ಬೆಂಗಳೂರು: ಕನ್ನಡ ವರನಟ ಪದ್ಮಭೂಷಣ ಪುರಸ್ಕೃತ ಡಾ. ರಾಜ್ಕುಮಾರ್ ಅವರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಟಿಸಿರುವ ಚಲನಚಿತ್ರಗಳನ್ನು ರಿಮೇಕ್ ಮಾಡಿ ಕನ್ನಡದಲ್ಲಿ ಪ್ರಸಿದ್ಧಿ ಪಡೆದರು ಎಂಬ ತೆಲುಗು, ಹಿಂದಿ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿಕೆಗೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ.
ರಾಮ್ ಗೋಪಾಲ್ ವರ್ಮಾ ಹೇಳಿಕೆಯನ್ನು ಕನ್ನಡ ಚಲನಚಿತ್ರ ರಂಗ ಮತ್ತು ಕನ್ನಡ ಹೋರಾಟಗಾರು ಕಟುಶಬ್ದಗಳಲ್ಲಿ ಖಂಡಿಸಿದ್ದಾರೆ. ಅಣ್ಣಾವ್ರ ಬಗ್ಗೆ ಮಾತನಾಡುವುದಕ್ಕೂ ಮುನ್ನ ಅವರ ಇತಿಹಾಸ ತಿಳಿದುಕೊಳ್ಳಬೇಕು. ರಾಮ್ ಗೋಪಾಲ್ ವರ್ಮಾ ಒಬ್ಬ ಹುಚ್ಚ. ಆತನ ಹೇಳಿಕೆ ಕುರಿತು ಚರ್ಚಿಸುವುದು ಸಮಯ ಹಾಳು ಮಾಡಿಕೊಂಡಂತೆ ಎಂದು ಟೀಕಿಸಿದ್ದಾರೆ. ಆರ್ ಜಿ ವರ್ಮಾ ಒಬ್ಬ ಕೆಟ್ಟ ನಿರ್ಮಾಪಕ. ಆತನ ಚಿತ್ರಗಳೆಲ್ಲಾ ಫ್ಲಾಪ್ ಆಗುತ್ತಿವೆ. ಹಾಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸದಾ ಸುದ್ದಿಯಲ್ಲಿರಲು ಇಂತಹ ವಿವಾದಾತ್ಮಕ ಹೇಳಿಕೆಗಳನ್ನುನೀಡುತ್ತಿರುತ್ತಾರೆ ಎಂದು ಟೀಕಿಸಿದ್ದಾರೆ.
ಇಷ್ಟು ದಿನ ಕಮಲ್ ಹಾಸನ್ ಕನ್ನಡ ಭಾಷೆಯ ಇತಿಹಾಸ ಕುರಿತು ಮಾತನಾಡಿದ್ದರು. ಈಗ ಆರ್ ಜಿವಿ ಮಾತನಾಡಿದ್ದಾನೆ. ತನ ಮಾತಿಗೆ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದೂ ಲೇವಡಿ ಮಾಡಿದ್ದಾರೆ.
ರಾಮ ಗೋಪಾಲ್ ವರ್ಮಾ ಹೇಳಿದ್ಧೇನು?
ಅಮಿತಾಬ್ ಬಚ್ಚನ್ ಚಿತ್ರಗಳನ್ನು ರಿಮೇಕ್ ಮಾಡಿ ಡಾ ರಾಜ್ ಕುಮಾರ್ ಸ್ಟಾರ್ ಆಗಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ಆರಂಭದಲ್ಲಿ ದಕ್ಷಿಣದ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಲಾಗುತ್ತಿತ್ತು. ಕಾಲಿವುಡ್ ಸ್ಟಾರ್ ರಜನಿಕಾಂತ್, ಚಿರಂಜೀವಿ, ಎನ್ ಟಿ ಆರ್ ಮತ್ತು ರಾಜ್ಕುಮಾರ್ ಅವರಂತಹ ನಟರುಗಳು 70 ಮತ್ತು 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ಭಾರೀ ಜನಪ್ರಿಯತೆ ಗಳಿಸಿದರು ಎಂದು ಹೇಳಿಕೆ ನೀಡಿದ್ದಾರೆ.
90ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರು ಸಿನಿಮಾಗಳಿಂದ ಐದು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಆಗ ದಕ್ಷಿಣದ ಸಿನಿಮಾ ನಿರ್ದೇಶಕರು ಬಚ್ಚನ್ ಅವರ ಮಾದರಿಯಲ್ಲಿ ಮಸಾಲಾ ಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಲೇ ಇಲ್ಲ. ಇದೇ ರೀತಿ ದಕ್ಷಿಣ ಸಿನಿ ತಾರೆಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು, ಅದು ಇಂದಿಗೂ ಮುಂದುವರೆದಿದೆ ಎಂದು ಮಾತನಾಡಿದ್ದಾರೆ.
ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ದಿ ಪಡೆದಿದ್ದಾರೆ. ನೀಲಿಚಿತ್ರಗಳ ನಟಿ ಮಿಯಾಮಾಲ್ಕೋವಾರೊಂದಿಗೆ ಸಿನಿಮಾ ಮಾಡಿ ವಿವಾದಕ್ಕೀಡಾಗಿದ್ದರು. ನಂತರ ಯಶ್ ಅವರ ಕೆಜಿಎಫ್ ಸಿನಿಮಾ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದೀಗ ಅಣ್ಣಾವ್ರ ಬಗ್ಗೆ ಹೇಳಿಕೆ ನೀಡಿ ತಾನೂ ಚಲಾವಣೆಯಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಮುಂದಾಗಿದ್ದಾರೆ.