“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಪಂಕಜಮ್ಮ ಅವರ ಜೊತೆ ಮಾತಾಡಿದರೆ ಜೀವನೋತ್ಸಾಹ ತುಂಬುತ್ತದೆ. ಅವರು ಪಾಸಿಟಿವ್ ಎನರ್ಜಿ ಇದ್ದ ಹಾಗೆ! ಬದುಕಿಗೆ ಭರವಸೆ ಮೂಡುತ್ತದೆ. ನಮಗೆಲ್ಲಾ ಅವರು ಹೇಳುವ ಕಿವಿ ಮಾತೆಂದರೆ- ‘ಇರುವ ಜೀವನವನ್ನು ಧನಾತ್ಮಕವಾಗಿ ಸ್ವೀಕರಿಸಿ, ಕೃತಜ್ಞತೆಯಿಂದಿರಿ, ಪ್ರೀತಿಯಿಂದಿರಿ. ಸಾರ್ಥಕವಾಗಿ ಬದುಕಿ. ಜೀವನವನ್ನು ಸಂಭ್ರಮಿಸಿ, ಆಸ್ವಾದಿಸಿ.’ – ವಿಜಯಲಕ್ಷ್ಮಿ ನುಗ್ಗೇಹಳ್ಳಿ.
ಬೆಂಗಳೂರಿನಲ್ಲಿ ಹಿರಿಯ ಜೀವಗಳನ್ನು ಬಹಳಾ ಅಕ್ಕರೆಯಾಗಿ ನೋಡಿಕೊಳ್ಳುತ್ತಿರುವ ಸಂಸ್ಥೆಯೊಂದರಲ್ಲಿ ನಮ್ಮ ನುಗ್ಗೇಹಳ್ಳಿ ಪಂಕಜ ಅವರು ಈಗ ವಾಸಿಸುತ್ತಿದ್ದಾರೆ ಎಂದು ತಿಳಿದು ಹುಡುಕಾಡಿಕೊಂಡು ಭೇಟಿಯಾದೆ. ನನಗವರನ್ನು ನೋಡಿ ಬಹಳವೇ ಖುಷಿ. ಅವರು- ಹಾಸನದ ಮಣ್ಣಿಗೆ ಸೊಸೆಯಾಗಿ ಬಂದು ಪ್ರಸಿದ್ಧರಾದ ಮೊದಲ ತಲೆಮಾರಿನ ಕಾದಂಬರಿಕಾರ್ತಿ, ನಮ್ಮ ಪುರಾತನ ಬೇರು. 97 ವರ್ಷದ ನನ್ನೂರಿನ ಹಿರಿಯ ವ್ಯಕ್ತಿತ್ವವನ್ನು ಸಂದರ್ಶಿಸಿ, ಅವರ ಯಶೋಗಾಥೆ ಪರಿಚಯಿಸುವ ಹೊಣೆ ಹೊತ್ತಿದ್ದು ನನ್ನ ಭಾಗ್ಯವೇ ಸರಿ.
