ವಚನ ತವನಿಧಿಯ ಸಂರಕ್ಷಕ: ಡಾ.ಫ.ಗು. ಹಳಕಟ್ಟಿ

Most read


ವಚನಸಾಹಿತ್ಯ ಸಂಗ್ರಹಕಾರ, ಶರಣ ಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿದ, ಶರಣ ಸಂಸ್ಕೃತಿಯನ್ನು, ಶಿವಶರಣರ ವಿಚಾರಧಾರೆ, ಚಿಂತನೆ, ಸಮಾಜಮುಖಿ ಕಾಳಜಿಗಳನ್ನು ಶ್ರದ್ಧೆಯಿಂದ, ಪರಿಶ್ರಮದಿಂದ ಕನ್ನಡನಾಡಿನಲ್ಲಿ ಜೀವಂತವಾಗಿರಿಸಿದ ವಚನ ಪಿತಾಮಹ  ಡಾ.ಫ.ಗು. ಹಳಕಟ್ಟಿಯವರನ್ನು ಸ್ಮರಿಸಿದ್ದಾರೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ
.

ವಚನಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಶರಣ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು ಡಾ.ಫ.ಗು. ಹಳಕಟ್ಟಿಯವರು. ಸರಳ, ಸಜ್ಜನಿಕೆ, ಕ್ರಿಯಾಶೀಲತೆ, ವಿಶೇಷ ಆಸಕ್ತಿ, ಪರಿಶ್ರಮ ಮತ್ತು ಕನ್ನಡ ನಾಡು-ನುಡಿ, ಹಾಗೂ ಸಾಹಿತ್ಯದ ಬಗ್ಗೆ  ಹಳಕಟ್ಟಿಯವರಿಗೆ ವಿಶೇಷ ಕಾಳಜಿ, ಪ್ರೀತಿ ಇದ್ದದ್ದನ್ನು ಗಮನಿಸಬಹುದು. ಅವರಲ್ಲಿಯ ಶಿಸ್ತು, ಶ್ರದ್ಧೆ, ಮಾಡುವ ಕೆಲಸದಲ್ಲಿನ ನಿಷ್ಠೆಯಿಂದಾಗಿ ವಚನಸಾಹಿತ್ಯ ಸಂಗ್ರಹಕ್ಕಾಗಿ ಅವರು ಮಾಡಿದ ಸಾಹಸಪೂರ್ಣ ಕಾರ್ಯ ಶ್ಲಾಘನೀಯ ಹಾಗೂ, ಸ್ಮರಣೀಯ.

ಜನನ

ಫ.ಗು.ಹಳಕಟ್ಟಿಯವರು (ಫಕೀರಪ್ಪ, ಗುರುಬಸಪ್ಪ ಹಳಕಟ್ಟಿ) ಜುಲೈ,2-1880 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ, ತಾಯಿ ದಾನಮ್ಮದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ, ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿ ಅನೇಕ ಮಹತ್ವಪೂರ್ಣ ಕೃತಿಗಳನ್ನು, ಲೇಖನಗಳನ್ನು ಬರೆದು ನಾಡಿನ ಜನರ ಗಮನ ಸೆಳೆದಿದ್ದರು. ತಾಯಿ, ದಾನಮ್ಮನವರು ಫಕೀರಪ್ಪ ಹುಟ್ಟಿದ ಮೂರು ವರ್ಷದಲ್ಲಿಯೇ ನಿಧನರಾದರು. ಮಾತೃ ವಾತ್ಸಲ್ಯದಿಂದ ವಂಚಿತರಾದ ಫಕೀರಪ್ಪ ತಂದೆಯವರ ಪ್ರೀತಿಯ ಆರೈಕೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡರು.

