ಸಾಣಾಪುರ ಘಟನೆ: ‘ಬಾಡಿಗೆ ಫೋನ್‌’ ಬಳಸಿ ಸಿಕ್ಕಿಬಿದ್ದ ಆರೋಪಿ, 72 ಗಂಟೆಯಲ್ಲೇ ಬಂಧನ

Most read

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರದಲ್ಲಿ ಇತ್ತೀಚೆಗೆ ನಡೆದ ಪ್ರವಾಸಿಗರ ಮೇಲಿನ ಹಲ್ಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಮೂರನೇ ಆರೋಪಿ ಶರಣ ಬಸವರಾಜ ಎಂಬಾತನನ್ನು ಪ್ರಕರಣ ನಡೆದ 72 ಗಂಟೆಗಳಲ್ಲೇ ಬಂಧಿಸಲಾಗಿದೆ. ಆರೋಪಿಯ ಬಳಿ ಮೊಬೈಲ್‌ ಇಲ್ಲದಿದ್ದರೂ ಆರೋಪಿಯನ್ನು ಬಂಧಿಸಿರುವುದು ಪೊಲೀಸರ ಚಾಣಾಕ್ಷತನಕ್ಕೆ ನಿದರ್ಶನವಾಗಿದೆ. ದುರಂತ ನಡೆದ ಬಳಿಕ ಆರೋಪಿ  ಪರಾರಿಯಾಗುವ ಮುನ್ನ ಮೊಬೈಲ್‌ ಫೋನ್‌ ತೆಗೆದುಕೊಂಡು ಹೋಗಿರಲಿಲ್ಲ. ಕೈಯಲ್ಲಿದ್ದಷ್ಟು ಹಣದೊಂದಿಗೆ ಆತ ರಾಯಚೂರಿನಿಂದ ತಮಿಳುನಾಡಿನ ವೇಲೂರಿಗೆ ತೆರಳಿದ್ದ.

ಫೋನ್‌ ಇಲ್ಲದಿದ್ದರೂ ಬೇರೆಯವರ ಸಹಾಯದಿಂದ ತನ್ನ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರಿಗೆ ಫೋನ್‌ ಮಾಡಿದ್ದಾನೆ. ಇದರ ಮೇಲೆ ಕಣ್ಗಾವಲು ಇರಿಸಿದ್ದ ಪೊಲೀಸರು ಆರೋಪಿ ರಾಯಚೂರು ಬಸ್‌ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ರೈಲು ನಿಲ್ದಾಣದ ತನಕ ನಡೆದುಕೊಂಡೇ ಹೋಗಿ ಅಲ್ಲಿಂದ ರೈಲು ಏರಿದ್ದಾನೆ. ಈ ಸುಳಿವು ಅರಿತ ಕೊಪ್ಪಳ ಸೈಬರ್‌ ಪೊಲೀಸ್‌ ಠಾಣೆಯ ಇನ್‌ಸ್ಟೆಕ್ಟರ್‌ ಮಹಾಂತೇಶ ಸಜ್ಜನ, ಕುಕನೂರು ಠಾಣೆಯ ಪಿಎಸ್‌ಐ ಗುರುರಾಜ, ಸಿಬ್ಬಂದಿ ಅಂದಪ್ಪ, ವಿಶ್ವನಾಥ, ಮೈಲಾರಪ್ಪ, ಗ್ಯಾನಪ್ಪ, ಮಹಿಬೂಬ, ದೇವೇಂದ್ರ, ಸದ್ದಾಂಹುಸೇನ್ ಅವರನ್ನು ಒಳಗೊಂಡ ಎರಡು ತಂಡ ನಿರಂತರ ಶೋಧನೆ ನಡೆಸಿದೆ.

