ಬಲ ಸಿದ್ಧಾಂತದವರು ಮೂಲೆಮುರುಕಣಿಯನ್ನೂ ಹೊಕ್ಕು ತಮ್ಮ ಆಲೋಚನೆಗಳನ್ನು ಹರಡುತ್ತಿರುವಾಗ ತೆರೆಮರೆ ಬಿಡಿ, ಕಣ್ಣೆದುರಲ್ಲೇ ಕುತ್ತಿಗೆ ಹಿಸುಕುವ ಕೆಲಸ ನಡೆಯುತ್ತಿದ್ದರೂ ಜನರಿಗೆ ಕಾಣುವುದೇ ಇಲ್ಲ. ಬದಲಿಗೆ ಅದನ್ನು ಸಮರ್ಥಿಸುವ ಮನಃಸ್ಥಿತಿ ಬೆಳೆಯುತ್ತಿದೆ. ಇದು ವಿಷಾದನೀಯ. ತೆರೆಮರೆಯಲ್ಲಿ ನಡೆವ ರಾಜಕೀಯವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ, ಪ್ರತಿಭಟಿಸುವ ಕೆಲಸ ತುರ್ತಾಗಿ ಆಗಬೇಕಿದೆ – ವೃಂದಾ ಹೆಗಡೆ, ಅತಿಥಿ ಉಪನ್ಯಾಸಕರು, ಸಾಗರ.
ಒಬ್ಬ ಶ್ರಮಿಕ. ಸ್ವಂತ ಕಷ್ಟಪಟ್ಟು ದುಡಿದು ತಕ್ಕಮಟ್ಟಿಗೆ ಬದುಕನ್ನು ಹಸನು ಮಾಡಿಕೊಂಡವನು. ಹೊಲವನ್ನು ಅಡಿಕೆ ತೋಟವಾಗಿ ಮಾರ್ಪಡಿಸಿ ಕೊಂಡವನು. ತಾನು ಶಾಲೆಗೆ ಹೋಗದ ಕಾರಣ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದುಡ್ಡು ತೆತ್ತು ಕಳಿಸಿದವನು.
‘ಈ ಸರ್ಕಾರ ಏನೂ ಉಪಯೋಗ ಇಲ್ಲ. ಅಭಿವೃದ್ಧಿ ಕಾರ್ಯ ಎಂತದೂ ಮಾಡಲ್ಲ.’
ಭಾಗ್ಯ ಲಕ್ಷ್ಮಿ ಬರ್ತಿದೀಯಾ? ಹೆಂಗಸ್ರಿಗೆ.
ನಂಗೊತ್ತಿಲ್ಲ. ಒಂದ್ ತಿಂಗ್ಳು ಬಂದ್ರೆ ಮತ್ತೊಂದ್ ತಿಂಗ್ಳು ಇಲ್ರೀ, ಎಂತದೋ ಹೆಂಗಸ್ರ ವಿಷ್ಯ ನಂಗೊತ್ತಿಲ್ಲ.
ಕರೆಂಟ್ ಬಿಲ್ಲು ಮಾಫಿನಾ?
ಹ್ಞಾ. ಆ ಬಿಲ್ ಬರಲ್ಲ.
ಬಸ್ ಫ್ರೀನಾ?
ಅದೆಂಥದ್ರೀ? ಎಲ್ಲಾ ಮಹಿಳೆಯರಿಗೆ ಬ್ಯಾಡಿತ್ತು. ವಿದ್ಯಾರ್ಥಿಗಳಿಗೆ, ಗಂಡುಮಕ್ಕಳಿಗೂ ಕೊಟ್ಟಿದ್ರೆ ಒಳ್ಳೇದಿತ್ತು. ಆದ್ರೂ ಹಿಂದಿನ್ ಸರ್ಕಾರ ಏನೇನೋ ಅಭಿವೃದ್ಧಿ ಮಾಡಿದ್ರು.