ಶಿಕ್ಷಣ

ಫಕೀರಪ್ಪನವರು ತಮ್ಮ ಜನ್ಮಸ್ಥಳವಾದ ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ, 1896ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಸೇಂಟ್ ಝೇವಿಯರ್ ಕಾಲೇಜು ಸೇರಿ ಕನ್ನಡವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿದರು. ಅಲ್ಲಿ ಆಲೂರು ವೆಂಕಟರಾಯರ ಸಹಪಾಠಿಯಾದರು. ಕಾನೂನು ಶಾಸ್ತ್ರವನ್ನು ಅಧ್ಯಯನ ಮಾಡಿ 1904ರಲ್ಲಿ ಕಾನೂನು ಪದವಿ ಪಡೆದರು. ಮುಂಬಯಿ ಜನರಿಗಿದ್ದ ಮರಾಠಿ ಭಾಷಾಭಿಮಾನ ಇವರ ಮೇಲೆ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡಭಾಷೆ, ಸಾಹಿತ್ಯ ಉದ್ಧಾರವಾಗುವುದಿಲ್ಲವೆಂದು ತಿಳಿದು, ಆ ಕ್ಷಣವೇ ಕನ್ನಡನಾಡು, ನುಡಿ, ನೆಲ, ಜಲ, ಸಾಹಿತ್ಯ ಸಂಸ್ಕೃತಿಗಾಗಿ ದುಡಿಯಬೇಕೆಂಬ ಸಂಕಲ್ಪ ವಿದ್ಯಾರ್ಥಿದಿಶೆಯಿಂದಲೇ ನಿರ್ಧರಿಸಿದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟದಲ್ಲಿ ನಿರತರಾಗಿದ್ದ ಆಲೂರು ವೆಂಕಟರಾಯರಿಗೆ ಬೆಂಬಲವಾದರು, ಸ್ಪೂರ್ತಿಯಾದರು.

ವಕೀಲವೃತ್ತಿ ಆರಂಭ

ಬಿ.ಎ. ಪದವಿ 1901, ಕಾನೂನು ಪದವಿ 1904ರಲ್ಲಿ ಮುಂಬಯಿಯಲ್ಲಿ ಪಡೆದು ಬೆಳಗಾವಿಯಲ್ಲಿ ವಕೀಲವೃತ್ತಿ ಆರಂಭಿಸಿ, ಕೆಲವು ತಿಂಗಳುಗಳಲ್ಲಿಯೇ ಬೆಳಗಾವಿಯಿಂದ ವಿಜಯಪುರಕ್ಕೆ ವಾಸ್ತವ್ಯ ಬದಲಿಸಿದರು. ಅವರ ದಕ್ಷ ವಕೀಲವೃತ್ತಿ, ಪ್ರಾವೀಣ್ಯತೆಯನ್ನು ಸಾಧಿಸಿದ್ದನ್ನು ಗಮನಿಸಿದ ಸರಕಾರ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಸರಕಾರಿ ಪ್ಲೀಡರೆಂದು ನೇಮಿಸಿತು. ಈ ಅವಕಾಶ ದೊರೆತಾಗ ಸಮಾಜಕ್ಕೆ ತಮ್ಮಿಂದಾಗುವ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿದರು. ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡು ಜನಮನ್ನಣೆ ಪಡೆದರು.

ರಾಜಕೀಯ ಪ್ರವೇಶ

ಜನರ ಪ್ರೀತಿಯ ಒತ್ತಾಯದ ಮೇರೆಗೆ ವಿಜಾಪುರ ಜಿಲ್ಲಾ ಕಾಂಗ್ರೇಸ್ ಕಮಿಟಿ ಕಾರ್ಯದರ್ಶಿಯಾಗಿ, 1920ರಲ್ಲಿ ಮುಂಬೈ ವಿಧಾನಸಭೆಯ ಸದಸ್ಯರಾಗಿ ಸೇವೆಸಲ್ಲಿಸುವ ಅವಕಾಶ ದೊರಕಿತು. ಬಿಜಾಪುರದ ಅಂದಿನ ನೀರಿನ ಸಮಸ್ಯೆಯನ್ನು ಬ್ಯಾತನಾಳ ಕೆರೆಯ ನೀರನ್ನು ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಿದರು. ಹೀಗೆ ಹತ್ತಾರು ಮಹತ್ವದ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದರು. 1924ರಲ್ಲಿ ಪುನಃ ವಿಧಾನಪರಿಷತ್ ಸದಸ್ಯತ್ವಕ್ಕೆ ಮತ್ತೆ ನಿಲ್ಲಬೇಕೆಂಬ ಅವಕಾಶ ಮತ್ತು ಒತ್ತಾಯಬಂದರೂ ಮರು ಚುನಾವಣೆಗೆ ಸ್ಪರ್ಧಿಸದೇ ರಾಜಕೀಯದಿಂದ ದೂರ ಉಳಿದರು.

ವಚನಸಾಹಿತ್ಯ ಸಂಗ್ರಹ

ಫ.ಗು. ಹಳಕಟ್ಟಿಯವರು ಶರಣಸಾಹಿತ್ಯಕ್ಕೆ ಸಂಬಂಧಿಸಿದ ಅಧ್ಯಯನವನ್ನು ತಪಸ್ಸಿನಂತೆ ಕೈಗೊಂಡರು. ತಾಳೆಗರಿಗಳಲ್ಲಿ ಅಡಕವಾಗಿದ್ದ ವಚನಸಾಹಿತ್ಯ ಸಂಗ್ರಹಕ್ಕಾಗಿ ಅವರು ಮಾಡಿದ ಸಾಹಸಪೂರ್ಣ ಕಾರ್ಯ ಶ್ಲಾಘನೀಯ. ತಾಳೆಗರಿಗಳು ಸಿಕ್ಕಲ್ಲೆಲ್ಲ ಅವುಗಳನ್ನು ಸಂಗ್ರಹಿಸಿ ತಂದರು. ಬೆಲೆಕೊಟ್ಟು ತಂದರು. ತಮ್ಮ ಬದುಕನ್ನು ವಚನಸಾಹಿತ್ಯ ಸಂಗ್ರಹ, ಅಧ್ಯಯನ, ಪ್ರಕಟಣೆಗೆ ಮೀಸಲಾಗಿಟ್ಟರು. ಶ್ರೀಶೈಲ, ಮುದನೂರು, ಮಂಗಳವಾಡ, ಮುದುಗಲ್ಲು, ಪೊಟ್ಟಲಕೆರೆ, ಕೊಲ್ಲಿಪಾಕಿ, ಮುರಗೋಡ ಹೀಗೆ ಅನೇಕ ಕ್ಷೇತ್ರಗಳನ್ನು ಸುತ್ತಿ ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಈ ಕಾರ್ಯದಲ್ಲಿ ಅವರ ಸಾಹಸ, ಅಧ್ಯಯನಶೀಲತೆ, ಶಿಸ್ತು, ಶ್ರಮ ಮತ್ತು ವ್ಯವಸ್ಥಾಕ್ರಮಗಳನ್ನು ಬಳಸಿ, ವಚನಗಳನ್ನೆಲ್ಲ ಒಂದುಗೂಡಿಸಿ ಅದನ್ನು `ವಚನಶಾಸ್ತ್ರ’ ಎಂದು ಕರೆದರು.  ಈ ದಿಶೆಯಲ್ಲಿ ಅವರು ವ್ಯಕ್ತಿಯಾಗಿ ಕೆಲಸಮಾಡದೆ ಒಂದು ಸಂಸ್ಥೆಯಾಗಿ ಕಾರ್ಯನಿರ್ವಹಿಸಿದರು.

ವಚನಸಾಹಿತ್ಯ ಪ್ರಕಟಣೆ

ವಚನಸಾಹಿತ್ಯ ಪ್ರಕಟಣೆಯ ಕಾಯಕ ಸ್ಮರಣೀಯವಾದುದು. 1920ರ ಹೊತ್ತಿಗೆ ಒಂದು ಸಾವಿರ ಕಟ್ಟು ತಾಳೆಗರಿಗಳು ಸಂಗ್ರಹವಾದವು. 1923ರಲ್ಲಿ ವಚನಶಾಸ್ತ್ರ ಸಾರ ಭಾಗ-1 ಪ್ರಕಟವಾಯಿತು. 250 ವಚನಕಾರರ ಸಾಹಿತ್ಯವನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದರು. 1925ರಲ್ಲಿ ತಮ್ಮ ಸ್ವಂತ ಮನೆಯನ್ನು ಮಾರಾಟಮಾಡಿ `ಹಿತಚಿಂತಕ’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿದರು. ಹಸ್ತಪ್ರತಿಗಳ ಪ್ರಕಟಣೆಗೆಂದೇ `ಶಿವಾನುಭವ’ ಪತ್ರಿಕೆಯನ್ನು 1926ರಲ್ಲಿ ಪ್ರಾರಂಭಿಸಿದರು. ಈ ಮಾಸಪತ್ರಿಕೆ 35 ವರ್ಷಗಳ ಕಾಲ ನಿರಂತರ ನಡೆಸಿದ `ಕನ್ನಡಪತ್ರಿಕೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ `ನವಕರ್ನಾಟಕ’ ವಾರ ಪತ್ರಿಕೆ ಆರಂಭಿಸಿದರು.  ಈ ಎರಡು ಪತ್ರಿಕೆಯ ಸಂಪಾದಕ, ಮುದ್ರಕ ಫ.ಗು. ಹಳಕಟ್ಟಿಯವರೇ ಆಗಿದ್ದರು.

