ಜಸ್ಟಿಸ್‌ ನಾಗರತ್ನ ಅವರು ಕೂಡ ಹೇಳಿದ್ದಾರೆ, ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಕೆಲಸ ಮಾಡುತ್ತಿದ್ದಾರೆ: ಕೃಷ್ಣಭೈರೇಗೌಡ

Most read

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಸಚಿವ ಕೃಷ್ಣಭೈರೇಗೌಡ, ಇತ್ತೀಚಿಗೆ ಜಸ್ಟಿಸ್ ನಾಗರತ್ನ ಅವರು ಹೇಳಿದ್ದಾರೆ ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡುವ ಮೊದಲು ಪ್ರಾಥಮಿಕ ತನಿಖೆ ನಡೆಯಬೇಕು. ಭಾರತ ಸರ್ಕಾರ ಸೆಪ್ಟೆಂಬರ್ 3, 2021 ರಲ್ಲಿ 17 ಎ ಸೆಕ್ಷನ್ ಅನ್ನು ಹೇಗೆ ಪರಿಗಣಿಸಬೇಕೆಂದು ನಿಯಮಾವಳಿ ರೂಪಿಸಿದ್ದಾರೆ. ಅಂದರೆ ಪೊಲೀಸ್ ಅಧಿಕಾರಿ ಒಂದು ಹುದ್ದೆಯಲ್ಲಿ ಇರುವ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಲು ಈ ಸೆಕ್ಷನ್ ಅಡಿ ಅನುಮತಿ ಪಡೆಯಬೇಕು. ಪ್ರಸ್ತುತ ಈ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ಅನುಮತಿ ಪಡೆದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

17 ಎ ಸೆಕ್ಷನ್ ಇರುವುದೇ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವ ಸಲುವಾಗಿ. ಮಾನ್ಯ ರಾಜ್ಯಪಾಲರೇ ಯಾವ ಪೊಲೀಸ್ ಅಧಿಕಾರಿಯು ತನಿಖೆಗೆ ಅನುಮತಿ ನೀಡಿ ಎಂದು ನಿಮಗೆ ವರದಿ ನೀಡಿದ್ದಾರೆ? ಯಾವ ಪೊಲೀಸ್ ಅಧಿಕಾರಿ ನಿಮಗೆ ಅನುಮತಿ ಕೇಳಿದ್ದಾರೆ ಆ ದಾಖಲೆ ಕೊಡಿ ಎಂದು ಕೇಳಿದ್ದಾರೆ.

ಪೊಲೀಸ್ ಅಧಿಕಾರಿಗಳು ತನಿಖೆಗೆ ಅನುಮತಿ ನೀಡಿ ಎಂದು ಈ ಹಿಂದೆ ಕೇಳಿರುವ ನಾಲ್ಕು ಪ್ರಕರಣಗಳು ನಿಮ್ಮ ಮುಂದೆ ಬಾಕಿ ಇವೆ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಅವರ ಮೇಲೆ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ನೀಡಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವ ಪೊಲೀಸ್ ಆಫೀಸರ್ ಕೂಡ ಅನುಮತಿ ಕೇಳದಿದ್ದರೂ ಏಕೆ ನೀಡಿದ್ದೀರಾ ಎಂದಿದ್ದಾರೆ.

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಪ್ರಕರಣದಲ್ಲಿ ತಪ್ಪು ಮಾಡಿರುವವರ ವಿರುದ್ಧ ದಾಖಲೆ ಇರಬೇಕು. ಯಾರ ಮೇಲೆ ಆಪಾದನೆ ಬಂದಿದೆ ಅವರು ಯಾವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಪೊಲೀಸರು ರಾಜ್ಯಪಾಲರಿಗೆ ನೀಡಬೇಕು. ಆಗ ಮಾತ್ರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಸಾಧ್ಯ. ಭಾರತ ಸರ್ಕಾರವು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮುಂಚೆ ಯಾವ, ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದಕ್ಕೆ ಪಟ್ಟಿಯನ್ನು ನೀಡಿದ್ದಾರೆ. ಇವುಗಳಲ್ಲಿ ಒಂದೇ ಒಂದು ದಾಖಲೆಯನ್ನು ರಾಜ್ಯಪಾಲರು ತೋರಿಸಲಿ ಎಂದು ಆಗ್ರಹಿಸದ್ದಾರೆ.

ತನಿಖೆಗೆ ಅನುಮತಿ ಕೊಡಿ ಎಂದು ಮನವಿ ಮಾಡುವ ಅಧಿಕಾರ ಇರುವುದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೆ ಮಾತ್ರ. ಪ್ರಸ್ತುತ ರಾಜ್ಯಪಾಲರು ಅನುಮತಿ ನೀಡಿರುವುದು ಸಂಪೂರ್ಣ ಕಾನೂನುಬಾಹಿರ. ಇತ್ತೀಚಿಗೆ ಜಸ್ಟಿಸ್ ನಾಗರತ್ನ ಅವರು ಕೂಡ, ರಾಜ್ಯಪಾಲರು ಕೇವಲ ಒಂದು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಸಿದ್ದರಾಮಯ್ಯನವರು ಬಹುಮತ ಪಡೆದು ಆಯ್ಕೆಯಾದ ಮುಖ್ಯಮಂತ್ರಿ. ಕನ್ನಡಿಗರ ಸ್ವಾಭಿಮಾನದ ಸಂಕೇತ ಇವರು. ದೆಹಲಿಯಲ್ಲಿರುವ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡಲು ಅವರು ಒಪ್ಪುವುದಿಲ್ಲ. ಕರ್ನಾಟಕದ ಮೇಲೆ ಕನ್ನಡಿಗರ ಮೇಲೆ ಮಾಡುತ್ತಿರುವ ಪ್ರಹಾರ ಎಂದಿದ್ದಾರೆ.

More articles

Latest article