ದೇಶದಲ್ಲಿಯೇ ಪ್ರಥಮ ಭಾರಿಗೆ ರಾಜ್ಯದಲ್ಲಿ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೆ
ಬೆಂಗಳೂರು: ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಿದ ರಕ್ತ ಸಂಗ್ರಹಣೆಯ ಗುರಿಗಿಂತ ಶೇ. 124 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. 1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದ್ದು ಅದಕ್ಕೆ ಅನುಗುಣವಾಗಿ 2024-25ರಲ್ಲಿ 8,15,402 ರಕ್ತದ ಯುನಿಟ್ ಗಳನ್ನು ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಸದರಿ ಸಾಲಿನಲ್ಲಿ 10,11,073 ರಕ್ತದ ಯುನಿಟ್ ಗಳನ್ನು ಸಂಗ್ರಹಿಸುವ ಮೂಲಕ ಶೇ.124%ರಷ್ಟು ಪ್ರಗತಿ ಸಾಧಿಸಲಾಗಿದೆ. ರಕ್ತದಾನಿಯಗಳ ದಿನಾಚರಣೆಯನ್ನು ಆಚರಿಸುವ ಮೂಲಕ ರಕ್ತದಾನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. 1 ಯುನಿಟ್ ರಕ್ತವು 4 ಜೀವಗಳನ್ನು ಉಳಿಸಬಹುದು. ಹೀಗಾಗಿ ನಮ್ಮ ಯುವಕ ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯ ಸರ್ಕಾರದಿಂದ ರಕ್ತ ಸಂಗ್ರಹಣೆಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ತಾಯಂದಿರ ಸಾವುಗಳನ್ನು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆಯ ವ್ಯವಸ್ಥೆ ಇರಲಿಲ್ಲ. ಇದೀಗ ಎಲ್ಲ 147 ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಹೊಸದಾಗಿ 11 ಸರ್ಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ಬರುವ ಬಡಜನರಿಗೆ ರಕ್ತ ಮತ್ತದರ ಅಂಗಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಅಲ್ಲದೇ ದೇಶದಲ್ಲಿಯೇ ಪ್ರಥಮ ಭಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ (Regional Centre of Excellance) ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಲ್ಲಿ ನುರಿತ ತಜ್ಞರಿಂದ ಎಲ್ಲಾ ರಕ್ತ ಕೇಂದ್ರಗಳಿಗೆ ತರಬೇತಿ ಕಾರ್ಯಕ್ರಮಗಳು, ಜಿಲ್ಲೆಗಳಲ್ಲಿ ರಕ್ತದ ಕೊರತೆಯಿರುವ ರಕ್ತ ಕೇಂದ್ರಗಳಿಗೆ, ರಕ್ತ ಶೇಖರಣಾ ಘಟಕಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಮರ್ಪಕವಾದ, ಸುರಕ್ಷಿತ, ಮತ್ತು ಗುಣಮಟ್ಟದ ರಕ್ತವನ್ನು ಒದಗಿಸುವುದನ್ನು ಖಚಿತಪಡಿಸುವುದರ ಮುಖಾಂತರ ಕರ್ನಾಟಕ ರಾಜ್ಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ತದ ಗುಣಮಟ್ಟವನ್ನು ಕಾಯ್ದುಕೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಎಂದರು.
ಸರ್ಕಾರದ ವತಿಯಿಂದ 9 ರಕ್ತ ಸಾಗಣಿಕ ವಾಹನಗಳು ಚಾಲನೆಯಲ್ಲಿದೆ. 7 ರಕ್ತ ಸಾಗಣಿಕ (Blood Colleciton and Transportation Van) ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 4 ರಕ್ತ ಸಾಗಣಿಕ ಮತ್ತು ರಕ್ತ ಸಂಗ್ರಹಣಾ ವಾಹನ (BCTV) ಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲೆ ರಕ್ತ ಸಂಗ್ರಹಣೆ ಮತ್ತು ಸಾಗಣಿಕೆ ಸೇವೆಗೆ ಅನುವು ಮಾಡಿಕೊಡಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಆರೋಗ್ಯ ಸಚಿವರಾಗಿ ಸ್ವತಃ ದಿನೇಶ್ ಗುಂಡೂರಾವ್ ಅವರು ರಕ್ತದಾನಿ ಮಾಡಿ ಇತರರಿಗೆ ರಕ್ತ ದಾನಕ್ಕೆ ಪ್ರೇರಣೆ ನೀಡಿದರು.