ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಿದೆ. ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುವ ರಾಷ್ಟ್ರೀಯ ಪಕ್ಷಗಳನ್ನು ಕನ್ನಡಿಗರು ತಿರಸ್ಕರಿಸಬೇಕಿದೆ.
ಈಗಲೂ ಅಂಕಗಳನ್ನು ಹೊರತು ಪಡಿಸಿ ಹಿಂದಿ ಭಾಷಾ ಕಲಿಕೆ ಕಡ್ಡಾಯವಾಗಿಯೇ ಮುಂದುವರೆದಿದೆ. ಹಿಂದಿ ಭಾಷಾ ಕಲಿಕೆ ವಿದ್ಯಾರ್ಥಿಗಳಿಗೆ ಬಲವಂತದ ಹೇರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಡ ಇಂಗ್ಲೀಷ್ ಭಾಷೆಯನ್ನೊಳಗೊಂಡ ದ್ವಿಭಾಷಾ ನೀತಿಯನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಬೇಕಿದೆ. ಹಿಂದಿ ಸೇರಿದಂತೆ ಕನ್ನಡೇತರವಾಗಿರುವ ಯಾವುದೇ ಭಾಷೆಯ ಕಲಿಕೆಯನ್ನು ಐಚ್ಚಿಕವಾಗಿಸಬೇಕಾಗಿದೆ. ಅಗತ್ಯವಿದ್ದವರು ಇಚ್ಛಿಸಿದ ಭಾಷೆ ಕಲಿಯಲಿ, ಅನಗತ್ಯವಾಗಿ ಎಲ್ಲರ ಮೇಲೂ ಭಾಷಾ ಹೇರಿಕೆಯನ್ನು ನಿಲ್ಲಿಸಲಿ. ಶಿಕ್ಷಣದಲ್ಲಿ ತ್ರಿಭಾಷಾ ಕಲಿಕೆ ನೀತಿಯನ್ನು ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್ತು, ಪ್ರಗತಿಪರರು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ತಮುಳುನಾಡಿನಲ್ಲಿ ಹಿಂದಿ ಭಾಷೆಯನ್ನು ದೂರವೇ ಇಡಲಾಗಿದೆ. ಆದರೆ ಕನ್ನಡಿಗರ ಔದಾರ್ಯದಿಂದಾಗಿ ಹಿಂದಿ ಬೆನ್ನಿಗೆ ಬಿದ್ದ ಬೇತಾಳದಂತಾಗಿದೆ. ಈಗ ಹಿಂದಿ ಭಾಷಾ ಪರೀಕ್ಷಾ ಹೇರಿಕೆಗೆ ತಾತ್ಕಾಲಿಕ ತಡೆ ಬಿದ್ದಿರಬಹುದು. ಆದರೆ ದ್ವಿಭಾಷಾ ನೀತಿ ಅಧಿಕೃತವಾಗಿ ಜಾರಿಯಾಗುವವರೆಗೂ ಕನ್ನಡಿಗರು ಹೋರಾಟದಿಂದ ವಿಮುಖರಾಗಕೂಡದು. ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ಮುಂದುವರೆಯಬೇಕಿದೆ, ದ್ವಿಭಾಷಾ ಶಿಕ್ಷಣ ನೀತಿ ಜಾರಿಯಾಗಲೇ ಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಕನ್ನಡವನ್ನು ಗೆಲ್ಲಿಸುವರೇ ದಾವಣಗೆರೆ, ಬಾಗಲಕೋಟೆಯ ಜನ?