ಏನ್ ಅಭಿವೃದ್ಧಿ?
ಎಂತಾ ಅಭಿವೃದ್ಧಿ ಅಂತಾರಲ್ರೀ. ವಿವರ್ಸೋ ಅಷ್ಟು ನಂಗ್ಬರದಿಲ್ಲ. ನೀವು ತಿಳ್ದೋರು. ನಿಮ್ಗೆ ಗೊತ್ತೖತಲಾ. ಅಂಥಾ ಅಭಿವೃದ್ಧಿ ಇವ್ರೇನೂ ಮಾಡಲ್ಲ.
ನಿಮ್ಮದೇ ಅಭಿವೃದ್ಧಿ ಮಾಡಕ್ಕೆ ಕೇಂದ್ರದವ್ರು ಪಾಲಿನ್ ದುಡ್ಡೇ ಕೊಡಲ್ವಲ್ಲಾ?
ಹೋಗ್ಲಿ ಬಿಡ್ರಿ. ಮಗ ಸೊಸೆ ಎಲ್ಲಾ ಆರಾಮಿದಾರಾ? ವರ್ಷಕ್ಕೊಂದ್ಸಾರಿ ಮನೆಗ್ ಬರ್ತಾರಾ? ಫೋನ್ ಮಾಡ್ತಾರ?
ತೆರೆಮರೆಯ ನಾಟಕ ಗೊತ್ತಾಗುವುದಿಲ್ಲ ಅನ್ನುವುದಕ್ಕಿಂತಲೂ ನೋಡುವ ಮನಸ್ಸಿಲ್ಲ. ಶ್ರಮಿಕರೇ ಹೀಗೆ ಆಲೋಚಿಸಿದರೆ, ಯಾವುದೋ ಕಳ್ಳಾಟಕ್ಕೆ ಮರುಳಾದರೆ ಇನ್ನು ಹೊಟ್ಟೆ ತುಂಬಿದವರ ಕಥೆ ಏನು?
ಒಬ್ಬರ ಆತ್ಮಶಕ್ತಿ ಕುಗ್ಗಿಸಲು ಬಲವಾದ ಅಸ್ತ್ರ ಯಾವುದೆಂದರೆ ಅವರ ಹೊಟ್ಟೆಯ ಮೇಲೆ ಹೊಡೆಯುವುದು. ಕೇಂದ್ರ ಸರ್ಕಾರ ಬಿಜೆಪಿಯೇತರ ಪಕ್ಷಗಳಿರುವ ರಾಜ್ಯಗಳ ಹೊಟ್ಟೆಯ ಮೇಲೆ ನಿರಂತರವಾಗಿ ಹೊಡೆಯುತ್ತಿದೆ.
ತಮಿಳರ ದ್ರಾವಿಡ ಅಸ್ಮಿತೆಯ ಮಹತ್ವವನ್ನು ಚಿವುಟುವುದರ ಜೊತೆ ಅವರ ಆರ್ಥಿಕ ಶಕ್ತಿಗೂ ವಿವಿಧ ರೂಪದ ಕಾನೂನು ತಿದ್ದುಪಡಿ ತಂದು ಕುಗ್ಗಿಸಲು ನೋಡುವುದನ್ನು ಕಂಡಿದ್ದೇವೆ. ಈಗ ಕೇರಳದ ಹೊಟ್ಟೆ ಮೇಲೆ ಹೊಡೆವ ಪರಿ ನೋಡೋಣ.
