ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನದಲ್ಲಿ ಮುಂದಿನ ದಿನಗಳಿಂದ ದೈವಾರಾಧನೆಗೆ ಅವಕಾಶ ನಿರಾಕರಿಸುವ ಮೂಲಕ ಸರಕಾರಿ ಸ್ವಾಮ್ಯದ ಮಂಗಳೂರು ವಿಶೇಷ ಆರ್ಥಿಕ ವಲಯವು ತುಳುನಾಡಿನ ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ. ಸುಮಾರು 800 ವರ್ಷಕ್ಕೂ ಹಿಂದಿನ ದೈವದ ಆಚರಣೆ ಮತ್ತು ಆರಾಧನೆಗೆ ತಡೆಯೊಡ್ಡಿರುವುದರ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಈ ಅಭಿಯಾನಕ್ಕೆ ಸುದೀರ್ಘ ಇತಿಹಾಸವಿದೆ. ಜನರ ಸಂಘಟಿತ ಪ್ರತಿರೋಧದಿಂದಾಗಿ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನ ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರಗುಳಿಯಿತು. 2012 ರಿಂದ ಪ್ರಾರಂಭವಾದ ಹೋರಾಟ ಇನ್ನೂ ನಿಂತಿಲ್ಲ. ಈ 13 ವರ್ಷಗಳ ಹೋರಾಟದ ಇತಿಹಾಸವನ್ನು ಈ ಲೇಖನದಲ್ಲಿ ನೆನಪಿಸಿದ್ದಾರೆ ಪತ್ರಕರ್ತ ನವೀನ್ ಸೂರಿಂಜೆ.
2011-12 ನೇ ಇಸವಿಯಲ್ಲಿ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ತೆರವು ಗೊಳಿಸಬೇಕು ಎಂಬ ಒತ್ತಡಗಳು ಸರ್ಕಾರದಿಂದ ಪ್ರಾರಂಭವಾದವು. ಹೋರಾಟಗಾರ್ತಿ ವಿದ್ಯಾ ದಿನಕರ್ ನೇತೃತ್ವದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ನೆಲ್ಲಿದಡಿ ಗುತ್ತು ರಕ್ಷಣೆಗೆ ನಿಂತಿತ್ತು. ಅದಾಗಲೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು 2035 ಎಕರೆ ಕೃಷಿ ಭೂಮಿಯನ್ನು ರೈತರಿಗೆ ಮರಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಸುತ್ತಲೂ ಪೆಟ್ರೋಲಿಯಂ ಕೈಗಾರಿಕೆಗಳಿಂದ ಅವೃತ್ತವಾಗಿದ್ದ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಉಳಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನೆಲ್ಲಿದಡಿಗುತ್ತುವಿನ ಗುತ್ತಿನಾರ್ ಚೌಟರು ಮತ್ತು ಕುಟುಂಬದ ಜೊತೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ಬೆನ್ನೆಲುಬಾಗಿ ನಿಂತಿತ್ತು.
