ಬೆಂಗಳೂರು : ವಿಧಾನಸಭೆಯಲ್ಲಿ ಸಿಲಿಂಡರ್ ಕೊರತೆ ಬಗ್ಗೆ ಚರ್ಚೆ ನಡೆದಿದೆ. ಸಿಲಿಂಡರ್ ಬೆಲೆ ಏರಿಕೆ ಮತ್ತು ಪೂರೈಕೆ ವ್ಯತ್ಯಯದ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದಿದೆ.
ಶೂನ್ಯವೇಳೆಯಲ್ಲಿ ಸಿಲಿಂಡರ್ ಕೊರತೆ ಬಗ್ಗೆ ಚರ್ಚೆಗೆ ಸ್ಪೀಕರ್ ಅವಕಾಶ ನೀಡಿದರು. ಸಿಲಿಂಡರ್ ಸಮಸ್ಯೆಗೆ ಪರಿಹಾರ ನೀಡುವ ಬದಲು ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ್ದೀರಾ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು. ಕುಣಿಗಲ್ ಶಾಸಕ ಡಾ.ರಂಗನಾಥ್ ಪ್ರಸ್ತಾಪ ಮಾಡಿದ್ದು, ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಆಹಾರ ಸಚಿವ ಆಹಾರ ಸಚಿವ ಮುನಿಯಪ್ಪ ಉತ್ತಿರಿಸಿ, ಇರಾನ್-ಇಸ್ರೇಲ್ ಯುದ್ಧದಿಂದ ಸಿಲಿಂಡರ್ ಪೂರೈಕೆ ಆಗ್ತಿಲ್ಲ. ಆದರೆ ಗೃಹ ಬಳಕೆಯ ಸಿಲಿಂಡರ್ಗಳಿಗೆ ಯಾವುದೇ ಸಮಸ್ಯೆ ಇಲ್ಲ. 25 ದಿನಕ್ಕೊಮ್ಮೆ ಗೃಹ ಬಳಕೆಯ ಸಿಲಿಂಡರ್ ಕೊಡುತ್ತೇವೆ. ಗ್ಯಾಸ್ ಸಿಲಿಂಡರ್ಗೆ ಹೆಚ್ಚು ಖರ್ಚು ಮಾಡಿ ಸ್ಟೋರೇಜ್ ಮಾಡುವುದು ಬೇಡ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಮುನಿಯಪ್ಪ ತೈಲ ಕಂಪನಿಯವರ ಜೊತೆ ಮಾತನಾಡಿದ್ದಾರೆ. ಗ್ಯಾಸ್ ಪೂರೈಕೆ ಮಾಡುವುದು ಕೇಂದ್ರ ಸರ್ಕಾರ ಅಲ್ಲವೇ? ಅವರು ಉತ್ತರ ಹೇಳೋಕೆ ಅವಕಾಶ ಕೊಡಿ. ಕೇಂದ್ರ ಸಚಿವರು ಹೇಳಿದ್ದನ್ನು ಅವರು ಪ್ರಸ್ತಾಪ ಮಾಡಿದರು. ನೀವು ಕೇಂದ್ರ ಸರ್ಕಾರ ಅಂದರೆ ಎದ್ದು ನಿಂತಿಕೊಳ್ಳುತ್ತೀರಾ ಎಂದು ಸಿಎಂ ಹೇಳಿದರು.
ಅಶೋಕ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಪ್ರತಿಭಟನೆ ಮಾಡಿ ಎಂದು ಪ್ರಚೋದನೆ ಮಾಡಿಲ್ಲ ಎಂದರೂ ಕೇಳದ ಅಶೋಕ್, ಚಳವಳಿ ಮಾಡಿ ಎಂದಿದ್ದೀರಿ ಅಂತಾ ಮಾಧ್ಯಮಗಳಲ್ಲಿ ಬಂದಿದೆ. ಸ್ಟ್ರೈಕ್ ಮಾಡೋಕೆ ಬೆಂಬಲ ಇದೆ ಎಂದಿದ್ದೀರಿ ಎಂದಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟಾದರು.
ಈ ವೇಳೆ ಮುನಿಯಪ್ಪ ಮಾತಿಗೆ ರಂಗನಾಥ್ ಮರು ಪ್ರಶ್ನೆ ಮಾಡಿ, , 2000 ರೂ. ಕೊಟ್ಟು ವಾಣಿಜ್ಯ ಸಿಲಿಂಡರ್ ಪಡೆಯುವುದು ಹೇಗೆ? ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಈ ವೇಳೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ತೆಗೆದಿದ್ದು, ಸುಖಾ ಸುಮ್ಮನೆ ಆರೋಪ ಮಾಡಬೇಡಿ ಎಂದಿದ್ದಾರೆ. ಇತ್ತ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕರಿಂದಲೂ ಆಕ್ರೋಶ ವ್ಯಕ್ತವಾಯಿತು.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಸರಿಪಡಿಸುವುದು ಯಾರು? ಬಿಜೆಪಿಯವರು ಯಾಕೆ ಮಾತನಾಡಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ. ಮೋದಿ ಅಂದರೆ ಇವರಿಗೆಷ್ಟು ಭಯ ಎಂದು ಗೋಪಾಲಕೃಷ್ಣ ಹೇಳಿದ್ದು ಮತ್ತಷ್ಟು ಮಾತಿನ ಚಕಮಕಿಗೆ ಕಾರಣವಾಗಿದೆ.