ಪಂಕಜ ಅವರು 1929ರ ಜೂನ್ 2ರಂದು ಬೆಂಗಳೂರಿನಲ್ಲಿ ಹುಟ್ಟಿದ್ದು. ತಂದೆ ಎಸ್.ವಿ.ರಾಘವಾಚಾರ್. ತಾಯಿ ಶಾಂತಮ್ಮ. ಪಂಕಜರವರು- ಮೊದಲ ತಲೆಮಾರಿನ ಕಾದಂಬರಿಕಾರರಾದ ಬಿ.ವೆಂಕಟಾಚಾರ್ಯರ ನಾಲ್ಕನೆಯ ತಲೆಮಾರಿನ ಕುಡಿ! ಈ ಇಳಿ ವಯಸ್ಸಿನಲ್ಲೂ ಅವರ ಸ್ಮೃತಿ ಪಟಲದಲ್ಲಿ ಅನುಭವದ ಖಜಾನೆಯೇ ಇದೆ. ಅವರಿಗೆ 12ನೆಯ ವಯಸ್ಸಿಗೆ ಎನ್.ತಿರುಮಲೆ ಅವರೊಂದಿಗೆ ಮದುವೆ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮುತ್ತಾತ ಖ್ಯಾತ ಕಾದಂಬರಿಕಾರ ವೆಂಕಟಾಚಾರ್ಯರ ಕೃತಿಗಳಿಂದ ಪ್ರೇರಿತರಾಗಿದ್ದ ಇವರು ಶಾಲೆಗೆ ಹೋಗಿ ಓದಿದ್ದು ಮೂರು-ನಾಲ್ಕನೆ ತರಗತಿ ಅಷ್ಟೇ. ಅದೂ ಅವರ ದೊಡ್ಡಪ್ಪನ ಮನೆ ಮೈಸೂರಿನಲ್ಲಿ ಗುಡ್ ಶೆಪರ್ಡ್ ಕಾನ್ವೆಂಟಿನಲ್ಲಿ ಓದಿದ್ದು. ಹೀಗಾಗಿ ಆ ಕಾಲಕ್ಕೆ ಇಂಗ್ಲೀಷ್ನಲ್ಲೇ ಹೆಚ್ಚು ಮಾತಾಡುತ್ತಿದ್ದರು. ಅವರ ಮನೆಯ ಕೆಲಸದಾಳುಗಳು ಕೂಡಾ ಆಗಿನ ಕಾಲಕ್ಕೆ ಇಂಗ್ಲೀಷ್ನಲ್ಲೇ ಮಾತನಾಡುವುದು ಪ್ರತಿಷ್ಠೆಯ ಸಂಕೇತವಾಗಿತ್ತು ಎಂದು ನಗುತ್ತಾ ಹೇಳುತ್ತಾರೆ.
ಇವರು ಮೊದಮೊದಲು ಇಂಗ್ಲೀಷ್ನಲ್ಲೇ ಪದ್ಯ ಬರೆಯುತ್ತಿದ್ದರಂತೆ. ಅವರ ಮನೆಗೆ ಒಮ್ಮೆ ಜೀನಿಯಸ್ ಜಿ.ಪಿ.ರಾಜರತ್ನಂರವರು ಬಂದಿದ್ದರು. ಇವರು ಇಂಗ್ಲೀಷಿನಲ್ಲಿ ಬರೆದಿದ್ದನ್ನು ನೋಡಿ- ‘ನೀನು ಹುಟ್ಟಿದ್ದು ಇಂಗ್ಲೆಂಡ್ನಲ್ಲಾ, ಇಂಡಿಯಾದಲ್ಲಾ?’ ಎಂದು ಪ್ರಶ್ನಿಸುತ್ತಾರೆ. ‘ಇಂಡಿಯಾದಲ್ಲಿ ಹುಟ್ಟಿರುವಾಗ, ನೀನು ಏನೇ ಬರೆದರೂ ನಿನ್ನ ನಾಡಿನ ಭಾಷೆಯಲ್ಲಿಯೇ ಬರೆಯಬೇಕು’ ಎಂದು ಸಲಹೆ ನೀಡಿದಾಗಿನಿಂದ ಇವರು ಕನ್ನಡದಲ್ಲೇ ಬರೆಯಲು ಪ್ರಾರಂಭಿಸಿದ್ದು ಮತ್ತು ಅದರಲ್ಲೇ ಅತೀ ಹೆಚ್ಚು ಬರೆದದ್ದನ್ನು ನೆನಪಿಸಿಕೊಳ್ಳುತ್ತಾರೆ. ಅವರು ಚಿಕ್ಕ ವಯಸ್ಸಿಗೇ ತಮ್ಮ ಮುತ್ತಾತನ ಕಾದಂಬರಿಗಳನ್ನೆಲ್ಲಾ ಓದಿ ಮುಗಿಸುತ್ತಿದ್ದರಂತೆ. ಜೊತೆಗೆ ಪಂಕಜಾ ಅವರಿಗೆ ಎಳೆವೆಯಿಂದಲೂ ಕತೆಗಳನ್ನು ಹೇಳುವ ಗೀಳು. ಯಾರು ಸಿಕ್ಕರೂ ಪಂಕಜ ಅವರ ಕೈಗೆ ಸಿಕ್ಕಿಹಾಕಿಕೊಂಡರೆ, ಕತೆ ಕೇಳಿಸಿಕೊಳ್ಳಬೇಕಾಗಿತ್ತಂತೆ. ಇವರ ಕತೆ ಕೇಳಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಕದ್ದು ಓಡಾಡುತ್ತಿದ್ದರಂತೆ ಎಲ್ಲರೂ! ಇವರಿಗೆ ಅಷ್ಟು ಕತೆ ಹೇಳುವ ಗೀಳಿತ್ತಂತೆ. “ಕತೆ ಹೇಳುವ ಭೂತ ಎಂದು ಹೆಸರು ಪಡೆದಿದ್ದನ್ನು ನೆನೆಸಿಕೊಂಡು ನಗುತ್ತಾರೆ. ಏನೂ ಕೆಲಸ ಮಾಡದೇ, ಸದಾ ಕತೆ ಓದಿಕೊಂಡೇ ಕೂತಿರುತ್ತಿದ್ದರಂತೆ. ಓದುವ ಕಲೆ ಹುಟ್ಟಿನಿಂದಲೇ ರಕ್ತಕ್ಕಂಟಿ ಬಂದಿದ್ದು ಪಂಕಜಮ್ಮನಿಗೆ!

