ಮೋದಿ ಮತ್ತು ಪ್ರಧಾನಿ ಸ್ಥಾನದ ಘನತೆ

Most read

11 ವರ್ಷಗಳ ಅಧಿಕಾರದ ಬಳಿಕವೂ ನರೇಂದ್ರ ಮೋದಿಯವರು ಹಲವು ದಶಕಗಳ ಹಿಂದಿನ ಹಳಸಲು ವಿಷಯ ಹಿಡಿದುಕೊಂಡು ಸದಾ ವಿಪಕ್ಷಗಳನ್ನು ಅಣಕಿಸುವುದು, ಈಗ ಬದುಕಿಯೇ ಇಲ್ಲದ ಹಿಂದಿನ ಪ್ರಧಾನಿಗಳನ್ನು ಟೀಕಿಸುವುದು, ನಿಂದಿಸುವುದು, ಗೇಲಿಮಾಡುವುದು, ವಿದೇಶಕ್ಕೆ ಹೋದಾಗ ಅಸಹ್ಯ ಎನಿಸುವ ರೀತಿಯಲ್ಲಿ ವಿದೇಶೀ ಗಣ್ಯರ ಮೈಮೇಲೆ ಬಿದ್ದು ಅಪ್ಪಿಕೊಳ್ಳುವುದು, ಬೆನ್ನು ತಟ್ಟುವುದು, ಅವರು ತನ್ನ ವೈಯಕ್ತಿಕ ಸ್ನೇಹಿತ ಎಂದು ಬಿಂಬಿಸಲು ಯತ್ನಿಸುವುದು, ಗಹ ಗಹಿಸಿ ನಗುವುದು, ನಗೆ ಚಟಾಕಿಗಳನ್ನು ಹಾರಿಸುವುದು, ಗೊತ್ತಿಲ್ಲದ ಭಾಷೆಯಲ್ಲಿ ತಪ್ಪು ತಪ್ಪು ಮಾತನಾಡುವುದು, ಜಾಗತಿಕ ನಾಯಕರ ಮುಂದೆ ಹಾಸ್ಯಾಸ್ಪದ ವಿಚಾರಗಳನ್ನು ಪ್ರಸ್ತಾಪಿಸುವುದು, ಹೀಗೆ ಸ್ಥಾನದ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಯಾಕೆ ವರ್ತಿಸುತ್ತಾರೆ?

ಇತ್ತೀಚೆಗೆ ಕೆನಡಾದಲ್ಲಿ ಜಿ7 ಶೃಂಗಸಭೆ ನಡೆಯಿತು. ಜಿ7 ಎನ್ನುವುದು ಬಹಳ ಮುಂದುವರಿದ ಬಲಾಢ್ಯ ರಾಷ್ಟ್ರಗಳ ಒಂದು ಒಕ್ಕೂಟ. ಸಹಜವಾಗಿಯೇ ಭಾರತ ಇದರ ಭಾಗವಲ್ಲ. ಆದರೂ ಭಾರತದಂತಹ ಕೆಲ ಅಭಿವೃದ್ಧಿಶೀಲ ದೊಡ್ಡ ರಾಷ್ಟ್ರಗಳನ್ನು ಈ ಸಮಾವೇಶದ ಭಾಗವಾಗಿ ಕರೆಯುವುದಿದೆ. ಹಾಗೆಯೇ ಭಾರತವನ್ನೂ ಆಹ್ವಾನಿಸಲಾಗಿತ್ತು.

ಆರಂಭದಲ್ಲಿ ಭಾರತಕ್ಕೆ ಆಹ್ವಾನ ನೀಡಿರಲಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಭಾರತಕ್ಕೆ ಇದೊಂದು ಅವಮಾನ ಎಂದೂ ವಾದಿಸಲಾಗಿತ್ತು. ಭಾರತದ ಗೋದಿ ಮಾಧ್ಯಮಗಳು ವಿಶೇಷವಾಗಿ ಎ ಎನ್‌ ಐ ಯ ಸ್ಮಿತಾ ಪ್ರಕಾಶ್‌, ಹೇಗೆ ಜಿ7 ಅಪ್ರಸ್ತುತ ಒಂದು ಒಕ್ಕೂಟ, ಈಗ ಆಪರೇಷನ್‌ ಸಿಂಧೂರ ನಡೆಯುತ್ತಿದ್ದು ಮೋದಿಯವರಿಗೆ ಆಹ್ವಾನ ಕೊಟ್ಟರೂ ಅವರು ಹೋಗುವವರಲ್ಲ ಎಂದೆಲ್ಲ ರೋಚಕ ಕತೆಗಳನ್ನು ಕಟ್ಟಿ ಪ್ರಸಾರ ಮಾಡಿದ್ದರು.

