ಪದೇ ಪದೇ ಸುಳ್ಳು ಹೇಳುವ, ತಪ್ಪು ಮಾಡುವ, ಕ್ಷಮೆ ಕೇಳದ ಏಕೈಕ ಪ್ರಧಾನಿ ನರೇಂದ್ರ ಮೋದಿ ಮಾತ್ರ: ಖರ್ಗೆ ವ್ಯಂಗ್ಯ

Most read

ಕಲಬುರಗಿ: ಜಾತಿ ಜನಗಣತಿ, ರಾಜ್ಯ ಸಚಿವ ಸಂಪುಟ ಪುನಾರಚನೆ, ಕ್ರೀಡಾಂಗಣದಲ್ಲಿ ಕಾಲ್ತುಳಿತ ಸೇರಿ ಮೂರ್ನಾಲ್ಕು ವಿಚಾರಗಳು ಚರ್ಚೆಯಾಗಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದೂ ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕಡೆಯಿಂದ ಆಡಳಿತಾತ್ಮಕವಾಗಿ ಕೆಲವು ಮಾಹಿತಿಯನ್ನು ಪಡೆದಿದ್ದೇವೆ. ಪಕ್ಷದ ಆಂತರಿಕ ವಿಷಯಗಳೂ ಪ್ರಸ್ತಾಪವಾಗಿವೆ. ಸಚಿವ ಸಂಪುಟದ ಬದಲಾವಣೆ ಸದ್ಯಕ್ಕೆ ಇಲ್ಲ. ಮುಂದೆ ಬರುವ ದಿನಗಳಲ್ಲಿ ನೋಡೋಣ ಎಂದರು.

ಆರ್ ಸಿಬಿ ಆಟಗಾರರ ವಿಜಯೋತ್ಸವ ನಡೆದ ಚಿನನಸ್ಡಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಂತಹ ಪ್ರಕರಣ ನಡೆಯಬಾರದಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು. ಕಾಲ್ತುಳಿತದಲ್ಲಿ ತಪ್ಪು ಯಾರಿಂದ ಆಗಿದೆ ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಬೇಕು. ಸಂತ್ರಸ್ತರ ಕುಟುಂಬಗಳ ಬೆಂಬಲಕ್ಕೆ ನಿಂತು, ಅವರಿಗೆ ಸಹಾಯ ಮಾಡುವಂತೆ ರಾಹುಲ್ ಗಾಂಧಿ ಅವರು ಸ್ಪಷ್ಟವಾಗಿ ತಿಳಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಕುಂಭಮೇಳದಲ್ಲಿ ಕಾಲ್ತುಳಿತವಾಗಿ ತುಂಬ ಜನ ಭಕ್ತರು ಮೃತಪಟ್ಟಿದರು. ಆಗ ನಾನು ಪ್ರತಿಕ್ರಿಯೆ ನೀಡಿದ್ದಕ್ಕೆ ನನ್ನನ್ನೇ ಟೀಕಿಸಿದರು. ಆಗ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ಕೊಡಲಿಲ್ಲ. ಕೆಟ್ಟ ಕೆಲಸವನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದರೆ ರಾಜೀನಾಮೆ ಕೊಡಬೇಕಾಗುತ್ತದೆ. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಈ ದುರಂತ ಸಂಭವಿಸಿದೆ. ಸರ್ಕಾರ ಕ್ಷಮೆ ಯಾಚಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವುದು ಮುಖ್ಯ ಎಂದರು.