ಹೋರಾಟಗಾರ್ತಿ ವಿದ್ಯಾ ದಿನಕರ್ ಅರೆಸ್ಟ್
ವಿದ್ಯಾದಿನಕರ್ ನೆಲ್ಲಿದಡಿ ಗುತ್ತು ಜೊತೆ ಇರುವುದರಿಂದ ಭೂಸ್ವಾಧೀನ ಅಸಾಧ್ಯ ಎಂದು ತಿಳಿದ ದಕ್ಷಿಣ ಕನ್ನಡ ಜಿಲ್ಲಾಡಳಿತವು 24 ಮೇ 2012 ರಂದು ವಿದ್ಯಾದಿನಕರ್ರವರನ್ನು ಜೈಲಿಗೆ ಹಾಕಿತ್ತು. ನೆಲ್ಲಿದಡಿ ಗುತ್ತು ರಕ್ಷಣೆಗಾಗಿ ಜಿಲ್ಲಾಧಿಕಾರಿಯ ಜೊತೆ ಮಾತನಾಡುತ್ತಿದ್ದಾಗಲೇ ಪೊಲೀಸರು ವಿದ್ಯಾದಿನಕರ್ರವರನ್ನು ಅರೆಸ್ಟ್ ಮಾಡಿದ್ದರು. ವಿದ್ಯಾದಿನಕರ್ರವರನ್ನು ಜೈಲಿಗೆ ಕಳುಹಿಸಿ ನೆಲ್ಲಿದಡಿಗುತ್ತು ನೆಲಸಮ ಮಾಡಲು ಮಂಗಳೂರು ವಿಶೇಷ ಆರ್ಥಿಕ ವಲಯ ಮತ್ತು ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. ವಿದ್ಯಾದಿನಕರ್ ಜೈಲಿನಿಂದಲೇ ಹೋರಾಟವನ್ನು ನಿಯಂತ್ರಿಸುತ್ತಿದ್ದರು. 25 ಮೇ 2012 ರಂದು ಮಂಗಳೂರು ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಜೆಸಿಬಿ, ಲಾರಿಗಳು ಮತ್ತು ಹಿಂದೂ ಜಾಗರಣಾ ವೇದಿಕೆಯ ನಾಯಕರೊಂದಿಗೆ ನೆಲ್ಲಿದಡಿ ಗುತ್ತು ನೆಲಸಮಕ್ಕೆ ಬಂದರು. ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನ ಎನ್ನುವುದು ಐತಿಹಾಸಿಕ ಹಿನ್ನಲೆಯುಳ್ಳ ಪುರಾತನ ದೈವಸ್ಥಾನ. ಜನರ ನಂಬಿಕೆಯ ದೈವಸ್ಥಾನವನ್ನು ನೆಲಸಮ ಮಾಡಲು ಹಿಂದೂ ಜಾಗರಣಾ ವೇದಿಕೆಯನ್ನು ಬಳಸಿಕೊಂಡರೆ ವಿವಾದವಿರಲ್ಲ ಎಂದು ಹಿಂದೂ ಜಾಗರಣಾ ವೇದಿಕೆಯ ನಾಯಕ ಸುಭಾಷ್ ಪಡೀಲ್ ಗೆ ನೆಲಸಮ ಗುತ್ತಿಗೆ ನೀಡಲಾಗಿತ್ತು.
ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನಕ್ಕೆ ದಾಳಿ
ಹೋರಾಟಗಾರ್ತಿ ವಿದ್ಯಾ ದಿನಕರ್ ಜೈಲಿನಿಂದಲೇ ನೆಲ್ಲಿದಡಿ ಗುತ್ತು ಕುಟುಂಬಸ್ಥರು ಮತ್ತು ನನ್ನ ಜೊತೆ ಸಂಪರ್ಕದಲ್ಲಿದ್ದರು. ‘25 ಮೇ 2012 ರಂದು ಎಸ್ಇಝಡ್ ಅಧಿಕಾರಿಗಳು ಜೆಸಿಬಿ ಜೊತೆ ನೆಲ್ಲಿದಡಿ ಗುತ್ತುಗೆ ಹೋಗ್ತಾರೆ. ನೀನು ಆ ವೇಳೆ ಅಲ್ಲಿರಬೇಕು’ ಎಂದು ವಿದ್ಯಾ ದಿನಕರ್ ಸೂಚಿಸಿದ್ದರು. ಅದರಂತೆ ನಾನು ಅಂದು ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನದಲ್ಲಿದ್ದೆ. ಬೆಳಿಗ್ಗೆ 10 ಗಂಟೆಯ ವೇಳೆಗೆ ಜೆಸಿಬಿ ಮತ್ತು ಹಿಂದೂ ಜಾಗರಣಾ ವೇದಿಕೆಯ ನಾಯಕರ ಜೊತೆ ಎಸ್ಇಝಡ್ ಅಧಿಕಾರಿಗಳು ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನಕ್ಕೆ ದಾಳಿ ನಡೆಸಿದರು. ತುಳು ಜನಪದ ನಂಬಿಕೆಯಲ್ಲಿ ದೈವೀ ಸಮಾನರಾದ ಚೌಟರ ಮೇಲೂ ಹಿಂದೂ ಜಾಗರಣಾ ವೇದಿಕೆಯ ಗೂಂಡಾಗಳು ದಾಳಿ ನಡೆಸಿದರು. ಬಂಡವಾಳಶಾಹಿ-ಪ್ರಭುತ್ವ-ಹಿಂದುತ್ವ ಗೂಂಡಾಗಳ ಮೈತ್ರಿಯ ದಾಳಿಯನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಕಾನೂನು ಹೋರಾಟಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಗೊಳಿಸುವ ಜವಾಬ್ದಾರಿ ನನ್ನ ಮೇಲಿತ್ತು.
