ನೈಸರ್ಗಿಕ ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ ವಿಶ್ವಬ್ಯಾಂಕ್ನಿಂದ 3,500 ಕೋಟಿ ಹೂಡಿಕೆ: ಕೃಷ್ಣ ಬೈರೇಗೌಡ

Most read

ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಉನ್ನತೀಕರಣಕ್ಕಾಗಿ ವಿಶ್ವಬ್ಯಾಂಕ್ ರೂ. 2000 ಕೋಟಿ ಹೂಡಿಕೆ ಮಾಡಲಿದ್ದು, ರಾಜ್ಯ ಸರ್ಕಾರವೂ ರೂ.1,500 ಕೋಟಿ ಹೂಡಲಿದೆ. ವಿಪತ್ತು ನಿರ್ವಹಣೆಗೆ ವಿಶ್ವಬ್ಯಾಂಕ್ ಹೊಸ ತಂತ್ರಜ್ಞಾನಗಳನ್ನೊಳಗೊಂಡ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ರೂ. 3500 ಕೋಟಿಯ ಈ ಯೋಜನೆ 2025 ಮಾರ್ಚ್ನಿಂದ ವಿಶ್ವಬ್ಯಾಂಕ್ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಾಲ್ತಿಗೆ ಬರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಶ್ವಬ್ಯಾಂಕ್, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಪ್ರತಿನಿಧಿಗಳ ಜೊತೆಗೆ ಗುರುವಾರ ವಿಕಾಸಸೌಧದಲ್ಲಿ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ವಿಶ್ವಬ್ಯಾಂಕ್ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಯ ನೀಲನಕ್ಷೆಯನ್ನು ಪ್ರಸ್ತುತಪಡಿಸಿದರು.

ನಂತರ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, “ರಾಜ್ಯವು ಪ್ರತಿವರ್ಷ ಬರ ಅಥವಾ ನೆರೆ ಪರಿಸ್ಥಿತಿಯನ್ನು ಎದುರಿಸುವುದು ಸಾಮಾನ್ಯ ಸಂಗತಿಯಾಗಿದೆ. ಇಂತಹ ರಾಷ್ಟ್ರೀಯ ವಿಪತ್ತುಗಳನ್ನು ನವೀನ ತಂತ್ರಜ್ಞಾನಗಳ ಮೂಲಕ ಎದುರಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಕಳೆದ ಮೇ ತಿಂಗಳಲ್ಲಿ ವಿಶ್ವಬ್ಯಾಂಕ್ ಭೂ ಸಮ್ಮೇಳದಲ್ಲಿ ಸ್ವತಃ ತಾವು ಪಾಲ್ಗೊಂಡದ್ದು ಇಂದು ಫಲ ನೀಡಿದೆ” ಎಂದು ಅಭಿಪ್ರಾಯಪಟ್ಟರು.

“ಮಾರ್ಚ್ 2025ರಿಂದ ಮುಂದಿನ ಏಳು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್ ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ ರೂ. 2,000 ಕೋಟಿ ಹೂಡಲಿದ್ದು, ಕರ್ನಾಟಕ ಸರ್ಕಾರವೂ ರೂ.1,500 ಕೋಟಿ ಹೂಡಿಕೆ ಮಾಡಲಿದೆ. ಆದರೆ, ಬರ-ನೆರೆ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೆಲಸ ಆರಂಭಿಸಿದ್ದು, ತನ್ನ ಪಾಲಿನ ಹಣವನ್ನು ವಿನಿಯೋಗಿಸಿ ನೀರಿನ ಸಂಸ್ಕರಣೆ ಹಾಗೂ ಕೆರೆಗಳ ಜಾಲ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ ಎಂದರು.

ವಿಶ್ವಬ್ಯಾಂಕ್ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಸಚಿವರು. “ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಕಳೆದೊಂದು ವರ್ಷಗಳಿಂದ ಶ್ರಮವಹಿಸಿ ಕೆರೆಗಳ ಜಾಲವನ್ನು (Lake Network) ನಿರ್ಮಿಸಲಾಗಿದೆ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಿದ್ದು, ಇದರ ಮೂಲಕ ಹೆಚ್ಚುವರಿ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಒಂದು ಕೆರೆ ತುಂಬಿದ ಕೂಡಲೇ ಆ ನೀರನ್ನು ಮತ್ತೊಂದು ಕೆರೆಗೆ ಹರಿಸುವ ಆ ಮೂಲಕ ಪ್ರವಾಹ ಸ್ಥಿತಿಯನ್ನು ನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ” ಎಂದು ಅವರು ವಿವರಿಸಿದರು.