ಇಂಗ್ಲೀಷ್ನಲ್ಲಿ ಯೂರೋಪಿಯನ್ ಚರಿತ್ರೆ, ಹೆನ್ರಿ ಆರ್ಥರ್ ಜೋನ್ಸ್, ಆಸ್ಕರ್ ವೈಲ್ಡ್, ಮಿಗ್ಯೂಯಿಲ್ ಪಿನೇರೋ ಇವರೆಲ್ಲರ ಸಾಹಿತ್ಯ ಇವರನ್ನು ಅಪಾರವಾಗಿ ಆವರಿಸಿತ್ತು. ಆದರೆ ಇಷ್ಟಪಟ್ಟು ಬರೆದಿದ್ದು ಕನ್ನಡದಲ್ಲಿ. ಪಂಕಜ ಅವರು ಬರೆಯಲು ಆಯ್ದುಕೊಳ್ಳುತ್ತಿದ್ದ ಸಮಯ ರಾತ್ರಿಯಂತೆ. ಬೆಳಗಾಗುವುದರೊಳಗೆ ನಾಲ್ಕಾರು ಅಧ್ಯಾಯಗಳನ್ನು ಕಣ್ಣಿಗೆ ಕಟ್ಟುವಂತೆ ಸಿದ್ದಪಡಿಸುವ ಸಾಮರ್ಥ್ಯ ಇವರದ್ದಾಗಿತ್ತು. ಕಾದಂಬರಿ ಪ್ರಾರಂಭಿಸಿ- ‘ಜೈಲಿಗೆ ಹೋಗಿ ಬರುತ್ತೇನೆ’ ಎಂದರೆ ಹಿರಿಯರು ಕಕ್ಕಾಬಿಕ್ಕಿ. ‘ಕಥಾನಾಯಕ ಜೈಲಿನಲ್ಲಿದ್ದಾನೆ ಅದಕ್ಕೆ ಜೈಲು ನೋಡಬೇಕು’! ಎಂದುತ್ತರ ಕೊಡುತ್ತಿದ್ದರಂತೆ. ವೇಶ್ಯಾವೃತ್ತಿ ಜೀವನದ ಚಿತ್ರಣದ ಕಾದಂಬರಿ ಬರೆಯಲು ‘ವೇಶ್ಯೆಯ ಮನೆಗೆ ಹೋಗಿ ಬರುತ್ತೇನೆ’ ಎಂದಾಗ ಹಿರಿಯರು ಹೌಹಾರಿದರಂತೆ. ಕಡೆಗೆ ‘ವೈಟ್ ಸ್ಲೇವರಿ’ ಕುರಿತು ಓದುವ ಮೂಲಕ ಅನುಭವ ಪಡೆದದ್ದು.
