ಮಂಡ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಕೋಟಿ ರೂ. ಖರ್ಚು: ವಿರೋಧ ವ್ಯಕ್ತ!

Most read

ಒಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಎಷ್ಟು ಹಣವನ್ನು ಖರ್ಚು ಮಾಡಬಹುದು? ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಒಂದು ಕೋಟಿ ರೂ. ವೆಚ್ಚ ಮಾಡುವ ಪ್ರಸ್ತಾವನೆಯನ್ನು ಸಿದ್ದಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಎರಡು ಮೂರು ಗಂಟೆಗಳ ಮೆರವಣಿಗೆಗೆ ಇಷ್ಟು ಹಣ ಖರ್ಚು ಮಾಡಬೇಕೇ ಎಂದು ಸಾಹಿತ್ಯಾಸಕ್ತರು ಪ್ರಶ್ನಿಸುತ್ತಿದ್ದಾರೆ.

ಮಂಡ್ಯದಲ್ಲಿ ಡಿಸೆಂಬರ್‌ 20 ರಿಂದ ಮೂರು ದಿನ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ಸಾಗಿವೆ. ಎರಡು ತಿಂಗಳು ಮಾತ್ರ ಸಮ್ಮೇಳನಕ್ಕೆ ಬಾಕಿಯಿದ್ದು, ಹತ್ತಕ್ಕೂ ಹೆಚ್ಚು ಸಮಿತಿಗಳು ಸಮ್ಮೇಳನದ ಯಶಸ್ಸಿಗೆ ದುಡಿಯುತ್ತಿವೆ. ಈ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಿದೆ.


ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಮುಖ ಭಾಗ. ಇದಕ್ಕಾಗಿಯೇ ಬರೋಬ್ಬರಿ 1 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ದವಾಗಿದೆ ಎಂದು ತಿಳಿದು ಬಂದಿದೆ. ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಬಜೆಟ್ ಅನ್ನು ಮೆರವಣಿಗೆ ಸಮಿತಿಯ ಉಪ ಸಮಿತಿಗಳು ಮಂಡಿಸಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಅ. 23ರಂದು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಅವರು ಸಮಿತಿಗೆ ವಶ್ಯಕತೆ ಇರುವ ಅನುದಾನಕ್ಕೆ ಬೇಡಿಕೆ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಪ ಸಮಿತಿಗಳ ಸಂಚಾಲಕರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ 10 ವಿವಿಧ ಉಪ ಸಮಿತಿಗಳ ಸಂಚಾಲಕರು ತಮ್ಮ ತಮ್ಮ ಸಮಿತಿಗಳಿಗೆ ಬೇಕಾಗಬಹುದಾದ ಅಂದಾಜು ವೆಚ್ಚದ ಮಾಹಿತಿಯನ್ನು ಮಂಡಿಸಿದ್ದಾರೆ.

ಕಲಾತಂಡಗಳ ಆಯ್ಕೆ ಉಪ ಸಮಿತಿ 31.45 ಲಕ್ಷ ರೂ; ಸ್ತಬ್ಧಚಿತ್ರ ಉಪ ಸಮಿತಿ 21 ಲಕ್ಷ ರೂ; ಪೂರ್ಣಕುಂಭ ಉಪ ಸಮಿತಿ 1 ಲಕ್ಷ ರೂ; ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ 1.30 ಲಕ್ಷ ರೂ ; ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಎನ್.ಸಿ.ಸಿ. ತಂಡಗಳ ಸಂಯೋಜನಾ ಉಪ ಸಮಿತಿ 1.50 ಲಕ್ಷ ರೂ; ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ ಲಕ್ಷ ರೂ.; ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ ರೂ. 1.75 ಲಕ್ಷ; ಸಂಘ-ಸಂಸ್ಥೆಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ; ಶಾಲಾ-ಕಾಲೇಜುಗಳ ಸಂಯೋಜನಾ ಉಪ ಸಮಿತಿ ರೂ. 50 ಸಾವಿರ ಹಾಗೂ ಸಮ್ಮೇಳನ ಅಧ್ಯಕ್ಷರ ರಥ, ಜಿಲ್ಲಾ ಅಧ್ಯಕ್ಷರ ರಥ ಸೇರಿದಂತೆ ಇನ್ನಿತರೆ ವೆಚ್ಚ ಸೇರಿ ರೂ. 30 ಲಕ್ಷ ಸೇರಿದಂತೆ ಒಟ್ಟು 95 ಲಕ್ಷ ರೂಪಾಯಿಗಳ ತಾತ್ಕಾಲಿಕ ಅಂದಾಜು ವೆಚ್ಚದ ಮಾಹಿತಿಯನ್ನು ಉಪ ಸಮಿತಿಗಳ ಸಂಚಾಲಕರು ಮಂಡಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಅಂತಿಮವಾಗಿ ಸಮಿತಿ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ ಹಲವಾರು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ಸಮಿತಿಗೆ ಎಷ್ಟು ಅನುದಾನ ನೀಡಲಾಗುತ್ತದೆ ಎಂಬ ಮಾಹಿತಿಯಿಲ್ಲ. ಆದರೂ ಸಭೆ ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಲಾಗುತ್ತದೆ. ಹೆಚ್ಚಿನ ಅನುದಾನ ಒದಗಿಸುವಂತೆಯೂ ಕೋರಲಾಗುವುದು ಎಂದು ತಿಳಿಸಿದ್ದಾರೆ. ಏನೇ ಆದರೂ ಸಾಹಿತಿಯ ಮೆರವಣಿಗೆ ಇಷ್ಟೊಂದು ದುಬಾರಿ ಆಗಬಾರದು ಅಲ್ಲವೇ ?

More articles

Latest article