ಅಂದೇ ವಿದ್ಯಾದಿನಕರ್ ಸೂಚನೆಯಂತೆ ನಾವೆಲ್ಲರೂ ಬಜಪೆ ಪೊಲೀಸ್ ಠಾಣೆಗೆ ತೆರಳಿದೆವು.
ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿ
ಬಂಡವಾಳಶಾಹಿ-ಪ್ರಭುತ್ವ-ಹಿಂದುತ್ವ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿದ್ದ ನೆಲ್ಲಿದಡಿ ಗುತ್ತಿನ ಗುತ್ತಿನಾರ್ ಲಕ್ಷ್ಮಣ ಚೌಟರು ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಬರುವಂತಾಯಿತು. ದೈವದ ಗಡಿಹಿಡಿದ ಗುತ್ತಿನಾರ್ ಠಾಣೆ-ಕೋರ್ಟ್ ಕಚೇರಿಗಳಿಂದ ದೂರ ಇರಬೇಕು ಎಂಬುದು ತುಳುವರ ಭಾವನಾತ್ಮಕ ಆಶಯ. ಆದರೆ ಹಿಂದುತ್ವವಾದಿ ಗೂಂಡಾಗಳು ನಡೆಸಿದ ದಾಳಿಯಿಂದಾಗಿ ದೂರು ನೀಡಲು ಅನಿವಾರ್ಯವಾಗಿ ಚೌಟರು ಠಾಣೆಗೆ ಬರಬೇಕಾಯಿತು. ಪೊಲೀಸರು ದೂರು ಪಡೆದುಕೊಳ್ಳಲು ಸಿದ್ದರಿರಲಿಲ್ಲ. ನಮ್ಮ ವಿಡಿಯೋ ದಾಖಲೆಗಳನ್ನು ವೀಕ್ಷಿಸಿ ಪೊಲೀಸರು ಕೊನೆಗೂ ಮೊಕದ್ದಮೆ ಸಂಖ್ಯೆ – 98/2012 ಎಂದು ಎಫ್ಐಆರ್ ದಾಖಲಿಸಿಕೊಂಡರು. ಎಸ್ಇಝಡ್ ಅಧಿಕಾರಿ ರಾಘವೇಂದ್ರ ಹೊಳ್ಳ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಸೇರಿದಂತೆ ನಾಲ್ವರು ಹಲ್ಲೆಯ ಆರೋಪಿಗಳಾಗಿದ್ದರು. ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿ ಎಷ್ಟೊಂದು ಜನಪೀಡಕ ಎಂಬುದು ನಮಗೆ ಅಂದು ಅರಿವಾಗಿತ್ತು.
ಹಿಂದೂ ಜಾಗರಣಾ ವೇದಿಕೆಯನ್ನೇ ಎಸ್ಇಝಡ್ ಯಾಕೆ ಆಯ್ದು ಕೊಂಡಿತ್ತು?