‘ನಾನು ಬರೆದಾಗ ಮೊದಮೊದಲು ಪ್ರಿಂಟ್ ಹಾಕೋಕೆ ಕಷ್ಟ. ಓದುವವರು ಕಡಿಮೆ. ಚೆಂದವಾಗಿ ಬರೀತಾರೆ ಅಂತ ಗೊತ್ತಾದಾಗ ಹೆಚ್ಚೆಚ್ಚು ಬರೀರಿ ಅಂತಾ ಪ್ರಕಾಶಕರೇ ಕೇಳಿದ್ದುಂಟು. ಆಗ ಚದುರಂಗ ಅನ್ನೋರು ಚೆನ್ನಾಗಿ ಬರೀತಿದ್ರು. ರಂಗಸ್ವಾಮಿ ಅನ್ನುವ ಪ್ರಕಾಶಕರು ಬರೆಸಿ ಪ್ರಿಂಟ್ ಹಾಕೋರು. ದುಡ್ಡು ಬರೋಕು ಆರಂಭವಾಯ್ತು. ಮನೆಯವರು ನನ್ನನ್ನು ಬಹಳಷ್ಟು ತಿದ್ದಿ ತೀಡಿ ರೂಪಿಸಿದರು. ಅವರು ಹೆಚ್ಚೆಚ್ಚು ಬರೆಯಲು ಪ್ರೇರೇಪಿಸಿದರು. ಹಣವು ಬರ್ತಿತ್ತು. ನಾನು ಪಂಕಜ ಎನ್ನುವ ಹೆಸರಿನಲ್ಲಿ ಬರೀತಿದ್ದೆ. ಆಗ ಮೂರು-ನಾಲ್ಕು ಪಂಕಜ ಇದ್ದರು. ಹೀಗಾಗಿ ಎನ್.ಪಂಕಜ ಎನ್ನುವ ಹೆಸರಿಟ್ಟುಕೊಂಡೇ. ಪತ್ರಿಕೆಯಿಂದ ಬರ್ತಿದ್ದ ಹಣ ನನಗೆ ತಲುಪಿಸುವುದಕ್ಕೆ ಪೋಸ್ಟ್ ಮ್ಯಾನ್ ಗಳಿಗೆ ತ್ರಾಸ ಆಗ್ತಿತ್ತು. ಅದು ಎಲ್ಲೆಲ್ಲೋ ಸುತ್ತಾಡಿಕೊಂಡು ಬರ್ತಾಯಿತ್ತು. ಆಗ ನಾನು ನನ್ನ ಹೆಸರನ್ನು ನಮ್ಮತ್ತೆ-ಮಾವನ ಊರಾದ ನುಗ್ಗೇಹಳ್ಳಿ ಹೆಸರನ್ನು ಸೇರಿಸಿಕೊಂಡು, ನುಗ್ಗೇಹಳ್ಳಿ ಪಂಕಜ ಎನ್ನುವ ಹೆಸರಿನಲ್ಲಿ ಬರೆದೆ’ ಎಂದು ಹೇಳಿಕೊಂಡರು.
ಪಂಕಜರವರ ಮೊದಲ ಕಾದಂಬರಿ- ಕಾವೇರಿಯ ಕಾವೇರಿಯ ಆರ್ತರವ. ಮುಂದೆ- ಮಲಯ ಮಾರುತ, ವೀಣಾ ಓಹ್ ವೀಣಾ!, ಬರಲೇ ಇನ್ನು ಯಮುನೆ, ಉಷಾನಿಷಿ, ಗಗನ, ಮುಗಿಲಮಿಂಚು, ದೀಪಾ, ಗೂಡು ಬಿಟ್ಟ ಹಕ್ಕಿ, ತೇಲಿ ಬಂದ ಬಂಧನ, ಸಂಧ್ಯಾ ಬರುವಳೇ?, ತೆರೆ ಸರಿಯಿತು, ಬಳ್ಳಿ-ಮೊಗ್ಗು, ಅಲೆಗೆ ಸಿಕ್ಕಿದ ಎಲೆ, ಟುವ್ವಿಟುವ್ವಿ ಉಲಿಯಿತು ಗುಬ್ಬಚ್ಚಿ, ಪ್ರತಿಕಾರದ ಸುಳಿಯಲ್ಲಿ, ಎರಡು ರೆಂಬೆಗಳು, ಒಂದು ವಸಂತ ಋತುವಿನಲ್ಲಿ, ಮೋಹಿನಿಗೊಂದು ಹಾಡು, ಅನುರಾಗದ ಸೆಳೆತ, ಬಾಳಿನ ಉಯ್ಯಾಲೆ,… ಮುಂತಾದ ಕಾದಂಬರಿಗಳು ಹೊರಬಂದವು. ‘ಬರಲೆ ಇನ್ನು ಯಮುನೆ’ ಕಾದಂಬರಿ ‘ಸಿಪಾಯಿ ರಾಮು’ ಹೆಸರಿನಿಂದ, ಗಗನ ಮತ್ತು ಮಲಯಮಾರುತ ಕಾದಂಬರಿಗಳು ಅದೇ ಹೆಸರಿನಿಂದ ಚಲನಚಿತ್ರಗಳಾಗಿರುವುದು ಹೆಮ್ಮೆಯ ವಿಷಯ.