ಜಾತಿ ಜನಗಣತಿ ಮರು ಸಮೀಕ್ಷೆಗೆ ಸಮರ್ಥನೆ: ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಸಾಮಾಜಿಕ, ಆರ್ಥಿಕ ಮಾನದಂಡ ಇರಿಸಿಕೊಂಡು ಜಾತಿ ಜನಗಣತಿ ನಡೆಸಿದ್ದರು. ಆ ಮಾನದಂಡಗಳು ಹಾಗೆಯೇ ಇರಲಿವೆ. ಅವುಗಳ ಜತೆಗೆ ಅವಶ್ಯಕತೆ ಕಂಡು ಬಂದರೆ ಹೊಸದಾಗಿ ಸೇರಿಸುತ್ತೇವೆ. ಜಾತಿ ಜನಗಣತಿ ನಡೆದ 10 ವರ್ಷಗಳಾಗಿದ್ದರಿಂದ ಎಸ್ ಸಿ, ಎಸ್ ಟಿ, ಒಬಿಸಿ ಪಟ್ಟಿಗಳಲ್ಲಿ ಸಾಕಷ್ಟು ವ್ಯತ್ಯಾಸವಾಗಿದೆ. ಆದ್ದರಿಂದ ಮರು ಸಮೀಕ್ಷೆಗೆ ಸೂಚಿಸಲಾಗಿದೆ. ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸಮರ್ಥಿಸಿಕೊಂಡರು.

ED ಕಿರುಕುಳ:

ಬಿಜೆಪಿ ಸರ್ಕಾರ ಬಂದ ದಿನದಿಂದಲೂ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಬಿಜೆಪಿ ಸರ್ಕಾರ ನಮ್ಮ ಪಕ್ಷದ ಶಾಸಕರನ್ನು ಒಡೆಯಲು ಸಂಚು ಮಾಡುತ್ತಿದೆ. ಒಂದು ವರ್ಷದ ಹಿಂದಿನ ಚುನಾವಣೆಯಲ್ಲಿ ನಡೆದಿದ್ದಕ್ಕೆವ ಈಗ ಕಿರುಕುಳ ಕೊಡುವುದು ಸರಿಯಲ್ಲ ಎಂದು ಖರ್ಗೆ ಉತ್ತರಿಸಿದರು.

ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಆ ಹಣ ಎಲ್ಲಿಂದ ಬಂತು ? ಯಾರಿಗೆ ಸೇರಿದ್ದು ಎನ್ನವ ಮಾಹಿತಿ ಇದುವರೆಗೂ ಗೊತ್ತಾಗಿಲ್ಲ. ಅವರು ಎಷ್ಟೇ ಕಿರುಕುಳ ಕೊಟ್ಟರೂ ನಾವು ಒಗ್ಗಟ್ಟಾಗಿ ಇದ್ದೇವೆ ಎಂದು ಖರ್ಗೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 11 ವರ್ಷಗಳಲ್ಲಿ 36 ತಪ್ಪುಗಳನ್ನು ಮಾಡಿದೆ. ಪದೇ ಪದೇ ಸುಳ್ಳುಗಳನ್ನು ಹೇಳಿ, ಇಷ್ಟೊಂದು ತಪ್ಪುಗಳನ್ನು ಮಾಡಿ, ಜನರನ್ನು ದಾರಿ ತಪ್ಪಿಸಿ, ಯುವಕರನ್ನು ಮೋಸಗೊಳಿಸುವ ಮೋದಿ ಅವರಂತಹ ಪ್ರಧಾನಿಯನ್ನು ನಾನು ಹಿಂದೆಂದೂ ನೋಡಿಲ್ಲ. ನನ್ನ 65 ವರ್ಷಗಳ ರಾಜಕೀಯ ಮತ್ತು 55 ವರ್ಷಗಳ ಅಧಿಕಾರದಲ್ಲಿ ಅವರಂತಹ ಪ್ರಧಾನಿಯನ್ನು ಭೇಟಿಯಾಗಿಲ್ಲ. ಅವರು ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವುದೂ ಇಲ್ಲ, ಕ್ಷಮೆಯ್ನನೂ ಕೇಳುವುದಿಲ್ಲ ಎಂದು ಟೀಕಿಸಿದರು.

More articles

Latest article