ನೆಲ್ಲಿದಡಿ ಗುತ್ತುವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಹಿಂದೂ ಜಾಗರಣಾ ವೇದಿಕೆಯನ್ನೇ ಮಂಗಳೂರು ವಿಶೇಷ ಆರ್ಥಿಕ ವಲಯ ಯಾಕೆ ಆಯ್ದುಕೊಂಡಿತ್ತು ? ನೆಲ್ಲಿದಡಿ ಗುತ್ತು ಜುಮಾದಿ ಸಾನದ ಚೌಟರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಪೈಕಿ ಸುಭಾಷ್ ಪಡೀಲ್ 2008 ರಲ್ಲಿ ಭಜರಂಗದಳದಲ್ಲಿದ್ದರು. 2009 ರಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆಯಲ್ಲಿದ್ದರು. 2009ರಲ್ಲಿ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಲಾಗಿತ್ತು. ಹಿಂದೂ ಸಂಸ್ಕೃತಿಯ ಉಳಿಸಲು ಈ ದಾಳಿ ನಡೆಸಲಾಗಿತ್ತು ಎಂದು ಶ್ರೀರಾಮ ಸೇನೆ ಹೇಳಿತ್ತು. ಆ ಬಳಿಕ ಶ್ರೀರಾಮ ಸೇನೆಯ ಆರೋಪಿಗಳೆಲ್ಲರೂ ಹಿಂದೂ ಜಾಗರಣಾ ವೇದಿಕೆ ಸೇರಿಕೊಂಡಿದ್ದರು. ಬಜಪೆ ನೆಲ್ಲಿದಡಿ ಗುತ್ತುವಿಗೆ ಬಜಪೆಯಲ್ಲಿ ಧಾರ್ಮಿಕ ಸಾಮಾಜಿಕ ಸ್ಥಾನಮಾನವಿದೆ. ಇಲ್ಲಿನ ದೈವವು ಕಾರಣಿಕದ ದೈವ ಎಂದು ಜನಸಾಮಾನ್ಯರು ನಡೆದುಕೊಳ್ಳುತ್ತಾರೆ. ದೈವಗಳ ಚಾಕರಿ ಮಾಡುವ ಬಜಪೆ ನೆಲ್ಲಿದಡಿ ಗುತ್ತುವಿನ ಗುತ್ತಿನಾರ್ ಎಂದರೆ ಊರಿಗೆ ಧರ್ಮಾಧಿಕಾರಿಗಳು ಎಂದೇ ಅರ್ಥ. ಗುತ್ತು ಎಂದರೆ ಊರಿನ ಮುಖ್ಯ ಮನೆ. ಕೂಡು ಕುಟುಂಬವಾಗಿರುವ ಗುತ್ತುವಿಗೆ ದೈವಸ್ಥಾನವೂ ಜೊತೆ ಇರುವುದರಿಂದ ಸ್ಥಳಾಂತರ ಸಾಧ್ಯವಿಲ್ಲ. ನಾವು ಭೂಮಿ ಬಿಟ್ಟುಕೊಡುವುದಿಲ್ಲ ಎಂಬುದು ನೆಲ್ಲಿದಡಿ ಗುತ್ತುವಿನ ಒಮ್ಮತದ ಅಭಿಪ್ರಾಯವಾಗಿತ್ತು. ಇದು ನೆಲ್ಲಿದಡಿ ಗುತ್ತಿನ ಕುಟುಂಬದ ಮತ್ತು ಊರಿನ ಅಭಿಪ್ರಾಯ ಮಾತ್ರ ಆಗಿರಲಿಲ್ಲ. ಭೂಮಿಯನ್ನು ಬಿಟ್ಟುಕೊಡಕೂಡದು ಎಂಬುದು ದೈವದ ಇಚ್ಚೆಯೂ ಆಗಿತ್ತು. ದೈವವನ್ನು ದರ್ಶನ ಭರಿಸಿ ಸರ್ಕಾರದ ನೋಟಿಸ್, ಭೂಮಿ ಬಿಟ್ಟುಕೊಡುವ ಬಗ್ಗೆ ಕೇಳಲಾಗಿ, ನಾನು ಈ ಭೂಮಿ ಬಿಟ್ಟು ಹೋಗುವುದಿಲ್ಲ ಎಂದು ದೈವವೂ ನುಡಿದಿತ್ತು. ಹಾಗಾಗಿ ಕರಾವಳಿಯ ದೈವಧರ್ಮವನ್ನು ಎದುರಿಸಲು ಎಸ್ಇಝಡ್ ಅಧಿಕಾರಿಗಳು ಹಿಂದೂ ಜಾಗರಣಾ ವೇದಿಕೆಯ ಮುಖಂಡರನ್ನು ಬಳಸಿದ್ದರು.