ಒಂದು ವಸಂತ ಋತುವಿನಲ್ಲಿ, ಮ್ಯೂಸಿಕ್ ಫಾರ್ ಮೋಹಿನಿ- ಪಂಕಜರವರು ಇಂಗ್ಲಿಷ್ನಿಂದ ಕನ್ನಡಕ್ಕೆ ತಂದ ಅನುವಾದಗಳು. ನಮಸ್ಕಾರ ಗರಡು ಅಮ್ಮನವರೇ ಏನ್ ಸಮಾಚಾರ?, ಕೋಣೆಗೊಂದು ಮೂಲೆಗೊಂದು ಮಾತು… ಮುಂತಾದವು ಪಂಕಜರವರ ಹಾಸ್ಯ ಕಾದಂಬರಿಗಳು. ಪಾದ್ರಿಯ ಕುದುರೆ, ಕಮಲ ನೆಹರು, ರಾಜಕುಮಾರಿಯ ಸ್ವಯಂವರ ಮುಂತಾದವು ಮಕ್ಕಳಿಗಾಗಿ ಬರೆದ ಕೃತಿಗಳು. ಸಾಲೋಮ್, ಆ ಒಂದು ವಿಷದ ಘಳಿಗೆ, ಅರಳಿಕಟ್ಟೆ ರಾಮಾಚಾರಿಯ ಎರಡನೆಯ ಹೆಂಡತಿ- ಪಂಕಜಾ ಅವರ ನಾಟಕಗಳು. ತರಂಗರಂಗ, ಕಾವೇರಮ್ಮ, ಅಮೇರಿಕಾದಲ್ಲಿ ಮದುವೆ ಗೊತ್ತಾದಾಗ… ಮುಂತಾದವು ಅವರ ಹಾಸ್ಯ ಸಂಕಲನಗಳು. ಇಪ್ಪತ್ತು ವರ್ಷಗಳ ಹಿಂದೆ, ಅರ್ಧಚಂದ್ರ, ತಾಯಿ ಮರ, ಸೇವಕಿಯ ಶಿಕ್ಷಣ- ಅವರ ಕಥಾ ಸಂಕಲನಗಳು.
ಪಂಕಜ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಶ್ರೀರಸ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಲಿಪಿ ಪ್ರಾಜ್ಞ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಹಾಗೂ ಇಂಟರ್ ನ್ಯಾಷನಲ್ ಅಕಾಡೆಮಿ ಫಾರ್ ಇಂಗ್ಲಿಷ್ ಪೊಯೆಟ್ರಿ ಸಂಸ್ಥೆಯಿಂದ ‘ಎಕ್ಸಲೆನ್ಸ್ ಇನ್ ವರ್ಲ್ಡ್ ಪೊಯೆಟ್ರಿ ಅವಾರ್ಡ್’ ಮುಂತಾದ ಅನೇಕ ಗೌರವಗಳು ಸಂದಿವೆ.
