ಬೆಂಗಳೂರು: ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಡುಗೋಡಿ ಸಮೀಪದ ದಿಣ್ಣೂರು ಎಂಬ ಊರಿನಲ್ಲಿ ಇಡೀ ಗ್ರಾಮಸ್ಥರನ್ನೇ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಅರಣ್ಯ ಇಲಾಖೆಗೆ ಸೇರಿದ ಭೂಮಿ ಎಂದು ಏಕಾಏಕಿ ಆಗಮಿಸಿದ ಅಧಿಕಾರಿಗಳು ಊರನ್ನು ಖಾಲಿ ಮಾಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
1950 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲಿಂಗಯ್ಯ ಅವರು ದಿಣ್ಣೂರಿನಲ್ಲಿ ದಲಿತರಿಗೆ ಭೂಮಿ ಹಂಚಿಕೆ ಮಾಡಿರುತ್ತಾರೆ. ಈ ಊರಿನಲ್ಲಿ ಇದೀಗ ಮೂರನೇ ತಲೆ ಮಾರು ವಾಸಿಸುತ್ತಿದೆ. ಈ ಊರಿಗೆ ರಸ್ತೆ, ವಿದ್ಯುತ್, ಸ್ಮಶಾಣ, ಕುಡಿಯುವ ನೀರು ಸೇರಿದಂತೆ ಸಕಲ ಸೌಲಭ್ಯಗಳನ್ನೂ ಒದಗಿಸಲಾಗಿದೆ.
ಗ್ರಾಮಸ್ಥರು ಜಮೀನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಐವತ್ತರ ದಶಕದಲ್ಲಿ 50-60 ರಷ್ಟಿದ್ದ ಜನಸಂಖ್ಯೆ ಇಂದು 5000 ದಾಟಿದೆ ಮತ್ತು 1200 ಮನೆಗಳಿವೆ. ಈ ಎಲ್ಲ ಕುಟುಂಬಗಳು ಸುಮಾರು 150-200 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಊರಿಗೆ ಹೊಂದಿಕೊಂಡಿರುವ ಸುಮಾರು 430 ಎಕರೆ ಭೂಮಿಯನ್ನು ಸರ್ಕಾರ ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಹಂಚಿಕೆ ಮಾಡಿದೆ.
ಅರಣ್ಯ ಭೂಮಿ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ಇದೇ ಭೂಮಿಯಲ್ಲಿ ಕಾಡುಗೋಡಿ ಮೆಟ್ರೋ ನಿಲ್ದಾಣ, ಕಾಡುಗೋಡಿ ಪೊಲೀಸ್ ಠಾಣೆ ನಿರ್ಮಾಣ ಮಾಡಲಾಗಿದೆ. ಅವುಗಳನ್ನೂ ತೆರವುಗೊಳಿಸಲಾಗುತ್ತದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ಹಿಂದೆ ಕೆಐಎಡಿಬಿ ಜಮೀನನ್ನು ವಶಪಡಿಸಿಕೊಂಡಾಗ ಪರಿಹಾರ ನೀಡಿದೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದ್ದರೆ ಪರಿಹಾರ ನೀಡಿದ್ದು ಏಕೆ ಎಂದು ಕೇಳುತ್ತಿದ್ದಾರೆ.
ಇದೀಗ ಏಕಾಏಕಿ ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ. ಎಲ್ಲರೂ ಊರನ್ನೇ ಖಾಲಿ ಮಾಡಬೇಕು ಎಂದು ಬೆದರಿಕೆ ಒಡ್ಡಲಾಗುತಿದೆ ಎಂದು ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಆಪಾದಿಸುತ್ತಾರೆ. ಮೂರನೇ ತಲೆಮಾರು ಈ ಊರಿನಲ್ಲಿ ವಾಸಿಸುತ್ತಿದೆ. ಈ ಊರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಏಕಾಏಕಿ ಊರನ್ನು ಖಾಲಿ ಮಾಡಬೇಕು ಎಂದರೆ ಹೇಗೆ ಎಂದು ಪ್ರಶ್ನಿಸುತ್ತಾರೆ.
ಜಮೀನು ನಮ್ಮದು ಎನ್ನುವುದಕ್ಕೆ, ಸರಕಾರ ಸೌಲಭ್ಯಗಳನ್ನು ನೀಡಿರುವುದಕ್ಕೆ , ಜಮೀನು ಹಂಚಿಕೆ ಮಾಡಿರುವುದಕ್ಕೆ ದಾಖಲೆಗಳಿವೆ. ಆದರೆ ಪೊಲೀಸರನ್ನು ಮುಂದೆ ಬಿಟ್ಟು ನಮ್ಮನ್ನು ಬೆದರಿಸಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. ಈ ಊರಿನಲ್ಲಿ ವಾಸಿಸುತ್ತಿರುವ ಎಲ್ಲರೂ ದಲಿತ ವರ್ಗಕ್ಕೆ ಸೇರಿದವರೇ ಆಗಿದ್ದಾರೆ. ದಲಿತರ ಪರ ಎಂದು ಹೇಳಿಕೊಳ್ಳುವ ಸರ್ಕಾರ ಇದೀಗ ದಲಿತರ ಮೇಲೆ ದೌರ್ಜನ್ಯ ನಡಸುತ್ತಿದೆ ಎಂದು ಮತ್ತೊಬ್ಬ ನಿವಾಸಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮಂಜುಳಾ ಅರವಿಂದ ಲಿಂಬಾವಳಿ ಸ್ಥಳೀಯ ಬಿಜೆಪಿ ಶಾಸಕಿ. ಆದರೆ ಅವರು ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಕಷ್ಟ, ಗೋಳು ವಿಚಾರಿಸಿಲ್ಲ. ನಮ್ಮ ರಕ್ಷಣೆಗೆ ಬಂದಿಲ್ಲ. ವೋಟು ಕೇಳಲು ಮಾತ್ರ ಬರುತ್ತಾರೆ ಎಂದೂ ದಿಣ್ಣೂರು ಗ್ರಾಮಸ್ಥರು ಕಿಡಿ ಕಾರುತ್ತಾರೆ. ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ದಲಿತರನ್ನು ಒಕ್ಕಲೆಬ್ಬಿಸಿ ಈ ಭೂಮಿಯನ್ನು ಕೈಗಾರಿಕೆಗಳಿಗೆ ಮಾರಾಟ ಮಾಡುವ ಸಂಚು ನಡೆದಿದೆ ಎಂದೂ ದಿಣ್ಣೂರು ಗ್ರಾಮಸ್ಥರು ಆಪಾದಿಸುತ್ತಾರೆ.