ಜಿ 7- 2025

ಆದರೆ, ಕಡೆಗಳಿಗೆಯಲ್ಲಿ ಭಾರತಕ್ಕೆ ಆಹ್ವಾನ ನೀಡುತ್ತಲೇ ಸಿಕ್ಕಿದ್ದೇ ಚಾನ್ಸ್‌ ಎಂದು ಸೈಪ್ರಸ್‌, ಕ್ರೊಯೇಶಿಯಾ ಪ್ರವಾಸಗಳ್ನೂ ಸೇರಿಸಿಕೊಂಡು ಮೋದಿಯವರು ಕೆನಡಾಕ್ಕೆ ಹಾರಿಯೇ ಬಿಟ್ಟರು. ಇಡೀ ಸಮಾವೇಶ ಕಾಟಾಚಾರಕ್ಕೆ ನಡೆದುದು, ಅಮೆರಿಕಾ ಅಧ್ಯಕ್ಷ ಟ್ರಂಪ್‌ ನಡುವಿನಲ್ಲಿಯೇ ಸ್ವದೇಶಕ್ಕೆ ಮರಳಿದ್ದು, ಟ್ರಂಪ್‌ ಆಹ್ವಾನವನ್ನು ಮೋದಿ ತಿರಸ್ಕರಿಸಿದರು ಎಂಬ ವರ್ಣರಂಜಿತ ಕತೆಗಳನ್ನು ತೇಲಿಬಿಟ್ಟದ್ದು ಇವುಗಳೆಲ್ಲ ಬೇರೆಯೇ ವಿಚಾರ. ಅದಿಲ್ಲಿ ಅಪ್ರಸ್ತುತ.

ಘನತೆ ಮೀರಿದ ವರ್ತನೆ

ಜಿ7 ಶೃಂಗ ಸಭೆಯಲ್ಲಿ ಮೋದಿಯವರು ಫ್ರಾನ್ಸ್‌ ಅಧ್ಯಕ್ಷ ಮೆಕ್ರಾನ್‌ ರನ್ನು ಭೇಟಿಯಾದ ಸಂದರ್ಭದ ದೃಶ್ಯ ಮಾತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಮೋದಿಯವರು ಈ ವಿದೇಶ ಪ್ರವಾಸ ಹೊರಡುವುದಕ್ಕೆ ಕೆಲವೇ ದಿನಗಳ ಮೊದಲು ಅಹಮದಾಬಾದ್‌ ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ 300 ಕ್ಕೂ ಅಧಿಕ ಮಂದಿ ಸುಟ್ಟು ಕರಕಲಾಗಿದ್ದು, ಬಳಿಕ ಹೆಲಿಕಾಪ್ಟರ್‌ ದುರಂತ, ರೈಲು ದುರಂತಗಳಲ್ಲಿ ಅನೇಕರು ಜೀವ ಕಳೆದುಕೊಂಡಿದ್ದು ಇಡೀ ದೇಶವೇ ದುಃಖದಿಂದ ಸೂತಕದ ಮನೆಯಂತಾಗಿತ್ತು; ಜಗತ್ತೇ ತಲ್ಲಣಗೊಂಡಿತ್ತು. ಇದು ದೇಶದ ಪ್ರಧಾನಿಯನ್ನೂ ಕಾಡಬೇಕಿತ್ತು. ಅವರ ವರ್ತನೆಗಳಲ್ಲಿ ಇದು ಎದ್ದು ಕಾಣಬೇಕಿತ್ತು. ಆದರೆ ಫ್ರಾನ್ಸ್‌ ಅಧ್ಯಕ್ಷ ಮೆಕ್ರಾನ್‌ ಅವರನ್ನು ಭೇಟಿಯಾಗಿ ಅವರನ್ನು ಬಿಗಿದಪ್ಪಿಕೊಂಡು ಬೆನ್ನು ತಟ್ಟಿದ ಭಾರತದ ಪ್ರಧಾನಿ ಮೋದಿ ಸ್ಥಾನದ ಘನತೆಯನ್ನೂ ಮರೆತು ʼಈಗ ನೀವು ಟ್ವಿಟರ್‌ ನಲ್ಲಿ ಆಕ್ಟಿವ್‌ ಆಗಿದ್ದೀರಿ.. ಹ ಹ ಹಾ..” ಎಂದು ಗಹ ಗಹಿಸಿ ನಗುತ್ತಾ ನಗೆಚಟಾಕಿ ಹಾರಿಸಿದ್ದನ್ನು ನೋಡಿದ ಯಾರಿಗೇ ಆಗಲಿ ಆಗಿನ ಮೋದಿಯವರ ವರ್ತನೆ ಸರಿಕಾಣಲಿಲ್ಲ. ಇಬ್ಬರೂ ಆಯಾ ದೇಶದ ಮುಖ್ಯಸ್ಥರೇ ಹೊರತು ಅದರಾಚೆಗೆ ಅವರಿಗೆ ಯಾವ ಸಂಬಂಧವೂ ಇಲ್ಲ. ಹಾಗಾಗಿ ಅದೇ ಘನತೆಯನ್ನು ಮೋದಿಯವರು ಕಾಪಾಡ ಬೇಕಿತ್ತು ಎಂದು ಅನೇಕರು ಅಭಿಪ್ರಾಯ ಪಟ್ಟರು.