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ಜೀವನೋತ್ಸಾಹದ ಚಿಲುಮೆ ಪಂಕಜಮ್ಮನವರಿಗೀಗ 97 ವರ್ಷವೆಂದರೆ ಯಾರಿಗೂ ನಂಬಲಾಗುವುದಿಲ್ಲ. ಅವರ ಪ್ರತಿ ಮಾತಲ್ಲೂ ಹಾಸ್ಯದ ಹೊನಲಿರುತ್ತದೆ. ಎಲ್ಲ ಮಾತೂ ಧನಾತ್ಮಕವೇ! ಅವರ ಒಬ್ಬಳೇ ಮಗಳು ಜಯಶ್ರೀ ಅಮೇರಿಕಾದಲ್ಲಿದ್ದಾರೆ. ಅಳಿಯ ಅಜಿತಾನಂದ, ಇಬ್ಬರು ಮೊಮ್ಮಕ್ಕಳು ನಂದಿತಾ ಮತ್ತು ಅಜಯ್. ಆಗಾಗ್ಗೆ ಫೋನ್ ಮೂಲಕ ಕುಶಲೋಪರಿ ನಡೆಯುತ್ತದೆ. ಎಲ್ಲರ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡು ತನ್ನ ಪಾಲಿಗೆ ದಕ್ಕಿರುವುದರ ಬಗ್ಗೆ ಅವರಿಗೆ ಸಮಾಧಾನದ ಮನಸ್ಸಿದೆ. ತನ್ನನ್ನು ಶುಶ್ರೂಷೆ ಮಾಡುವ ಪದ್ಮಾ(ಮಸ್ತಾನ್ ಬಿ) ಬಗ್ಗೆ- ‘ನನ್ನ ಕೇರ್ ಮಾಡುವ ತಾಯಿ’ ಎಂದು ಅಕ್ಕರೆಯಿಂದ ಹೇಳುತ್ತಾರೆ. ನಾವೇನಾದರೂ ಹಣ್ಣು ತೆಗೆದುಕೊಂಡು ಹೋದರೆ, ಅವರ ಶುಶ್ರೂಷಕಿಗೆ ಮೊದಲು ಕೊಟ್ಟು ಹಂಚಿ ತಿನ್ನುತ್ತಾರೆ. ಈ ವಯಸ್ಸಿನಲ್ಲೂ ಚಾಳೀಸ ಬಯಸದ ತೀಕ್ಷ್ಣ ಕಣ್ಣುಗಳು, ಹಲ್ಲುದುರಿದರೂ ತೊದಲಾಡದ ಸ್ಪಷ್ಟ ಮತ್ತು ಸ್ಪುಟವಾದ ಮಾತು. ಅವರೊಂದಿಗೆ ಮಾತಿನಲ್ಲಿ ತೊಡಗಿದರೆ ನಮ್ಮಲ್ಲೊಂದು ಶಕ್ತಿ ಆವರಿಸಿ, ನಗು, ಸಂತಸದ ಜೀವಕಳೆ ನಮ್ಮಲ್ಲಿ ತುಂಬುತ್ತದೆ. ‘ನಿಮ್ಮ ಮುಖದಲ್ಲಿ, ತುಟಿಯ ಮೇಲ್ಗಡೆ ಇರುವ ಮಚ್ಚೆ ನಿಮಗೆ ತುಂಬಾ ಚೆಂದವಾಗಿ ಕಾಣುತ್ತದೆ’ ಎಂದರೆ- ‘ನನ್ನ ಗಂಡ ಒಂದಿನವೂ ಹೀಗೆ ಹೇಳಿಲ್ಲವಲ್ಲಾ?’ ಎಂದು ನಗುತ್ತಾರೆ. ಬಹಳ ನಿರಾಳದ ಗಟ್ಟಿಜೀವ. ‘ನೀವು ಈಗಲೂ ಬರೆಯುತ್ತೀರಾ’ ಎಂದರೆ- ‘ಬರೆಯಲು ಯಾವುದೇ ಸ್ಪೂರ್ತಿಯಿಲ್ಲ. ಯಾವುದಾದರೂ ಅರ್ಜ್ ಇದ್ದರೆ ಬರೆಯುತ್ತಿದ್ದೆ’ ಎಂದು ಮೌನವಾದರು. ಲವಲವಿಕೆಯಿಂದ ಸ್ಪಂದಿಸುವ ಈ ಜೀವ ನಿಜಕ್ಕೂ ನಮ್ಮಂಥವರಿಗೆ ಸದಾ ಸ್ಪೂರ್ತಿದಾಯಿನಿ. ಅವರ ವ್ಯಕ್ತಿತ್ವ ಎಲ್ಲರನ್ನೂ ಸೂಜಿಗಲ್ಲಂತೆ ಸೆಳೆಯುತ್ತದೆ.
