ನವದೆಹಲಿ: ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದವಾಗಿದ್ದು, ಈ ಕುರಿತು ದ್ವಿಪಕ್ಷೀಯ ಚರ್ಚೆ ಮಾತ್ರ ನಡೆಯಬೇಕು. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತ ಮತ್ತೆ ಪ್ರತಿಪಾದಿಸಿದೆ. ಕಾಶ್ಮೀರ ವಿವಾದವನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಭಾರತ ಈ ಮಾತನ್ನು ಪುನರುಚ್ಛರಿಸಿದೆ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ– ಪಾಕಿಸ್ತಾನವೇ ದ್ವಿಪಕ್ಷೀಯ ಚರ್ಚೆ ನಡೆಸಬೇಕು ಎನ್ನುವುದು ಭಾರತದ ದೀರ್ಘ ಕಾಲದ ನಿಲುವು. ಇದರಲ್ಲಿ ಬದಲಾವಣೆ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಅಣ್ವಸ್ತ್ರ ಯುದ್ಧ ಕುರಿತ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೈಸ್ವಾಲ್, ಪಾಕಿಸ್ತಾನದ ವಿದೇಶಾಂಗ ಸಚಿವರೂ ಕೂಡಾ ಅಣ್ವಸ್ತ್ರ ಯುದ್ಧ ಕುರಿತ ಸಾಧ್ಯತೆಯನ್ನು ಅಧಿಕೃತವಾಗಿಯೇ ತಳ್ಳಿಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ, ಅಣ್ವಸ್ತ್ರ ಬೆದರಿಕೆಗೆ ಜಗ್ಗುವುದಿಲ್ಲ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯಗಳಿಗೂ ಅವಕಾಶ ನೀಡುವುದಿಲ್ಲ ಎಂಬ ತನ್ನ ನಿಲುವನ್ನು ಈಗಾಗಲೇ ದೃಢವಾಗಿ ಹೇಳಿದೆ ಎಂದರು.