ಮಂಡ್ಯ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ನಡೆಯುವಾಗ ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ ಓರವ ಕಳ್ಳನನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಅಲಿಯಾಸ್ ಐಪಿಎಲ್ ಸಂತೋಷ್ ಬಂಧಿತ ಆರೋಪಿ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮುದಿಗೆರೆ ಗ್ರಾಮದ ಈತನ ಮೂಲ ಉದ್ಯೋಗ ಕೃಷಿ. ಆದರೆ ಐಪಿಎಲ್ ಹುಚ್ಚು ಹಿಡಿಸಕೊಂಡಿದ್ದ ಈತ ಐಪಿಲೆ ನಲ್ಲಿ ಬೆಟ್ಟಿಂಗ್ ಕಟ್ಟಲು ಮನೆಗಳ್ಳತನ ಮಾಡುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದ.
ಹಾಗಾಗಿ ಈತ ಐಪಿಎಲ್ ಸಂತೋಷ್ ಎಂದೇ ಕುಖ್ಯಾತಿ ಗಳಿಸಿದ್ದ.
ಐಪಿಎಲ್ ಸಂತೋಷ್ ಬಿಂಡಗನವಿಲೆ, ಬೆಳ್ಳೂರು, ನಾಗಮಂಗಲ, ತುರುವೆಕೆರೆ, ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಮನೆಗಳಲ್ಲಿ ಕಳ್ಳತನ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ. ಪದೇ ಪದೇ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರಿಂದ ನಾಗಮಂಗಲ ಸಿಪಿಐ ನಿರಂಜನ್ ನೇತೃತ್ವದಲ್ಲಿ ಪಿಎಸ್ಐ ರವಿಕುಮಾರ್, ಮಾರುತಿ ಒಳಗೊಂಡ 10 ಜನರ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡವು ಹಲವು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಸಂತೋಷ್ನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದೆ. ಬಂಧಿತನಿಂದ ರೂ. 40 ಲಕ್ಷ ಮೌಲ್ಯದ 490 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.