ಇವರು ಚಿಕ್ಕ ವಯಸ್ಸಿಂದಲೂ ಪ್ರಶ್ನೆ ಮಾಡುವ ಗುಣ ಉಳ್ಳವರಂತೆ. ಸೋದರತ್ತೆಯ ಸಂಬಂಧದಲ್ಲಿಯೇ ಮದುವೆ ಆಗಿತ್ತು. ಹಿರಿಯರೆಲ್ಲಾ ‘ಗಂಡನ ಕಾಲಿಗೆ ನಮಸ್ಕಾರ ಮಾಡು’ ಎಂದು ಹೇಳಿದಾಗ ಇವರು- ‘ನಾನ್ಯಾಕೆ ನಮಸ್ಕಾರ ಮಾಡ್ಬೇಕು. ಅವನು ದೇವರಲ್ಲ. ಅವನು ಮನುಷ್ಯನೇ, ನಾನು ಮನುಷ್ಯಳೇ’ ಎಂದುತ್ತರಿಸಿದ್ದರಂತೆ! ‘ನಾನು ನಮ್ಮ ಮುತ್ತಾತ ಬರೆದ ಕಾದಂಬರಿಯಲ್ಲಿ ಬರುವ ರಜಪೂತ ರಾಜಕುಮಾರ ಬರ್ತಾನೆ. ಎತ್ತರವಾಗಿ ದಷ್ಟಪುಷ್ಟವಾಗಿರ್ತಾನೆ, ಜೋರಾದ ಮೀಸೆ ಇರುತ್ತೆ ಅಂತೆಲ್ಲಾ ಮಾವಿನ ತೋಪಿನಲ್ಲಿ ಕುಳಿತು ಕನಸು ಕಾಣ್ತಾ ಇರ್ತಿದ್ದೆ. ಆದರೆ, ನನಗೆ ಸಿಕ್ಕ ಗಂಡ ತಿರುಮಲೆ ಅವರು- ಕುಳ್ಳಗೆ, ತೆಳ್ಳಗೆ, ಮೀಸೆ ಇರದ ವ್ಯಕ್ತಿಯಾಗಿದ್ದರು. ಆದ್ರೆ ಒಳ್ಳೆಯವರು’ ಎಂದು ತುಂಟಾಟದ ನಗು ಬೀರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಪಂಕಜಾ ಅವರ ಪತಿ- ಯಾವಾಗಲೂ ಕತೆಗಳನ್ನು ಓದುತ್ತಾ ಕುಳಿತುಕೊಂಡಿರುತ್ತಿದ್ದ ಇವರನ್ನು ನೋಡಿ- ‘ಎಲ್ಲಿಂದ ತಂದು ಗಂಟು ಹಾಕಿದೆ ಅಕ್ಕಾ ಈ ಹುಡುಗಿಯನ್ನು’ ಎನ್ನುತ್ತಿದ್ದರಂತೆ! ಅದೂ ಗಟ್ಟಿಯಾಗಿ ನಕ್ಕು ಹೇಳಿದರು.