10 ಜೂನ್ 2025 ರ ದ ಹಿಂದೂ ಪತ್ರಿಕೆಯ ಸ್ಟೇಟ್ ಆಫ್ ಪ್ಲೇ ಅಂಕಣದಲ್ಲಿ ಟಿಕಿ ರಜ್ವಿ “ವಿದೇಶಿ ನೆರವು ಮತ್ತು ಹಣಕಾಸು ಸಂಕಟಗಳು” ಎಂಬ ಶೀರ್ಷಿಕೆಯಡಿ ಬರೆಯುತ್ತಾರೆ, ಈ ಅಂಕಣ ಬರಹದ ದಿನಾಂಕದಿಂದ ಒಂದು ವಾರದ ಹಿಂದೆ ಕೇಂದ್ರ ಸರ್ಕಾರ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿದೇಶಿ ನೆರವು ಪಡೆಯಲು FCRA (Foreign Contribution Regulation Act) ಮೂಲಕ ಅನುಮತಿ ಕೊಟ್ಟ ವರದಿ ಬಂದಿತು. ತಕ್ಷಣ ಕೇರಳದ ಸಿಪಿಐ(ಎಮ್) ಸರ್ಕಾರ ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯ ಇನ್ನೊಂದು ನಡೆ ಎಂದು ಗುರುತಿಸಿತು. 2018ರಲ್ಲಿ ತನ್ನ ರಾಜ್ಯ ನೆರೆ ಹಾವಳಿಯಿಂದ ತತ್ತರಿಸಿದಾಗ ಇದೇ ಕೇಂದ್ರ ಸರ್ಕಾರ ಕೇರಳ ಸರ್ಕಾರದ ವಿದೇಶಿ ನೆರವು ಪಡೆಯಲು ಕೋರಿದ ಅನುಮತಿಯನ್ನು ನಿರಾಕರಿಸಿದ್ದನ್ನು ನೆನಪಿಸಿಕೊಂಡಿತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಸಂಕಷ್ಟವನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ನೆನಪಿಸಿಕೊಂಡಿತು. ಕೇರಳದ ಅರ್ಥಮಂತ್ರಿ ಕೆ ಎನ್ ಬಾಲಗೋಪಾಲ್ “ಮಹಾರಾಷ್ಟ್ರಕ್ಕೆ ಕೊಟ್ಟ ಅನುಮತಿಯನ್ನು ಅನುಮೋದಿಸುವುದರ ಜೊತೆಗೆ ಕೇಂದ್ರ ಸರ್ಕಾರ ಘೋರ ಸಂಕಷ್ಟದ ಹೊತ್ತಿನಲ್ಲಿ ಅನುಸರಿಸುವ ರಾಜಕೀಯ ಪಕ್ಷಪಾತ ನೀತಿ ಕೇಂದ್ರಕ್ಕೆ ಹೇಳಿಸಿದ್ದಲ್ಲ ಎಂದೇ ತನ್ನ ರಾಜ್ಯ ನಂಬುತ್ತದೆ” ಎಂದು ಹೇಳುತ್ತಾರೆ. ಕೇಂದ್ರ ಎಲ್ಲಾ ರಾಜ್ಯಗಳನ್ನೂ ಸಮಾನವಾಗಿ ನಡೆಸಿಕೊಳ್ಳಬೇಕು. ಆದರೆ ದುರದೃಷ್ಟ ಏನೆಂದರೆ ವಿಪತ್ತಿನ ಪ್ರಮಾಣಕ್ಕಿಂತ “ರಾಜಕೀಯ” ಇಂಥಾ ವಿಷಯಗಳಲ್ಲಿ ನೆರವಿನ ಅಳತೆಗೋಲಾಗಿರುವುದು.
ಅಂಥಾ ದೊಡ್ಡ ವಿಪತ್ತಿನ ಕಾಲದಲ್ಲಿ ವಿದೇಶೀ ನೆರವು (ಯುಎಇ ಕೊಡಲು ಮುಂದೆ ಬಂದ 700 ಕೋಟಿ ರೂಪಾಯಿಗಳನ್ನೂ) ಪಡೆಯಲು ನೀತಿ ನಿಯಮಗಳ ನೆಪವೊಡ್ಡಿ ಕೇರಳ ಸರ್ಕಾರಕ್ಕೆ ಅಡ್ಡಗಾಲು ಹಾಕಿದ ಕೇಂದ್ರ ಸರ್ಕಾರ ಈಗ ಬಿಜೆಪಿಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಮಹಾಯುತಿ ಸರ್ಕಾರಕ್ಕೆ ಅನುಮತಿಯನ್ನು ಯಾವ ಷರತ್ತೂ ಇಲ್ಲದೆ ಕೊಡುತ್ತದೆಯೆಂದರೆ???
