ಗಾಂಧಿನಗರ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಅವ್ಯವಹಾರ ನಡೆಸಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ಗುಜರಾತ್ ಪಂಚಾಯತ್ ಹಾಗೂ ಕೃಷಿ ರಾಜ್ಯ ಸಚಿವ ಬಚ್ಚುಭಾಯಿ ಖಾಬಡ್ ಅವರ ಪುತ್ರನಿಗೆ ಜಾಮೀನು ಸಿಕ್ಕ ಎರಡೇ ದಿನಗಳ ನಂತರ ಮತ್ತೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ದಾಖಲಾಗಿದ್ದ ಎಫ್ ಐಆರ್ ಗೆ ಸಂಬಂಧಿಸಿದಂತೆ, ಸಚಿವ ಬಚ್ಚುಭಾಯಿ ಮಕ್ಕಳಾದ ಬಲವಂತ್ ಹಾಗೂ ಕಿರಣ್ ಅವರನ್ನು ಬಂಧಿಸಲಾಗಿತ್ತು. ಮೇ 29ರಂದು ಇಬ್ಬರಿಗೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ ಕಿರಣ್ ಅವರನ್ನು ಅದೇ ದಿನ ಬಂಧಿಸಲಾಗಿತ್ತು. ದಾಹೋದ್ ‘ಬಿ’ ವಲಯದ ಪೊಲೀಸರು ಹೊಸತಾಗಿ ದಾಖಲಿಸಿದ್ದ ಎಫ್ ಐಆರ್ ಗೆ ಸಂಬಂಧಿಸಿದಂತೆ, ಬಲವಂತ್ ಅವರನ್ನು ಭಾನುವಾರ ಬಂಧಿಸಲಾಗಿದೆ ಎಂದು ದಾಹೋದ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಸಿಂಗ್ ಭಂಡಾರಿ ಹೇಳಿದ್ದಾರೆ.
2022–23ರಲ್ಲಿ ದಾಹೋದ್ ನ ಧನ್ ಪುರ ತಾಲ್ಲೂಕಿನ ಭಾನ್ ಪುರ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ, ಬಲವಂತ್ ಅವರ ಶ್ರೀರಾಜ್ ಕನ್ಸ್ಟ್ರಕ್ಷನ್ ಸಂಸ್ಥೆ ರೂ.33.86 ಲಕ್ಷ ಹಣ ಪಡೆದಿದೆ ಎಂದು ಮೇ 31ರಂದು ದಾಖಲಾದ ಎಫ್ ಐಆರ್ ನಲ್ಲಿ ದಾಖಲಾಗಿತ್ತು. ಈ ದೂರಿನ ಅನ್ವಯ ಬಲವಂತ್ ಅವರನ್ನು ಬಂಧಿಸಲಾಗಿದೆ.
ನರೇಗಾದಡಿಯಲ್ಲಿ ರೂ. 71 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತ್ ಹಾಗೂ ಕಿರಣ್ ಅವರನ್ನು ಮೇ 16ರಂದು ಬಂಧಿಸಲಾಗಿತ್ತು.