ನವದೆಹಲಿ: ಲೋಕಸಭೆ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನಡೆಸಲಾಗುತ್ತಿದ್ದು, ನನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.
ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ಕಾರ್ಯವಿಧಾನದ ನಿಯಮಗಳನ್ನು ಲೋಕಸಭೆ ವಿರೋಧ ಪಕ್ಷದ ನಾಯಕರು ಪಾಲಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿಗೆ ಹೇಳಿದ್ದರು. ಇದರ ಬೆನ್ನಲ್ಲೇ ಈ ಪ್ರತಿಕ್ರಿಯೆ ಬಂದಿದೆ. ನನ್ನ ಬಗ್ಗೆ ಹೇಳಿಕೆ ನೀಡಿ, ನನಗೆ ಮಾತನಾಡಲೂ ಅವಕಾಶ ನೀಡದೆ ಸದನವನ್ನು ಮುಂದೂಡಿದರು. ಕಳೆದ ವಾರವೂ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿ ಏನಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದರೂ ಅವರು (ಸ್ಪೀಕರ್) ಓಡಿ ಹೋದರು. ಸದನವನ್ನು ನಡೆಸುವ ರೀತಿ ಸರಿಯಿಲ್ಲ. ಅವರು ನನ್ನ ಬಗ್ಗೆ ಆಧಾರರಹಿತವಾದ ಅಂಶವನ್ನು ಹೇಳಿದರು. ಅಗತ್ಯ ಇಲ್ಲದಿದ್ದರೂ ಸದನವನ್ನು ಮುಂದೂಡಿದರು ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಬೇಕು. ಆದರೆ ನಾನು ಮಾತನಾಡುವಾಗಲೆಲ್ಲಾ ನನ್ನನ್ನು ತಡೆಯಲಾಗುತ್ತಿದೆ. ನಾನು ಮೌನವಾಗಿ ಕುಳಿತುಕೊಳ್ಳಬೇಕಾಯಿತು. ಇಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವೇ ಇಲ್ಲ. ಮಹಾಕುಂಭಮೇಳ, ನಿರುದ್ಯೋಗದ ಬಗ್ಗೆ ನಾನು ಮಾತನಾಡಬೇಕೆಂದಿದ್ದೆ ಎಂದು ಅವರು ಹೇಳಿದರು.