ಮೋಜು-ಸ್ವೇಚ್ಛೆ ಮತ್ತು ಲೋಲುಪತೆಗಳು ಯುವಜನತೆಯು ದೊಡ್ಡ ಸಂಖ್ಯೆಯಲ್ಲಿರುವ ಮಹಾನಗರಗಳಲ್ಲಿ ಹೆಚ್ಚುತ್ತಾ ಹೋದಂತೆ, ಇದರ ಸುತ್ತಮುತ್ತಲೇ ಗಿರಕಿ ಹೊಡೆಯುವ ವ್ಯವಸ್ಥೆಗಳು ಮತ್ತಷ್ಟು ಸಮೃದ್ಧವಾಗುವುದು ಸಹಜವೂ ಹೌದು- ಪ್ರಸಾದ್ ನಾಯ್ಕ್, ದೆಹಲಿ.
ಎನ್.ಡಿ.ಟಿ.ವಿ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಆರ್.ಸಿ.ಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ 14 ರಿಂದ 30.
ಯಾರೇನೇ ಹೇಳಲಿ. ಇಂದು ಭಾರತದ ಮೆಟ್ರೋ ಸಿಟಿಗಳಿಗೆ ಎಲ್ಲಿಲ್ಲದ ಲವಲವಿಕೆಯನ್ನು ತಂದಿರುವ ದೊಡ್ಡ ಜನಸಂಖ್ಯೆಯ ಪಾಲು ಈ ವಯಸ್ಸಿನವರದ್ದು. ಕಳೆದ ಎರಡು-ಮೂರು ದಶಕಗಳಿಂದ ಉದ್ಯೋಗಾವಕಾಶಕ್ಕೆಂದೋ, ಹೊಸ ಕನಸುಗಳೊಂದಿಗೋ, ಮಹತ್ತರ ದೂರದೃಷ್ಟಿಯೊಂದಿಗೋ ಮಹಾನಗರಗಳತ್ತ ನಿರಂತರ ಹರಿದುಬರುತ್ತಿರುವ ಮಂದಿಯಲ್ಲೂ ಈ ವಯಸ್ಸಿನವರದ್ದೇ ಸಿಂಹಪಾಲು. ಹೀಗಾಗಿ ಆರ್.ಸಿ.ಬಿ ವಿಜಯೋತ್ಸವ ಮತ್ತು ನಂತರದ ದುರಂತದ ಬಗ್ಗೆ ಮಾಧ್ಯಮ ವರದಿಗಳಲ್ಲಿ ಹರಿದಾಡುತ್ತಿದ್ದ ಬಹುತೇಕ ಚಿತ್ರಗಳಲ್ಲೂ ನಾವು ಇವರನ್ನೇ ದೊಡ್ಡ ಸಂಖ್ಯೆಯಲ್ಲಿ ಕಾಣಬಹುದಿತ್ತು. ನನಗನಿಸುವಂತೆ ಇಂದು ಮಹಾನಗರಗಳ ಮತ್ತು ಯುವಜನತೆಯ ವೇಗ-ಹುಮ್ಮಸ್ಸೆಂದರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿದ್ದ ನನ್ನಂಥವರು ಹೊಸದಾಗಿ ಮಹಾನಗರಗಳಿಗೆ ಬಂದಾಗ ಸಾಮಾನ್ಯವಾಗಿ ಕೇಳಿಬರುತ್ತಿದ್ದ ವಾಕ್ಯವೆಂದರೆ: “Work Hard, Party Harder”, ಎಂಬುದು. ಉತ್ತಮ ಉದ್ಯೋಗ, ಸುಧಾರಿತ ಜೀವನಮಟ್ಟ ಮತ್ತು ಮಹಾತ್ವಾಕಾಂಕ್ಷೆಯ ಭವಿಷ್ಯಕ್ಕಾಗಿ ದೇಶದ ಮಹಾನಗರಗಳಿಗೆ ಧಾವಿಸಿ ಬರುತ್ತಿದ್ದ ಲಕ್ಷಾಂತರ ಯುವಜನತೆಯನ್ನು ಇದು ತಕ್ಕಮಟ್ಟಿಗೆ ಗೊಂದಲಕ್ಕೆ ತಳ್ಳಿದ್ದರೂ ಅಚ್ಚರಿಯಿಲ್ಲ. “ಕಷ್ಟಪಟ್ಟು ದುಡಿಯಿರಿ. ಹತ್ತು ಪಟ್ಟು ಮೋಜು ಮಾಡಿ”, ಎಂಬ ಈ ಕೂಲ್ ಸ್ಲೋಗನ್ನಿನಲ್ಲಿ ದುಡಿಯುವುದು ಮತ್ತು ಪೋಲು ಮಾಡುವುದರ ಬಗ್ಗೆ ಹೆಚ್ಚಿನ ಗಮನವಿತ್ತೇ ಹೊರತು ಗಳಿಸಿದ್ದನ್ನು ಉಳಿಸುವ ಬಗ್ಗೆ ಅಲ್ಲ. ಹೀಗೆ ದುಡಿದಿದ್ದರಲ್ಲಿ ಆಗಾಗ ಕೊಂಚ ಎತ್ತಿಟ್ಟು ಬದುಕು ಕಟ್ಟುವುದರಲ್ಲೂ ಅಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮಾತಿನ ಹಿಂದಿನ ದನಿಯಲ್ಲಿ ಎದ್ದು ಕಾಣುತ್ತಿದ್ದಿದ್ದು ಸ್ವೇಚ್ಛೆಯ ಹಂಬಲ. ಸ್ವಾತಂತ್ರ್ಯದ ಮುಖವಾಡವನ್ನು ತೊಟ್ಟು ಎಲ್ಲೆಡೆ ಥಕಥೈ ಕುಣಿಯುತ್ತಿದ್ದ ಸ್ವೇಚ್ಛೆಯ ಛಾಯೆ.
ನನ್ನ ಶಾಲಾದಿನಗಳಲ್ಲಿ ನೆಂಟರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿ ಪಾಪ್ ತಾರೆ ಮೈಕಲ್ ಜಾಕ್ಸನ್ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಮೈಕಲ್ ಜಾಕ್ಸನ್ ಆ ಬೃಹತ್ತಾದ ವೇದಿಕೆಯಲ್ಲಿ ಎಂದಿನಂತೆ ಭರ್ಜರಿಯಾಗಿ ಹಾಡುತ್ತಿದ್ದ, ಕುಣಿಯುತ್ತಿದ್ದ. ಆ ವೇದಿಕೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಮಿಂಚಿನಂತೆ ಸಾಗುತ್ತಿದ್ದ ಮೈಕಲ್, ವೇದಿಕೆಯ ಇಂಚಿಂಚನ್ನೂ ತನ್ನದಾಗಿಸಿಕೊಂಡುಬಿಟ್ಟಿದ್ದ. ಇನ್ನು ವೇದಿಕೆಯು ಹಾಗಿರಲಿ. ಆತನೊಳಗಿದ್ದ ಭಯಂಕರ ಹುಮ್ಮಸ್ಸು ಮೈಕಲ್ ಹೋದಲ್ಲೆಲ್ಲ ಸುತ್ತಮುತ್ತಲಿನವರಲ್ಲೂ ಆವಾಹನೆಯಾದಂತೆ ಕಾಣುತ್ತಿತ್ತು. ದೇಶಭಾಷೆಗಳ ಗಡಿ ಮೀರಿ ಆತನನ್ನು ನೋಡಿ ಖುಷಿಯಲ್ಲಿ ಭಾವಾವೇಶಕ್ಕೆ ಒಳಗಾಗುವವರಿದ್ದರು. ಭಾವುಕರಾಗಿ ಕಣ್ಣೀರಾಗುವವರಿದ್ದರು. ಆತನನ್ನು ಕಂಡ ಮಾತ್ರಕ್ಕೆ ಸಮ್ಮೋಹನಕ್ಕೊಳಗಾದವರಂತೆ ಹೇಗ್ಹೇಗೋ ವರ್ತಿಸುವ ಮಂದಿಯೂ ಅಲ್ಲಿ ಕಾಣುತ್ತಿದ್ದರು. ಇದೆಲ್ಲ ಏನಪ್ಪ ಅಂತ ಅಂದು ನಕ್ಕಿದ್ದು ಹೌದಾದರೂ, ಮೈಕಲ್ ಜಾಕ್ಸನ್ನಿನ ಖ್ಯಾತಿ ಆ ಮಟ್ಟಿಗಿತ್ತು ಎಂಬುದು ಕೆಲ ವರ್ಷಗಳ ನಂತರ ತಿಳಿದಾಗ ಆತನ “Larger than life” ವ್ಯಕ್ತಿತ್ವವು ನನ್ನನ್ನು ದಂಗುಬಡಿಸಿತ್ತು. ಸೋಷಿಯಲ್ ಮೀಡಿಯಾ ಎಂಬ ಸಂಗತಿಯೊಂದು ಹುಟ್ಟುವ ಮೊದಲೇ ಈತನಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದರು ಎಂಬುದನ್ನು ಅರಗಿಸಿಕೊಳ್ಳಲು ಮುಂದಿನ ಪೀಳಿಗೆಯ ಮಕ್ಕಳಿಗೆ ಕಷ್ಟವಾದರೆ ಅದರಲ್ಲಿ ವಿಚಿತ್ರವೇನಿಲ್ಲ.
ಹಾಗಂತ ಸಮೂಹಸನ್ನಿಯನ್ನು ಹುಟ್ಟು ಹಾಕಿದವನಲ್ಲಿ ಮೈಕಲ್ ಜಾಕ್ಸನ್ ಮೊದಲನೆಯವನೂ ಅಲ್ಲ, ಕೊನೆಯವನೂ ಆಗಲಿಕ್ಕಿಲ್ಲ. ಅದರ ಅಸ್ತಿತ್ವವು ಬಹುತೇಕ ಎಲ್ಲಾ ಕಾಲದಲ್ಲೂ ತಕ್ಕಮಟ್ಟಿಗಿತ್ತು. ತಮ್ಮ ಯಶಸ್ಸಿನ ಉತ್ತುಂಗದ ದಿನಗಳಲ್ಲಿ ಬಾಲಿವುಡ್ ನಟ ದೇವಾನಂದ್ ಕಪ್ಪು ಬಣ್ಣದ ದಿರಿಸನ್ನು ಹಾಕಿಕೊಂಡು ಬೀದಿಗಿಳಿದರೆ ಹೆಣ್ಣುಮಕ್ಕಳು ಹುಚ್ಚೆದ್ದು ಹೋಗುತ್ತಿದ್ದರಂತೆ. ಹೀಗಾಗಿ ಒಂದು ಹಂತದಲ್ಲಿ ಕಪ್ಪು ಬಣ್ಣದ ದಿರಿಸನ್ನು ಧರಿಸದಂತೆ ಅವರ ಮೇಲೆ ನಿಷೇಧ ಹೇರಲಾಗಿತ್ತಂತೆ. ದೇವಾನಂದರ ಬಗ್ಗೆ ಸಾಮಾನ್ಯವಾಗಿ ಹೇಳಲಾಗುವ ಅಸಂಖ್ಯಾತ ಜನಪ್ರಿಯ ದಂತಕತೆಗಳಲ್ಲಿ ಇದೂ ಒಂದು. ಗಾಂಧೀಜಿ ಒಂದು ಮಾತು ಹೇಳಿದರೆಂದು ಸರ್ವಸ್ವವನ್ನೂ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದವರಿಲ್ಲವೇ! ಇದೂ ಕೂಡ ಒಂದು ಬಗೆಯ ವಿಚಿತ್ರ ಅಭಿಮಾನವೇ.
ಆದರೆ ಇಂದು ಮಹಾನಗರಗಳಲ್ಲಿ ನೆಲೆಸಿರುವ ಹೆಚ್ಚಿನವರು ಅಪಾರ ಜೀವನೋತ್ಸಾಹದ ಯುವಕ-ಯುವತಿಯರು. ಇವರ ಯೋಚನಾಶೈಲಿಗೂ, ಆಸಕ್ತಿಗೂ, ಮೋಹಕ್ಕೂ, ಹುಚ್ಚಿಗೂ ಇರುವ ತೀವ್ರತೆಯೇ ಬೇರೆ. ಅದು ಕ್ಷಣಿಕವಾಗಿರಬಹುದು. ಆದರೆ ಹೆಚ್ಚು ಸದ್ದು ಮಾಡುವಂತದ್ದು. ಚಿಕ್ಕದಾಗಿರಬಹುದು. ಆದರೆ ಮೊಗೆಮೊಗೆದು ಬಾಚಿಕೊಳ್ಳುವಂಥದ್ದು. ಮಹಾನಗರಗಳಲ್ಲಿ ಸಂಗತಿಗಳಿಗೆ ಅಗಾಧತೆ ಮತ್ತು ವೈಭವವು ಹೆಚ್ಚಾದಷ್ಟು ಆಕರ್ಷಣೆಯೂ ಹೆಚ್ಚು. ಜಾಸ್ತಿ ಮಂದಿ ಇವುಗಳಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಷ್ಟು ಅದಕ್ಕೆ ಸಿಗುವ ಪ್ರಾಮುಖ್ಯತೆಯೂ ಹೆಚ್ಚು. ಇದು ಮಹಾನಗರದ ಕ್ಲಬ್ಬು-ಪಬ್ಬುಗಳು ಭಾರತ-ಪಾಕಿಸ್ತಾನ ಸೇರಿದಂತೆ ಸದಾ ಸುದ್ದಿ ಮಾಡುವ ಕ್ರಿಕೆಟ್ ಪಂದ್ಯಗಳನ್ನು ದೈತ್ಯ ಪರದೆಯಲ್ಲಿ ಪ್ರದರ್ಶಿಸುವುದರಿಂದ ಹಿಡಿದು, ಚಲನಚಿತ್ರಗಳನ್ನು ಥಿಯೇಟರಿನ ಆರಾಮದಾಯಕ ವ್ಯವಸ್ಥೆಯಲ್ಲಿ ಬೆರಳೆಣಿಕೆಯ ಮಂದಿ ಖಾಸಗಿಯಾಗಿ ವೀಕ್ಷಿಸುವವರೆಗೂ ಬಂದುಬಿಟ್ಟಿದೆ. ಮಹಾನಗರಗಳ ನಿವಾಸಿಗಳಿಗೆ ಇಂದು ಮನರಂಜನೆ ಬೇಕೆಂದರೆ ಸಾವಿರ ದಾರಿಗಳು.
ವರ್ಷದ ಹಿಂದೆ ದಿಲ್ಲಿಯಲ್ಲಿರುವ ಖ್ಯಾತ ವಿದ್ಯಾಸಂಸ್ಥೆಗೊಮ್ಮೆ ಮೀಟಿಂಗಿಗೆಂದು ಹೋಗಿದ್ದಾಗ ಅಲ್ಲಿ ಆಕಸ್ಮಿಕವಾಗಿ ಕಂಡ ಲೋಕವೊಂದು ನನ್ನನ್ನು ಅಚ್ಚರಿಗೊಳಪಡಿಸಿತ್ತು. ಅಲ್ಲಿರುವ ಬೃಹತ್ ಮೈದಾನದಲ್ಲಿ ಒಂದಲ್ಲ ಒಂದು ಪ್ರತಿಷ್ಠಿತ ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆ ರಾತ್ರಿ ನೈಜೀರಿಯಾ ಮೂಲದ ಪ್ರಖ್ಯಾತ ಗಾಯಕನೊಬ್ಬನ ಕಾನ್ಸರ್ಟ್ ಅನ್ನು ಅಲ್ಲಿ ಆಯೋಜಿಸಲಾಗಿತ್ತು. ಸಂಗೀತಸಂಜೆ ಶುರುವಾಗಲು ಇನ್ನೂ ಮೂರು ತಾಸು ಉಳಿದಿದ್ದರೂ ಸಾಕಷ್ಟು ಮಂದಿ ಯುವಕ-ಯುವತಿಯರು ಇತ್ತ ಧಾವಿಸಿ ಬರುತ್ತಲೇ ಇದ್ದರು. ಟಿಕೆಟ್ ದರವು ವಿಪರೀತ ದುಬಾರಿಯಾಗಿದ್ದರೂ ಈ ಮಂದಿಯ ಉತ್ಸಾಹದಲ್ಲಿ ಲೋಪವಿದ್ದಂತೆ ಕಾಣಲಿಲ್ಲ. ಅಂದಹಾಗೆ ಹೀಗೆ ಬರುತ್ತಿದ್ದವರಲ್ಲಿ ಹೆಚ್ಚಿನವರು ಸ್ಥಳೀಯರಾದರೂ ಈ ಯುವಕ-ಯುವತಿಯರ ಭಾಷೆ, ವೇಷಭೂಷಣ, ಒಡನಾಡುವ ಪರಿ… ಇತ್ಯಾದಿಗಳಲ್ಲಿ ಒಂದಿಷ್ಟೂ ಭಾರತೀಯತೆಯಿರಲಿಲ್ಲ. ಎಲ್ಲಿಂದಲೋ ಎರವಲು ಪಡೆದುಕೊಂಡ ವಿಚಿತ್ರ ಸಂಗತಿಗಳನ್ನು ತಮ್ಮೊಳಗೆ ಆವಾಹಿಸಿಕೊಂಡು, ಎಲ್ಲಿಗೂ ಸಲ್ಲದ ತ್ರಿಶಂಕುಗಳಂತಿದ್ದು, ನಿಜವಾದ ಭಾರತದಿಂದ ಲಕ್ಷಗಟ್ಟಲೆ ಮೈಲು ದೂರವಿರುವ ಸೊಗಸಿನ ಭ್ರಮಾಲೋಕದೊಳಗೆ ತೇಲಾಡುತ್ತಿಡುವ ಗಂಧರ್ವರಂತೆ ಕಾಣುತ್ತಿದ್ದರು ಈ ಮಂದಿ. ಇನ್ನು ಕ್ಯಾಂಪಸ್ಸಿನಲ್ಲಿ ತಮ್ಮ ಪಾಡಿಗೆ ಓಡಾಡುತ್ತಿದ್ದ ಕೆಲ ಸಿಬ್ಬಂದಿಗಳಂತೂ ಇಲ್ಲೇನು ರೇವ್ ಪಾರ್ಟಿ ನಡೆಯಲಿದೆಯೇ ಎಂಬಂತೆ ಎಲ್ಲಿಲ್ಲದ ಅಚ್ಚರಿಯಲ್ಲಿ ಇವರನ್ನು ದಿಟ್ಟಿಸುತ್ತಿರುವುದು ಕೂಡ ಸಾಮಾನ್ಯವಾಗಿತ್ತು. ಈ ಜಗತ್ತೇ ವಿಪರೀತ ವೇಗದಲ್ಲಿ ಹೋಗುತ್ತಿದೆಯೋ ಅಥವಾ ನಾವೇ ಈ ಮಟ್ಟಿಗೆ ನಿಧಾನವಾಗಿ ಹಿಂದುಳಿದುಬಿಟ್ಟೆವೋ ಎಂಬ ಸಂದೇಹಗಳು ಥಟ್ಟನೆ ಹೆಡೆಯೆತ್ತಿ ಮನಸ್ಸು ಗೊಂದಲಪುರವಾಗುವುದು ಇಂತಹ ಸಂದರ್ಭಗಳಲ್ಲೇ.
ಮಹಾನಗರಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟವೇ. ಹಾಗಂತ ಅಸಾಧ್ಯವೇನಲ್ಲ. ಜಗತ್ತಿನ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡುಗಳಲ್ಲಿ ಮುಂಚೂಣಿಯಲ್ಲಿರುವ “Cold Play” 2025ರ ಜನವರಿ ತಿಂಗಳಿನಲ್ಲಿ ಮುಂಬೈ ಮತ್ತು ಗುಜರಾತಿನಲ್ಲಿ ತನ್ನ ಬಹುನಿರೀಕ್ಷಿತ ಸಂಗೀತಸಂಜೆಯನ್ನು ಯಶಸ್ವಿಯಾಗಿ ಆಯೋಜಿಸಿತು. ಆದರೆ ಇಂಥದೊಂದು ಬೃಹತ್ ಆಯೋಜನೆಯ ಹಿಂದೆ ಅದೆಷ್ಟು ಮಂದಿ ದಿನರಾತ್ರಿಗಳ ಪರಿವೆಯಿಲ್ಲದೆ ದುಡಿದಿದ್ದರು, ಅದೆಷ್ಟು ಶ್ರಮವಿತ್ತು, ಸಿದ್ಧತೆಯಿತ್ತು ಇತ್ಯಾದಿಗಳನ್ನು ನೋಡುತ್ತಾ ಹೋದರೆ, ಇದರಲ್ಲಿ ಇಷ್ಟೆಲ್ಲ ಆಯಾಮಗಳಿರುತ್ತಾ ಎಂದು ದಿಗಿಲಾಗುತ್ತದೆ. ಈ ಗಾಥೆಯನ್ನು ಬುಕ್ ಮೈ ಶೋ ಸಂಸ್ಥೆಯ ಮುಖ್ಯಸ್ಥರಾಗಿರುವ ಆಶಿಶ್ ಹೇಮರಾಜನಿಯವರು ರಾಜ್ ಶಮಾನಿಯವರ ಜನಪ್ರಿಯ “ಫಿಗರಿಂಗ್ ಔಟ್” ಪಾಡ್-ಕಾಸ್ಟ್ ಶೋನಲ್ಲಿ ತೆರೆದಿಡುತ್ತಾ ಹೋಗುತ್ತಾರೆ. ಕಾನ್ಸರ್ಟ್ ಆಯೋಜನೆಯ ಬಗ್ಗೆ ಶುರುವಾಗುವ ಕನಸೊಂದು ಪ್ರವಾಸೋದ್ಯಮ, ಆರ್ಥಿಕತೆ, ಸರಕಾರಿ ಮಂತ್ರಾಲಯಗಳು, ಸ್ಥಳೀಯ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಭದ್ರತಾ ವ್ಯವಸ್ಥೆ, ಪ್ರಚಾರ, ಹೂಡಿಕೆ-ಲಾಭಗಳ ಲೆಕ್ಕಾಚಾರ… ಹೀಗೆ ಎಲ್ಲವನ್ನೂ ಕ್ರಮೇಣ ತನ್ನೊಳಗೆ ಇಳಿಸಿಕೊಳ್ಳುತ್ತಾ ಹೋಗುತ್ತದೆ. ಈ ಜಗತ್ತಿಗೆ ಹೊಸಬರಾಗಿರುವ ಯಾರಿಗಾದರೂ ಇಂತಹ ಅನೇಕ ವಿವರಗಳು ರೋಮಾಂಚನವನ್ನು ತರುವುದರಲ್ಲಿ ಸಂದೇಹವೇ ಇಲ್ಲ.