ಕೇಂದ್ರದ ಈ ನಡೆ ಈಗಿನದ್ದಲ್ಲ. ಕೇರಳ ತನ್ನ ಪಾಲಿನ ಹಣವನ್ನು ವಂಚಿಸಿದ್ದರ ಬಗ್ಗೆ ದೂರು ಹೇಳುತ್ತಲೇ ಇದೆ. ಸುಪ್ರೀಂ ಕೋರ್ಟಿಗೂ ಹೋಗಿದೆ. ರಾಜಕೀಯ ವಲಯದಲ್ಲಿ ಪದೇಪದೇ ತನ್ನ ಆರ್ಥಿಕ ಬದುಕಿನ ಕುತ್ತಿಗೆ ಹಿಚುಕುವ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿದೆ. ಭಾರತದ ಫೆಡರಲ್ ವ್ಯವಸ್ಥೆಯನ್ನೇ ಹಾಳುಗೆಡವುತ್ತಿರುವ ಕೇಂದ್ರದ ತಾರತಮ್ಯ ನಡೆಯನ್ನು ಮತ್ತೆ ಮತ್ತೆ ಬೆಟ್ಟು ಮಾಡಿ ತೋರಿಸುತ್ತಿದೆ. ಎಷ್ಟು ಸಾರಿ ಪರಿಸ್ಥಿತಿ ವಿವರಿಸಿ ಮನವಿ ಸಲ್ಲಿಸಿದರೂ ಕೇಂದ್ರ ಇಂಚಷ್ಟೂ ಗಮನಹರಿಸುತ್ತಿಲ್ಲ ಬದಲು ದಿವ್ಯ ನಿರ್ಲಕ್ಷ ತೋರುತ್ತಿದೆ.!!!!
ಈ ತಾರತಮ್ಯದ ಇನ್ನೊಂದು ಉದಾಹರಣೆ ದೆಹಲಿ. 4 ಜೂನ್ 2025 ರ ಸ್ಟೇಟ್ ಆಫ್ ಪ್ಲೇ ಅಂಕಣದಲ್ಲಿ ನಿಖಿಲ್ ಎಂ ಬಾಬು ಬರೆಯುತ್ತಾರೆ-
26 ವರ್ಷದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ದೆಹಲಿಯಲ್ಲಿ ಮೊದಲ ಬಾರಿಗೆ ಎಂಎಲ್ಎ ಆಗಿರುವ ರೇಖಾ ಗುಪ್ತಾರನ್ನು ಮುಖ್ಯಮಂತ್ರಿ ಮಾಡಿದೆ. ನೂರುದಿನ ಪೂರೈಸಿದ ಮಿಸ್ ಗುಪ್ತಾ ಪುರುಷ ಪ್ರಧಾನ ಪಕ್ಷದ ಸರ್ಕಾರದಲ್ಲಿ ನಿಧಾನವಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿದ್ದಾಗ ಎಬಿವಿಪಿ ಯ ಸದಸ್ಯೆಯಾಗುವುದರಿಂದ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ ರೇಖಾ ಗುಪ್ತಾ ಮುಖ್ಯಮಂತ್ರಿ ಯಾಗಿ ಹತ್ತು ಪೋರ್ಟ್ಫೋಲಿಯೋಗಳನ್ನು ಹೊಂದಿದ್ದಾರೆ!!! ಎಲ್ಲಾ ಕ್ಷೇತ್ರಗಳಿಗೆ ಭೇಟಿ ಕೊಡುವ ಅವರು ಸಮಸ್ಯೆಗಳ ಗುರುತಿಸಿ ಅದರ ಪರಿಹಾರಕ್ಕೆ ಯೋಜನೆಗಳನ್ನು ಹಾಕಿಕೊಳ್ಳುತ್ತಾ ಹಗಲಿರುಳು ಕೆಲಸ ಮಾಡುತ್ತಾರೆ. ಪ್ರಾರಂಭದಲ್ಲಂತೂ ದಿನಕ್ಕೆ 12 ರಿಂದ 14 ಮೀಟಿಂಗ್ ಗಳನ್ನು ಮಾಡುತ್ತಿದ್ದರೆಂದು ಅಧಿಕಾರಿಗಳು ಹೇಳುತ್ತಾರೆ. ಸರ್ಕಾರದ ನಿವಾಸದಲ್ಲಿ ವಾಸಿಸದೆ ಅವರ ಖಾಸಗಿ ಮನೆಯಲ್ಲೇ ಇರುತ್ತಾರೆ. ಜನತಾದರ್ಶನದ ಕಾರ್ಯಕ್ರಮಕ್ಕೆ ಅವರ ಮನೆಯ ಮುಂದೆ ಸಾಲುಗಟ್ಟಿ ಜನ ನಿಂತಿರುತ್ತಾರೆ.
ಇಲ್ಲಿಯವರೆಗೆ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಸ್ವಲ್ಪವೂ ಸ್ಪಂದಿಸದ ಕೇಂದ್ರ ಸರ್ಕಾರ ಈಗ ಹೆಚ್ಚಿನ ಆರ್ಥಿಕ ನೆರವು ಕೊಡುವುದಾಗಿ ಭರವಸೆ ನೀಡುತ್ತದೆ!!! ಅದರ ಅಭಯಹಸ್ತದ ಆಧಾರದ ಮೇಲೆ ಮುಖ್ಯಮಂತ್ರಿ ರೇಖಾರವರು ದೆಹಲಿಯ ಇತಿಹಾಸದಲ್ಲೇ ಹೆಚ್ಚಿನದಾದ ಒಂದು ಲಕ್ಷ ಕೋಟಿಯ ಬಜೆಟ್ ಮಂಡಿಸುತ್ತಾರೆ!!! ಆರ್ಥಿಕ ನೆರವು ನೀಡುವುದರ ಜೊತೆಗೆ ದೆಹಲಿ ಸರ್ಕಾರ ಮಂಡಿಸುವ ಎಲ್ಲಾ ಯೋಜನೆಗಳಿಗೂ ಸಮ್ಮತಿ ಮತ್ತು ಸಹಾಯ ಕೇಂದ್ರ ಸರ್ಕಾರ ದೊರಕಿಸುತ್ತದೆ.!!!
ಮುಖ್ಯಮಂತ್ರಿ ಕಾರ್ಯಾಲಯ(CMO) ದ ಕಾರ್ಯವೈಖರಿ ರೇಖಾಗುಪ್ತ ಬಂದಾಗಿಂದ ಬದಲಾಗಿದೆಯೆಂದು ಅಧಿಕಾರಿಗಳು ಹೇಳುತ್ತಾರೆ. ನೀತಿ ನಿರ್ಧಾರ(policy decisions)ಗಳ ಕಡತಗಳು ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಬರುತ್ತವೆ, ಉಪ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳು ಕಡತಗಳ ಸಂಕ್ಷಿಪ್ತ ನಿರೂಪಣೆಯನ್ನು(brief) ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಪಟ್ಟ ಕೇಂದ್ರ ಇಲಾಖೆಗಳಿಗೆ ತಾಂತ್ರಿಕ ಸಹಾಯಕ್ಕಾಗಿ ಮಾಡುತ್ತಾರೆ. ಈ ಥರದ ಸಮನ್ವಯತೆ ಆಪ್ ಸರ್ಕಾರ ಇರುವಾಗ ಇರಲಿಲ್ಲ!!! ಆದರೂ ಅಡೆತಡೆಗಳೇನು ಇಲ್ಲ ಅಂತಲ್ಲಾ. ಮುಖ್ಯಮಂತ್ರಿ ಕುರ್ಚಿಯ ಆಕಾಂಕ್ಷಿಗಳು ಹೆಚ್ಚಿದ್ದಾರೆ, ಹಿಂದಿನ ಬಗೆಹರಿಯದ ಸಮಸ್ಯೆಗಳಿವೆ. ಕೆಲವು ಪ್ರತಿಭಟನೆಗಳಾಗುತ್ತಿವೆ. ವಿದ್ಯುತ್ ವ್ಯತ್ಯಯ, ವಿದ್ಯುತ್ ಬೆಲೆ ಏರಿಕೆ, ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಶುಲ್ಕ ಏರಿಕೆ ಹೀಗೆ ಹತ್ತು ಹಲವು ಸಮಸ್ಯೆಗಳು. ನಗರಸಭೆ, ನಗರಪಾಲಿಕೆಗಳ ಚುನಾವಣೆಗಳಲ್ಲೂ ಬಿಜೆಪಿ ಜಯಗಳಿಸಿದ್ದರಿಂದ ಡಬಲ್ ಇಂಜಿನ್ ಸರ್ಕಾರ ರೇಖಾ ಗುಪ್ತರಿಗೆ ಹಣಕಾಸಿನ ಮಾತ್ರವಲ್ಲದೆ ಎಲ್ಲಾ ಥರದ ಕಾನೂನು, ನೈತಿಕ (?)ಸಹಕಾರ ಕೊಡುತ್ತಿದೆ.
ಕೇಂದ್ರ ಸರ್ಕಾರದ ಈ ಕೆಟ್ಟ ರಾಜಕೀಯ ಜನರಿಗೆ ತಟ್ಟದ್ದು ವಿಪರ್ಯಾಸ. ಮೇಲೂ ಕೆಟ್ಟು, ಕೆಳಗೂ ಕೆಟ್ಟ ಕಾಲ ಇದು. ಇಡೀ ವ್ಯವಸ್ಥೆಯೇ ರಿಪೇರಿಯಾಗದಂತೆ ಕೆಟ್ಟು ನಿಂತ ಗಾಡಿಯಾಗಿದೆ. ಹೊಸ ಆಲೋಚನೆಗಳ ಬಿಡಿ ಬಿಡಿ ಭಾಗಗಳನ್ನು ಜೋಡಿಸಿ ಹೊಸ ಗಾಡಿ ತಯಾರಾಗಬೇಕಿದೆ.
ಈ ತೆರೆಮರೆಯಲ್ಲಿ ನಡೆವ ರಾಜಕೀಯವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ, ಪ್ರತಿಭಟಿಸುವ ಕೆಲಸ ಆಗಬೇಕಿದೆ. ಆಗಮಾತ್ರ ಹಿಡಿದ ಅಡ್ಡದಾರಿ ಬಿಟ್ಟು ಸರಿ ಮಾರ್ಗಕ್ಕೆ ಹೊರಳುವ ಅವಕಾಶ ಸಿಗುತ್ತದೆ.
