ಬೆಂಗಳೂರು: ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲು ತಮಗೆ ಅನುಮತಿಯನ್ನು ಏಕೆ ನಿರಾಕರಿಸಲಾಯಿತು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಅಮೆರಿಕದ ಬಾಸ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ಎರಡು ತಂತ್ರಜ್ಞಾನ ಶೃಂಗಸಭೆಯಲ್ಲಿ ನಾನು ಕರ್ನಾಟಕ ಸರ್ಕಾರ ಮತ್ತು ಇಲಾಖೆಯ ಸಚಿವರ ಮಟ್ಟದ ಪ್ರತಿನಿಧಿಯಾಗಿ ಭಾಗಿಯಾಗಬೇಕಿತ್ತು. ವಿದೇಶಾಂಗ ಸಚಿವಾಲಯವು (ಎಂಇಎ) ಯಾವುದೇ ಸ್ಪಷ್ಟ ಕಾರಣ ನೀಡದೆ ಅನುಮತಿ ನಿರಾಕರಿಸಿದ್ದರಿಂದ ಅಂತಹ ಅವಕಾಶ ತಪ್ಪಿಹೋಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮಾತ್ರವಲ್ಲದೆ ಇಡೀ ಆಗ್ನೇಯ ಏಷ್ಯಾಕ್ಕೇ ಮೊದಲ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ, ನವೋದ್ಯಮಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಅಮೆರಿಕದಲ್ಲಿ ನಡೆದ ಆ ಎರಡು ತಂತ್ರಜ್ಞಾನ ಶೃಂಗಸಭೆಗಳಲ್ಲಿ ಭಾಗಿಯಾಗಿ ರಾಜ್ಯಕ್ಕೆ ಬಂಡವಾಳ ಆಕರ್ಷಣೆ, ಸಹಯೋಗ ಕುರಿತ ಸಾಧ್ಯತೆಗಳ ಪರಿಶೀಲನೆ ನಡೆಸುವುದು ಈ ಪ್ರವಾಸದ ಗುರಿಯಾಗಿತ್ತು. ಅನುಮತಿ ನಿರಾಕರಿಸಿದ್ದರಿಂದ ಶೃಂಗಸಭೆಯಲ್ಲಿ ರಾಜ್ಯದ ಸಚಿವರ ಮಟ್ಟದ ಪ್ರಾತಿನಿಧ್ಯ ಇಲ್ಲದೇ ಹೋಯಿತು. ಪರಿಣಾಮವಾಗಿ ಬಂಡವಾಳ ಆಕರ್ಷಣೆ ಮತ್ತು ಸಹಯೋಗದ ಹಲವು ಸಾಧ್ಯತೆಗಳು ರಾಜ್ಯದ ಕೈತಪ್ಪಿವೆ. ರಾಜ್ಯಕ್ಕೆ ನಷ್ಟವೂ ಆದಂತಾಗಿದೆ ಎಂದು ವಿವರಿಸಿದ್ದಾರೆ.
ನನಗೆ ಅನುಮತಿ ಏಕೆ ನಿರಾಕರಿಸಲಾಯಿತು ಎಂದು ಇದುವರೆಗೆ ಯಾವುದೇ ಕಾರಣ ನೀಡಿಲ್ಲ. ಈ ರೀತಿ ಆಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂದೆ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು, ಯೋಜನೆ ರೂಪಿಸಲು ಕಷ್ಟವಾಗುತ್ತದೆ. ಅಧಿಕೃತ ಪ್ರವಾಸಕ್ಕೆ ಸಂಬಂಧಿಸಿದ ಈ ಪ್ರಕ್ರಿಯೆಯಲ್ಲೇ ಹೀಗಾಗಿರುವುದು ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವ ಕಾರಣಕ್ಕೆ ಅನುಮತಿ ನಿರಾಕರಿಸಲಾಯಿತು ಎಂಬುದರ ಬಗ್ಗೆ ವಿದೇಶಾಂಗ ಸಚಿವಾಲಯವು ವಿವರಣೆ ನೀಡುತ್ತದೆ ಎಂದು ನಿರೀಕ್ಷಿಸುತ್ತೇನೆ ಎಂದಿದ್ದಾರೆ.
ಅಮೆರಿಕಕ್ಕೆ ನಿಯೋಗ ಹೋಗುವುದಾಗಿ ಮೇ 15ರಂದು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿತ್ತು. ಯಾವುದೇ ಕಾರಣ ಕೊಡದೆ ಜೂನ್ 4ಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು ಎಂದು ಪ್ರಿಯಾಂಕ್ ಖರ್ಗೆತಿಳಿಸಿದ್ದರು.
ಜೂನ್ 6ರಂದು ನನ್ನ ಹೆಸರು ತೆಗೆದು ನಿಯೋಗದಲ್ಲಿದ್ದ ಅಧಿಕಾರಿಗಳು ಮತ್ತು ಶರತ್ ಬಚ್ಚೇಗೌಡ ಅವರಿಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ, ನನಗೆ ಮಾತ್ರ ಅನುಮತಿ ನಿರಾಕರಿಸಲಾಗಿದೆ ಎಂದು ಹೇಳಿದ್ದರು.
ಮೋದಿಯವರು ಕೇವಲ ಕನಸು ಕಾಣುತ್ತಾರೆ. ಅದನ್ನು ನನಸು ಮಾಡುತ್ತಿರುವವರು ನಾವು. ನಮ್ಮ ವಿದೇಶಾಂಗ ನೀತಿಯನ್ನು ಅಮೆರಿಕಕ್ಕೆ ಅಡ ಇಟ್ಟಿದ್ದಾರೆ. ಈಗ ನಮ್ಮ ಬಂಡವಾಳ ನೀತಿಯನ್ನೂ ಅಡ ಇಟ್ಟಿದ್ದಾರೆ. ಪ್ರಿಯಾಂಕ್ ಅಂದರೆ ಅವರಿಗೆ ನೋವು. ಪ್ರಿಯಾಂಕ್ ಖರ್ಗೆ ಅಂದರೆ ಇನ್ನೂ ನೋವು ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರದ ಪ್ರತಿಯೊಂದು ನಡೆಯನ್ನೂ ಪ್ರಶ್ನೆ ಮಾಡುತ್ತಿರುವುದಕ್ಕೆ ನನ್ನನ್ನು ಗುರಿ ಮಾಡುತ್ತಿರಬಹುದು. ಫ್ರಾನ್ಸ್ ನ ಪ್ಯಾರಿಸ್ನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿದ್ದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಂದರ್ಭದಲ್ಲಿ ಒಂದೆರಡು ರಫೇಲ್ ಬಿದ್ದಿವೆಯಂತೆ. ಫ್ರಾನ್ಸ್ಗೆ ಹೋಗಿದ್ದಾಗ ಆ ಮಾಹಿತಿ ಸಿಕ್ಕಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ರಫೇಲ್ ಯುದ್ಧ ವಿಮಾನದ ಸಾಮರ್ಥ್ಯ ಕುರಿತು ನಾವು ಪ್ರಶ್ನೆ ಮಾಡಿಲ್ಲ. ಅದರ ವೆಚ್ಚದ ಬಗ್ಗೆ ಪ್ರಶ್ನೆ ಮಾಡಿದ್ದೇವೆ. ಪೇಪರ್ ಬೋಟ್ ಮಾಡುವ ಕಂಪನಿಗೆ ರಫೇಲ್ ತಯಾರಿಕೆಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ಕೇಳುವುದು ತಪ್ಪೇ’ ಎಂದೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರು