ಹಿಂದಿ ಹೇರಿಕೆ | ಆಳ-ಅಗಲ ಮತ್ತು ಭೀಕರ ಅಪಾಯಗಳು

Most read

ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ 8 ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ 22 ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಕೂಡ ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿ ಕನ್ನಡಕ್ಕೂ ಅಧಿಕೃತ ಸಂಪರ್ಕ ಭಾಷೆಯ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಚಳವಳಿ ಆರಂಭಿಸಿದೆ. ನಾಳೆ (ಸೆ.14) ರಾಜ್ಯಾದ್ಯಂತ ನಡೆಯಲಿರುವ ಹಿಂದಿ ಹೇರಿಕೆ ವಿರೋಧಿ ದಿನಾಚರಣೆಯ ಹಿನ್ನೆಲೆಯಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಹಿಂದಿ ಹೇರಿಕೆಯ ಆಳ-ಅಗಲ ಮತ್ತು ಅಪಾಯಗಳ ಬಗ್ಗೆ ಬರೆದಿದ್ದಾರೆ.  

ನಮ್ಮ ನಡುವೆ ಚಾಲ್ತಿಯಲ್ಲಿರುವ ಕೆಲವು ಹಸಿಹಸಿ ಸುಳ್ಳುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಸುಳ್ಳುಗಳನ್ನು ಒಡೆಯುವ ಕೆಲಸವನ್ನು ಮೊದಲು ಮಾಡಬೇಕು. ಈ ದೇಶದ ಜನರಲ್ಲಿ ತುಂಬಲಾಗಿರುವ ಬಹುದೊಡ್ಡ ಸುಳ್ಳು ಎಂದರೆ ‘ಹಿಂದಿ ಈ ದೇಶದ ರಾಷ್ಟ್ರಭಾಷೆ’ ಎಂಬುದು. ಈ ಸುಳ್ಳು ಎಷ್ಟು ಜನಜನಿತವಾಗಿದೆ ಎಂದರೆ ಹಿಂದಿ ಭಾಷೆಯ ಎರಡು ಶಬ್ದಗಳ ಅರ್ಥ ಗೊತ್ತಿಲ್ಲದವನೂ ಇದನ್ನು ನಂಬಿಕೊಂಡಿದ್ದಾರೆ. ಈ ಸುಳ್ಳನ್ನು ಎಷ್ಟು ಆಕ್ರಮಣಕಾರಿಯಾಗಿ ಹಬ್ಬಿಸಲಾಗಿದೆ ಎಂದರೆ ನಾವು ಓದಿದ ಪಠ್ಯಪುಸ್ತಕಗಳಲ್ಲೂ ‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದು ಬರೆಯಲಾಗಿದೆ. ಅದನ್ನೇ ನಮ್ಮ ಶಿಕ್ಷಕರು ನಮಗೆ ಕಲಿಸಿದ್ದಾರೆ.

ಹಿಂದಿಯಾಗಲೀ, ಇನ್ಯಾವುದೇ ಭಾಷೆಯಾಗಲಿ ಈ ದೇಶದ ರಾಷ್ಟ್ರಭಾಷೆಯಲ್ಲ, ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ಇತ್ತೀಚಿಗೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶದಲ್ಲೂ ಹಿಂದಿ ರಾಷ್ಟ್ರಭಾಷೆಯಲ್ಲ, ರಾಷ್ಟ್ರಭಾಷೆಯೆಂಬುದು ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಹಾಗಿದ್ದರೆ ಹಿಂದಿ ಭಾಷೆ ಹೇಗೆ ಬಂದು ನಮ್ಮ ನಡುವೆ ನುಸುಳಿ ಕೊಂಡಿತು? ವಿಶೇಷವಾಗಿ ದ್ರಾವಿಡ ಭಾಷೆಗಳನ್ನಾಡುವ ಜನರಿಗೆ ಸಂಬಂಧವೇ ಇಲ್ಲದ ಈ ಭಾಷೆ ಹಂತಹಂತವಾಗಿ ನಮ್ಮನ್ನು ಆವರಿಸಿ ಕೊಳ್ಳುತ್ತಿರುವುದಕ್ಕೆ ಏನು ಕಾರಣ? ಯಾಕೆ ನಮ್ಮ ಮಕ್ಕಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲಾಗುತ್ತದೆ? ಕೇಂದ್ರ ಸರ್ಕಾರಿ ಇಲಾಖೆಗಳು, ಕಚೇರಿಗಳಲ್ಲಿ ಯಾರಿಗೂ ಅರ್ಥವಾಗದ ಹಿಂದಿ ಭಾಷೆಯನ್ನು ಯಾಕೆ ತಂದು ತುರುಕಲಾಗುತ್ತಿದೆ?

ನುಡಿ ಕನ್ನಡ

ಇದಕ್ಕೆಲ್ಲ ಉತ್ತರಗಳನ್ನು ಹುಡುಕಲು ಭಾರತ ಸ್ವಾತಂತ್ರ್ಯವನ್ನು ಪಡೆದ ನಂತರ ನಡೆದ ಬೆಳವಣಿಗೆಗಳನ್ನು ಗಮನಿಸಬೇಕು. ದೇಶ ಸ್ವತಂತ್ರಗೊಂಡು, ಸಂವಿಧಾನ ರಚಿಸುವ ಸಂದರ್ಭದಲ್ಲಿ ಇಡೀ ದೇಶಕ್ಕೆ ಒಪ್ಪಿತವಾಗುವ ಒಂದು ಭಾಷೆಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡಬೇಕು ಎಂಬ ಆಲೋಚನೆ ಹುಟ್ಟಿತು. ಹಿಂದಿ ಭಾಷೆ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರ ಬಳಕೆಯಲ್ಲಿ ಇದ್ದದ್ದರಿಂದಾಗಿ ಹಿಂದಿಯನ್ನೇ ಆ ಸಂಪರ್ಕ ಭಾಷೆಯನ್ನಾಗಿ ಮಾಡುವುದೆಂದು ಸಂವಿಧಾನ ನಿರ್ಮಾತೃಗಳು ತೀರ್ಮಾನಿಸಿದರು. ಆದರೆ ಹಿಂದಿ ರಾಜ್ಯಗಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಹಿಂದಿ ಅಪರಿಚಿತ ಭಾಷೆಯಾದ್ದರಿಂದ ಹಾಗೆ ಮಾಡಲು ಸಾಧ್ಯವಾಗದೇ, ಹಿಂದಿಯ ಜತೆ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಸಂವಿಧಾನದಲ್ಲೇ ಘೋಷಿಸಲಾಯಿತು. ಹದಿನೈದು ವರ್ಷಗಳ ನಂತರ ಇಂಗ್ಲಿಷ್ ಭಾಷೆಯನ್ನು ತೆಗೆದು ಹಿಂದಿಯೊಂದನ್ನೇ ದೇಶದ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವೂ ಸಂವಿಧಾನದಲ್ಲಿತ್ತು.

