ತ್ರಿಭಾಷಾ ಸೂತ್ರ ಆದೇಶ ಹಿಂಪಡೆದ ಮಹಾರಾಷ್ಟ್ರ ಸರ್ಕಾರ; ಹಿಂದಿ ಕಲಿಕೆಗೆ ಬ್ರೇಕ್‌

Most read

ಮುಂಬೈ: ಮಹಾರಾಷ್ಟ್ರದ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಯ ಭಾಗವಾಗಿ 1ರಿಂದ 5ನೇ ತರಗತಿವರೆಗೆ ಹಿಂದಿಯನ್ನು ಭಾಷೆಯಾಗಿ ಪರಿಚಯಿಸಿದ್ದ ಪರಿಷ್ಕೃತ ಆದೇಶವನ್ನು ಹಿಂಪಡೆದಿರುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.  ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು, ಸದನದಲ್ಲಿ ಕೋಲಾಹಲ ಏರ್ಪಡುವ ಮುನ್ನವೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. 

ಸಭೆಯ ನಂತರ ಮಾತನಾಡಿದ ಫಡಣವೀಸ್‌, ರಾಜ್ಯದಲ್ಲಿ 1ನೇ ತರಗತಿಯಿಂದ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಸರ್ಕಾರ ಈ ವರ್ಷದ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಹೊರಡಿಸಿದ್ದ ಆದೇಶಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ. ಅಲ್ಲದೆ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಯಾವ ತರಗತಿಯಿಂದ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಬಹುದು ಎಂಬುದನ್ನು ಕುರಿತು ಈ ಸಮಿತಿ ಮೂರು ತಿಂಗಳಲ್ಲಿ ಶಿಫಾರಸು ಮಾಡಲಿದೆ ಎಂದು ಅವರು ತಿಳಿಸಿದರು.

ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಆಗಿದ್ದಾಗ ನೇಮಿಸಲಾಗಿದ್ದ ಡಾ. ರಘುನಾಥ್‌ ಮಶೇಲ್ಕರ್‌ ಸಮಿತಿಯು ತ್ರಿಭಾಷಾ ನೀತಿಯ ಭಾಗವಾಗಿ ಮರಾಠಿ, ಇಂಗ್ಲಿಷ್‌ ಮತ್ತು ಹಿಂದಿಯನ್ನು 1ರಿಂದ 12ನೇ ತರಗತಿವರೆಗೆ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಅದನ್ನು ಠಾಕ್ರೆ ಸ್ವೀಕರಿಸಿದ್ದರು. ಸಂಪುಟದ ಮುಂದೆಯೂ ಇಟ್ಟಿದ್ದರು. ಆಗ ಅವರು ಆ ವರದಿಯನ್ನು ತಿರಸ್ಕರಿಸಿರಲಿಲ್ಲ. ಬದಲಾಗಿ ಈ ನೀತಿಯನ್ನು ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸಿದ್ದರು ಎಂದು ಫಡಣವೀಸ್‌ ಆಪಾದಿಸಿದರು.

ಈಗ ಉದ್ಧವ್‌ ಠಾಕ್ರೆ ಅವರು ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತಿದ್ದಾರೆ. ಭಾಷೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಫಡನವೀಸ್‌ ಕಿಡಿ ಕಾರಿದರು.

More articles

Latest article