ಫ್ರಾನ್ಸ್‌ ಅಧ್ಯಕ್ಷ ಮೆಕ್ರಾನ್‌ ಮತ್ತು ಮೋದಿ

ಇನ್ನೊಂದು ವರದಿಯ ಪ್ರಕಾರ ಅಹಮದಾಬಾದ್‌ ನಲ್ಲಿ ನಡೆದ ದುರಂತ ಸಾವಿನ ಬಗ್ಗೆ ಮರುಕ ವ್ಯಕ್ತಪಡಿಸಿ ಸಾಂತ್ವನದ ಮಾತಾಡಲು ಫ್ರಾನ್ಸ್‌ ಅಧ್ಯಕ್ಷ ಉದ್ದೇಶಿಸಿದ್ದರು. ಆದರೆ ಭಾರತದ ಪ್ರಧಾನಿಯ ಹಾಸ್ಯಾಸ್ಪದ ಜೋಕ್‌ ನಿಂದಾಗಿ ಇಡೀ ವಾತಾವರಣವೇ ಗಾಂಭೀರ್ಯ ಕಳೆದುಕೊಂಡಿತು.

ದೇಶದ ಪ್ರಧಾನಿಯ ವರ್ತನೆ ಹೇಗಿರಬೇಕು?

ಈಗಾಗಲೇ ಹೇಳಿದ ಹಾಗೆ ಜಿ7 ಶೃಂಗ ಸಭೆಯಲ್ಲಿ ಕೆಲ ನಾಯಕರೊಂದಿಗೆ ಭಾರತದ ಪ್ರಧಾನಿಯ ವರ್ತನೆ, ಹೇಸಿಗೆ ಅನಿಸುವ ರೀತಿಯಲ್ಲಿ ಇತರ ದೇಶಗಳ ಸರ್ವೋಚ್ಚ ನಾಯಕರನ್ನು ಬಿಗಿದಪ್ಪಿ ಬೆನ್ನು ತಟ್ಟುವುದು, ಹಾಸ್ಯಾಸ್ಪದ ನಗೆಚಟಾಕಿ ಹಾರಿಸಿ ಲೆಕ್ಕಕ್ಕಿಂತ ಹೆಚ್ಚೇ ನಗುವುದು ಇವೆಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ಮತ್ತು ಚರ್ಚೆಗೆ ಕಾರಣವಾಯಿತು. ಎಲ್ಲಿಯ ತನಕ ಎಂದರೆ ಬಿಜೆಪಿಯ ಕಟ್ಟರ್‌ ಬೆಂಬಲಿಗರಲ್ಲಿ ಕೆಲವರೂ ಮೋದಿಯವರ ವಿದೇಶ ಯಾತ್ರೆಗಳ ಸಂದರ್ಭದ ಮುಜುಗರವೆನಿಸುವ ವರ್ತನೆಗಳನ್ನು ವಿಶ್ಲೇಷಿಸುತ್ತಾ ದೇಶವೊಂದರ ಪ್ರಧಾನಿ ಎನಿಸಿದವರು ವಿದೇಶೀ ಗಣ್ಯರನ್ನು ಭೇಟಿಯಾಗುವಾಗ ಹೇಗೆ ಘನತೆಯಿಂದ ವರ್ತಿಸಬೇಕು ಎಂದೆಲ್ಲ ಚರ್ಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯತೊಡಗಿದರು.

ಹೀಗೆ ಬರೆದವರಲ್ಲಿ ಒಬ್ಬ ಪ್ರಮುಖರೆಂದರೆ ಬಲಪಂಥೀಯರ ಡಾರ್ಲಿಂಗ್‌ ಅನಿಸಿಕೊಂಡಿರುವ ನಾಗೇಶ್ವರ್‌ ರಾವ್‌ ಐಪಿಎಸ್‌ ಎನ್ನುವವರು. ಅವರ ಮಾತುಗಳಲ್ಲಿ ಸಕಾಲಿಕವೆನಿಸುವ ಮತ್ತು ಅನೇಕ ಅರ್ಥಪೂರ್ಣ ವಿಚಾರಗಳಿರುವುದರಿಂದ ಅದರ ಹೇಳಿಕೆಯ ಭಾವಾನುವಾದವನ್ನು ಇಲ್ಲಿ ಹಾಗೆಯೇ ಕೊಡುತ್ತಿದ್ದೇನೆ.

ನಾಗೇಶ್ವರ್‌ ರಾವ್‌ ಐಪಿಎಸ್‌ ಮಾತು

“ಓರ್ವ ಪ್ರಧಾನಿಯಾಗಿ ಜಾಗತಿಕ ಗೌರವವನ್ನು ಗಳಿಸಿಕೊಳ್ಳಬೇಕಿದ್ದರೆ, ಪ್ರತಿಯೊಂದು ಸನ್ನೆ, ಮಾತು ಮತ್ತು ನಿಲುವು ಇವು ಅಚಲ ಆತ್ಮವಿಶ್ವಾಸವನ್ನು, ಅಧಿಕಾರದ ದೃಢ ನಿಲುವನ್ನು ಮತ್ತು ಹರಿತವಾದ ಸಾಂಸ್ಕೃತಿಕ ಬುದ್ಧಿಮತ್ತೆಯನ್ನು ಕಾಣಿಸುವಂತಿರಬೇಕು. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ರಂಗದಲ್ಲಿ ದೇಹಭಾಷೆಯು ಪದಗಳಿಗಿಂತ ಹೆಚ್ಚು ಗಟ್ಟಿಯಾಗಿ ಮಾತಾಡುತ್ತದೆ. ಜಾಗತಿಕ ನಾಯಕರನ್ನು ಅಭಿವಾದಿಸುವಾಗ (ಗ್ರೀಟ್‌ ಮಾಡುವಾಗ) ಅಥವಾ ಮಹತ್ತ್ವದ ಮಾತುಕತೆಗಳನ್ನು ಮುನ್ನಡೆಸುವಾಗ, ಪ್ರಧಾನಿಯೊಬ್ಬರು ಹೇಗೆ ನಿಂತುಕೊಳ್ಳುತ್ತಾರೆ, ಅವರ ಕೈಯ ಹಿಡಿತ ಅಥವಾ ನೋಟದ ರೀತಿ ಹೇಗಿರುತ್ತದೆ ಇವನ್ನೆಲ್ಲ ಜಾಗತಿಕವಾಗಿ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಇವು ಅವರ ನಾಯಕತ್ವ ಮತ್ತು ಅವರ ರಾಷ್ಟ್ರಗಳ ಅಧಿಕಾರ ಶಕ್ತಿಯ ಗ್ರಹಿಕೆಯನ್ನು ರೂಪಿಸುತ್ತಿರುತ್ತದೆ.

