ಅಭಿವೃದ್ಧಿಗೆ ವೇಗ ನೀಡುವ “ಕಾಯಕ ಗ್ರಾಮ” ಯೋಜನೆಗೆ ಚಾಲನೆ: ಪ್ರಿಯಾಂಕ್‌ ಖರ್ಗೆ

Most read

ಬೆಂಗಳೂರು: “ಕಾಯಕ” ಈ  ಜಗತ್ತಿಗೆ ಜಗಜ್ಯೋತಿ ಬಸವಣ್ಣ ನೀಡಿದ ಉದಾತ್ತವಾದ ತತ್ವ. ಕಾಯಕದಿಂದಲೇ ಸಕಲವನ್ನೂ ಸಾಧಿಸಬಹುದು, ಬದುಕಿನ ಸಾರ್ಥಕತೆ ಕಾಣಬಹುದು, ಈ ಮಹತ್ವದ ಕಾಯಕ ತತ್ವವನ್ನು ಅರ್ಥಪೂರ್ಣವಾಗಿಸಲು ನಮ್ಮ ಸರ್ಕಾರವು “ಕಾಯಕ ಗ್ರಾಮ”ಎಂಬ ಮಹತ್ವದ ಕಾರ್ಯಕ್ರಮ ರೂಪಿಸಿದೆ. ಈ ಕುರಿತು ಬಜೆಟ್ ನಲ್ಲಿ ಘೋಷಣೆಯನ್ನೂ ಸಹ ಮಾಡಲಾಗಿತ್ತು.

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಗ್ರಾಮಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು, ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮಾಡಲು, ಅಭಿವೃದ್ಧಿಗೆ ವೇಗ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ತಲಾ ಎರಡು ಗ್ರಾಮಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವುದು ಕಾಯಕ ಗ್ರಾಮದ ಆಶಯ.

ರಾಜ್ಯದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನೂ ಸುಧಾರಿಸುವುದಕ್ಕಾಗಿ ಸರ್ಕಾರದ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಕೊರತೆ ಇಲ್ಲ, ಕೊರತೆ ಇರುವುದು ಅನುಷ್ಠಾನ ಮಾಡುವ ವ್ಯವಸ್ಥೆಯಲ್ಲಿ , ಅನುಷ್ಠಾನ ಮಾಡುವ ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಮತ್ತು ಪ್ರಮಾಣಿಕ ಪ್ರಯತ್ನವಿದ್ದರೆ ಸರ್ಕಾರದ ಕಾರ್ಯಕ್ರಮಗಳು ಜನತೆಗೆ ಅಕ್ಷರಶಃ ತಲುಪಿದ್ದೇ ಆದಲ್ಲಿ ಸಮೃದ್ಧ ಗ್ರಾಮಗಳನ್ನು ಕಾಣಬಹುದು.

ಅನುಷ್ಠಾನದಲ್ಲಿ ಆರೋಗ್ಯಯುತ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಅಧಿಕಾರಿಗಳಿಗೆ ಕಾರ್ಯಕ್ಷಮತೆಯನ್ನು ನಿರೂಪಿಸುವ ಹೊಣೆಗಾರಿಕೆಯನ್ನು ವಹಿಸಿದಾಗ ಅಭಿವೃದ್ಧಿಯಲ್ಲಿ ಗಾಂಭೀರ್ಯತೆ ಮತ್ತು ವೇಗ ಕಾಣಬಹುದು ಎಂಬ ವಿಶ್ವಾಸದೊಂದಿಗೆ ಕಾಯಕ ಗ್ರಾಮ ಕಾರ್ಯಕ್ರಮವನ್ನು ರೂಪಿಸಲಾಗಿದೆ.

– ತಮ್ಮ ಜಿಲ್ಲೆಯಲ್ಲಿನ ಅತ್ಯಂತ ಹಿಂದುಳಿದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಆ ಗ್ರಾಮ ಪಂಚಾಯಿತಿಗಳ ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿಸಲು ಕ್ರಮವಹಿಸುವುದು.

– ಆಯ್ಕೆ ಮಾಡಿಕೊಂಡ ಗ್ರಾಮಗಳ ಪ್ರಸ್ತುತ ವಾಸ್ತವ ಸ್ಥಿತಿಗಳನ್ನು ದಾಖಲಿಸಿ ಪಂಚತಂತ್ರ ತಂತ್ರಾಂಶದಲ್ಲಿ ಮಾಡ್ಯೂಲ್ ಸಿದ್ದಪಡಿಸಬೇಕು.

– ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ದಪಡಿಸಿ, ಅನುಷ್ಠಾನ ಮಾಡಬೇಕು. ಗ್ರಾಮ ಸಭೆಗಳನ್ನು ಆಯೋಜಿಸಬೇಕು, ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಕ್ರಮ ವಹಿಸಬೇಕು.

– ಸರ್ಕಾರದ ಯೋಜನೆಗಳನ್ನು ಸಮರ್ಥ ಅನುಷ್ಠಾನ ಮತ್ತು ನಿರಂತರ ಪ್ರಗತಿ ಪರಿಶೀಲನೆ ನಡೆಸಿ ಪ್ರಗತಿಯನ್ನು ಖಾತರಿಪಡಿಸಿಕೊಳ್ಳುವುದು.

ಒಬ್ಬ ಅಧಿಕಾರಿ ಹಿಂದುಳಿದ ಗ್ರಾಮ ಪಂಚಾಯಿತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಆದ್ಯತೆಯನ್ನು ನೀಡಿದಾಗ ಆ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ವೇಗ ದೊರಯಲಿದೆ ಮತ್ತು ಪಂಚಾಯಿತಿ ಮಟ್ಟದ ಆಡಳಿತದಲ್ಲಿ ಸುಧಾರಣೆ ಕಾಣಲಿದೆ.

ಗ್ರಾಮೀಣಾಭಿವೃದ್ಧಿಯಲ್ಲಿ ಇದೊಂದು ಮೈಲಿಗಲ್ಲಿನಂತಹ ಕಾರ್ಯಕ್ರಮವಾಗಲಿದೆ ಎಂದು ನಂಬಿದ್ದೇನೆ. ಕಾಯಕ ಗ್ರಾಮಗಳನ್ನು ದತ್ತು ಪಡೆದ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ತಮ್ಮ “ಕಾಯಕ”ವನ್ನು ನಿರ್ವಹಿಸಿ, ಹಿಂದುಳಿದ ಗ್ರಾಮ ಪಂಚಾಯಿತಿಗಳ ಸೂಚ್ಯಾಂಕಗಳಲ್ಲಿ ಸುಧಾರಣೆ ತಂದಾಗ ಅಭಿವೃದ್ಧಿಯ ಹಾದಿಯಲ್ಲಿ ವೇಗ ಸಾಧಿಸಲು ಸಾಧ್ಯವಾಗುತ್ತದೆ.

More articles

Latest article