ಇದಲ್ಲದೆ, “ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಪಕ್ಕದ ಜಿಲ್ಲೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ನೆರೆ ಜಿಲ್ಲೆಗಳ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಕೃಷಿ ವಿಭಾಗದಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಪಾಲಿಕೆ (BBMP) ಮತ್ತು ಜಲಮಂಡಳಿ (BWSSB) ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪ್ರವಾಹ ಸ್ಥಿತಿಯನ್ನು ಒಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಬೇಕು” ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ನೀರಿನ ಲೆಕ್ಕಪರಿಶೋಧನೆಗೆ ಸೂಚನೆ (Water Audit):

ಕರ್ನಾಟಕದಲ್ಲಿ ಅಧ್ಯಯನ ಭಾಗವಾಗಿ ಮೊದಲ ನೀರಿನ ಲೆಕ್ಕಪರಿಶೋಧನೆ ನಡೆಯಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ವಿಶ್ವಬ್ಯಾಂಕ್ ಪ್ರತಿನಿಧಿಗಳ ಎದುರು ಒತ್ತಾಯಿಸಿದರು.

ಈ ಬಗ್ಗೆ ವಿವರಿಸಿದ ಸಚಿವರು, “ ರಾಜ್ಯದಲ್ಲಿ ಶೇ.20 ರಷ್ಟು ನೀರು ಕುಡಿಯಲು ಬಳಕೆಯಾದರೆ, ಶೇ.80 ರಷ್ಟು ನೀರು ಕೃಷಿ ಕೆಲಸಕ್ಕೆ ಸೀಮಿತವಾಗಿದೆ. ಈ ಪೈಕಿ ಹೆಚ್ಚು ನೀರನ್ನು ಭತ್ತ ಮತ್ತು ಕಬ್ಬು ಬೆಳೆಗೆ ಬಳಸಲಾಗುತ್ತದೆ. ಆದರೆ, ಯಾವ ರೈತ ಎಷ್ಟು ನೀರು ಬಳಸ್ತಾನೆ? ಯಾರಿಗೆ ನೀರಿಲ್ಲ? ಯಾವ ಭಾಗದಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆ? ರೈತರು ಬಳಸುವ ನೀರಿನ ಪೈಕಿ ಅಂತರ್ಜಲದ ಪ್ರಮಾಣ ಎಷ್ಟು? ಎಂಬ ಬಗ್ಗೆ ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ” ಎಂದು ವಿಷಾದಿಸಿದರು.

ಅಲ್ಲದೆ, “ಇಂತಹದ್ದೊಂದು ಅಧ್ಯಯನ-ಸಂಶೋಧನೆ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಅಂತಹ ಅಧ್ಯಯನವನ್ನು ಆಧರಿಸಿ ಕಾನೂನು ರಚಿಸಲು ಅಥವಾ ನೀತಿಗಳನ್ನು ರೂಪಿಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ನೇತೃತ್ವದ ಈ ಹೊಸ ಯೋಜನೆಯ ಅಡಿಯಲ್ಲಿ ನೀರಿನ ಲೆಕ್ಕಪರಿಶೋಧನೆ (Water Audit) ನಡೆಯಬೇಕು” ಎಂದು ಒತ್ತಾಯಿಸಿದರು.

ನೆರೆಗಿಂತಲೂ ಬರವೇ ಚಿಂತೆ..!

ರಾಜ್ಯದಲ್ಲಿ ನೆರೆ ಪರಿಸ್ಥಿತಿಗಿಂತಲೂ ಬರವೇ ದೊಡ್ಡ ಸಮಸ್ಯೆಯಾಗಿದೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಅವರು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ ನೆರೆ ಪರಿಸ್ಥಿತಿಗಿಂತ ಬರವೇ ಹೆಚ್ಚಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸುವುದು ಯಾವುದೇ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಬರ ಸ್ಥಿತಿಯನ್ನು ಪರಿಣಾಮಕಾರಿ ಎದುರಿಸುವ ಹಾಗೂ ದೀರ್ಘಾಕಾಲದ ಬರ ನಿರ್ವಹಣೆಗೆ ಶಾಶ್ವತ-ಸುಸ್ಥಿರ ಪರಿಹರ ಹುಡುಕುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಅಧ್ಯಯನವೂ ನಡೆಯಬೇಕು” ಎಂದರು

More articles

Latest article