ಅವರು ಸಂಶೋಧಿಸಿ, ಸಂಪಾದಿಸಿ ಪ್ರಕಟಿಸಿದ ಗ್ರಂಥಗಳೆಂದರೆ `ವಚನಶಾಸ್ತ್ರ ಸಾರ’, ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಆದಿಶೆಟ್ಟಿ ಪುರಾಣ, ಪ್ರದೀಪಿಕೆ, ಶಬ್ದಕೋಶ ಹೀಗೆ ಹಲವಾರು ಗ್ರಂಥಗಳನ್ನು ಪ್ರಕಟಿಸುವ ಮೂಲಕ ಹನ್ನೆರಡನೆಯ ಶತಮಾನದ ಶರಣಸಾಹಿತ್ಯವನ್ನು ಪುನಃ ಸೃಷ್ಟಿಸುವ ಸಾಹಸ ಮಾಡಿದರು. ಅವರು ವೈಯಕ್ತಿಕ ಬದುಕಿನ ಕಡೆ ಗಮನಕೊಡದೆ ವಚನಸಾಹಿತ್ಯ ಗ್ರಂಥಗಳ ಪ್ರಕಟಣೆಗೆ ಹೆಚ್ಚು ಆಸಕ್ತಿ ತೋರಿದರು. ಬಸವಣ್ಣನವರ ವಚನಗಳ ಸೊಗಸನ್ನು ಅನ್ಯ ಭಾಷಿಕರಿಗೆ ಪರಿಚಯ ಮಾಡಿಕೊಡುವ ದೃಷ್ಠಿಯಿಂದ `Indian Antiquity’ಯಲ್ಲಿ ಇಂಗ್ಲೀಷ್ ಅನುವಾದದ ವಚನಗಳನ್ನು 1922ರಲ್ಲಿ ಪ್ರಕಟಿಸಿದರು.

ಸಂಘ-ಸಂಸ್ಥೆಗಳ ಸ್ಥಾಪನೆ

ವಚನಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡರು. 1910ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ) 1912ರಲ್ಲಿ ಶ್ರೀ ಸಿದ್ದೇಶ್ವರ ಅರ್ಬನ್ ಕೋ-ಅಪರೇಟಿವ್ ಬ್ಯಾಂಕು, ಗ್ರಾಮೀಣ ಅಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟಗಾರರ ಸಂಘ, ಸಹಕಾರ ಸಂಘಗಳನ್ನು ಸ್ಥಾಪಿಸಿ ಇವುಗಳ ಬೆಳವಣಿಗೆಗೆ ದುಡಿದರು. ಅಲ್ಲದೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿಯೂ ಇವರು ವಹಿಸಿದ ಪಾತ್ರ ಮಹತ್ವದ್ದಾಗಿದೆ.

ಗೌರವ -ಪುರಸ್ಕಾರಗಳು

1. 1920ರಲ್ಲಿ ಮುಂಬಯಿಯ ವಿಧಾನಪರಿಷತ್ತಿನ ಸದಸ್ಯತ್ವ.

2. 1928ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ.

3. 1931ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ.

4. 1933ರಲ್ಲಿ ಅಖಿಲಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ.

5.1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.

6.1956ರಲ್ಲಿ ಕರ್ನಾಟಕ ವಿ.ವಿ. ಯಿಂದ ಗೌರವ ಡಾಕ್ಟರೇಟ್ ಪುರಸ್ಕಾರ.

7. ಭಾರತಸರಕಾರ ರಾವ್ ಬಹದ್ದೂರ್ ಪದವಿ ನೀಡಿ ಗೌರವಿಸಿದೆ.

8. ಬಿ.ಎಂ.ಶ್ರೀ ಯವರು ಇವರ ಸಾಧನೆ ಗಮನಿಸಿ `ವಚನ ಪಿತಾಮಹ’ ಎಂದು ಪುರಸ್ಕರಿಸಿದರು.

ಫ.ಗು. ಹಳಕಟ್ಟಿ ಸ್ಮರಣೆ

ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆಯು ಡಾ. ಎಂ.ಬಿ. ಪಾಟೀಲರ ಆಸಕ್ತಿಯಿಂದ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಸಂಸ್ಥೆ, ಸ್ಮಾರಕಭವನ, ನಿರ್ಮಿಸಿದೆ. ಅಲ್ಲದೆ 30 ಲಕ್ಷ ರೂಪಾಯಿ ವೆಚ್ಚಮಾಡಿ 12 ಸಾವಿರ ಪುಟಗಳಷ್ಟು ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಪ್ರಕಟಣೆಯ ಯೋಜನೆಯಡಿಯಲ್ಲಿ 15 ಸಂಪುಟಗಳನ್ನು ಪ್ರಕಟಿಸಿದ್ದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ದಿನಾಂಕ: 29-06-1964 ರಂದು ಇವರು ನಿಧನರಾದರು. ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಘ – ಸಂಸ್ಥೆಗಳು ಎಲ್ಲದಕ್ಕಿಂತಲೂ ಮಿಗಿಲಾಗಿ ವಚನಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿದೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.

ಮೊ: 9880093613.

More articles

Latest article