ಎತ್ತರದ ನಿಲುವು, ದೃಢವಾದ ಬೆನ್ನೆಲುಬು, ಚಾಚಿಕೊಂಡ ಭುಜಗಳು, ಹೀಗೆ ನಿಂತುಕೊಂಡು  ವಿದೇಶದ ಅಧ್ಯಕ್ಷನಿಗೆ ಹಸ್ತಲಾಘವ ನೀಡುವುದನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ. ಇಲ್ಲಿ ಹಿಡಿತ ದೃಢವಾಗಿದ್ದು ಆಕ್ರಮಣವಿಲ್ಲದೆಯೇ ಶಕ್ತಿಯನ್ನು ತಲಪಿಸುತ್ತದೆ. ಕಣ್ಣುಗಳು ಅಚಲವಾಗಿ ಭೇಟಿಯಾಗುತ್ತವೆ. ಆಮೂಲಕ, ಸಮಾನತೆಯನ್ನು ಮತ್ತು ಗೌರವವನ್ನು ತಣ್ಣಗೆ ಖಚಿತಪಡಿಸುತ್ತದೆ. ಈ ಕಿರಿದಾದ ಮತ್ತು ಶಕ್ತಿಯುತ ವಿನಿಮಯವು ರಾಜತಾಂತ್ರಿಕ ಟೋನ್ ಸ್ಥಾಪಿಸುತ್ತದೆ. ಬಿಗಿದಪ್ಪಿಕೊಳ್ಳುವುದು ಬೆನ್ನು ತಟ್ಟುವುದು ಇತ್ಯಾದಿ ಮಾಮೂಲಿ ನಡೆವಳಿಕೆಗಳು ಒಂದು ಸಂಸ್ಕೃತಿಯಲ್ಲಿ ಬೆಚ್ಚನೆಯ ಭಾವವನ್ನು ಸೂಚಿಸ ಬಹುದು. ಆದರೆ, ಹೆಚ್ಚು ಸಂಪ್ರದಾಯವಾದಿ ದೇಶದ ನಾಯಕನಿಗೆ ಅವು ಮುಜುಗರಕ್ಕೆ ಕಾರಣವಾಗ ಬಹುದು; ಶಿಷ್ಟಾಚಾರದ ಉಲ್ಲಂಘನೆಯ ಅಪಾಯಕ್ಕೂ ಕಾರಣವಾಗಬಹುದು. ತೋಳನ್ನು ಮುಟ್ಟುವುದು, ತೀರಾ ಹತ್ತಿರಕ್ಕೆ ಬಾಗುವುದು, ಅಥವಾ ಜೋರಾಗಿ ನಗುವುದು, ಇವೆಲ್ಲ ಜಾಗತಿಕ ವೇದಿಕೆಯಲ್ಲಿ ಅಗತ್ಯವಿರುವ ಗಾಂಭೀರ್ಯವನ್ನು  ಶಿಥಿಲಗೊಳಿಸಬಹುದು.

ವಿದೇಶೀ ನಾಯಕನೊಬ್ಬ ಇಂಗ್ಲಿಷ್‌ ಅಥವಾ ಫ್ರೆಂಚ್‌ನಲ್ಲಿ ಅಥವಾ ಅನುವಾದಕರ ಮೂಲಕ ಮಾತನಾಡುವುದನ್ನು ಕಲ್ಪಿಸಿಕೊಳ್ಳಿ. ತನ್ನ ನಿಜ ಉದ್ದೇಶವನ್ನು ಆತ ತನ್ನ ಮಾತೃಭಾಷೆಯ ಮೂಲಕ ಮರೆಮಾಚಬಹುದು. ಅವರ ಮಾತುಗಳಲ್ಲಿ ಅನೇಕ ಪದರಗಳಿರುತ್ತವೆ – ರಾಜತಾಂತ್ರಿಕ ಶುಭಾಶಯ ವಿನಿಮಯ, ಸುಪ್ತ ಸುಳಿವುಗಳು ಅಥವಾ ಗುಪ್ತ ಉದ್ದೇಶಗಳು.. ಹೀಗೆ. ಅವರು ಏನು ಹೇಳಿರಬಹುದು? ವ್ಯಾಪಾರ ವ್ಯವಹಾರಗಳ ಬಗ್ಗೆ ಸೌಜನ್ಯದ ಟಿಪ್ಪಣಿ, ಅಥವಾ ಉದ್ವಿಗ್ನತೆ ಶಮನ ಮಾಡಲು ಒಂದು ಪರಿಹಾಸ್ಯ.‌ ಅವರ ಮಾತಿನ ಇಂಗಿತವೇನು ಎನ್ನುವುದು‌ ಸದಾ ಒಂದು ಸವಾಲು. ಅದನ್ನು ಬಿಡಿಸಿ ಅರ್ಥ ಮಾಡಿಕೊಳ್ಳಲು ಸೂಕ್ಷ್ಮ ಗ್ರಹಿಕೆಯ ಸಾಮರ್ಥ್ಯ ಬೇಕು, ಸಾಂಸ್ಕೃತಿಕ ನಿರರ್ಗಳತೆ ಬೇಕು.

ಗುಜರಾತಿ ಮತ್ತು ಹಿಂದಿಯಲ್ಲಿ ಬೇರುಗಳನ್ನು ಹೊಂದಿರುವ ನರೇಂದ್ರ ಮೋದಿಯಂತಹ ನಾಯಕರಿಗೆ ಅನುವಾದಕರು ಅತ್ಯಗತ್ಯ. ಅಂದ ಮೇಲೆ ಮೋದಿಯವರ ಗಹಗಹಿಕೆಯ ನಗು ಹಾರ್ದಿಕವಾಗಿ ಕಾಣುತ್ತದೆಯೇ? ಅದು ನೈಜವಾದುದೇ ಅಥವಾ ಗ್ರಹಿಕೆಯ ಸಮಸ್ಯೆಯನ್ನು ಮರೆ ಮಾಚುವ ತಂತ್ರವೇ?

ಜಪಾನಿನ ಪ್ರಧಾನಿಗೆ ಇಷ್ಟವಾಗದ ಮೋದಿ ಅಪ್ಪುಗೆ

ಭಾರೀ ಪ್ರಭಾವ ಹೊಂದಿರುವ ಪ್ರಧಾನಿ ಕೂಡಾ ವಡನಗರ್‌, ಗುಜರಾತ್‌ ನ ಒರಟು ಗುಣವನ್ನು ಹೊಂದಿರ ಬಹುದು, ಜಾಗತಿಕ ನಾಯಕತ್ವವು ಮುಂದಿಡುವ ಬೇಡಿಕೆಗಳಿಂದಾಗಿ ಅವರು ಹಿಂದೆ ಇದ್ದಂತೆಯೇ ಉಳಿದು ಕೊಂಡಿರಬಹುದು. ಇದು ಬಹುಸೂಕ್ಷ್ಮ ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಏನನ್ನು ಬಯಸುತ್ತದೋ ಅದನ್ನು ಪೂರ್ತಿಯಾಗಿ ಸಾಕಾರಗೊಳಿಸಲು ಸಾಧ್ಯವಾಗದಿರುವುದನ್ನು ತೋರಿಸುತ್ತದೆ. ಚುನಾವಣೆ ಗೆದ್ದು ಪ್ರಧಾನಿಯಾಗುವುದು ಒಂದು ದೊಡ್ಡ ಸಾಧನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜಾಗತಿಕ ರಂಗದಲ್ಲಿ ಭಾರತದ ಹಿತಾಸಕ್ತಿಯನ್ನು ಕಾಪಾಡುವುದು ಬೇರೆಯೇ ವಿಚಾರ. ಮೋದಿಯವರು ಈ ವಿಚಾರದಲ್ಲಿ ಒರಟೊರಟಾಗಿ ಕಾಣುವುದು ಮಾತ್ರವಲ್ಲ, ಅಗತ್ಯ ಸಾಧನ ಸವಲತ್ತು ಇಲ್ಲದವರಂತೆಯೂ ಮತ್ತು ಕೇವಲ ಅಧಿಕಾರ ಹಿಡಿಯಲು ಹಿಂದೂ ಮತದಾರರನ್ನು ಒಲಿಸಿಕೊಳ್ಳುವ ಕೌಶಲ ಹೊಂದಿರುವವರಂತೆಯೂ ಕಾಣಿಸುತ್ತಿದ್ದಾರೆ.

