ನವದೆಹಲಿ: 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಏಕೆ ಘೋಷಣೆ ಮಾಡಬೇಕಾಯಿತು ಎನ್ನುವುದಕ್ಕೆ ಕಾಂಗ್ರೆಸ್ ಸಮಜಾಯಿಷಿ ನೀಡಿದೆ. ಫ್ಯಾಸಿಸ್ಟ್ ಗುಂಪುಗಳು ಎಲ್ಲ ಮಿತಿಗಳನ್ನು ಮೀರಿದ್ದರಿಂದ ಪ್ರಜಾಪ್ರಭುತ್ವವನ್ನು ಉಳಿಸಲು ಅಂದಿನ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾಯಿತು ಎಂದು ಉಲ್ಲೇಖ ಇರುವ ಶ್ವೇತಪತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದನ್ನು ಸಮರ್ಥಿಸಿಕೊಂಡು 1975ರ ಜುಲೈ 21 ರಂದು ಸಂಸತ್ತಿನಲ್ಲಿ ಮಂಡಿಸಲಾದ ಶ್ವೇತಪತ್ರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ ಮೂಲಕ ಬಿಡುಗಡೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮಂಡಿಸಲಾದ ಕೆಲವೇ ಕೆಲವು ಶ್ವೇತಪತ್ರಗಳಲ್ಲಿ ಇದೂ ಒಂದಾಗಿದೆ. 1975ರ ಜುಲೈ 21ರಂದು ಮಂಡಿಸಿದ್ದು ಇಲ್ಲಿದೆ. ಇದು ಐತಿಹಾಸಿಕ ಆಸಕ್ತಿ ಹೊಂದಿದೆ ಎಂದು ರಮೇಶ್ ಹೇಳಿದ್ದಾರೆ.
ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ತುರ್ತು ಪರಿಸ್ಥಿತಿ ಹಾಗೂ ಇತರ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಭಾರತೀಯ ಸಮಾಜದ ವಿವಿಧ ಸ್ತರಗಳ ಜನರು ಸ್ವಾಗತಿಸಿದ್ದಾರೆ ಎನ್ನುವ ಉಲ್ಲೇಖವೂ ಶ್ವೇತಪತ್ರದಲ್ಲಿ ಇದೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಮತ್ತೆ ಹಳಿ ಮೇಲೆ ತರುವುದು ಮತ್ತು ಕೆಲವು ಸಂಘಟಿತ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳಿಂದಾಗಿ ದೇಶವು ವರ್ಷಗಳಿಂದ ಅಭಿವೃದ್ಧಿಪಡಿಸಿದ ಪ್ರಾತಿನಿಧಿಕ ಸಂಸ್ಥೆಗಳ ಅಂತ್ಯಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸವಾಗಿತ್ತು. ಫ್ಯಾಸಿಸ್ಟ್ ಒಲವು ಹೊಂದಿರುವ ಕೆಲವು ರಾಜಕೀಯ ಪಕ್ಷಗಳು ನಿರಾಶೆಗೊಂಡ ರಾಜಕಾರಣಿಗಳ ಗುಂಪಿನೊಂದಿಗೆ ಸೇರಿಕೊಂಡು ದೇಶದ ಆತ್ಮ ವಿಶ್ವಾಸವನ್ನು ನಾಶಮಾಡಲು ಮತ್ತು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳ ಅಡಿಪಾಯವನ್ನೇ ಪ್ರಶ್ನಿಸಲು ಪ್ರಯತ್ನಿಸಿದವು. ಅವರು ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾತ್ಮಕ ಆಂದೋಲನಗಳನ್ನು ಪ್ರಾರಂಭಿಸಲು, ದೇಶದ ಆರ್ಥಿಕ ಜೀವನವನ್ನು ದುರ್ಬಲಗೊಳಿಸಲು, ರಾಷ್ಟ್ರದ ಗಮನವನ್ನು ಅದರ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಗಳಿಂದ ಬೇರೆಡೆಗೆ ತಿರುಗಿಸಲು ಮತ್ತು ಜನರಿಂದ ಚುನಾಯಿತ ಪ್ರತಿನಿಧಿಗಳನ್ನು ಉರುಳಿಸಲು ಅರಾಜಕತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ಪ್ರಚಾರ ಮಾಡಿದರು ಎಂದು ಶ್ವೇತ ಪತ್ರದಲ್ಲಿ ವಿವರಿಸಲಾಗಿದೆ.