ಹಿಡನ್ ಅಜೆಂಡಾ ಇಟ್ಟುಕೊಂಡು ಯಾವುದೇ ಕೆಟ್ಟ ಉದ್ದೇಶವಿಲ್ಲದ ಸೋಗು ಹಾಕಿ ಜನರಿಗೆ ಅರಿವಳಿಕೆ ಕೊಡುವ ಕೆಲಸ ಮಾತ್ರ ನಿರಂತರವಾಗಿ ಸಾಗಿದೆ. ಉದಾಹರಣೆಗೆ ಒಂದು ಘಟನೆಯನ್ನು ವಿವರಿಸುವೆ. ಒಮ್ಮೆ ಒಂದು ಪತ್ರಿಕೆಯ ( ಬಲಪಂಥೀಯ ಧ್ಯೇಯವನ್ನು ಅತ್ಯಂತ ಕೆಟ್ಟದಾಗಿ, ನೇರಾ ನೇರಾ ತೋರ್ಪಡಿಸುವ ಪತ್ರಿಕೆ) ಸಂಪಾದಕರು ಭೇಟಿ ಮಾಡಿದರು. ಒಂದು ಉದ್ಯೋಗ ಸೃಷ್ಟಿ ಎಂದರು. ಒಂದರಿಂದ ಹತ್ತನೇ ತರಗತಿಯ ಮಕ್ಕಳ ಪಠ್ಯ ಪುಸ್ತಕಕ್ಕೆ ವ್ಯವಸ್ಥಿತವಾಗಿ ತಂತ್ರಜ್ಞಾನ ಪ್ರಯೋಗಿಸಿ, ಪ್ರತಿ ಪ್ರಶ್ನೆಗೆ ಕ್ಯೂಆರ್ ಕೋಡ್ ಅಳವಡಿಸಿ, ಮಗು ಟ್ಯೂಷನ್ ಎಂದು ಹೊರಗೆ ಹೋಗದೆ ಮನೆಯಲ್ಲೇ ಕುಳಿತು ಅಭ್ಯಾಸ ಮಾಡಬಹುದಾದ ಪುಸ್ತಕ ಅದು. ಒಂದು ಪುಸ್ತಕಕ್ಕೆ ಏಳು ಸಾವಿರ ರೂಪಾಯಿಗಳು!!! ಜೊತೆಗೆ ಗೀತೋಪದೇಶದ ಪುಸ್ತಕ. ಅದರಲ್ಲಿ ಪ್ರತಿಯೊಂದು ಶ್ಲೋಕಕ್ಕೆ ಒಂದು ಸ್ಕಾನರ್. ಮೊಬೈಲ್ ಗೆ ಕನೆಕ್ಟ್ ಆಗಿರುತ್ತದೆ. ಪ್ರತಿ ಶ್ಲೋಕದ ದೃಶ್ಯವನ್ನು ಕಾಣಬಹುದು. ಕೃಷ್ಣನೇ ಸ್ವತಃ ಎದುರು ನಿಂತ ಅನುಭವ.!!!
ಒಂದು ಶ್ಲೋಕವನ್ನು ಪ್ಲೇ ಮಾಡಿ ತೋರಿಸಿದರು. ( ಪುಸ್ತಕದಲ್ಲಿ ಸಂಸ್ಕೃತದಲ್ಲಿ ಮತ್ತು ಹಿಂದಿಯಲ್ಲಿ ಇರುತ್ತದೆ. ಅದನ್ನು ಕನ್ನಡಕ್ಕೆ ಅನುವಾದ ಮಾಡುವ ದಿನಗಳು ದೂರವಿಲ್ಲ)
ಅದರಲ್ಲೇನಿದೆ? ಅರ್ಜುನ ಕೃಷ್ಣನನ್ನು ಕೇಳುತ್ತಾನೆ, ಕೃಷ್ಣಾ ಎದುರಾಳಿಗಳಲ್ಲಿ ನನ್ನದೇ ಸಂಬಂಧಿಕರು, ರಕ್ತ ಸಂಬಂಧಿಗಳು ಇದ್ದಾರೆ. ಅವರನ್ನೂ ಕಳೆದುಕೊಳ್ಳಬೇಕಾಗುತ್ತದೆ. ಏನು ಮಾಡುವುದು? (ಇಲ್ಲಿ ಅರ್ಜುನನ ಸ್ವಜನರ ಬಗ್ಗೆ ಮಾತ್ರ ಇರುವ ಕಾಳಜಿ ಕಾಣುವುದೇ ಇಲ್ಲ!!! ಉದಾತ್ತನಾಗಿ ಕಾಣುತ್ತಾನೆ. ಬಡ ಸೈನಿಕರು ಆಗಲೂ ಈಗಲೂ ಬಲಿದಾನಕ್ಕಾಗೇ ಹುಟ್ಟಿದವರು.)
