ನವದೆಹಲಿ: ನವಂಬರ್ ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಯಲ್ಲಿ ಮತದಾರರನ್ನು ಸಾಮೂಹಿಕವಾಗಿ ಹೊರಗಿಡುವ ಪ್ರಯತ್ನ ನಡೆದರೆ, ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.. ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 12 ಹಾಗೂ 13ರಂದು ನಡೆಸುವುದಾಗಿಯೂ ಹೇಳಿದೆ.
ಎಸ್ ಆರ್ ಐ ನಡೆಸುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿರುವ ಅರ್ಜಿದಾರರು ಆಗಸ್ಟ್ 8ರ ಒಳಗಾಗಿ ಲಿಖಿತ ಅಭಿಪ್ರಾಯ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯಮಾಲ್ಯಾ ಬಾಗ್ಚಿ ಅವರ ಪೀಠವು ತಿಳಿಸಿದೆ.
ಆಗಸ್ಟ್ 1ರಂದು ಪ್ರಕಟಿಸಲಿರುವ ಮತದಾರರ ಪಟ್ಟಿಯಲ್ಲಿ ಮತದಾರರು ಹೊರಗುಳಿಯುವ ಸಾಧ್ಯತೆಯಿದ್ದು, ಅವರು ಮತದಾನ ಮಾಡಲು ಅಮೂಲ್ಯ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ ಎಂದು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ಪ್ರಶಾಂತ್ ಭೂಷಣ್ ಆತಂಕ ವ್ಯಕ್ತಪಡಿಸಿದರು.
ಎಸ್ ಐ ಆರ್ ಪ್ರಕ್ರಿಯೆ ನಡೆಯುವಾಗ ದಾಖಲೆಗಳನ್ನು ಸಲ್ಲಿಸದ 65 ಲಕ್ಷ ಮತದಾರರನ್ನು ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇದರಲ್ಲಿ ಕೆಲವರು ಶಾಶ್ವತವಾಗಿ ವಲಸೆ ಹೋಗಿರುತ್ತಾರೆ ಅಥವಾ ಅಸು ನೀಗಿರುತ್ತಾರೆ. ಪಟ್ಟಿಯಿಂದ ಹೊರಗುಳಿದವರು ಹೊಸತಾಗಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಯೋಗವು ತಿಳಿಸಿದೆ ಎಂದು ಪ್ರಶಾಂತ್ ಭೂಷಣ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಸೂರ್ಯಕಾಂತ್, ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಕಾನೂನನ್ನು ಪಾಲಿಸಲಿದೆ. ಒಂದು ವೇಳೆ ತಪ್ಪು ಮಾಡಿದರೆ, ಅರ್ಜಿದಾರರು ನ್ಯಾಯಾಲಯ ಗಮನಕ್ಕೆ ತರಬಹುದು ಎಂದು ತಿಳಿಸಿದರು.
ಕರಡು ಪಟ್ಟಿಯಲ್ಲಿ 65 ಲಕ್ಷ ಮತದಾರರನ್ನು ಹೊರಗಿಟ್ಟಿರುವ ನಿಮ್ಮ ಆತಂಕವನ್ನು ಅರ್ಥಮಾಡಿಕೊಳ್ಳುತ್ತೇವೆ. ಆಯೋಗವು ಪಟ್ಟಿಯ ತಿದ್ದುಪಡಿ ಮಾಡುತ್ತಿದ್ದು, ನಾವು ಅವಲೋಕಿಸಲಿದ್ದೇವೆ. ನೀವು ಬದುಕಿರುವ 15 ಜನರನ್ನು ಕರೆತನ್ನಿ, ಮುಂದಿನ ವಿಚಾರ ಪರಿಗಣಿಸಲಿದ್ದೇವೆ. ಒಂದೊಮ್ಮೆ ಸಾಮೂಹಿಕವಾಗಿ ಹೊರಗಿಟ್ಟರೆ ನಾವು ಕೂಡಲೇ ಮಧ್ಯಪ್ರವೇಶಿಸಲಿದ್ದೇವೆ ಎಂದು ನ್ಯಾಯಮೂರ್ತಿ ಜಾಯಮಾಲ್ಯಾ ಬಾಗ್ಚಿ ತಿಳಿಸಿದರು.