ರಾಯಚೂರಿನಲ್ಲಿ ಬಸ್‌ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದ ಪ್ರಮುಖ ರಸ್ತೆ ಮತ್ತು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ರೈಲು ಹತ್ತಿರುವುದು ಖಚಿತವಾಗಿದೆ. ರಾಯಚೂರಿನಲ್ಲಿದ್ದಾಗ ತನ್ನ ಗೆಳೆಯರೊಬ್ಬರಿಗೆ ಫೋನ್‌ ಮಾಡಿ ಹಣ ಹಾಕುವಂತೆ ಕೇಳಿದ್ದಾನೆ. ತಕ್ಷಣವೇ ಆತ ಫೋನ್‌ ಮಾಡಿದ ಗೆಳೆಯನನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಹಣ ಹಾಕಲು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುವಂತೆ ಹೇಳಿದ್ದಾರೆ. ಹಣಕ್ಕಾಗಿ ಮೇಲಿಂದ ಮೇಲೆ ಮಾಡಿದ ಫೋನ್‌ ಕರೆಯ ಮೂಲ ಹಿಡಿದು ಆರೋಪಿಯನ್ನು ಬಂಧಿಸಲಾಗಿದೆ. ಫೋನ್‌ ಇದ್ದರೆ ಸಿಕ್ಕಿ ಬೀಳುವ ಅಪಾಯ ಹೊಂದಿದ್ದ ಆರೋಪಿಗೆ ’ಬಾಡಿಗೆ ಫೋನ್‌’ ಮುಳುವಾಗಿದೆ.

ಆರೋಪಿಯನ್ನೇ ಹಿಂಬಾಲಿಸಿಕೊಂಡು ಮಂತ್ರಾಲಯ ರೈಲು ನಿಲ್ದಾಣದಲ್ಲಿಯೂ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಲ್ಲಿಯೂ ಆತ ಇಳಿದಿರಲಿಲ್ಲ. ಇದೇ ಜಾಡು ಮುಂದುವರಿಸಿದ ಪೊಲೀಸರು ರೈಲು ತೆರಳಿದ ಮಾರ್ಗದುದ್ದಕ್ಕೂ ಮಾಹಿತಿ ಪಡೆದುಕೊಂಡಿದ್ದಾರೆ. ತಮಿಳುನಾಡು ತಲುಪಿದ ಬಳಿಕ ಆರೋಪಿ ತಮ್ಮ ಆಪ್ತರಿಗೆ ಮಾಡಿದ ಕರೆಯಿಂದಾಗಿ ಆತ ಇರುವ ಜಾಗ ದೃಢಪಟ್ಟಿದೆ. 

ಕೃತ್ಯ ನಡೆದ ದಿನ ಧರಿಸಿದ್ದ ಉಡುಪನ್ನೇ ಶರಣಬಸವರಾಜ ಧರಿಸಿ ಉಟ್ಟಬಟ್ಟೆಯಲ್ಲಿಯೇ ಊರು ಬಿಟ್ಟಿದ್ದ. ವೆಲ್ಲೂರಿನ ಸಮೀಪ ಬೀಚ್‌ ದಡದಲ್ಲಿ ಸಿಕ್ಕಿದ್ದ ಟೋಪಿ ಧರಿಸಿ ಕರವಸ್ತ್ರ ಕಟ್ಟಿಕೊಂಡು ಮಲಗಿದ್ದ. ಉಟ್ಟ ಬಟ್ಟೆ, ಫೋನ್‌ ಕರೆಯಿಂದಾಗಿ ಆರೋಪಿ ಪತ್ತೆಯಾಗಿದ್ದಾನೆ.

ಆರೋಪಿ ಬಳಿ ಫೋನ್‌ ಇದ್ದರೆ ತಂತ್ರಜ್ಞಾನ ಯುಗದಲ್ಲಿ ಪತ್ತೆ ಹೆಚ್ಚುವುದು ಕಷ್ಟವಲ್ಲ. ಆದರೆ ಫೋನ್‌ ಬಳಕೆ ಇಲ್ಲದ ಕಾರಣ ಆರೋಪಿ ಪತ್ತೆ ಸವಾಲಾಗಿತ್ತು. ಎಲ್ಲ ಪೊಲೀಸರು ಮತ್ತು ತಾಂತ್ರಿಕ ತಂಡದ ಸಹಕಾರದೊಂದಿಗೆ ಆರೋಪಿ ಪತ್ತೆ ಸಾಧ್ಯವಾಯಿತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರೊಬ್ಬರು ತಿಳಿಸಿದ್ದಾರೆ.

ಗಂಗಾವತಿ: ಪತ್ತೆಯಾಗಿರುವ ಮೂರನೇ ಆರೋಪಿಯ ಶರಣಬಸವರಾಜನನ್ನು ಕರೆದುಕೊಂಡು ಹೋಗಿ ಗಂಗಾವತಿ ತಾಲ್ಲೂಕಿನ ಸಾಣಾಪುರದ ಸಮೀಪ ಘಟನೆ ನಡೆದ ಸ್ಥಳ ಮಹಜರು ಮಾಡಲಾಯಿತು. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

More articles

Latest article