ಹಿಂದಿಯ ಜತೆ ಯಾವ ಸಂಬಂಧವೂ ಇಲ್ಲದ ದ್ರಾವಿಡ ರಾಜ್ಯಗಳು ಮತ್ತು ಇತರ ಹಿಂದಿಯೇತರ ರಾಜ್ಯಗಳು ಕೇಂದ್ರ ಸರ್ಕಾರದ ಏಕೈಕ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಹಿಂದಿಯನ್ನು ಪ್ರತಿಷ್ಠಾಪಿಸಲು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿರಲಿಲ್ಲ. ಇದು ಒಕ್ಕೂಟದ ಮೂಲಮಂತ್ರಕ್ಕೇ ವಿರುದ್ಧವಾಗಿತ್ತು. ಭಾರತದ ಅಖಂಡತೆಗೆ ಈ ಥರದ ಏಕಭಾಷಾ ಹೇರಿಕೆ ದೊಡ್ಡ ಅಪಾಯವಾಗಿ ಕಾಣಿಸ ತೊಡಗಿತು. ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಅಧಿಕೃತವಾಗಿ ಹೇರುವ ಈ ಹುನ್ನಾರಗಳ ವಿರುದ್ಧ ಪ್ರತಿಭಟಿಸಿದವು. ಹೀಗಾಗಿ 1963ರಲ್ಲಿ ದ್ರಾವಿಡ ರಾಜ್ಯಗಳ ಒತ್ತಡಕ್ಕೆ ಮಣಿದ ಸಂಸತ್ತು ಇಂಗ್ಲಿಷನ್ನೂ ಹಿಂದಿಯ ಜತೆ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಉಳಿಸಿಕೊಳ್ಳುವ ನಿರ್ಣಯವನ್ನು (The Official Languages Act, 1963 ) ಅಂಗೀಕರಿಸಿತು. ಆದರೆ 1964 ರಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಎಲ್ಲ ರಾಜ್ಯಗಳ ಮೇಲೂ ಹಿಂದಿಯನ್ನು ಹೇರುವ ಕುತಂತ್ರ ನಡೆಯಿತು. ಇದರ ವಿರುದ್ಧ ಆಗ ಹಿಂದಿಯೇತರ ರಾಜ್ಯಗಳು ತೀವ್ರ ಸ್ವರೂಪದಲ್ಲಿ ಪ್ರತಿಭಟಿಸಿದವು. ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಆಂಧ್ರಪದೇಶ ಮತ್ತು ಪಾಂಡಿಚೇರಿಗಳಲ್ಲಿ ವ್ಯಾಪಕ ಚಳವಳಿಗಳು ನಡೆದವು. ತಮಿಳುನಾಡಿನಲ್ಲಿ ಚಳವಳಿಯು ಹಿಂಸಾರೂಪಕ್ಕೂ ತಿರುಗಿತು. ಆಗ ಅನಿವಾರ್ಯವಾಗಿ ಕೇಂದ್ರ ಸರ್ಕಾರ 1963ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತಂದು, ಎಲ್ಲ ರಾಜ್ಯಗಳೂ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಒಪ್ಪಿ, ತಮ್ಮ ತಮ್ಮ ಶಾಸನಸಭೆಗಳಲ್ಲಿ ನಿರ್ಣಯ ಅಂಗೀಕರಿಸುವವರೆಗೂ ಇಂಗ್ಲಿಷ್ ಕೂಡ ಅಧಿಕೃತ ಸಂವಹನದ ಭಾಷೆಯಾಗಿ ಉಳಿಯುತ್ತದೆ ಎಂದು ಕಾನೂನು ಮಾಡಿತು.

ಸಾಂದರ್ಭಿಕ ಚಿತ್ರ

ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ವೈವಿಧ್ಯತೆ ಅನನ್ಯವಾದದ್ದು. ಇತರ ದೇಶಗಳೊಂದಿಗೆ ಭಾರತವನ್ನು ಹೋಲಿಸಲಾಗದು. ವಿವಿಧತೆಯಲ್ಲಿ ಏಕತೆ ಎಂಬುದು ಸ್ವಾತಂತ್ರ್ಯ ಚಳವಳಿಗೂ ಹಿಂದಿನ ಘೋಷ ವಾಕ್ಯವಾಗಿತ್ತು. ಎಲ್ಲ ಭಾಷಿಕ ಸಮುದಾಯಗಳೂ ತಮ್ಮ ವೈವಿಧ್ಯತೆಯನ್ನು ಉಳಿಸಿಕೊಂಡೇ ಈ ದೇಶ ಒಂದಾಗಿ ಉಳಿಯಲು ಸಹಕರಿಸಿದ್ದರು. ಬ್ರಿಟಿಷರ ಆಳ್ವಿಕೆಗೂ ಮುನ್ನ ಸಾವಿರಾರು ದೊರೆಗಳ, ಸಾಮಂತರ ಅಡಿಯಲ್ಲಿ ಛಿದ್ರವಾಗಿದ್ದ ಭೂಭಾಗಗಳೆಲ್ಲ ಒಂದಾಗಿಯೇ ದೇಶವಾಗಿದೆ. ಇಂಥ ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ದಾದಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ. ಅದು ಯಾವ ಕಾಲಕ್ಕೂ ಆಗಕೂಡದು. ಈ ಥರದ ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಜನರು ತಾವಾಡುವ ನುಡಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಅವರ ನುಡಿಗೆ ಹೊರತಾದ ಇನ್ಯಾವುದೋ ಅಪರಿಚಿತ ಭಾಷೆಯನ್ನೇ ನೀವು ಆಡಬೇಕು, ಬಳಸಬೇಕು ಎಂಬ ಫರ್ಮಾನು ಹೊರಡಿಸಿದರೆ ಆ ಭಾಷಾ ಸಮುದಾಯ ಬಂಡಾಯವೇಳುತ್ತದೆ.

ತುಂಬಾ ದೂರದ ಉದಾಹರಣೆಗಳು ಬೇಡ. ನಮ್ಮ ಪಾಕಿಸ್ತಾನದ ಬಾಂಗ್ಲಾದೇಶ ಯಾಕೆ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಿತು? ಎರಡೂ ದೇಶಗಳೂ ಒಂದೇ ಧರ್ಮದ ನೆಲೆಯನ್ನು ಹೊಂದಿದ್ದವು. ಹಾಗಿದ್ದಾಗ್ಯೂ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿದ್ದ ಬಾಂಗ್ಲಾದೇಶದ ವಿಮೋಚನಾ ಚಳವಳಿ ಯಾಕೆ ಆರಂಭವಾಯಿತು? ಬಾಂಗ್ಲಾದೇಶದ ಮುಸ್ಲಿಮರು ಬಂಗಾಳಿ ಭಾಷೆಯನ್ನು ತಾಯ್ನುಡಿಯನ್ನಾಗಿ ಹೊಂದಿದವರು. ಆದರೆ ಪಶ್ಚಿಮ ಪಾಕಿಸ್ತಾನದ ಪ್ರಭುಗಳು ಬಲವಂತವಾಗಿ ಬಾಂಗ್ಲಾದೇಶೀಯರ ಮೇಲೆ ಉರ್ದು ಭಾಷೆಯನ್ನು ಹೇರಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿ ಇಡೀ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಆರಂಭಗೊಂಡವು.  1952 ರ ಫೆಬ್ರವರಿ 21ರಂದು ಉರ್ದು ಹೇರಿಕೆ ಖಂಡಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿ 21 ಮಂದಿಯನ್ನು ಕೊಂದರು. ಭಾಷಾ ಚಳವಳಿಯೇ ಪ್ರತ್ಯೇಕ ರಾಷ್ಟ್ರ ಚಳವಳಿಯಾಗಿ ಬದಲಾಯಿತು. ಸುಮಾರು ಒಂಭತ್ತು ವರ್ಷಗಳ ವಿಮೋಚನಾ ಹೋರಾಟದ ನಂತರ ಭಾರತದ ಬೆಂಬಲದೊಂದಿಗೆ ಬಾಂಗ್ಲಾದೇಶ ವಿಮೋಚನೆಗೊಂಡಿತು. ವಿಶೇಷವೆಂದರೆ ಬಾಂಗ್ಲಾದಲ್ಲಿ ಗೋಲಿಬಾರ್ ನಡೆದ ಫೆ.21ರ ದಿನವನ್ನು ವಿಶ್ವಸಂಸ್ಥೆ ‘ವಿಶ್ವ ತಾಯ್ನುಡಿ ದಿನ’ವನ್ನಾಗಿ ಘೋಷಿಸಿತು.

ಬಾಂಗ್ಲಾ ವಿಮೋಚನೆಯ ಪಾಠವನ್ನು ನಮ್ಮ ದೇಶದ ರಾಜಕಾರಣಿಗಳು ಸರಿಯಾಗಿ ಅರಿತುಕೊಂಡೇ ಇಲ್ಲ. ಯಾವುದೇ ಭಾಷಿಕ ಸಮುದಾಯವನ್ನು ಹಿಂಸೆಯ ಮೂಲಕ, ಬಲಪ್ರಯೋಗದ ಮೂಲಕ ಹತ್ತಿಕ್ಕಲು ಯತ್ನಿಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಅದರಲ್ಲೂ ಸ್ಥಳೀಯ ಭಾಷೆಯನ್ನು ಧಿಕ್ಕರಿಸಿ ಇನ್ನೊಂದು ಭಾಷೆಯನ್ನು ಹೇರಲು ಯತ್ನಿಸಿದರೆ ಅದರಿಂದಾಗಿ ಬಾಂಗ್ಲಾ ದಂಗೆಯಂಥವು ಯಾವ ದೇಶದಲ್ಲಾದರೂ ನಡೆಯಬಹುದು. 1964-65 ರಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಚಳವಳಿಯೂ ಸಹ ಇಂಥದ್ದೆ ಸ್ವರೂಪದ ಪ್ರತಿರೋಧವಾಗಿತ್ತು. ಹೀಗಾಗಿ ಹಿಂದಿವಾಲಾಗಳು ದೇಶ ಛಿದ್ರವಾದೀತೆಂಬ ಭಯದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟು, ಹಿಂದಿಯನ್ನು ರಾಷ್ಟ್ರವ್ಯಾಪಿ ಹೇರುವ ಕುತಂತ್ರವನ್ನು ಮುಂದೂಡಿ ಕೊಂಡಿದ್ದರು.