ಮೋದಿಯವರ 11 ವರ್ಷಗಳ ಅಧಿಕಾರಾವಧಿಯಲ್ಲಿ ಇಂಡಿಯಾದ ರಾಜತಾಂತ್ರಿಕತೆ ಘೋರ ವೈಫಲ್ಯ ಕಂಡಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಪುರಾವೆ ಕಣ್ಣಮುಂದೆಯೇ ಇದೆ- ಪಹಲ್ಗಾಮ್‌ ನರಮೇಧದಲ್ಲಿ 25 ಹಿಂದೂಗಳನ್ನು ಭಯೋತ್ಪಾದಕರು ಕೊಂದು ಹಾಕಿದ ತರುವಾಯ ಮಹತ್ವದ ಒಂದೇ ಒಂದು ದೇಶವೂ ಇಂಡಿಯಾದ ಜತೆ ನಿಲ್ಲಲಿಲ್ಲ. ಇದು ಮೋದಿಯವರ ಜಾಗತಿಕ ಸ್ಥಾನಮಾನ ಎಷ್ಟು ದುರ್ಬಲ ಎಂಬುದನ್ನು ಬಹಿರಂಗಪಡಿಸಿದೆ.

ಪ್ರಧಾನಿಯೊಬ್ಬರ ವರ್ತನೆ ಜಾಗತಿಕ ಗ್ರಹಿಕೆಗಳನ್ನು ರೂಪಿಸುತ್ತದೆ ಎನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.”

ಕೀಳರಿಮೆಯನ್ನು ಮುಚ್ಚಿಕೊಳ್ಳಲು ಅವರು ಹೀಗೆ ವರ್ತಿಸುತ್ತಿದ್ದಾರೆಯೇ?

ನಿಮ್ಮ ಹಿನ್ನೆಲೆ, ವೈಯಕ್ತಿಕ ನಿಲುವು ಒಲವುಗಳು ಏನೇ ಇರಲಿ, ಒಂದು ಮಹತ್ವದ ಸ್ಥಾನವನ್ನು ನೀವು ಅಲಂಕರಿಸಿದ ಮೇಲೆ ಆ ಸ್ಥಾನದ ಘನತೆಯ ಬಗ್ಗೆ ನಿಮ್ಮಲ್ಲಿ ಸದಾ ಎಚ್ಚರಿರಬೇಕು, ಹಿಂದಿನವರ ಸಾಧನೆಯನ್ನು ಗೌರವಿಸಬೇಕು,  ಹಿಂದಿನವರು ಕಾಪಾಡಿಕೊಂಡು ಬಂದ ಆ ಸ್ಥಾನದ ಘನತೆಯನ್ನು ನೀವೂ ಕಾಪಾಡಬೇಕು, ಘನತೆಯಿಂದ ವರ್ತಿಸಬೇಕು ಎಂದು ಜನರು ಆಶಿಸುವುದು ಸಹಜವೇ ಆಗಿದೆ.