ಅದಕ್ಕೆ ಕೃಷ್ಣ ಕೊಡುವ ಉತ್ತರ: ಅರ್ಜುನಾ, ಆತ್ಮಕ್ಕೆ ಸಾವಿಲ್ಲ. ಎಲ್ಲಾ ಆತ್ಮಗಳು ಭಗವಂತನನ್ನು ಸೇರುತ್ತವೆ. ಇಲ್ಲಿ ಅಳಿಯುವುದು ದೇಹ ಮಾತ್ರ. ಯಕಃಶ್ಚಿತ್ ದೇಹದ ಮೇಲೇಕೆ ಮೋಹ? ಒಳ್ಳೆಯ ಕಾರಣಕ್ಕೆ ದೇಹತ್ಯಾಗ ಮಾಡಿದವರು ದೇವರ ಬಳಿ ಇರುತ್ತಾರೆ.
ಈ ಪುಸ್ತಕಕ್ಕೆ ಹನ್ನೆರಡು ಸಾವಿರ ರೂಪಾಯಿಗಳು. ಲೈಫ್ ಟೈಂ ಉಪಯೋಗ!!!!
ಇದರಲ್ಲಿ ಇರುವ ಹಿಡನ್ ಅಜೆಂಡಾ ಕಾಣದೇ ಹೋದರೆ ಸ್ವಲ್ಪ ಹಣ ಇರುವವನೂ ಪುಸ್ತಕ ಕೊಂಡು ದೃಶ್ಯಾವಳಿಗಳನ್ನು ಮೊಬೈಲ್ ನಲ್ಲೋ ಲ್ಯಾಪ್ಟಾಪ್ ನಲ್ಲೋ ನೋಡಿ ಭಕ್ತಿಯನ್ನು ಆವಾಹಿಸಿಕೊಂಡರೆ ಅವರ ಉದ್ದೇಶ ಈಡೇರಿದಂತೆಯೇ. ಜೊತೆಗೆ ಬೀದಿ ಬೀದಿಗಳಲ್ಲಿ ‘ಸಂಘ’ದ ಚಟುವಟಿಕೆಗಳು.
ಹೀಗೆ ಬಲ ಸಿದ್ಧಾಂತದವರು ಮೂಲೆಮುರುಕಣಿಯನ್ನೂ ಹೊಕ್ಕು ತಮ್ಮ ಆಲೋಚನೆಗಳನ್ನು ಹರಡುತ್ತಿರುವಾಗ ತೆರೆಮರೆ ಬಿಡಿ, ಕಣ್ಣೆದುರಲ್ಲೇ ಕುತ್ತಿಗೆ ಹಿಸುಕುವ ಕೆಲಸ ಆದರೂ ಜನರಿಗೆ ಕಾಣುವುದೇ ಇಲ್ಲ ಬದಲು ಸಮರ್ಥಿಸುವ ಮನಃಸ್ಥಿತಿ ಬೆಳೆಯುತ್ತಿದೆ.
ಮೇಲೆ ಹೇಳಿದ ಶ್ರಮಿಕನಂಥವರು ಹೆಚ್ಚುತ್ತಲೇ ಇರುವುದು ಆತಂಕದ ಸಂಗತಿ.
ವೃಂದಾ ಹೆಗಡೆ
ಅತಿಥಿ ಉಪನ್ಯಾಸಕರು, ಸಾಗರ.
ಇದೇ ಲೇಖಕರ ಈ ಲೇಖನವನ್ನೂ ಓದಿ- ತೆರೆಯ ಮುಂದೆ ಕಮಲ್ ಹಾಸನ್ ಪ್ರಕರಣ, ತೆರೆಯ ಹಿಂದೆ ???