ಟೆಲ್ ಅವೀವ್: ಒಂದು ಕಾಲದಲ್ಲಿ ಇರಾಕ್ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದ ಸದ್ದಾಂ ಹುಸೇನ್ ಗೆ ಆದ ಗತಿಯೇ ಇರಾನ್ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೂ ಆಗಬಹುದು ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
ಇಸ್ರೇಲ್ ಸೇನೆ ಮತ್ತು ಭದ್ರತಾ ಸೇವೆಗಳ ಕಮಾಂಡರ್ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್, ಇಸ್ರೇಲ್ ವಿರುದ್ಧವಾಗಿ ಇರಾನ್ ರೀತಿ ನಡೆದುಕೊಂಡ ನೆರೆಯ ದೇಶದ ಸರ್ವಾಧಿಕಾರಿಯ ಪರಿಸ್ಥಿತಿ ಏನಾಯಿತು ಎಂಬುವುದನ್ನು ನೆನಪಿಸಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಯುದ್ಧ ಅಪರಾಧಗಳನ್ನು ಎಸಗುತ್ತಿರುವ ಮತ್ತು ಇಸ್ರೇಲ್ ನಾಗರಿಕರ ವಿರುದ್ಧ ಕ್ಷಿಪಣಿ ದಾಳಿಯನ್ನು ಮುಂದುವರಿಸುತ್ತಿರುವ ಇರಾನ್ ದೇಶದ ಅತ್ಯುನ್ನತ ನಾಯಕರಿಗೆ ಮುಂದಿನ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
2003ರಲ್ಲಿ ಅಮೆರಿಕ ನೇತೃತ್ವದಲ್ಲಿ ಸದ್ದಾಂನನ್ನು ಬಂಧಿಸಿ, ಬಳಿಕ ಗಲ್ಲಿಗೇರಿಸಲಾಯಿತು. ಸದ್ದಾಂ ಸರ್ಕಾರವು 1991ರಲ್ಲಿ ಗಲ್ಫ್ ಯುದ್ಧದ ಸಂದರ್ಭದಲ್ಲಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಮತ್ತು ರಹಸ್ಯ ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ರೂಪಿಸಿತ್ತು ಎಂದು ಆರೋಪಿಸಲಾಗಿದೆ.
ಇರಾನ್ ರಾಜಧಾನಿ ಟೆಹರಾನ್ ಮೇಲಿನ ದಾಳಿಯನ್ನು ನಾಲ್ಕನೇ ದಿನವೂ ಮುಂದುವರಿಸಿರುವ ಇಸ್ರೇಲ್, 3 ಲಕ್ಷ ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ಇರಾನ್ ಕೂಡ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಿದೆ. ಇದುವರೆಗೆ ಇಸ್ರೇಲ್ ಮೇಲೆ 400 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ನೂರಾರು ಮಾನವ ರಹಿತ ವೈಮಾನಿಕ ಸಾಧನಗಳನ್ನು (ಯುಎವಿ) ಬಳಸಿ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಇಸ್ರೇಲ್ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯ ಹಾಗೂ ಮೊಸಾದ್ ನ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ತಿಳಿಸಿದೆ. ಸಂಘರ್ಷ ಶುರುವಾಗಿನಿಂದ 1277 ಜನ ಗಾಯಗೊಂಡಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ವರದಿ ಮಾಡಿದೆ
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯದ ಹಲವು ದೇಶಗಳ ವಾಯಪ್ರದೇಶಗಳನ್ನು ನಿರ್ಬಂಧಿಸಲಾಗಿದೆ. ಹಲವಾರು ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇರಾನ್ ತೊರೆಯಲು ಯಾವುದೇ ಸಂಪರ್ಕ ವ್ಯವಸ್ಥೆಗಳಿಲ್ಲದೇ ನೂರಾರು ಜನ ಪರಿತಪಿಸುತ್ತಿದ್ದಾರೆ.