ಇದನ್ನೂ ಓದಿ- ಭಜನೆ ಕಲಾವಿದೆ- ವಿರಕ್ತೆ ಸಾವಿತ್ರಮ್ಮ
ಈಗಿನ ಕಾಲದ ಹೆಣ್ಮಕ್ಕಳು, ಗಂಡ್ಮಕ್ಕಳ ಬಗ್ಗೆ ಹೇಳಿ ಎಂದಾಗ- ‘ನಮ್ಮ ಕಾಲದಲ್ಲಿ ನಿಮ್ಮಷ್ಟು ಸ್ವಾತಂತ್ರ್ಯ ಇರ್ಲಿಲ್ಲ. ನಿಮ್ಗೆಲ್ಲಾ ಈಗ ಅದಿದೆ. ಹಿಂದೆ ನಮ್ಗೆಲ್ಲಾ ಗಂಡಂದಿರು ಹೊಡೆಯೋರು, ಬೈಯೋರು. ಈಗಿನ ಕಾಲದಲ್ಲಿ ಹೆಣ್ಮಕ್ಕಳು ಸ್ಟ್ರಾಂಗ್ ಇದ್ದಾರೆ. ಗಟ್ಟಿಗಿತ್ತಿಯರು ನೀವೆಲ್ಲಾ. ದುಡಿಯುತ್ತೀರಿ. ಸ್ವತಂತ್ರವಾಗಿದ್ದೀರಿ. ಏನಾದ್ರೂ ಬೈದರೆ, ಹೊಡೆದರೆ ಕಂಪ್ಲೈಂಟ್ ಕೊಡ್ತೀರಿ. ಕೋರ್ಟ್ ಮೆಟ್ಟಿಲನ್ನು ಏರುತ್ತೀರಿ. ಹಾಗಾಗಿ ಗಂಡ್ಮಕ್ಕಳು ಹೆದರ್ಕೊಂಡು ಬದುಕ್ತಿದ್ದಾರೆ’ ಎಂದರು ನಗುತ್ತಾ. ‘ಜೀವನದಲ್ಲಿ ಎಲ್ಲಾ ನೋವು ನಲಿವುಗಳನ್ನು ಅನುಭವಿಸಿದ್ದೇನೆ. ಬರಹ ಮತ್ತು ಓದು ಮಾತ್ರ ನನಗೆ ಬಹಳಷ್ಟು ಖುಷಿ ಕೊಟ್ಟಿದೆ’ ಎಂದರು ಮತ್ತೆ ನಗುತ್ತಾ.
ಪಂಕಜಮ್ಮ ಅವರ ಜೊತೆ ಮಾತಾಡಿದರೆ ಜೀವನೋತ್ಸಾಹ ತುಂಬುತ್ತದೆ. ಅವರು ಪಾಸಿಟಿವ್ ಎನರ್ಜಿ ಇದ್ದ ಹಾಗೆ! ಬದುಕಿಗೆ ಭರವಸೆ ಮೂಡುತ್ತದೆ. ನಮಗೆಲ್ಲಾ ಅವರು ಹೇಳುವ ಕಿವಿ ಮಾತೆಂದರೆ- ‘ಇರುವ ಜೀವನವನ್ನು ಧನಾತ್ಮಕವಾಗಿ ಸ್ವೀಕರಿಸಿ, ಕೃತಜ್ಞತೆಯಿಂದಿರಿ, ಪ್ರೀತಿಯಿಂದಿರಿ. ಸಾರ್ಥಕವಾಗಿ ಬದುಕಿ. ಜೀವನವನ್ನು ಸಂಭ್ರಮಿಸಿ, ಆಸ್ವಾದಿಸಿ.’ ಹೀಗೆ ಹೇಳುತ್ತಾ- ‘ಆಗಾಗ್ಗೆ ಬರ್ತಿರಿ. ಬರುವಾಗ ನನಗೆ ಹೊಸ ಪುಸ್ತಕಗಳನ್ನು ತನ್ನಿ. ನಂಗೆ ಒಡವೆ ವಸ್ತುಗಳ ಬಗ್ಗೆ ಆಸಕ್ತಿ ಯಾವಾಗಲೂ ಇರಲಿಲ್ಲ. ಬರೀ ಓದುವುದಷ್ಟೆ ಆಸಕ್ತಿ’ ಎಂದರು. ಪಂಕಜಮ್ಮನವರಿಗೆ ದೀರ್ಘಾಯಸ್ಸು ಲಭಿಸಲೆಂದು ಮನದಲ್ಲೇ ಹಾರೈಸಿ ಹಿಂತಿರುಗಿದೆ.
ಇದನ್ನೂ ಓದಿ- ಮೈಸೂರು ಸಾಂಪ್ರದಾಯಿಕ ಕಲೆಗೆ ಮೆರಗು ತಂದ ಪ್ರಭಾ ಮಲ್ಲೇಶ್


