ತುಮಕೂರು : ಮಲ ಹೊರುವ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಇದು ನಡೆದಿರುವುದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿ. ನಾಲ್ವರು ದಲಿತ ಕಾರ್ಮಿಕರಿಂದ ಬರಿಗೈ ಹಾಗೂ ಬರಿಮೈನಲ್ಲಿ ಶೌಚಾಗುಂಡಿಯ ಮಲವನ್ನು ಬಾಚಿಸಿ ಟ್ರ್ಯಾಕ್ಟರ್ ತುಂಬಿಸಿರುವ ಅಮಾನವೀಯ ಘಟನೆ ತುಮಕೂರು ನಗರದ ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿ ನಡೆದಿದೆ.
ತುಮಕೂರಿನ ನಂದೀಶ್, ಅರುಣ್, ಮಧುಗಿರಿ ಮೂಲದ ಮೂರ್ತಿ ನಾಯ್ಕ ಹಾಗೂ ನವೀನ್ ಎಂಬ ಕಾರ್ಮಿಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಶೌಚಗುಂಡಿಯಲ್ಲಿದ್ದ ಮಲವನ್ನು ಕೈಯಿಂದಲೇ ಹೊರತೆಗೆದು ಸಾಗಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಕಾರ್ಮಿಕರ ಪ್ರಕಾರ, ಆರಂಭದಲ್ಲಿ ಮಣ್ಣು ತುಂಬುವ ಕೆಲಸವಿದೆ ಎಂದು ಕರೆತಂದಿದ್ದು, ಸ್ಥಳಕ್ಕೆ ಬಂದ ನಂತರ ಅದು ಶೌಚಗುಂಡಿ ಎಂಬುದು ತಿಳಿಯಿತು. ಹೊಟ್ಟೆಪಾಡಿನ ಕಾರಣದಿಂದ ಕೆಲಸ ಒಪ್ಪಿಕೊಳ್ಳಬೇಕಾಯಿತು. ಇಂತಹ ಕೆಲಸ ಮಾಡಿಸುವುದು ಕಾನೂನುಬಾಹಿರ ಎಂಬ ಮಾಹಿತಿ ನಮಗೆ ಇರಲಿಲ್ಲ. ಇನ್ನು ಮುಂದೆ ಇಂತಹ ಕೆಲಸಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೆಇಬಿ ಇಂಜಿನಿಯರ್ಸ್ ಸಂಘದ ವತಿಯಿಂದ ಈ ಕಾರ್ಯ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಲ ಹೊರುವ ಪದ್ಧತಿ ನಿಷೇಧಿಸಿದ್ದರೂ ಜಿಲ್ಲಾಡಳಿತ ನಿರ್ಲ್ಯಕ್ಷ್ಯದಿಂದ ಈ ಘಟನೆ ನಡೆದಿದೆ. ತುಮಕೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ಸಿಕ್ಕ ಬಳಿಕವೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಯಾವ ಕ್ರಮವೂ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಲಿತ ಮುಖಂಡ ಜಟ್ಟಿ ಅಗ್ರಹಾರ ನಾಗರಾಜು, ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