ನೆಲ್ಲಿದಡಿ ಗುತ್ತು ನೆಲಸಮ ಕಾರ್ಯಾಚರಣೆ ವಿಫಲಗೊಂಡಿತ್ತು
ದಿನಪೂರ್ತಿ ರಾತ್ರಿಯವರೆಗೂ ನಾವು ಠಾಣೆಯಲ್ಲಿದ್ದು, ಎಲ್ಲಾ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿದ ಬಳಿಕ ನೆಲ್ಲಿದಡಿ ಗುತ್ತುವಿನ ನೆಲಸಮಕ್ಕೆ ಬಂದಿದ್ದ ಜೆಸಿಬಿ, ಲಾರಿಗಳು ವಾಪಸ್ ಹೋದವು. ಆರೋಪಿಗಳು ತಲೆಮರೆಸಿಕೊಂಡರು. ನೆಲ್ಲಿದಡಿ ಗುತ್ತು ನೆಲಸಮ ಕಾರ್ಯಾಚರಣೆ ವಿಫಲಗೊಂಡಿತ್ತು. ಮರುದಿನ, ಅಂದರೆ ಮೇ 26 ರಂದು ಹೋರಾಟಗಾರ್ತಿ ವಿದ್ಯಾದಿನಕರ್ ಜೈಲಿನಿಂದ ಬಿಡುಗಡೆಗೊಂಡರು. ಇಡೀ ನೆಲ್ಲಿದಡಿ ಗುತ್ತುವಿನ ಕುಟುಂಬಸ್ಥರು ಮತ್ತು ಬಜಪೆ ನಿವಾಸಿಗಳ ಜೊತೆ ಸಭೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು. ಸರ್ಕಾರ-ಪೊಲೀಸ್-ಎಸ್ಇಝಡ್-ಹಿಂದುತ್ವ ಸಂಘಟನೆ-ಬಹುರಾಷ್ಟ್ರೀಯ ಪೆಟ್ರೋಲಿಯಂ ಕಂಪನಿಗಳು ಒಟ್ಟಾಗಿ ನಡೆಸುವ ದಾಳಿಯನ್ನು ಎದುರಿಸುವುದು ಸುಲಭವಲ್ಲ.