ಆದರೆ ‘ಹಿಂದಿ ಹೇರಿಕೆ’ ನಂತರವಾದರೂ ನಿಂತುಹೋಯಿತೆ? ಖಂಡಿತಾ ಇಲ್ಲ. ರಾಜಮಾರ್ಗದಲ್ಲಿ ಹಿಂದಿಯನ್ನು ತಂದು ಪ್ರತಿಷ್ಠಾಪಿಸುವುದು ದೇಶದ ಅಖಂಡತೆಗೆ ಪೆಟ್ಟು ಕೊಡುತ್ತದೆ ಎಂಬುದು ಗೊತ್ತಿದ್ದರಿಂದ ಹಿಂದಿ ಸಾಮ್ರಾಜ್ಯಶಾಹಿಗಳು ವಾಮಮಾರ್ಗದಲ್ಲಿ ಹಿಂದಿಯನ್ನು ಹೇರತೊಡಗಿದರು. ಸಂವಿಧಾನದಲ್ಲಿ ಅಧಿಕೃತ ಸಂವಹನದ ಭಾಷೆಯಾಗಿ ಹಿಂದಿಯೂ ಇರುವುದರಿಂದ ಅದರ ಉತ್ತೇಜನಕ್ಕೆಂದು ನೂರೆಂಟು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅದಕ್ಕಾಗಿ ಪ್ರತಿವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಯಿತು, ಈಗಲೂ ಮಾಡಲಾಗುತ್ತಿದೆ.

ಮಕ್ಕಳಿಗೆ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸುವುದು ಮೊದಲ ಹಂತದ ಹೇರಿಕೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿಯನ್ನೇ ಬಳಸುವಂತೆ ಪ್ರಚೋದಿಸುವುದು, ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ನೌಕರಿ ನೇಮಕಾತಿ, ಶಿಕ್ಷಣ ನೇಮಕಾತಿಗಳೂ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿಂದಿ ಬಳಕೆಯನ್ನು ತುರುಕುವುದು, ಹಿಂದಿ ಸಪ್ತಾಹ-ಹಿಂದಿ ದಿವಸ ಎಂಬ ಕಾರ್ಯಕ್ರಮಗಳ ಮೂಲಕ ಇತರ ಭಾಷಿಕರಿಗೆ ಹಿಂದಿ ಕಲಿತು, ಹಿಂದಿಯನ್ನು ಮಾತ್ರ ಬಳಸುವಂತೆ ತಾಕೀತು ಮಾಡುವುದು, ಇದಕ್ಕಾಗಿ ಬಹುಮಾನ-ವಿಶೇಷ ಭತ್ಯೆಗಳನ್ನು ನೀಡುವುದು ಇಂಥ ಹತ್ತು ಹಲವು ರೀತಿಯ ಕುತಂತ್ರಗಳು ವ್ಯವಸ್ಥಿತವಾಗಿ ಕೇಂದ್ರ ಸರ್ಕಾರದ ಮೂಗಿನ ಅಡಿಯಲ್ಲೇ ನಡೆಯುತ್ತಿವೆ.

ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿದ್ದೇ ಆಯಾ ಭಾಷಿಕ ಸಮುದಾಯಗಳು ಆತ್ಮಗೌರವದಿಂದ ತಮ್ಮ ಹಕ್ಕುಗಳನ್ನು ಚಲಾಯಿಸುವಂತಾಗಬೇಕು, ಈ ಒಕ್ಕೂಟದ ಎಲ್ಲ ರಾಜ್ಯಗಳು ಸಮಾನ ಹಕ್ಕು-ಅವಕಾಶಗಳನ್ನು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ. ಹೀಗಿರುವಾಗ ಹಿಂದಿಯನ್ನು ಒಳದಾರಿಯಲ್ಲಿ ತಂದು ತುರುಕುತ್ತ ಹೋದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೆ? ಹಿಂದಿ ಭಾಷೆಯ ವಿರುದ್ಧ ನಮಗೆ ಯಾವ ವಿರೋಧವೂ ಇಲ್ಲ, ದ್ವೇಷವೂ ಇಲ್ಲ. ಹಿಂದಿಯೂ ದೇಶದ 22 ಭಾಷೆಗಳ ಹಾಗೆ ಒಂದು ಭಾಷೆ. ಆ ಭಾಷೆಯನ್ನು ತುಸು ಹೆಚ್ಚು ಮಂದಿ ಮಾತನಾಡುವವರು ಇದ್ದಾರೆ ಎಂಬ ಕಾರಣಕ್ಕೆ ಎಲ್ಲ ದೇಶಭಾಷೆಗಳನ್ನು ನಾಶ ಮಾಡಿ ಅದೊಂದೇ ಭಾಷೆಯನ್ನು ಒಪ್ಪಿಕೊಳ್ಳುವ ಅಗತ್ಯವಾದರೂ ಏನಿದೆ? ಹಿಂದಿ ಇತ್ತೀಚಿಗೆ ಹುಟ್ಟಿಕೊಂಡ ಭಾಷೆ. ಕನ್ನಡ, ತಮಿಳು, ತೆಲುಗು ಭಾಷೆಗಳ ಹಾಗೆ ಸಾವಿರಾರು ವರ್ಷಗಳ ಇತಿಹಾಸವಿರುವ ಶಾಸ್ತ್ರೀಯ ಭಾಷೆ ಏನಲ್ಲ. ನಿಜವಾದ ಒಕ್ಕೂಟ ಧರ್ಮವೆಂದರೆ ದೇಶದ ಎಲ್ಲ ಭಾಷೆಗಳನ್ನೂ ಸಮಾನವಾಗಿ ಕಾಣುವುದು ಮತ್ತು ಎಲ್ಲ ಭಾಷಿಕ ಸಮುದಾಯಗಳಿಗೆ ಸಮಾನ ಹಕ್ಕು-ಅವಕಾಶಗಳನ್ನು ಒದಗಿಸುವುದು. ಇದನ್ನು ಬಿಟ್ಟು ಕಾಯ್ದೆ ಕಾನೂನುಗಳ ಒಳದಾರಿಗಳನ್ನು ಬಳಸಿ ಒಂದು ಭಾಷೆಯ ಉದ್ಧಾರಕ್ಕೆ, ಪ್ರಸಾರಕ್ಕೆ ಹಣ ಕೊಡುವುದು, ಅದಕ್ಕಾಗಿ ಅಧಿಕಾರ ಚಲಾಯಿಸುವುದು ಎಷ್ಟು ಸರಿ?

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯುತ್ತಿರುವ ಈ ಅನೈತಿಕ ಹಿಂದಿ ಹೇರಿಕೆ ವಿರುದ್ಧ ದೇಶದ ಎಲ್ಲ ಭಾಷಿಕ ಸಮುದಾಯಗಳೂ ಒಂದಾಗುತ್ತಿವೆ. ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ ೮ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ22 ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಕೂಡ ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿ ಕನ್ನಡಕ್ಕೂ ಅಧಿಕೃತ ಸಂಪರ್ಕ ಭಾಷೆಯ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಚಳವಳಿ ಆರಂಭಿಸಿದೆ. ಇದು ಕಠಿಣ ಮತ್ತು ದೂರದ ಹಾದಿ ಎಂಬುದು ನಮಗೆ ಗೊತ್ತಿದೆ. ಆದರೆ ಒಕ್ಕೂಟದ ಅಖಂಡತೆಗೆ ಯಾವತ್ತೂ ಧಕ್ಕೆಯಾಗಿರುವ ಈ ಭಾಷಾನೀತಿಯನ್ನು ನಾವು ಬದಲಿಸಲೇ ಬೇಕಾಗಿದೆ. ದೇಶದ ಅಖಂಡತೆಯನ್ನು ಉಳಿಸಿಕೊಳ್ಳಬೇಕಾಗಿದೆ.

ಟಿ.ಎ.ನಾರಾಯಣಗೌಡ

ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

More articles

Latest article