ಆದರೆ 11 ವರ್ಷಗಳ ಅಧಿಕಾರದ ಬಳಿಕವೂ ನರೇಂದ್ರ ಮೋದಿಯವರು ಹೀಗೇಕೆ ವರ್ತಿಸುತ್ತಾರೆ? ಹಲವು ದಶಕಗಳ ಹಿಂದಿನ ಹಳಸಲು ವಿಷಯ ಹಿಡಿದುಕೊಂಡು ಸದಾ ವಿಪಕ್ಷಗಳನ್ನು ಅಣಕಿಸುವುದು, ಈಗ ಬದುಕಿಯೇ ಇಲ್ಲದ ಹಿಂದಿನ ಪ್ರಧಾನಿಗಳನ್ನು ಟೀಕಿಸುವುದು, ನಿಂದಿಸುವುದು, ಗೇಲಿಮಾಡುವುದು, ವಿದೇಶಕ್ಕೆ ಹೋದಾಗ ಅಸಹ್ಯ ಎನಿಸುವ ರೀತಿಯಲ್ಲಿ ವಿದೇಶೀ ಗಣ್ಯರ ಮೈಮೇಲೆ ಬಿದ್ದು ಅಪ್ಪಿಕೊಳ್ಳುವುದು, ಬೆನ್ನು ತಟ್ಟುವುದು, ಅವರು ತನ್ನ ವೈಯಕ್ತಿಕ ಸ್ನೇಹಿತ ಎಂದು ಬಿಂಬಿಸಲು ಯತ್ನಿಸುವುದು, ಗಹ ಗಹಿಸಿ ನಗುವುದು, ನಗೆ ಚಟಾಕಿಗಳನ್ನು ಹಾರಿಸುವುದು, ಗೊತ್ತಿಲ್ಲದ ಭಾಷೆಯಲ್ಲಿ ತಪ್ಪು ತಪ್ಪು ಮಾತನಾಡುವುದು, ಜಾಗತಿಕ ನಾಯಕರ ಮುಂದೆ ಹಾಸ್ಯಾಸ್ಪದ ವಿಚಾರಗಳನ್ನು ಪ್ರಸ್ತಾಪಿಸುವುದು, ಹೀಗೆ ಸ್ಥಾನದ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಯಾಕೆ ನರೇಂದ್ರ ಮೋದಿಯವರು ವರ್ತಿಸುತ್ತಾರೆ?

ಮೋದಿಯವರು ಹೆಚ್ಚು ಓದಿದವರಲ್ಲ, ಅವರ ಡಿಗ್ರಿ ಸರ್ಟಿಫಿಕೇಟುಗಳ ಬಗ್ಗೆ ಈಗಲೂ ವಿವಾದವಿದೆ, ಆರ್ಥಿಕ ವಿಚಾರಗಳ ಬಗ್ಗೆಯಾಗಲೀ, ಜಾಗತಿಕ ರಾಜಕಾರಣದ ಬಗ್ಗೆಯಾಗಲೀ ಅವರಿಗೆ ಹೆಚ್ಚಿನ ಅನುಭವ, ಅರಿವು ಇಲ್ಲ. ಈ ಎಲ್ಲ ಕೀಳರಿಮೆಯನ್ನು ಮುಚ್ಚಿಹಾಕಲು ಅವರು ಹೀಗೆ ವರ್ತಿಸುತ್ತಿದ್ದಾರೆಯೇ? ಗೊತ್ತಿಲ್ಲ.

ಆದರೆ ವಿದೇಶೀ ಗಣ್ಯರನ್ನು ಭೇಟಿಯಾಗುವಾಗ ಅವರ ವರ್ತನೆ ದೇಶವೊಂದರ ಮುಖ್ಯಸ್ಥ ಎಂಬ ನೆಲೆಯಲ್ಲಿ ಅವರಿಗಿರುವ ಸ್ಥಾನದ ಘನತೆಯನ್ನು ಕುಂದಿಸಿರುವುದಂತೂ ಸತ್ಯ. ಇದು ಜಾಗತಿಕವಾಗಿ ಭಾರತದ ರಾಜಕೀಯ, ಆರ್ಥಿಕ ಸಹಿತ ಅನೇಕ ಸ್ಥಾನಮಾನಗಳ ಮೇಲೂ ದುಷ್ಪರಿಣಾಮ ಬೀರಿರುವುದೂ ಸತ್ಯ. ಈ ವಿಚಾರದಲ್ಲಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ರ ವರ್ತನೆಗಳಿಂದ ಕಲಿಯಬೇಕಾದುದು ಬಹಳಷ್ಟಿದೆ. ಆದರೆ ಕಲಿಯುತ್ತಾರೆಯೇ ಎನ್ನುವುದು ಉತ್ತರವಿಲ್ಲದ ಪ್ರಶ್ನೆ.

ಶ್ರೀನಿವಾಸ ಕಾರ್ಕಳ
ಚಿಂತಕರು

ಇದನ್ನೂ ಓದಿತೆರೆ ಮರೆಯ ರಾಜಕೀಯ ಜನರಿಗೆ ಅರ್ಥವಾಗುವುದು ಎಂದು?

More articles

Latest article