ಮೋದಿ ಅವಧಿಯಲ್ಲಿ ಕಾಲ್ತುಳಿತದಿಂದ 2 ಸಾವಿರ ಜನರ ಸಾವು: ಯಾರ ರಾಜೀನಾಮೆ ಕೇಳುತ್ತೀರಿ? ಬಿಜೆಪಿ, ಜೆಡಿಎಸ್‌ ಗೆ ಕಾಂಗ್ರೆಸ್‌ ಪ್ರಶ್ನೆ  

Most read

ಬೆಂಗಳೂರು: ಪ್ರಧಾನಿ ಮೋದಿಯವರ‌ 11 ವರ್ಷಗಳ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲಿ ಸುಮಾರು 2 ಸಾವಿರ ಜನರು ಕಾಲ್ತುಳಿತದಿಂದಾಗಿ ಅಸು ನೀಗಿದ್ದಾರೆ. ಈ ದುರಂತಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಸಾವು ನೋವುಗಳು ಸಂಭವಿಸಿದ್ದು, ಯಾರ ರಾಜಿನಾಮೆ ಕೇಳುತ್ತೀರಿ ಎಂದು ಕಾಂಗ್ರೆಸ್‌ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದೆ.

ಕೆಪಿಸಿಸಿ ವಕ್ತಾರ, ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ಇಂದು ಸುದದಿಗೋಷ್ಠಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕದ ಇತಿಹಾಸದಲ್ಲಿ ಮೊದಲ ಕಾಲ್ತುಳಿತ ಉಂಟಾಗಿದ್ದೇ ಕುಮಾರಸ್ವಾಮಿ ಅವರ ಕಾಲದಲ್ಲಿ. ಡಾ. ರಾಜಕುಮಾರ್ ಅವರ ಸಾವಿನ ಸಂದರ್ಭದಲ್ಲಿ ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದರು. ಸುಮ್ಮನೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವುದು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ನೀಡಿ ಎಂದು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

ಕಾಲ್ತುಳಿತ ಘಟನೆಗೆ ಕಾಂಗ್ರೆಸ್ ಪಕ್ಷ ಅತೀವ ವಿಷಾದ ವ್ಯಕ್ತಪಡಿಸುತ್ತದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷ ಸಾಂತ್ವನ ತಿಳಿಸುತ್ತದೆ. ಬಿಜೆಪಿ ಬೆಂಕಿ ಬಿದ್ದ ಮನೆಯ ಗಳ ಹಿರಿಯುತ್ತಿದೆ. ಕರ್ನಾಟಕದ ರಾಜ್ಯದ ಅಸಮರ್ಥ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತವೆ. ಈ ಬಿಜೆಪಿಯವರು ಅಸಮರ್ಥರು. ಕುಮಾರಸ್ವಾಮಿ ಅವರನ್ನು ಮುಂದಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವುದು ಇವರ ಕುತಂತ್ರತನ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿಯವರು ಸಚಿವ ಕುಮಾರಸ್ವಾಮಿ ಅವರಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ. ಇವರಿಗೆ ಪತ್ರಿಕಾಗೋಷ್ಠಿ ಹಾಗೂ ಎಕ್ಸ್ ನಲ್ಲಿ ಬರೆಯುವುದೇ ಇವರಿಗೆ ಪೂರ್ಣಾವಧಿ ಕೆಲಸವಾಗಿ ಹೋಗಿದೆ. ಈ ಕಾರಣಕ್ಕೆ ರಾತ್ರಿ 10.45 ಕ್ಕೆ ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ಮಾಡುವ ಪ್ರವೃತ್ತಿಗೆ ಮುಂದಾಗಿದ್ದಾರೆ.  ಕೆಲಸ ಇಲ್ಲದೇ ಕೇವಲ ಪ್ರತಿಕಾಗೋಷ್ಟಿ ಮಾಡುವ ಬದಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದು ಒಳ್ಳೆಯದು. ದಿನಕ್ಕೆ ಇಪ್ಪತ್ತರಿಂದ ಮೂವತ್ತು ಸಲ ‘ನಾನು ಪ್ರಾಮಾಣಿಕ’ ಎನ್ನುವ ಇವರು ಹತಾಶರಾಗಿ ಮಾತನಾಡುತ್ತಿದ್ದಾರೆ‌ ಎಂದು ವ್ಯಂಗ್ಯವಾಡಿದ್ದಾರೆ.

ಅವ್ಯವಸ್ಥೆ ಆಗಿದ್ದರೂ ಸರ್ಕಾರ ಗೋಲಿಬಾರ್ ಗೆ ಅವಕಾಶ ನೀಡಿಲ್ಲ. ವಿಧಾನಸೌಧ ಸೇರಿದಂತೆ ಸುತ್ತಲೂ ಸೇರಿದ್ದ ಜನರ ಪ್ರಾಣಕ್ಕೆ ಅಪಾಯವಾಗದಂತೆ ಕೆಲಸ ಮಾಡಿದೆ.  ಕುಮಾರಸ್ವಾಮಿ ಅವರೇ ನೀವು ಮುಖ್ಯಮಂತ್ರಿಗಳಾಗಿದ್ದಾಗ ಸುಮಾರು ಎಂಟು ಜನರ ಹತ್ಯೆಯಾಯಿತು. ಲಾಠಿಚಾರ್ಜ್, ಗೋಲಿಬಾರ್ ನಡೆಯಿತು. ಆದರೆ ನೀವು ಯಾವುದೇ ಅಧಿಕಾರಿಗಳ ಮೇಲೆ ಸಣ್ಣ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಜನರ ಪ್ರಶ್ನೆಗಳಿಗೆ ಉತ್ತರ ನೀಡದೆ ಪಲಾಯನ ಮಾಡಿದವರು ನೀವು ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಮಗನ ಸಾಲು, ಸಾಲು ಸೋಲು ನಿಮ್ಮನ್ನು ಕಂಗೆಡಿಸಿದೆ. ನೀವು ಮಾತನಾಡುತ್ತಾ ಸಿದ್ದರಾಮಯ್ಯ ಅವರ‌ ಮಗನ ಹೆಸರನ್ನು ಏಕೆ ಪ್ರಸ್ತಾಪ ‌ಮಾಡಿದ್ದೀರಿ ಎಂದು ನಿಮಗೇ ಗೊತ್ತಿಲ್ಲ. ಇವರ ಮಗ ಹೋಟೆಲ್ ಅಲ್ಲಿ ಗಲಾಟೆ ಮಾಡಿದ್ದು ಮರೆತು ಹೋಗಿದೆಯೇ ಎಂದು ರಮೇಶ್‌ ಬಾಬು ಲೇವಡಿ ಮಾಡಿದ್ದಾರೆ.

More articles

Latest article