ಬೆಂಗಳೂರು: ಪವರ್ ಟಿವಿ ಕನ್ನಡ ಚಾನೆಲ್ ಉದ್ಯೋಗಿಯೊಬ್ಬರು ಲಿಫ್ಟ್ ಅವಘಡದಲ್ಲಿ ಮೃತಪಟ್ಟಿರುವ ಧಾರುಣ ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಉದ್ಯೋಗಿ ಹಾಸನ ಮೂಲದ ವಿಕ್ಕಿ ಎಂದು ತಿಳಿದು ಬಂದಿದೆ. ಇವರು ಪವರ್ ಟಿವಿಯಲ್ಲಿ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಗುರುವಾರ ಎಂದಿನಂತೆ ವಿಕ್ಕಿ ಮೊದಲನೇ ಪಾಳಿಗೆ 7 ಗಂಟೆಗೆ ಕಚೇರಿಗೆ ಆಗಮಿಸಿದ್ದಾರೆ. ಮೂರನೇ ಮಹಡಿಗೆ ಹೋಗಲು ಲಿಫ್ಟ್ ಪ್ರವೇಶಿಸಿದ್ದಾರೆ. ಆದರೆ ಲಿಫ್ಟ್ ಕೈಕೊಟ್ಟಿದೆ. ಇವರ ಜತೆ ಇದ್ದ ಇನ್ನೂ ಇಬ್ಬರು ಉದ್ಯೋಗಿಗಳು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಸಮೀಪದ ಮಹಡಿಗೆ ಜಂಪ್ ಮಾಡಿ ಜೀವ ಉಳಿಸಿಕೊಂಡಿದ್ದಾರೆ. ಇವರಂತೆ ವಿಕ್ಕಿಯೂ ಲಿಫ್ಟ್ ನಿಂದ ಹೊರಬರಲು ನೆಗೆದಿದ್ದಾರೆ. ಆದರೆ ಎಡವಿದ ಕಾರಣಕ್ಕೆ ನೆಲಮಹಡಿಗೆ ಬಿದ್ದಿದ್ದಾರೆ. ಇವರ ಬೆನ್ನು ಮುಳೆಗೆ ಬಲವಾದ ಪೆಟ್ಟು ಬಿದ್ದಿದೆ. ಎಂದು ತಿಳಿದು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ವಿಕ್ಕಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕಂಚನಹಳ್ಳಿ ಇವರ ಸ್ವಂತ ಊರು. ತಂದೆ ನಟರಾಜ್ ತಾಯಿ ರುಕ್ಮಿಣಿ. ಇವರ ಮೊದಲ ಪುತ್ರನೂ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ವಿಕ್ಕಿಯ ಶವವನ್ನು ನಿನ್ನೆಯೇ ಹಾಸನದ ಕಂಚನಹಳ್ಳಿಗೆ ಕಳುಹಿಸಲಾಗಿದೆ.
ಇಂದು ಅವರ ಅಂತ್ಯಕ್ರಿಯೆ ನಡೆದಿದೆ. ಪವರ್ ಟಿವಿ ಮಾಲೀಕರು 15 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. 30 ವರ್ಷದ ವಿಕ್ಕಿ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೆಯೇ ? ಆಗಿದ್ದಲ್ಲಿ ಯಾವ ರೀತಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿಲ್ಲ.