ಇನ್ನು ಮುಂದೆ ಎಲ್ ಕೆಜಿ, ಯುಕೆಜಿ ಮಕ್ಕಳಿಗೂ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ

Most read

ಬೆಂಗಳೂರು: ಪ್ರಸ್ತಕ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದುವರೆಗೂ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇನ್ನು ಮುಂದೆ ಪೂರ್ವ ಪ್ರಾಥಮಿಕ ಎಲ್ ಕೆಜಿ ಮತ್ತು ಯುಕೆಜಿಯ 1.98 ಲಕ್ಷ ವಿದ್ಯಾರ್ಥಿಗಳಿಗೂ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತದೆ. ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಪರಿಶೀಲಿಸಲು ಪ್ರತಿ ವಾರ ಕನಿಷ್ಠ 10 ಪೋಷಕರನ್ನು ಶಾಲೆಗೆ ಆಹ್ವಾನಿಸಬೇಕು ಎಂದೂ ಶಿಕ್ಷಣ ಇಲಾಖೆ ಸೂಚಿಸಿದೆ.

ಪ್ರತಿ ದಿನ ಬೆಳಗಿನ ಪ್ರಾರ್ಥನೆಯ ವೇಳೆ ಮತ್ತು 10 ನಿಮಿಷ ಶಾಲೆಗಳ ಮುಖ್ಯ ಶಿಕ್ಷಕರು ಮೊಟ್ಟೆ ಮತ್ತು ಬಾಳೆಹಣ್ಣಿನ ಪೋಷಕಾಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಪೂರ್ವ ಪ್ರಾಥಮಿಕ, ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳ ಒಟ್ಟಾರೆ 51.61 ಲಕ್ಷ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಗುತ್ತದೆ.

ಅಜೀಂ ಪ್ರೇಮ್‌ ಜೀ ಫೌಂಡೇಶನ್‌ 1.500 ನೆರವು ನೀಡುತ್ತಿದ್ದು, ಈ ವರ್ಷ ಫೆಬ್ರವರಿಯಲ್ಲಿ ಆರಂಭವಾದ ಯೋಜನೆಯನ್ನು 2025-26ನೇ ಶೈಕ್ಷಣಿಕ ವರ್ಷಕ್ಕೂ ಸರಕಾರ ಮುಂದುವರಿಸಲು ನಿರ್ಧರಿಸಿದೆ. ಮೊಟ್ಟೆ ಮತ್ತು ಬಾಳೆಹಣ್ಣಿಗಾಗಿ ಮೊದಲ ಕಂತಿನಲ್ಲಿ 253.94 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಮಧ್ಯಾಹ್ನ ಉಪಾಹಾರ ಯೋಜನೆಯ ತಾಲೂಕು ಹಂತದ ಅಧಿಕಾರಿಗಳು, ಪ್ರತಿ ತಿಂಗಳು ತಮ್ಮ ವ್ಯಾಪ್ತಿಯಲ್ಲಿನ ಮುಖ್ಯ ಶಿಕ್ಷಕರ ಹಾಗೂ ಸಂಬಂಧಿಸಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಸಭೆ ಕರೆದು ಯೋಜನೆಯ ಅನುಷ್ಠಾನದ ಪ್ರಗತಿ ಪರಿಶೀಲಿಸಬೇಕಿದೆ.

ಶಾಲಾ ಮಟ್ಟದ ಬ್ಯಾಂಕ್ ಖಾತೆಗಳ ನಿರ್ವಹಣೆ ಕುರಿತು ಶಾಲೆಗಳ ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಬೇಕು. ಮಕ್ಕಳ ದಿನಾಚರಣೆಯಂದು ಶಾಲೆಯಲ್ಲಿನ ಎಲ್ಲ ಮಕ್ಕಳ ಪೋಷಕರನ್ನು ಮಧ್ಯಾಹ್ನ ಊಟಕ್ಕೆ ಆಹ್ವಾನಿಸಿ ಮಕ್ಕಳ ಪೋಷಕರ ಸಮ್ಮುಖದಲ್ಲಿ ಶಾಲಾ ಲೆಕ್ಕಪತ್ರಗಳ ವಿವರಗಳನ್ನು ಶಾಲಾ ಮುಖ್ಯಸ್ಥರು ಶಿಕ್ಷಕರಿಗೆ ಓದಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.

More articles

Latest article