“ಸದ್ಯ ನಮ್ಮ ಬದುಕಿನಲ್ಲಿ ಮನರಂಜನೆ ಅನ್ನುವುದು ವಿಪರೀತ ಹೆಚ್ಚಾಗಿಬಿಟ್ಟಿದೆ. ಹಿಂದೆಲ್ಲ ದಿನವಿಡೀ ದುಡಿದು, ಸುಸ್ತಾಗಿ, ಕೊಂಚ ಬಿಡುವಿನ ಸಮಯದಲ್ಲಿ ಕಾಲಹರಣಕ್ಕೆಂದು ಮನರಂಜನೆಯನ್ನು ನೆಚ್ಚಿಕೊಳ್ಳುವ ಪರಿಪಾಠವಿತ್ತು. ಈಗ ನಮ್ಮ ಸ್ಮಾರ್ಟ್ಫೋನ್ ಗಳಿಂದಾಗಿ ಮನರಂಜನೆಗೂ ನಮಗೂ ಇರುವ ದೂರವೆಂದರೆ ಕೇವಲ ಒಂದು ಕ್ಲಿಕ್ ಮಾತ್ರ (ಅಂದಹಾಗೆ ಮನಸಿಗೆ ಹಾಯೆನಿಸುವ ಭಾವವನ್ನು ತರುವ ಹಾರ್ಮೋನ್ ಎಂದರೆ ಡೊಪಮೀನ್). ಈ ಡೊಪಮೀನ್ ಕಿಕ್ಕುಗಳು ಸಿಕ್ಕಾಪಟ್ಟೆ ಅಗ್ಗವಾಗಿಬಿಟ್ಟಿರುವ ಪ್ರಸ್ತುತ ಕಾಲಮಾನದಲ್ಲಿ ನಮಗಾಗುತ್ತಿರುವುದು ಮಾತ್ರ ಡೊಪಮೀನ್ ಓವರ್ ಡೋಸ್”, ಎಂದು ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು ಖ್ಯಾತ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಸ್ವಾತಿ ಗೋಯಲ್ ಶರ್ಮಾ. ಹಾಗೆ ನೋಡಿದರೆ ಇದು ಸತ್ಯವೂ ಹೌದು. ಮೋಜು-ಸ್ವೇಚ್ಛೆ ಮತ್ತು ಲೋಲುಪತೆಗಳು ಯುವಜನತೆಯು ದೊಡ್ಡ ಸಂಖ್ಯೆಯಲ್ಲಿರುವ ಮಹಾನಗರಗಳಲ್ಲಿ ಹೆಚ್ಚುತ್ತಾ ಹೋದಂತೆ, ಇದರ ಸುತ್ತಮುತ್ತಲೇ ಗಿರಕಿ ಹೊಡೆಯುವ ವ್ಯವಸ್ಥೆಗಳು ಮತ್ತಷ್ಟು ಸಮೃದ್ಧವಾಗುವುದು ಸಹಜವೂ ಹೌದು.
ಕಳೆದ ಹಲವು ವರ್ಷಗಳಿಂದ ಐ.ಪಿ.ಎಲ್ ಸುತ್ತ ವ್ಯವಸ್ಥಿತವಾಗಿ ಸೃಷ್ಟಿಸಲಾಗಿರುವ ಗ್ಲಾಮರ್ ಜಗತ್ತು ಮತ್ತು ಸಂಬಂಧಿ ಉದ್ಯಮಗಳಿಗೆ ಕೂಡ ಇವರೇ ನೇರ ಬಳಕೆದಾರರು. ನಮ್ಮ ದೇಶದಲ್ಲಿ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳಿಗಿಂತ ಮೊಬೈಲ್ ಫೋನುಗಳನ್ನು ಹೊಂದಿರುವ ಕುಟುಂಬಗಳು ಹೆಚ್ಚಿವೆ ಎಂಬ ಮಾತನ್ನು ಮುಂಚೆ ಹೇಳಲಾಗುತ್ತಿತ್ತು. ಆದರೆ ಇಂದು ಡಿ-ಮ್ಯಾಟ್ ಅಕೌಂಟ್ ಇರುವ ಯುವಜನರಿಗಿಂತಲೂ, ಕ್ರಿಕೆಟ್ ಬೆಟ್ಟಿಂಗ್ ಆಪ್ ಗಳಲ್ಲಿ ತೊಡಗಿಸಿಕೊಂಡಿರುವ ಯುವಜನತೆಯ ಸಂಖ್ಯೆಯು ಹೆಚ್ಚಿದೆ ಎಂದು ಹೇಳಲಾಗುತ್ತದೆ. ಇದು ನಿಜಕ್ಕೂ ಆತಂಕಕಾರಿ ವಿಷಯ. ಇನ್ನು ಸುದ್ದಿಮನೆಗಳಲ್ಲಂತೂ ಮಾಧ್ಯಮ ತಂಡವು ರೂಪಿಸುವ ಕಾರ್ಯಕ್ರಮಗಳಲ್ಲಿ ಈ ಮೂರು “C” ಗಳು ಎಂದಿಗೂ ಹಾಕಿದ ಕಾಸಿಗೆ ನಷ್ಟ ಮಾಡುವುದಿಲ್ಲ ಎಂಬ ಮಾತಿತ್ತಂತೆ: Cricket, Cinema ಮತ್ತು Crime. ಈ ಮೂರು ಸಂಗತಿಗಳು ಸದ್ಯ ಜನಸಾಮಾನ್ಯರ ದಿನಚರಿಯ ದೊಡ್ಡ ಮತ್ತು ಅವಿಭಾಜ್ಯ ಭಾಗವಾಗುತ್ತಿರುವುದೂ ಕೂಡ ಗಮನಾರ್ಹ ಸಂಗತಿ.