ದೌರ್ಜನ್ಯದ ಸಾಕ್ಷ್ಯ ಚಿತ್ರ ತಯಾರಿ ಮತ್ತು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್
ಪತ್ರಕರ್ತರ ಅಧ್ಯಯನ ಕೇಂದ್ರ ಮತ್ತು ವಿದ್ಯಾದಿನಕರ್ ಸೇರಿಕೊಂಡು ನೆಲ್ಲಿದಡಿ ಗುತ್ತು ಮೇಲೆ ನಡೆದ ದೌರ್ಜನ್ಯದ ಸಾಕ್ಷ್ಯ ಚಿತ್ರ ತಯಾರಿಸಿ ಅದನ್ನು ಇಮೇಲ್ ಮೂಲಕ ರಾಜ್ಯ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರಾದ್ಯಂತ ಸಂಘಟನೆಗಳಿಗೆ ರವಾನಿಸಿದೆವು. ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಸಿದ ದಾಳಿಯ ಚಿತ್ರಣಗಳು ಮನಕಲಕುವಂತಿದ್ದವು. ಜೆಸಿಬಿಗೆ ಎದುರಾಗಿ ನಿಂತಿದ್ದ ಪುಟ್ಟ ಮಕ್ಕಳನ್ನೂ ಹಿಂದುತ್ವ ಕಾರ್ಯಕರ್ತರು ಎತ್ತಿ ಬಿಸಾಡಿದ್ದರು. ನೆಲ್ಲಿದಡಿ ಗುತ್ತುವಿನ ಮಹಿಳೆಯರ ಬಟ್ಟೆ ಹರಿದು ಹಾಕಿ ಹಲ್ಲೆ ನಡೆಸಿದ್ದರು. ‘ನನ್ನನ್ನು ಎರಡೂ ಕಿವಿಗಳಲ್ಲಿ ಎತ್ತಿ ಹಿಡಿದು ಬಿಸಾಡಿದರು’ ಎಂದು ನನ್ನ ಕ್ಯಾಮರಾದ ಎದುರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುವ ಪುಟ್ಟ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣ ದುರ್ಬಲವಾಗಿದ್ದ ಆ ಕಾಲದಲ್ಲೇ ವೈರಲ್ ಆಗಿತ್ತು. (ಈಗ ನೆಲ್ಲಿದಡಿ ಗುತ್ತು ಉಳಿಸಿ ಅಭಿಯಾನಕ್ಕೆ ಅದೇ ವಿಡಿಯೋವನ್ನು ಬಳಸಲಾಗುತ್ತಿದೆ) ಸರ್ಕಾರ, ಪೊಲೀಸರು, ಜಿಲ್ಲಾಡಳಿತ ಎಸ್ಇಝಡ್ ಪರವಾಗಿದ್ದರಿಂದ ಪೊಲೀಸರು ಒತ್ತಡಕ್ಕೆ ಒಳಗಾಗಿ ಎಫ್ಐಆರ್ ಗೆ ಬಿ ರಿಪೋರ್ಟ್ ಹಾಕಲು ಸಿದ್ದತೆ ನಡೆಸುತ್ತಿದ್ದರು. ಇದು ನಮ್ಮ ಅರಿವಿಗೆ ಬರುತ್ತಿದ್ದಂತೆ ಮಕ್ಕಳ ಮೇಲೆ ನಡೆದ ದಾಳಿಯ ಚಿತ್ರ ಮತ್ತು ವಿಡಿಯೋವನ್ನು ಬಳಸಿಕೊಂಡು ‘ರಾಷ್ಟ್ರೀಯ ಮಕ್ಕಳ ಆಯೋಗ’ ಕ್ಕೆ ವಿದ್ಯಾ ದಿನಕರ್ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಮಕ್ಕಳ ಆಯೋಗವು ಜಿಲ್ಲಾ ಪೊಲೀಸರಿಂದ ವಿವರಣೆ ಕೇಳಿ ಪತ್ರ ಬರೆಯಿತು. ಈ ಪತ್ರದ ಕಾರಣದಿಂದಾಗಿ ಪೊಲೀಸರು ಬಿ ರಿಪೋರ್ಟ್ ಹಾಕಲಾಗದೇ, ಅನಿವಾರ್ಯವಾಗಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಹಾಕಿದರು.
ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ಮೊರೆ
ಮಂಗಳೂರು ವಿಶೇಷ ಆರ್ಥಿಕ ವಲಯ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಅವರುಗಳು ಈ ಎಫ್ಐಆರ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋಗುತ್ತಾರೆ. ಈ ರೀತಿ ಎಂಆರ್ಪಿಎಲ್/ ಸೆಝ್ ಎಂಬ ಸರ್ಕಾರಿ ಸ್ವಾಮ್ಯದ ಕಾರ್ಪೋರೇಟ್ ಕಂಪನಿಯೊಂದು ಹೈಕೋರ್ಟ್ ಮೆಟ್ಟಿಲೇರುವಾಗ ಸುಭಾಷ್ ಪಡೀಲ್ ಎಂಬ ಆರೋಪಿಯ ಪರವಾಗಿಯೂ ಅಫಿದಾವಿತ್ ಹಾಕುತ್ತದೆ ಎಂದರೆ ಕಾರ್ಪೋರೇಟ್ ಮತ್ತು ಹಿಂದುತ್ವ ಮೈತ್ರಿ ಯಾವ ಮಟ್ಟಿನದ್ದು ಎಂಬುದನ್ನು ಊಹಿಸಬಹುದು. ಹೈಕೋರ್ಟ್ ನಲ್ಲಿ ಸೆಝ್ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಅವರು ಜಂಟಿಯಾಗಿ ಕ್ರಿಮಿನಲ್ ಪಿಟೀಷನ್ (CRL.P)- 6071/2014ರಂತೆ ಅರ್ಜಿ ಸಲ್ಲಿಸುತ್ತಾರೆ. ‘ನೀವುಗಳು ಹಲ್ಲೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇವೆ. ಹಾಗಾಗಿ ವಿಚಾರಣೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಲ್ಲ. ನೀವೇನಿದ್ದರೂ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ’ ಎಂದು ಹೇಳಿದ ಹೈಕೋರ್ಟ್ ನ್ಯಾಯಪೀಠವು ರಾಘವೇಂದ್ರ ಹೊಳ್ಳ ಮತ್ತು ಸುಭಾಷ್ ಪಡೀಲ್ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕವಷ್ಟೇ ಅಧಿಕಾರಿಗಳು-ಗೂಂಡಾಗಳು ನೆಲ್ಲಿದಡಿ ದೈವಸ್ಥಾನದ ಸಹವಾಸಕ್ಕೆ ಬರಲಿಲ್ಲ. ದೈವಸ್ಥಾನ ಉಳಿಯಿತು.
ಪ್ರಭುತ್ವ- ಕಾರ್ಪೋರೇಟ್-ಹಿಂದುತ್ವ ರಾಜಕಾರಣದ ದಾಳಿಯನ್ನು ತಡೆಯಬೇಕಿದೆ
ಈ ರೀತಿ ನಡೆಸಿದ ಸಂಘಟಿತ ಪ್ರತಿರೋಧದಿಂದಾಗಿ ಪ್ರಭುತ್ವ-ಕಾರ್ಪೊರೇಟ್-ಹಿಂದುತ್ವ ದಾಳಿಯಿಂದ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನ ಉಳಿಯಿತು. ಈಗ ಮಂಗಳೂರು ವಿಶೇಷ ವಲಯ ಅಧಿಕಾರಿಗಳು ಮತ್ತೆ ದೈವಸ್ಥಾನದ ಪೂಜಾದಿಗಳಿಗೆ ಅಡ್ಡಿಯಾಗುತ್ತಿದ್ದಾರೆ. 2012 ರಿಂದ ಪ್ರಾರಂಭವಾದ ಹೋರಾಟ ಇನ್ನೂ ನಿಂತಿಲ್ಲ. ತುಳುನಾಡಿನ ಕಿರು ಸಂಸ್ಕೃತಿಯಾದ ಭೂತಾರಾಧನೆಗೆ ಅಡ್ಡಿಯಾಗುತ್ತಿರುವ ಪ್ರಭುತ್ವ- ಕಾರ್ಪೋರೇಟ್-ಹಿಂದುತ್ವ ರಾಜಕಾರಣದ ದಾಳಿಯನ್ನು ತಡೆಯಬೇಕಿದೆ.
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ಕೊಹ್ಲಿ ಸೆಂಚುರಿ ತಪ್ಪಿಸಲು ಸಂಚು ನಡೆಸಲಾಗಿತ್ತೇ? | ಇದು ಸ್ಪೋರ್ಟ್ಸ್ ಪೊಲಿಟಿಕ್ಸ್!