ಕದನ ವಿರಾಮಕ್ಕೆ ಭಾರತ–ಪಾಕ್‌ ನಾಯಕರ ನಿರ್ಧಾರ ಕಾರಣ: ಮೊದಲ ಬಾರಿಗೆ ಟ್ರಂಪ್ ಹೇಳಿಕೆ

Most read

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಇಬ್ಬರು ನಾಯಕರ ನಿರ್ಧಾರದಿಂದ ಪರಮಾಣು ಯುದ್ಧಕ್ಕೆ ತಿರುಗಬಹುದಾದ ಸಂಘರ್ಷವನ್ನು ನಿಲ್ಲಿಸಲು ಒಪ್ಪಿಕೊಂಡರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮೊದಲ ಬಾರಿಗೆ ಹೇಳಿದ್ದಾರೆ. ಇದುವರೆಗೂ ಅವರು ಹದಿನೈದಕ್ಕೂ ಹೆಚ್ಚು ಬಾರಿ ಭಾರತ ಪಾಕಿಸ್ತಾನ ಯುದ್ಧ ನಿಲ್ಲಲು ತಾನು ಮಧ್ಯಸ್ಥಿಕೆ ವಹಿಸಿದ್ಧೇ ಕಾರಣ ಎಂದು ಪ್ರತಿಪಾದಿಸುತ್ತಾ ಬಂದಿದ್ದರು.

ಏಪ್ರಿಲ್‌ 22ರಂದು ಪಾಕ್‌ ಬೆಂಬಲಿತ ಉಗ್ರರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಉಗ್ರರ ನೆಲೆಗಳ ಮೇಲೆ ಮೇ 7ರಂದು ‘ಆಪರೇಷನ್‌ ಸಿಂಧೂರ’ ನಡೆಸಿ ಯಶಸ್ವಿಯಾಗಿತ್ತು. ನಂತರ ಉಭಯ ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿ ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಿದ್ದವು. ಆದರೆ, ಉಭಯ ರಾಷ್ಟ್ರಗಳು ಮೇ 10ರಂದು ಮಾತುಕತೆ ಮೂಲಕ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು. ಈ ನಿರ್ಧಾರವನ್ನು ಡೊನಾಲ್ಡ್ ಟ್ರಂಪ್‌‌ ಪ್ರಕಟಿಸಿ ತನ್ನ ಪ್ರಯತ್ನದಿಂದ ಸಾಧ್ಯವಾಯಿತು ಎಂದು ಹೇಳಿದ್ದರು.

ಭಾರತ ಪಾಕ್‌  ನಡುವೆ ಕದನ ವಿರಾಮ ಏರ್ಪಡಲು ಮಧ್ಯಸ್ಥಿಕೆ ವಹಿಸಿದ್ದಾಗಿ ಅನೇಕ ಬಾರಿ ಹೇಳಿದ್ದ ಟ್ರಂಪ್‌, ಸಂಘರ್ಷ ನಿಲ್ಲಿಸುವ ನಿರ್ಧಾರ ಭಾರತಪಾಕ್‌ ನಾಯಕರದ್ದೇ ಎಂದು ಇದೇ ಮೊದಲ ಬಾರಿಗೆ ಹೇಳಿದ್ದಾರೆ. ಈ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್‌ ಪ್ರಧಾನಿ ಮೋದಿ ಅವರಿಂದ ಸ್ಪಷ್ಟನೆಯನ್ನು ಕೇಳುತ್ತಾ ಬಂದಿತ್ತಾದರೂ ಪ್ರಧಾನಿ ಇದುವರೆಗೂ ಚಕಾರ ಎತ್ತಿಲ್ಲ.

ಟ್ರಂಪ್‌ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್‌ ಮುನೀರ್‌ ಅವರಿಗೆ ಭೋಜನ ಕೂಟ ಶ್ವೇತಭವನದಲ್ಲಿ ಏರ್ಪಡಿಸಿದ್ದರು. ನಂತರ ಮಾತನಾಡಿರುವ ಟ್ರಂಪ್‌, ಭಾರತ – ಪಾಕಿಸ್ತಾನ ಕದನ ವಿರಾಮದ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಮುನೀರ್‌ ಅವರನ್ನು ಭೇಟಿಯಾಗಿದ್ದು ಗೌರವದ ಸಂಗತಿ ಎಂದೂ ಹೇಳಿದ್ದಾರೆ.

More articles

Latest article