ಈ ಅಂಕಣ ಓದಿದ್ದೀರಾ? http://“ಮಹಾನಗರಿ, ಮಹಾತ್ವಾಕಾಂಕ್ಷೆ ಮತ್ತು ಮಾಧ್ಯಮಗಳು” https://kannadaplanet.com/the-metropolis-ambition-and-the-media/
ಇಂಟರ್ನೆಟ್ಟಿನಲ್ಲಿ “ಏ ಗಾಲಿಬ್” ಎಂಬ ಒಕ್ಕಣೆಯೊಂದಿಗೆ ಶುರುವಾಗುವ ಅಥವಾ ಅಂತ್ಯವಾಗುವ ಕವಿತೆಯ ಸಾಲುಗಳು ಸಾಕಷ್ಟು ಸಿಗುತ್ತವೆ. ಇವೆಲ್ಲದಕ್ಕೂ ಮಹಾಕವಿ ಮಿರ್ಜಾ ಗಾಲಿಬನ ಹೆಸರು ಅಂಟಿಕೊಂಡಿರುತ್ತದೆ. ಜೊತೆಗೇ ಬಾಲಿವುಡ್ ಗೀತಕಾರರಾಗಿರುವ ಗುಲ್ಝಾರರ ಹೆಸರಿನಲ್ಲೂ ಲೆಕ್ಕವಿಲ್ಲದಷ್ಟು ಕವಿತೆಯ ಸಾಲುಗಳು ಎಲ್ಲೆಡೆ ಹರಿದಾಡುತ್ತಿರುತ್ತವೆ. ಆದರೆ ಮಿರ್ಜಾ ಗಾಲಿಬ್ ಮತ್ತು ಗುಲ್ಝಾರರನ್ನು ಆಳವಾಗಿ ಓದಿಕೊಂಡಿರುವವರು ಮಾತ್ರ ಇದರಲ್ಲಿ ಕಾಳು ಮತ್ತು ಜೊಳ್ಳನ್ನು ಬೇರ್ಪಡಿಸಬಲ್ಲರು. ಏಕೆಂದರೆ ಈರ್ವರ ವಸ್ತು-ತಂತ್ರ-ಶೈಲಿಗಳು ಈ ಬಗ್ಗೆ ಅಧ್ಯಯನ ಮಾಡಿಕೊಂಡವರಿಗಷ್ಟೇ ಸುಮಾರಾಗಿ ತಿಳಿದಿರುತ್ತವೆ. ಈ ಅರಿವು ಸಹಜವಾಗಿ ಓದುಗ ಅಥವಾ ಕಾವ್ಯಪ್ರೇಮಿಯೊಬ್ಬನ ಆಸಕ್ತಿ, ಶ್ರದ್ಧೆ, ಶ್ರಮ ಎಲ್ಲವನ್ನೂ ಬೇಡುತ್ತದೆ.
ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ, ಅಭಿಮಾನ ಮತ್ತು ಸಮೂಹಸನ್ನಿಯ ನಡುವಿನಲ್ಲೂ ಇರುವ ಗೆರೆ ಕೂಡ ಇಷ್ಟೇ ತೆಳು!
ಪ್ರಸಾದ್ ನಾಯ್ಕ್ , ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.