ಧರ್ಮಸ್ಥಳದ ಸೌಜನ್ಯ ಪ್ರಕರಣ: ಸಮೀರ್ ಬೆಂಬಲಕ್ಕೆ ಹೈಕೋರ್ಟ್;‌ ಅರೆಸ್ಟ್‌ ಮಾಡದಂತೆ ಪೊಲೀಸರಿಗೆ ತಾಕೀತು

Most read

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣ ಕುರಿತು ಯೂ ಟ್ಯೂಬ್ ವಿಡಿಯೋ ಮಾಡಿದ್ದ ಸಮೀರ್‌ ಎಂಡಿ ಅವರಿಗೆ ಹೈಕೋರ್ಟ್‌ ನಲ್ಲಿ ಬಿಗ್‌ ರಿಲೀಫ್‌ ಸಿಕ್ಕಿದೆ. ಸಮೀರ್‌ ಗೆ ನೀಡಿರುವ ನೋಟಿಸ್‌ ಮತ್ತು ಬಂಧನ ಕುರಿತ ಪ್ರಕಣದ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆ ನಡೆಸಿದ ಹೈಕೋರ್ಟ್‌ ಸಮೀರ್ ಅವರನ್ನು ಪೊಲೀಸ್‌ ಠಾಣೆಗೆ ಕರೆಯುವ ಹಾಗಿಲ್ಲ, ಬಂಧಿಸುವಂತೆಯೂ ಇಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹಾಗೆಯೇ ನೋಟಿಸ್‌ ಕೊಟ್ಟ ಪೊಲೀಸರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ ಎಂದು ಸಮೀರ್‌ ಆಪ್ತ ಗಿರೀಶ್‌ ಮಟ್ಟೆಣ್ಣನವರ್‌ ತಿಳಿಸಿದ್ದಾರೆ.

ಸಮೀರ್ ವಿರುದ್ಧ ಬಳ್ಳಾರಿ ಕೌಲ್‌ ಬಜಾರ್‌ ಪೊಲೀಸ್‌ ಸ್ಟೇಷನ್‌ ನಲ್ಲಿ ಎಫ್‌ ಐಆರ್‌ ದಾಖಲಾಗಿದೆ. ಠಾಣೆಯ ಇನ್‌ ಸ್ಪೆಕ್ಟರ್ ಎಂ.ನಿಂಗಪ್ಪ ಅವರೇ ಸ್ವತಃ ದೂರು ನೀಡಿದ್ದಾರೆ. ಫೆ. 27ರಂದು ಸಮೀರ್‌ ಅವರು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಊರಿಗೆ ದೊಡ್ಡವರೇ ಕೊಲೆ ಮಾಡಿದರಾ ? ಎಂಬ ಶೀರ್ಷಿಕೆಯಡಿಯಲ್ಲಿಸುಮಾರು 40 ನಿಮಿಷಗಳ ವಿಡಿಯೋ ಅಪ್‌ ಲೋಡ್‌ ಮಾಡಿದ್ದಾರೆ. ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದವರ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಲಾಗಿದೆ. ಸೌಜನ್ಯ ಪ್ರಕರಣ, ನಾರಾಯಣ ಮತ್ತು ಯಮುನಾ ಪ್ರಕರಣ, ವೇದವಲ್ಲಿ, ಬ್ಯಾಂಕ್ ಮ್ಯಾನೇಜರ್ , ಪದ್ಮಲತಾ ಮತ್ತು ರವಿ ಪೂಜಾರಿ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣಗಳಲ್ಲಿ ನೇರವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿರುತ್ತಾರೆಂದು ಆರೋಪಿಸಿರುವುದು ಕಂಡು ಬರುತ್ತದೆ ಎಂದು ಇನ್‌ ಸ್ಪೆಕ್ಟರ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಈ ನಡುವೆ ಎಡಿಜಿಪಿ ( ಕಾನೂನು ಮತ್ತು ಸುವ್ಯವಸ್ಥೆ) ಅವರು ಆದೇಶವೊಂದನ್ನು ಹೊರಡಿಸಿ Social Media Monitoring Cell ಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈ ಆದೇಶದ ಪ್ರತಿ ನಿನ್ನೆ ರಾತ್ರಿಯಿಂದಲೇ ಹರಿದಾಡುತ್ತಿದೆ. ಈ ಆದೇಶದಲ್ಲಿ “ಸಮೀರ್ ವೀಡಿಯೊದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಸೆಲ್ ಅನ್ನು ಚುರುಕುಗೊಳಿಸಿ ಕ್ರಮ ಕೈಗೊಳ್ಳಬೇಕು” ಎಂದು ಹೇಳಿರುವುದು ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

ಸಮೀರ್‌ ತಮ್ಮ ವಿಡಿಯೋದಲ್ಲಿ ಈ ಹಿಂದೆ ನಡೆದ ಘಟನಾವಳಿಗಳನ್ನು ವಿವರಿಸಿದ್ದಾರೆಯೇ ಹೊರತು ಎಲ್ಲಿಯೂ ಉದ್ವೇಗಕ್ಕೆ ಒಳಗಾಗಿ ಹೇಳಿಕೆಗಳನ್ನು ನೀಡಿಲ್ಲ. ಸುಮಾರು 1.20 ಕೋಟಿ ವೀಕ್ಷಕರು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಮಂದಿ ಶೇರ್‌ ಮಾಡಿದ್ದು ಲೈಕ್‌ ಒತ್ತಿದವರ ಸಂಖ್ಯೆ ಅಪಾರವಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಮೃತ ಸೌಜನ್ಯ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಕಾಡಿನಲ್ಲಿ ಈ ಕೃತ್ಯ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿ ಜನಾಕ್ರೋಶ ವ್ಯಕ್ತವಾಗಿತ್ತು.

ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮಾನಸಿಕ ಸ್ಥಿಮಿತ ಕಳೆದುಕೊಂಡು ಅತ್ಯಾಚಾರ ಎಸಗಿದ್ದ ಎನ್ನಲಾಗಿತ್ತು. ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ, ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿ, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿತ್ತು. ಹಾಗಾದರೆ, ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆಗೈದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

More articles

Latest article